Advertisement

ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಕಣ್ಣೂರು ಸರಕಾರಿ ಶಾಲೆಗೆ ಶತಮಾನದ ಹಿರಿಮೆ

10:17 AM Dec 11, 2019 | mahesh |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1910 ಶಾಲೆ ಆರಂಭ
ನಿರಂತರ ಹೋರಾಟದ ಫಲವಾಗಿ ಶಾಲೆ ಪ್ರಾರಂಭ

ಮಹಾನಗರ: ಬಡ ಕೂಲಿ ಕಾರ್ಮಿಕರ, ಮೀನುಗಾರಿಕೆ, ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಮಕ್ಕಳ ಪಾಲಿಗೆ ಆಶಾಕಿರಣವಾಗಿರುವ ಶಾಲೆ ನಗರದ ದ.ಕ. ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆ ಕಣ್ಣೂರು. ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಗೆ ಬರುವ ಈ ಶಾಲೆ 9 ವರ್ಷಗಳ ಹಿಂದೆ ಶತಮಾನದ ಸಂಭ್ರಮ ಆಚರಿಸಿದೆ.

ನಗರ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಿ ವಾಸವಾಗಿರುವ ಅದೆಷ್ಟೋ ಜನರ ಮಕ್ಕಳಿಗೆ ಕಣ್ಣೂರು ಸರಕಾರಿ ಶಾಲೆ ಶಿಕ್ಷಣ ಸೌಲಭ್ಯವನ್ನು ಕರುಣಿಸಿದೆ. ಹಲವಾರು ಸಾಧಕ ಶ್ರೇಷ್ಠರು ಈ ಶಾಲೆಯಲ್ಲಿ ಕಲಿತು ಅನ್ಯಾನ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯರ ನಿರಂತರ ಹೋರಾಟದ ಫಲವಾಗಿ ಶಾಲೆಯು ಇಂದಿಗೂ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಾಗಿ ಮುನ್ನಡೆಯುತ್ತಿದೆ.

109 ವರ್ಷಗಳ ಸಂಭ್ರಮ
1910ರಲ್ಲಿ ಈ ಶಾಲೆ ಕಣ್ಣೂರಿನಲ್ಲಿ ಆರಂಭವಾಗಿದ್ದು, ಇದೀಗ 109 ವರ್ಷಗಳ ಸಂಭ್ರಮದಲ್ಲಿದೆ. ಇಲ್ಲಿನ ಬದ್ರಿಯಾ ಜುಮಾ ಮಸೀದಿ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿಯೇ ಶಾಲೆ ತನ್ನ ಚಟುವಟಿಕೆ ಆರಂಭಿಸಿತು. ಆ ಕಾಲದಲ್ಲಿ ಪರಿಸರದಲ್ಲಿ ಎಲ್ಲೂ ಶಾಲೆ ಇಲ್ಲದ ಕಾರಣದಿಂದ ಕಣ್ಣೂರು ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿತ್ತು.

Advertisement

ಒಂದು ಅಂದಾಜಿನ ಪ್ರಕಾರ, 100ರಿಂದ 150ರಷ್ಟು ಮಕ್ಕಳು ಶಾಲೆ ಪ್ರಾರಂಭದ ಕಾಲದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕೆಲವು ವರ್ಷ ಗರಿಷ್ಠ 400ರಿಂದ 500ರಷ್ಟು ಮಕ್ಕಳು ಕೂಡ ಶಿಕ್ಷಣ ಪಡೆದದ್ದೂ ಉಂಟು. ಬಾಡಿಗೆ ಕಟ್ಟಡದಲ್ಲಿ ಇದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿತ್ತು ಎನ್ನುತ್ತಾರೆ ಸ್ಥಳೀಯರು.

ಬೋರುಗುಡ್ಡೆ ಸ್ಥಳಾಂತರ
1999ರ ವರೆಗೆ ಇಲ್ಲಿ 5ನೇ ತರಗತಿ ಮಾತ್ರ ಇತ್ತು. 5ರಿಂದ 9ರ ವರೆಗೆ ತರಗತಿ ಬೇಕು ಎಂಬ ಸ್ಥಳೀಯರ ಒತ್ತಾಸೆಯ ಮೇರೆಗೆ 1999ರಲ್ಲಿ ಹೊಸ ಯೋಜನೆಗೆ ಶಾಲಾ ಪ್ರಮುಖರು ನಿರ್ಧರಿಸುತ್ತಾರೆ. ಸದ್ಯ ಇದ್ದ ಬಾಡಿಗೆ ಕಟ್ಟಡದಲ್ಲಿಯೇ 9ನೇ ತರಗತಿವರೆಗೆ ಮುಂದುವರಿಸಲು ಸ್ಥಳದ ಅಭಾವ ಎದುರಾಯಿತು. ಸ್ಥಳ ಇಲ್ಲ ಎಂದು ಮಕ್ಕಳ ಮುಂದಿನ ಶಿಕ್ಷಣಕ್ಕೆ ಕೊಡಲಿಯೇಟು ನೀಡುವುದು ಸರಿಯಲ್ಲ; ಹೀಗಾಗಿ ಪರ್ಯಾಯ ವ್ಯವಸ್ಥೆಗಳನ್ನು ನೋಡಿಕೊಳ್ಳಬೇಕು ಎಂಬ ಕಾರಣದಿಂದ ಸ್ಥಳೀಯ ಬೋರುಗುಡ್ಡೆ ಮದ್ರಸ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿತು. ಅಲ್ಲಿಯೂ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಈ ಶಾಲೆಯು ಬದುಕು ರೂಪಿಸುವ ಕೇಂದ್ರವಾಯಿತು. ನಿರಂತರ ಶಾಲಾ ಚಟುವಟಿಕೆಗಳ ಮುಖೇನ ಶಾಲಾ ಪರಿಸರ ಅಕ್ಷರ ದೇಗುಲವಾಯಿತು. ಮುಂದಿನ 10 ವರ್ಷ ಅಂದರೆ 2008ರ ವರೆಗೆ ಇದೇ ಕಟ್ಟಡದಲ್ಲಿ ಶಿಕ್ಷಣ ನೀಡಲಾಯಿತು.

