Advertisement

ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ

07:23 AM Feb 18, 2017 | |

ಇಂದು ತೆಂಕುತಿಟ್ಟು ಯಕ್ಷರಂಗದ ಯುವ ಭಾಗವತರಲ್ಲಿ ತನ್ನದೇ ಆದ ಛಾಪನ್ನು ಒತ್ತಿದವರು ರವಿಚಂದ್ರ ಕನ್ನಡಿಕಟ್ಟೆ. ಸಣ್ಣ ಪ್ರಾಯದಲ್ಲೇ ದೊಡ್ಡ ಹೆಸರು  ಪಡೆದ ಅಪೂರ್ವ ಸಾಧಕರು. 20ರ ಪ್ರಾಯದಲ್ಲೇ ಭಾಗವತರಾಗಿ ಯಕ್ಷರಂಗ ಪ್ರವೇಶಿಸಿ, ಅಲ್ಪಕಾಲದಲ್ಲೇ ಜನಮಾನಸದಲ್ಲಿ ಪ್ರತಿಷ್ಠಾಪನೆಗೊಂಡದ್ದು ಇವರ ಸಾಧನೆ. ಸುಮಧುರ ಕಂಠ, ಪಾತ್ರ – ಕಾಲಕ್ಕೆ ಅನುಗುಣವಾಗಿ ರಾಗಗಳ ಬಳಕೆ, ರಾಗಗಳ ರಸೋತ್ಕರ್ಷ ಮಾಡುವ ಸಾಮರ್ಥ್ಯ, ಸ್ಪಷ್ಟ ಉಚ್ಚಾರ, ವೇಷಧಾರಿಗಳ ಮನೋಧರ್ಮ ಅರಿತು ರಾಗ – ತಾಳಗಳ ಸಮನ್ವಯ, ಪ್ರಸಂಗಗಳ ನಡೆಯ ಬಗೆಗಿನ ನಿಖರ ಜ್ಞಾನ  ಕನ್ನಡಿಕಟ್ಟೆಯವರನ್ನು ಎತ್ತರಕ್ಕೇರಿಸಿದೆ.

Advertisement

1980ರಲ್ಲಿ ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆಯಲ್ಲಿ  ಧರ್ಮಣ್ಣ ಸಾಲ್ಯಾನ್‌  – ಸುಶೀಲಾ ದಂಪತಿಯ ಸುಪುತ್ರನಾಗಿ  ಜನಿಸಿದ ರವಿಚಂದ್ರ, ಬಾಲ್ಯದಲ್ಲೇ ಯಕ್ಷಗಾನದತ್ತ   ಒಲವುಳ್ಳವರಾಗಿ, ಶಾಲಾ ದಿನಗಳಲ್ಲೇ ವೇಷ ಮಾಡಿದವರು. ತನ್ನ ಶಾಲೆಯ ಶಿಕ್ಷಕರಾದ ಅನಂತ ಪದ್ಮನಾಭ ಹೊಳ್ಳರಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತು, ಸುಪ್ರಸಿದ್ಧ ಪುಂಡು ವೇಷಧಾರಿ ವೇಣೂರು ಸದಾಶಿವ ಕುಲಾಲರಲ್ಲಿ ಹೆಚ್ಚಿನ ನಾಟ್ಯಾಭ್ಯಾಸವನ್ನು ಅರಗಿಸಿಕೊಂಡರು. ಧರ್ಮಸ್ಥಳ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಯಾಗಿ ಸೇರಿ ಸಬ್ಬಣಕೋಡಿ ಕೃಷ್ಣ ಭಟ್ಟರಲ್ಲಿ ನಾಟ್ಯದ ಪರಿಪೂರ್ಣತೆ ಪಡೆದು ಸುರತ್ಕಲ್‌ ಮೇಳಕ್ಕೆ ವೇಷಧಾರಿಯಾಗಿ ಸೇರ್ಪಡೆಗೊಂಡರು. ಪ್ರಾರಂಭದಲ್ಲಿ  ಬಾಲಗೋಪಾಲ ಹಾಗೂ ಪೀಠಿಕೆ ಸ್ತ್ರೀ ವೇಷಗಳನ್ನು ಮಾಡುತ್ತಿದ್ದ ರವಿಚಂದ್ರರಿಗೆ ಉತ್ತಮ ಕಂಠವಿತ್ತು. ಇದನ್ನು ಸುರತ್ಕಲ್‌ ಮೇಳದ ಭಾಗವತರಾಗಿದ್ದ ಪದ್ಯಾಣ ಗಣಪತಿ  ಭಟ್‌ ಅವರೂ ಗಮನಿಸಿದ್ದರು. ಮುಂದಿನ ವರ್ಷದ ತಿರುಗಾಟಕ್ಕೆ ಬರಬೇಕಾಗಿದ್ದ ಸಂಗೀತಗಾರ ಬಾರದೆ ಇದ್ದಾಗ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು ಮೇಳದ ಯಜಮಾನರಾದ ವರದರಾಯ ಪೈಯವರೊಂದಿಗೆ ಸಮಾಲೋಚಿಸಿ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಸಂಗೀತ ಕಲಿಸಿ, ಸಂಗೀತಗಾರನ ಸ್ಥಾನಕ್ಕೆ ಎತ್ತುಗಡೆ ನೀಡಿದರು. ಮುಂದೆ ರವಿಚಂದ್ರ ಏಳು ವರ್ಷಗಳ ಕಾಲ ಪದ್ಯಾಣರ ಮನೆಯಲ್ಲೇ ಪೂರ್ಣ ಭಾಗವತಿಕೆಯ ಪಟ್ಟನ್ನು ಅಭ್ಯಸಿಸಿದರು. ಹೀಗೆ ಪದ್ಯಾಣ ಗಣಪತಿ ಭಟ್ಟರ ದೂರದೃಷ್ಟಿಯಿಂದಾಗಿ ಯಕ್ಷರಂಗಕ್ಕೆ ನೂತನ ಭಾಗವತರೊಬ್ಬರು ದೊರಕಿದರು. ಮುಂದೆ ಮಂಗಳಾದೇವಿ ಮೇಳದಲ್ಲಿ ಪದ್ಯಾಣ ಗುರುಗಳೊಂದಿಗೆ  ಪೂರ್ಣ ಪ್ರಮಾಣದ ಭಾಗವತರಾಗಿ ಸೇರ್ಪಡೆಗೊಂಡರು.  

