Advertisement

kappatagudda: ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಲೇಸು!

01:13 PM Aug 27, 2023 | Team Udayavani |

ಕಪ್ಪತ್ತಗುಡ್ಡದಲ್ಲಿ ಚಾರಣ ಮಾಡಲು ಅನುಮತಿ ಸಿಕ್ಕದ್ದು ಇತ್ತೀಚೆಗೆ. ಅಂಥ ಅಪೂರ್ವ ಅವಕಾಶ ದೊರೆತ ತಕ್ಷಣ ಹಸಿರು ವನಸಿರಿಯ ಹಾದಿಯಲ್ಲಿ ಸುತ್ತಾಡಿ ಬಂದವರ ಅನುಭವದ ಮಾತುಗಳ ಝಲಕ್‌…

Advertisement

ಕಪ್ಪತ್ತಗುಡ್ಡದ ಚಾರಣಕ್ಕೆ ನಾವು ಹೋದದ್ದು ಒಂದು ತಿಂಗಳ ಹಿಂದೆ. ಗುಡ್ಡದ ಕೆಳಗಿನ ಊರೇ ನನ್ನದಾದ್ದರಿಂದ ನಿತ್ಯ ಅಲ್ಲಿಗೆ ಹೋಗಿ ಬರುವುದು ರೂಢಿಯಾದ ಹವ್ಯಾಸ. ಇದು ಗೊತ್ತಿದ್ದ ಕೊಪ್ಪಳದ ಆನಂದತೀರ್ಥ ಪ್ಯಾಟಿ, ಶ್ರೀಪಾದರಾಜ್‌, ಡಾ. ಬದರೀ ಪ್ರಸಾದ್‌ ಹಾಗೂ ದೇವೇಂದ್ರ ಅವರು “ಒಂದು ದಿನದ ಮಟ್ಟಿಗೆ ನಾವು ಬರಬೇಕಲ್ಲ’ ಎಂದರು. “ನೀವು ಬರೋದು ಹೆಚ್ಚೋ.. ನಾವು ಅಲ್ಲಿಗೆ ಹೋಗೋದು ಹೆಚ್ಚೋ’ ಅಂದಾಗ, ಅದೊಂದು ಬೆಳಗ್ಗೆ ದಿಢೀರ್‌ ಹಾಜರಾದರು. ಎಲ್ಲರೂ ಒಟ್ಟಿಗೆ ಕಾರು ಹತ್ತಿ ಹೊರಟೆವು. ಕಪ್ಪತ್ತಗುಡ್ಡದವರೆಗಿನ ಹಾದಿಯನ್ನು ಕಾರಿನಲ್ಲಿಯೂ, ಆನಂತರದ ದಾರಿಯನ್ನು ಕಾಲಿನಲ್ಲಿಯೂ ಕ್ರಮಿಸುವ ನಿರ್ಧಾರ ನಮ್ಮದಾಗಿತ್ತು.

ವಾಸ್ತವವಾಗಿ ಕಪ್ಪತ್ತಗುಡ್ಡ ಸಾಧು- ಸಂತರು ಹಾಗೂ ಮಠಗಳ ಸರಣಿ ಹೊಂದಿರುವ ಗುಡ್ಡದ ಸಾಲು. ಅಪರಿಮಿತ ವನಸ್ಪತಿಗಳ ಆಶ್ರಯದಾಣ. ನಾವು ಹೊರಟ ದಾರಿಯಲ್ಲಿದ್ದ ನಂದಿವೇರಿ ಮಠವನ್ನೂ, ಅದರ ಹಿಂದಿದ್ದ ಎಂದೂ ಬತ್ತದ ಬಾವಿಯ ನೀರನ್ನೂ ನೋಡಿಕೊಂಡು ಮುಂದೆ ಸಾಗಿದೆವು. ಅಲ್ಲಿಂದ ಮೇಲೇರಲು ನವಣಿರಾಶಿ ಗುಡ್ಡದ ಪಕ್ಕದ ರಸ್ತೆಯಿಂದಲೇ ಹೋಗಬೇಕು. ನವಣಿರಾಶಿಯ ಥರ ಇರುವ ಕಾರಣಕ್ಕೆ ಅದು ನವಣಿರಾಶಿ ಗುಡ್ಡ.