ಆಯಿಶಾ ಹೈದ್ರೋಸ್‌ ಸ್ಮರಣಾರ್ಥ, ಕಣ್ಣೂರು ಬಿ.ಜೆ.ಎಂ. ಅಧ್ಯಕ್ಷರಾಗಿದ್ದ ಹಾಜಿ ಎಸ್‌. ಮುಹಮ್ಮದ್‌ ಅವರು 25 ಸೆಂಟ್ಸ್‌ ದಾನವಾಗಿ ಇದೇ ವ್ಯಾಪ್ತಿಯಲ್ಲಿ ಶಾಲೆಗಾಗಿ ಭೂಮಿಯನ್ನು ನೀಡಿದರು. ಹೀಗಾಗಿ ಈ ಭೂಮಿಯಲ್ಲಿ ಸರಕಾರದ ಅನುದಾನದಿಂದ ನೂತನ ಕಟ್ಟಡ ಸ್ಥಾಪಿಸಿ ಶಾಲಾ ಸ್ಥಾಪನೆಯ 99ನೇ ವರ್ಷ ಉದ್ಘಾಟಿಸಲಾಯಿತು.

1ರಿಂದ 7: 133 ವಿದ್ಯಾರ್ಥಿಗಳು
ಸದ್ಯ ಎಸೆಸೆಲ್ಸಿವರೆಗೆ ಈ ನೂತನ ಕಟ್ಟಡದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ಪೈಕಿ 1ರಿಂದ 7ನೇ ತರಗತಿಗಳವರೆಗೆ 133 ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. 12 ತರಗತಿ ಕೋಣೆಗಳಿವೆ. 6 ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತೂಂದು ಕಟ್ಟಡದಲ್ಲಿ ಸರಕಾರಿ ಪ್ರೌಢಶಾಲೆ ಕಾರ್ಯಾಚರಿಸುತ್ತಿದ್ದು, 70 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. 4 ತರಗತಿ ಕೊಠಡಿಗಳಿವೆ. ಕಂಪ್ಯೂಟರ್‌ ಶಿಕ್ಷಣ ಕೂಡ ನೀಡಲಾಗುತ್ತಿದೆ. ಸ್ಥಳೀಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆಯು ಸುದೀರ್ಘ‌ ವರ್ಷದಿಂದ ಸೇವೆ ನೀಡುತ್ತಾ ಬಂದಿದ್ದು, ಸ್ಥಳೀಯರ ಸಹಕಾರದಿಂದ ಇವು ಸಾಧ್ಯವಾಗಿದೆ ಎನ್ನುತ್ತಾರೆ ಶಿಕ್ಷಕಿ ಫ್ಲೋರಿನ್‌ ಕ್ರಾಸ್ತಾ.

ಬಡ ಮಕ್ಕಳ ಪಾಲಿಗೆ ಸರಕಾರಿ ಶಾಲೆಯಾಗಿ ಶತಮಾನವನ್ನು ಕಂಡಿರುವ ಕಣ್ಣೂರು ಶಾಲೆಯಲ್ಲಿ ಶಿಕ್ಷಕರ, ಸ್ಥಳೀಯರ ಸರ್ವರ ಸಹಕಾರದಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಶಾಲೆ ಇದೀಗ ಸ್ವಂತ ಕಟ್ಟಡದಲ್ಲಿ ಸ್ಥಳೀಯ ಮಕ್ಕಳಿಗೆ ವಿದ್ಯಾದಾನಗೈಯುತ್ತಿದೆ.
-ಗೀತಾ ಬಾೖ, ಮುಖ್ಯ ಶಿಕ್ಷಕಿ

ಕಣ್ಣೂರು ಶಾಲೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದೆ. ಸ್ಥಳೀಯ ಸಾವಿರಾರು ಮಕ್ಕಳ ಬದುಕು ರೂಪಿಸುವ ಕೆಲಸ ಮಾಡಿದೆ. ಶಾಲೆ ಆರಂಭಿಸುವ ನೆಲೆಯಲ್ಲಿ ಹಲವು ಜನರು ಬೇರೆ ಬೇರೆ ರೀತಿಯ ಹೋರಾಟ ಮಾಡಿದ್ದಾರೆ. ಸದ್ಯ ಮಕ್ಕಳಿಗೆ ಕ್ರೀಡಾ ಚಟುವಟಿಕೆಗೆ ಆದ್ಯತೆ ನೀಡಲು ಆಟದ ಮೈದಾನದ ಅಗತ್ಯವಿದೆ.
-ಕೆ. ಮಹಮ್ಮದ್‌ ಇಕ್ಬಾಲ್‌, ಹಳೆ ವಿದ್ಯಾರ್ಥಿ

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next