Advertisement

ಪಾತ್ರಧಾರಿ ಇಲ್ಲದ ಮೇಲೆ…

08:13 AM Sep 28, 2019 | mahesh |

ಆ ಚಿತ್ರದಲ್ಲಿ ನಟಿಸಿದ ಯಾರೊಬ್ಬ ಕಲಾವಿದರೂ ಇರಲಿಲ್ಲ. ಬದಲಾಗಿ ಸಿನಿಮಾಕ್ಕೆ ಸಂಬಂಧಪಡದ ಮೂವರು ವೇದಿಕೆ ಮೇಲಿದ್ದರು. ಜೊತೆಗೆ ಆ ಸಿನಿಮಾದ ನಿರ್ದೇಶಕ. ಆ ಮೂವರು ಕನ್ನಡ ಚಿತ್ರರಂಗದ ಬಿಝಿ ಇರುವ ವ್ಯಕ್ತಿಗಳು. ಆದರೂ ಹೊಸಬರಿಗೆ, ಹೊಸ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬಂದಿದ್ದರು. ಆದರೆ, ಚಿತ್ರದಲ್ಲಿ ನಟಿಸಿದ ಕಲಾವಿದರಿಗೆ ಮಾತ್ರ ತಮ್ಮ ಸಿನಿಮಾದ ಪ್ರಮೋಶನ್‌ಗೆ ಬರುವಷ್ಟು ಸಮಯವಿರಲಿಲ್ಲ. ಅಂದಹಾಗೆ, ಇದು “ಕಪಟ ನಾಟಕ ಪಾತ್ರಧಾರಿ’ ಸಿನಿಮಾದ ವಿಷಯ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆ ನಡೆಯಿತು. ನಿರ್ದೇಶಕರಾದ ಸಿಂಪಲ್‌ ಸುನಿ, ತರುಣ್‌ ಸುಧೀರ್‌ ಹಾಗೂ ನಟಿ ಸೋನು ಗೌಡ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ಅಂದು ವೇದಿಕೆಯಲ್ಲಿ ಏಕಾಂಗಿಯಾಗಿದ್ದ ಚಿತ್ರದ ನಿರ್ದೇಶಕರಿಗೆ ಸಾಥ್‌ ನೀಡಿ ಧೈರ್ಯ ತುಂಬಿದ್ದು ಕೂಡಾ ಅವರೇ.

Advertisement

ಹೊಸ ಜಾನರ್‌ನಲ್ಲಿ ಗುರುತಿಸಿಕೊಳ್ಳುತ್ತಿರುವ ಸಿನಿಮಾಗಳ ಸಾಲಿನಲ್ಲಿ “ಕಪಟ ನಾಟಕ ಪಾತ್ರಧಾರಿ’ ಕೂಡಾ ಸೇರುತ್ತದೆ. ಚಿತ್ರದ ಟ್ರೇಲರ್‌ ಭರವಸೆಯಿಂದ ಕೂಡಿದೆ. ಇಂತಹ ಸಿನಿಮಾಗಳ ಪ್ರಮೋಶನ್‌ಗೆ ಕಲಾವಿದರು ಬರಬೇಕು ಎನ್ನುವುದು ತರುಣ್‌ ಮಾತು. ನಿರ್ದೇಶಕ ಸುನಿ ಮಾತನಾಡಿ, “ನಾನು ಈ ಸಿನಿಮಾವನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಮಾಡಿದ್ದಾರೆ. ಸೀಟಿನಂಚಿನಲ್ಲಿ ಕುಳಿತು ನೋಡುವ ಸಿನಿಮಾ. ಸಿನಿಮಾ ನೋಡುತ್ತಾ ನಾವು ಕಥೆಯೊಂದಿಗೆ ಸೇರಿಕೊಳ್ಳುತ್ತೇವೆ’ ಎಂದರು. ನಿರ್ದೇಶಕ ಕ್ರಿಶ್‌ ಕಲಾವಿದರು ಗೈರಾಗಿರುವ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಬದಲಾಗಿ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳನ್ನು ತೋರಿಸಿ, ಚಿತ್ರದ ಬಗ್ಗೆ ಮಾತನಾಡಿದರು. ಇದೊಂದು ಥ್ರಿಲ್ಲರ್‌ ಜಾನರ್‌ ಕಥೆಯಾಗಿದ್ದು, ಒಬ್ಬ ಆಟೋ ಡ್ರೈವರ್‌ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಲವ್‌ಸ್ಟೋರಿಯನ್ನು ಬೆರೆಸಲಾಗಿದೆ ಎಂದು ವಿವರ ನೀಡಿದರು. ನಿರ್ದೇಶಕ ಕ್ರಿಶ್‌ ಕಥೆ ಮಾಡಿಕೊಂಡು ಈ ಕಥೆಗೆ ಯಾರು ಹೊಂದಿಕೆಯಾಗುತ್ತಾರೆಂದು ಯೋಚಿಸುತ್ತಿದ್ದ ಸಮಯದಲ್ಲಿ ಬಾಲು ನಾಗೇಂದ್ರ ಅವರ “ಹುಲಿರಾಯ’ ಟ್ರೇಲರ್‌ ರಿಲೀಸ್‌ ಆಗಿತ್ತಂತೆ. ಆ ಟ್ರೇಲರ್‌ ನೋಡಿ, “ನನ್ನ ಕಥೆಗೆ ಇವರೇ ಫಿಕ್ಸ್‌’ ಎಂದು ಹೀರೋ ಮಾಡಿದರಂತೆ.

ಚಿತ್ರದಲ್ಲಿ ನಾಯಕ ಬಾಲು ನಾಗೇಂದ್ರ ಅವರಿಗೆ ಸಂಗೀತಾ ಭಟ್‌ ನಾಯಕಿ. ವಿದೇಶದಲ್ಲಿದ್ದ ಕಾರಣ ಸಂಗೀತಾ, ಅಲ್ಲಿಂದಲೇ ವಿಡಿಯೋವೊಂದನ್ನು ಕಳುಹಿಸಿ ಚಿತ್ರಕ್ಕೆ ಶುಭಕೋರಿದರು. ಚಿತ್ರಕ್ಕೆ ಅದಿಲ್‌ ನದಾಫ್ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next