ಇಲ್ಲೊಂದು ಕೆಜಿಎಫ್ ಇದೆ!
ಈ ದಾರಿಯ ನಡುವೆಯೇ ಒಂದು ಕಡೆ ಗಣಿಗಾರಿಕೆ ನಡೆದ ಜಾಗವಿದೆ. ಅದನ್ನು ಎಲ್ಲರೂ ಕೆಜಿಎಫ್ ಎಂದು ಕರೆಯಲು ಕಾರಣ, ಅಲ್ಲಿನ ಬಂಗಾರದ ಗಣಿ ನಡೆದ ಜಾಗದಂತೆಯೇ ಅದಿರುವುದು. ಕ್ಷಣಕಾಲ ಅಲ್ಲಿ ನಿಂತರೆ ಬೀಸುವ ಗಾಳಿಯಲ್ಲಿನ ವನಸ್ಪತಿಯ ಸುವಾಸನೆ ಮೂಗಿಗೆ ಬಡಿಯುತ್ತದೆ. ಹಾಗೇ ಹಾವಿನ ಮೈಯ್ಯಂತ ದಾರಿಯಲ್ಲಿ ಮೇಲೆ ಸಾಗಿದರೆ ನೆಲಜೇರಿ ಬಸವಣ್ಣನ ಗುಡಿಗಿಂತ ಮೊದಲು ಸಿಗುವ ಒಂದದ್ಭುತ ಜಾಗ ಉಪ್ಪಿಸನಪಡಿ. ಮಣ್ಣಿನಲ್ಲೂ ಉಪ್ಪಿನ ರುಚಿ ಸಿಗುವ ಗುಹೆಯೊಂದಕ್ಕೆ ಹೋಗುವ ದಾರಿಯ ಮೇಲ್ಭಾಗದ ಸ್ಥಳ ಇದು. ಇಲ್ಲಿ ನಿಂತರೆ ಕಾಡಿನ ಅಗಾಧ ವಿಸ್ತಾರ ಹಾಗೂ ಅದರ ಹಸಿರಿನ ಸ್ವರೂಪದ ಜೊತೆಗೆ, ವೇಗವಾಗಿ ಬೀಸುವ ಗಾಳಿಯ ತೀಕ್ಷ್ಣತೆ ಅನುಭವಕ್ಕೆ ಬರುತ್ತದೆ.

ಮೋಡಗಳು ಜೊತೆಗಿದ್ದವು!
ಸಾಧ್ಯವಾದಷ್ಟೂ ಮಟ್ಟಿಗೆ ಕಾಡನ್ನು ನೋಡಬೇಕು, ಆ ಹಸಿರು ವನಸಿರಿಯ ನಡುವೆ ಇರುವ ಜೀವಸಂಕುಲವನ್ನು, ಅಗಾಧ ವೃಕ್ಷರಾಶಿಯನ್ನು ನೋಡಬೇಕು ಎಂದು ಎಲ್ಲರೂ ಹುಮ್ಮಸ್ಸಿನಲ್ಲಿಯೇ ಹೆಜ್ಜೆಯಿಟ್ಟೆವು. ಸ್ವಲ್ಪಹೊತ್ತಿನÇÉೇ ಜಿಟಿಜಿಟಿ ಮಳೆ ಶುರುವಾಯಿತು. ಆ ಕಾನನದಲ್ಲಿ ಮಳೆಯ ಮೋಡಗಳು, ಕೈಗೆಟಕುವಷ್ಟು ಹತ್ತಿರದಲ್ಲಿ ಕಾಣಿಸಿದವು! ಅವು ನಮಗೆ ಮುತ್ತಿಡಲು ಬರುತ್ತಿರುವಂತೆ ಕಾಣಿಸಿ ನಾವೆಲ್ಲರೂ ಮೂಕರಾದೆವು. ಅಲ್ಲಿಂದ ತುಸು ದೂರದಲ್ಲಿ ವಾಚ್‌ಟವರ್‌ ಇತ್ತು. ಮುಳ್ಳುಕಂಟಿ ಬೆಳೆದ ಕಾರಣಕ್ಕೆ ಅಲ್ಲಿಗೆ ಹೋಗಲು ಪೇಚಾಡಬೇಕು. ಹೇಗೋ ಕಷ್ಟಪಟ್ಟು ತಲುಪಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡೆವು.