ರವಿಚಂದ್ರ ಕನ್ನಡಿಕಟ್ಟೆಯವರ ಗಾನದಲ್ಲಿ ಸೊಬಗಿದೆ, ಮಾಧುರ್ಯವಿದೆ, ರಾಗ – ತಾಳಗಳ ಸಮಪಾಕವಿದೆ. ಪದ್ಯಾಣ ಶೈಲಿಯನ್ನು ಅರಗಿಸಿಕೊಂಡು, ಪದ್ಯಾಣರ ಯೋಗ್ಯ ಉತ್ತರಾಧಿಕಾರಿಯೆಂದು ಗುರುತಿಸಿಕೊಂಡಿ¨ªಾರೆ. “ರವಿಚಂದ್ರ ನನ್ನ ಶಿಷ್ಯರಲ್ಲೇ ಉತ್ತಮ ಸಾಧಕ. ಅವನ ನಯ ವಿನಯ, ಗುರುಭಕ್ತಿ, ಪಾಠದ ಮೇಲಿರುವ ಆಸಕ್ತಿ, ಇನ್ನಷ್ಟು ಕಲಿಯಬೇಕೆಂಬ ಉತ್ಸಾಹ ಇಂದು ರವಿಚಂದ್ರ ಎತ್ತರಕ್ಕೇರಲು ಕಾರಣ’ ಎಂಬುದು ಗುರುಗಳಾದ ಪದ್ಯಾಣ ಗಣಪತಿ ಭಟ್ಟರ ಅಂಬೋಣ.  ಸುಮಾರು ಐವತ್ತಕ್ಕೂ ಮಿಕ್ಕಿ ಪ್ರಸಂಗಗಳ ಪದ್ಯಗಳನ್ನು  ಕಂಠಪಾಠ ಮಾಡಿಕೊಂಡಿರುವ  ಕನ್ನಡಿಕಟ್ಟೆಯವರು  ಸಂದಭೋìಚಿತವಾಗಿ, ಸೂಕ್ತ ರಾಗಗಳನ್ನು ಬಳಸುವಲ್ಲಿ ಗುರುಗಳ ಕೌಶಲವನ್ನು ಕರಗತ ಮಾಡಿಕೊಂಡಿ¨ªಾರೆ. ಸದಾ ಶುಭ್ರವಸನಧಾರಿಯಾಗಿ, ನಗೆಮೊಗದಿಂದ ರಂಗಸ್ಥಳ ಪ್ರವೇಶಿಸುವ ಕನ್ನಡಿಕಟ್ಟೆಯವರು ಸೌಜನ್ಯದ ಸಾಕಾರಮೂರ್ತಿ. ಸುಪ್ರಸಿದ್ಧ ಕಲಾವಿದರ ಕೂಡುವಿಕೆಯ   ತಾಳಮದ್ದಳೆ ಕೂಟಗಳಲ್ಲೂ ಹೆಚ್ಚಿನ ಬೇಡಿಕೆಯ ಭಾಗವತರಾಗಿ¨ªಾರೆ. ಇತ್ತೀಚೆಗಿನ ಯಕ್ಷಗಾನದ ಹೊಸ ಬೆಳವಣಿಗೆಯಾದ ಗಾನ ವೈಭವದ ಅನಿವಾರ್ಯ ಭಾಗವತರಾಗಿ¨ªಾರೆ. ತೆಂಕುತಿಟ್ಟಿನ ಇನ್ನೋರ್ವ ಸುಪ್ರಸಿದ್ಧ ಯುವ ಭಾಗವತರಾದ ಪಟ್ಲ ಸತೀಶ ಶೆಟ್ಟರೊಂದಿಗೆ ನೂರಾರು ಗಾನವೈಭವಗಳಲ್ಲಿ ಭಾಗವಹಿಸಿ¨ªಾರೆ.

