Advertisement

ನಿವೇಶನ ನೀಡುವಲ್ಲಿ ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

12:15 PM Apr 11, 2022 | Team Udayavani |

ಕಾಪು : ನಿವೇಶನ ರಹಿತರಿಗೆ ನಿವೇಶನ ನೀಡಲು ಸಾಧ್ಯವಾಗದ ರಾಜ್ಯ ಸರಕಾರದ ಬಡಜನ ವಿರೋಧಿ ನಿಲುವನ್ನು ವಿರೋಧಿಸಿ, ಅಕ್ರಮ-ಸಕ್ರಮಕ್ಕಾಗಿ 94 ಸಿ/ 94ಸಿ ಸಿ ಯಡಿ ಅರ್ಜಿ ಸಲ್ಲಿಸಿರುವವರಿಗೆ ಶೀಘ್ರವೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಮತ್ತು ಶಿರ್ವ ಗ್ರಾಮದಲ್ಲಿ ವೃದ್ಧ ಬಡ ಮಹಿಳೆಯನ್ನು ಮನೆಯಿಂದ ಹೊರಕ್ಕೆ ಹಾಕಿ, ಮನೆ ನೆಲಸಮ ಮಾಡಿರುವ ಘಟನೆಯನ್ನು‌ ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

Advertisement

ಮಾಜಿ ಸಚಿವ ವಿನಯ ಕು‌ಮಾರ್ ಸೊರಕೆ ಅವರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ವಾಸಿಸಲು ಸೂರಿಲ್ಲದೆ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಶಿರ್ವ ಗ್ರಾಮದ ವೃದ್ಧ, ಬಡ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದು ಮನೆಯನ್ನು ನೆಲಸಮಗೊಳಿಸಿ ಬೀದಿಪಾಲಾಗಿಸಿದ ಘಟನೆ ಖಂಡನೀಯವಾಗಿದೆ. ಈ ಅಮಾನವೀಯ ನಡೆಯನ್ನು ಖಂಡಿಸಿ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿ, ಅದೇ ಸ್ಥಳದಲ್ಲಿ ಮನೆಯನ್ನು ಪುನರ್ ರ್ಮಿಸಿ ಕೊಡುವಂತೆ ಸರಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದರು.

ಕಾಪು ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ, ಹಲವು ವರ್ಷಗಳಿಂದ ನಿವೇಶನ ಮಂಜೂರಾತಿಗಾಗಿ ಕಾಯುತ್ತಿರುವ ಅರ್ಜಿದಾರರಿಗೆ ನಿವೇಶನ ನೀಡದೆ ಸರಕಾರ ವಂಚಿಸುತ್ತಿದೆ. ನಿರಂತರವಾಗಿ ನಡೆಯುತ್ತಿರುವ ಬೆಲೆಯೇರಿಕೆ, ಧರ್ಮ ಸಂಘರ್ಷ, ಬಡ ಜನರ ಮೇಲಿನ‌ ದಬ್ಬಾಳಿಕೆ ನೀತಿಯಿಂದಾಗಿ ಜನ ರೋಸಿ ಹೋಗಿದ್ದಾರೆ. ಹಿಜಾಬ್, ಹಲಾಲ್ ವಿಚಾರದಲ್ಲಿ ಮುತುವರ್ಜಿ ವಹಿಸುವ ಚುನಾವಣೆಯಲ್ಲಿ ಲಾಭ ಗಳಿಸುವ ಪ್ರಯತ್ನ ಮಾಡುತ್ತಿದೆ. ಇಂತಹ ಕಿವಿ, ಮೂಗು, ಬಾಯಿ ಕೆಟ್ಡ ಸರಕಾರಕ್ಜೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್ ಮೂಲಕವಾಗಿ ಇಂದಿರಾ ಗಾಂಧಿ ಭೂಮಿ ನೀಡಿದರು, ಬಂಗಾರಪ್ಪ ಮನೆ ನೀಡಿದರು. ಆದರೆ ಬಿಜೆಪಿ ಸರಕಾರ ಅಧಿಕಾರಿಗಳ ಮೂಲಕವಾಗಿ ಮನೆಗಳನ್ನು ಒಡೆಯುವ ಕೆಲಸ ನಡೆಸುತ್ತಿದೆ. ಜನರ ಭಾವನೆಯೊಂದಿಗೆ ಆಟವಾಡಿ, ದ್ವೇಷ ಭಾವನೆ ಮೂಡಿಸಿ, ಅಂತರ ಹೆಚ್ಚಿಸುವ ಪ್ರಯತ್ನ ನಡೆಸುತ್ತಿದೆ. ರಾಜ್ಯದ ಜನರಲ್ಲಿ ಕೋಮು ದ್ವೇಷ ಭಾವನೆಯನ್ನು ಕೆರಳಿಸಿ, ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಎಚ್ಚೆತ್ತು ಕೊಳ್ಳಬೇಕಿದೆ ಎಂದರು.

Advertisement

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಪು ರಾಜೀವ್ ಭವನದಲ್ಲಿ ಸಮಾವೇಶಗೊಂಡು, ಅಲ್ಲಿಂದ ತಾಲೂಕು ಕಛೇರಿಯವರೆಗೆ ಜಾಥಾದ ಮೂಲಕವಾಗಿ ಆಗಮಿಸಿ, ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಲಾಲ್ , ಪಕ್ಷದ ಮುಖಂಡರಾದ ಶಿವಾಜಿ ಸುವರ್ಣ, ಎಂ.ಪಿ. ಮೊಯ್ದಿನಬ್ಬ, ದೀಪಕ್ ಕೋಟ್ಯಾನ್, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ರಮೀಜ್ ಹುಸೈನ್, ಅಮೀರ್ ಮಹಮ್ಮದ್, ನವೀನ್‌ ಶೆಟ್ಟಿ, ರತನ್‌ ಶೆಟ್ಟಿ ಶಿರ್ವ, ವಿಲ್ಸನ್ ರೋಡ್ರಿಗಸ್, ಐಡಾ ಗಿಬ್ಬಾ ಡಿ ಸೋಜ, ಸುನೀಲ್ ಬಂಗೇರ, ಜ್ಯೋತಿ ಮೆನನ್, ಕರುಣಾಕರ ಪೂಜಾರಿ, ಸುಧಾಕರ ಸಾಲ್ಯಾನ್, ಮೆಲ್ವಿನ್‌ ಡಿ ಸೋಜ, ಡೇವಿಡ್ ಡಿ ಸೋಜ, ಕೀರ್ತಿ ಶೆಟ್ಟಿ, ನಾಗೇಶ್ ಕುಮಾರ್ ಉದ್ಯಾವರ, ಪ್ರಖ್ಯಾತ್ ಶೆಟ್ಟಿ, ಕೆ.ಎಚ್. ಉಸ್ಮಾನ್, ಫಾರೂಕ್ ಚಂದ್ರನಗರ, ಮಹೇಶ್ ಶೆಟ್ಟಿ ಕುರ್ಕಾಲು, ಕಿಶೋರ್ ಕುಮಾರ್ ಕೋಟೆ, ಇಂದಿರಾ ಆಚಾರ್ಯ ಕಟಪಾಡಿ, ಅಶೋಕ್ ನಾಯರಿ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next