Advertisement

ಆ ಅಪೂರ್ವ ದೃಶ್ಯ ವೈಭವ
ಕಪ್ಪತ್ತಗುಡ್ಡದಲ್ಲಿ ಗಾಳಿಗುಂಡಿ ಬಸವಣ್ಣ ಗುಡಿಯ ಎದುರಿಗೆ ಹಾಯ್ದು ಕೊನೆಯ ಫ್ಯಾನಿನವರೆಗೆ ಮಾತ್ರ ವಾಹನ ಹೋಗಬಲ್ಲುದು. ಎಲ್ಲ ಜಾಗಗಳನ್ನು ಕಣ್ತುಂಬಿಕೊಳ್ಳಲು ಕನಿಷ್ಠ 2-3 ದಿನಗಳು ಬೇಕೇ ಬೇಕು. ನಮಗೆ ಏಳೆಂಟು ಕಿ. ಮೀ. ಮಾತ್ರ ಕ್ರಮಿಸಲು ಸಾಧ್ಯವಾಯಿತು. ಅಡಿಕೆ ಕಣಿವೆಯತ್ತ ಹೊರಟಾಗ ಮತ್ತೆ ಸೋನೆ ಮಳೆ ಶುರುವಾಯಿತು. ಅಡಿಕೆ ಕಣಿವೆಯ ಒಡಲೊಳಗೆ ಸುಮಾರು ಮೂರು ಕಿ. ಮೀ. ಸಿಗುವ ಹುಲ್ಲುಗಾವಲಿನಂತಹ ಪ್ರದೇಶ, ಹುಲ್ಲಿನ ಹಸಿರು, ಕುರುಚಲು ಕಾಡುಗಿಡಗಳನ್ನು ನೋಡುವುದೇ ಚೆಂದದ ಅನುಭವ. ಅಲ್ಲಿದ್ದ ಪೊಟರೆಯಂತಹ ಬಂಡೆಯ ಮೇಲೆ ನಿಂತರೆ ಕಾಣುವ ದೃಶ್ಯ ವೈಭವವನ್ನು ನೋಡಿಯೇ ಅನುಭವಿಸಬೇಕು. ನಾವು ನೋಡಿದ್ದು ಇಷ್ಟೇ ಜಾಗಗಳಾದದರೂ ನೋಡದೆ ಉಳಿದ ಜಾಗಗಳು ಸಾಕಷ್ಟು. ಮಂಜಿನ ಡೋಣಿ, ಕಬ್ಬಿನ ಕಲ್ಲುವಾರಿ, ಹಂದಿಬಚ್ಚಲು, ಸೂಜಿಮಡ್ಡಿ, ಕೆಂಪಗುಡ್ಡ, ಎತ್ತಿನಗುಡ್ಡ ಮುಂತಾದುವನ್ನು ಹೆಸರಿಸಬಹುದು. ನಮಗೆಲ್ಲಾ ಮೈ ಮನದಲ್ಲಿ ಉತ್ಸಾಹವಿದ್ದರೂ ಆಗಲೇ ಸಂಜೆಯಾಗಿದ್ದರಿಂದ ಆ ಕಾನನ ಪ್ರದೇಶದಲ್ಲಿ ಮುನ್ನಡೆಯಲು ಸಾಧ್ಯವಾಗಲಿಲ್ಲ.

ನಿಸರ್ಗ ನಿರ್ಮಿತ ವ್ಯೂ ಪಾಯಿಂಟ್‌
ಮತ್ತೂಂದೆರಡು ಕಡೆ ನಿಂತು ಕಪ್ಪತ್ತ ಮಲ್ಲೇಶ್ವರ ಮಠದ ಕಡೆ ನೋಡಿ ನಾವೆಲ್ಲರೂ ಈಗ ಅಲ್ಲಿಗೆ ಹೋಗಬೇಕಾಗಿದೆ. ಆ ಜಾಗ ಹೆಚ್ಚು ಕಡಿಮೆ 20 ಕಿಲೋಮೀಟರ್‌ ದೂರವಿದೆ ಎಂದೆ. ಜೊತೆಯಲ್ಲಿದ್ದವರಿಗೂ ಈ ವಿಷಯ ತಿಳಿದಿತ್ತು. ಕಪ್ಪತ್ತಗುಡ್ಡದ ಎಲ್ಲ ಕಡೆಯೂ ಹಬ್ಬಿಕೊಂಡಿರುವ ಬೆಟ್ಟಗಳ ನಡುವೆ ನಿಸರ್ಗ ನಿರ್ಮಾಣ ಮಾಡಿ­ ಕೊಂಡಂಥ ಸಹಜ ವೀವ್‌ ಪಾಯಿಂಟ್‌ಗಳಿವೆ. ಅಲ್ಲಿಗೆಲ್ಲ ಹೋಗಲು ಆ ಜಾಗಗಳನ್ನು ಚೆನ್ನಾಗಿ ತಿಳಿದವರು ಇದ್ದರೆ ಚೆನ್ನ. ಅಲ್ಲಿಂದ ಮತ್ತೆ ಡೋಣಿ ಗ್ರಾಮದ ಮೂಲಕ ಹಾಯ್ದು ಕಪ್ಪತ್ತ ಮಲ್ಲೇಶ್ವರ ಮಠದ ಕಡೆ ಬಂದಾಗ ಸಂಜೆ. ಕಾರಿಸಿದ್ದಪ್ಪನ ಪಡಿ ಏರಿ, ನಂತರ ಕಪ್ಪತ್ತ ಮಲ್ಲೇಶ್ವರ ಮಠದ ಒಳಗೆ ನಡೆದು ಸ್ವಲ್ಪ ಹೊತ್ತು ಕುಳಿತು ವಿಶ್ರಮಿಸಿಕೊಂಡಾಗ ನಡೆದು ನಡೆದು ದಣಿದಿದ್ದ ಕಾಲುಗಳಿಗೆ ಸಮಾಧಾನ. ಸುಮಾರು 16 ರಿಂದ 20 ಕಿ. ಮೀ. ಚಾರಣದ ದಣಿವು ಮಲ್ಲೇಶ್ವರ ಮಠದಲ್ಲಿನ ಸಾಂಬಾರು ಕುಡಿದಾಗ ಮಾಯವಾಗಿತ್ತು.