ಗುರುಗಳಾದ ಪದ್ಯಾಣ ಗಣಪತಿ ಭಟ್ಟರಂತೆಯೇ, ಕನ್ನಡಿಕಟ್ಟೆಯವರೂ  ಬಿಳಿ ನಾಲ್ಕು ಏರು ಶ್ರುತಿಯಲ್ಲಿ ನಿರರ್ಗಳ ಭಾಗವತಿಕೆ ಮಾಡುತ್ತಿರುವುದು ವಿಶೇಷ. ಪದ್ಯಾಣ ಶೈಲಿಯೊಂದಿಗೆ ಅಗರಿ ಶೈಲಿಯಲ್ಲಿಯೂ ಹಾಡಬಲ್ಲ ಸಾಮರ್ಥ್ಯವುಳ್ಳ  ಕನ್ನಡಿಕಟ್ಟೆಯವರು, ಶುದ್ಧ ಸಂಪ್ರದಾಯ ಹಾಗೂ ಸಂಗೀತ ಶೈಲಿ ಈ ಎರಡರಲ್ಲೂ ಭಾಗವತಿಕೆ ಮಾಡಬಲ್ಲ ಸಮರ್ಥರೂ ಹೌದು. ಕನ್ನಡಿಕಟ್ಟೆಯವರ ಭಾಗವತಿಕೆಯಲ್ಲಿ ಸ್ವರಗಳ ಸೂಕ್ತ ಏರಿಳಿಕೆ, ಅರ್ಥಾಭಿವ್ಯಕ್ತಿಯುಕ್ತ ಯತಿವಿನ್ಯಾಸ, ಸ್ಪಷ್ಟ ಉಚ್ಚಾರದೊಂದಿಗೆ ತಾಳಶುದ್ಧತೆ, ರಸರಂಜನೆಗೆ ಪೂರಕವಾಗಿ ರಾಗ ಸಂಯೋಜನೆ, ಭಾವಕ್ಕೆ ಅಭಾವವಾಗದಂತೆ ಭಾವಪೂರ್ಣವಾಗಿ ಹಾಡುವ ಶೈಲಿ ಗಮನಿಸಬೇಕಾದ ಅಂಶಗಳು.

ಇಂದು, ಫೆಬ್ರವರಿ 17, 2017ರಂದು ಮೂಡಬಿದಿರೆಯ ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ ಕನ್ನಡಿಕಟ್ಟೆ ದಂಪತಿಯನ್ನು ಮೂಡಬಿದಿರೆ ಸಮಾಜಮಂದಿರದಲ್ಲಿ ಗಣ್ಯರ ಸಮಕ್ಷಮದಲ್ಲಿ ಸಮ್ಮಾನಿಸಲಿದೆ. ಅಂದು ಕನ್ನಡಿಕಟ್ಟೆಯವರ ಭಾಗವತಿಕೆಯ ಗುರುಗಳಾದ ಪದ್ಯಾಣ ಗಣಪತಿ ಭಟ್‌ ಹಾಗೂ ನಾಟ್ಯ ಗುರುಗಳಾದ  ನಿವೃತ್ತ ಮುಖ್ಯೋಪಾಧ್ಯಾಯ ಅನಂತ ಪದ್ಮನಾಭ ಹೊಳ್ಳರಿಗೂ ಗೌರವಾರ್ಪಣೆ ನಡೆಯಲಿದೆ. 

Advertisement

ಎಂ. ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next