ಅರಣ್ಯ ಇಲಾಖೆಯ ಶ್ಲಾಘನೀಯ ಕಾರ್ಯ
ಮಳೆಗಾಲದ ನಂತರದ ಕಾಲದಲ್ಲಿ ಕಪ್ಪತ್ತಗುಡ್ಡದಲ್ಲಿ ಜನದಟ್ಟಣೆ ಕಡಿಮೆ. ಡೋಣಿ ಗ್ರಾಮದಿಂದ ಗಾಳಿಗುಂಡಿ ಬಸವಣ್ಣನ ಗುಡಿಯ ಕಡೆಗೆ ವಾಹನದ ಮೂಲಕ ಹೋಗುವವರು ನಿಗದಿತ ಶುಲ್ಕ ಪಾವತಿಸಿ ವಾಹನಗಳನ್ನು ಪರಿಶೀಲನೆಗೊಳಪಡಿಸಿಯೇ ಹೋಗಬೇಕು. ಗುಡ್ಡದ ಸುಸ್ಥಿರತೆ, ಸುರಕ್ಷತೆಗಾಗಿ ಹಾಗೂ ಪ್ಲಾಸ್ಟಿಕ್‌ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಅರಣ್ಯ ಇಲಾಖೆ ವಾಚ್‌ಟವರ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ. ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸಿದ ಮೇಲೆ ಮಾನವ ಹಸ್ತಕ್ಷೇಪ ಸಾಕಷ್ಟು ಕಡಿಮೆಯಾ­ಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ನಿರಂತರ ಸಾಹಸದಿಂದ ಕಳ್ಳಬೇಟೆ ಪ್ರಕರಣಗಳೂ ತಗ್ಗಿವೆ.

ವನಸ್ಪತಿಗಳ ತಾಣ
“ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಣ್‌’ ಎಂಬುದು ಸ್ಕಂದ ಪುರಾಣದಲ್ಲಿನ ಉಲ್ಲೇಖ. ಎಪ್ಪತ್ತು ಗಿರಿಗಳಲ್ಲಿ ಸಿಗದ ಔಷಧಿ ಗಿಡಮೂಲಿಕೆಗಳು ಕಪ್ಪತ್ತಗುಡ್ಡ ಒಂದರಲ್ಲೇ ಸಿಗುವ ಕಾರಣಕ್ಕೆ ಈ ಮಾತು ಬಂತೆಂದು ಹಿರಿಯರು ಹೇಳುತ್ತಾರೆ. ಗಿಡಮೂಲಿಕೆಗಳನ್ನು ಅರಸಿ ವರ್ಷವಿಡೀ ಇಲ್ಲಿಗೆ ಎಲ್ಲೆಲ್ಲಿಂದಲೋ ಜನ ಬರುತ್ತಲೇ ಇರುತ್ತಾರೆ.

ಚಿತ್ರ- ಲೇಖನ: ಸಿದ್ದು ಸತ್ಯಣ್ಣವರ

Advertisement

Udayavani is now on Telegram. Click here to join our channel and stay updated with the latest news.

Next