Advertisement

ಗದ್ದೆಯಂತಾದ ಕನ್ನಡಕುದ್ರು ಸಂಪರ್ಕಿಸುವ ಮುಖ್ಯ ರಸ್ತೆ

08:11 PM Aug 05, 2021 | Team Udayavani |

ಹೆಮ್ಮಾಡಿ: ದ್ವೀಪದಂತಿರುವ ಕನ್ನಡಕುದ್ರುವಿಗೆ ಸೇತುವೆಯೊಂದು ಆಗಿದ್ದು ಬಿಟ್ಟರೆ, ಅದಾಗಿ 5 ವರ್ಷ ಕಳೆದರೂ, ಈ ಊರನ್ನು ಸಂಪರ್ಕಿಸಲು ಇರುವ ಒಂದೇ ಒಂದು ರಸ್ತೆಗೆ ಇನ್ನೂ ಅಭಿವೃದ್ಧಿ ಭಾಗ್ಯ ಒದಗಿ ಬಂದಿಲ್ಲ. ಸುಮಾರು 1 ಕಿ.ಮೀ. ಉದ್ದದ ಮಣ್ಣಿನ ರಸ್ತೆ ಈಗಂತೂ ಮಳೆಗೆ ರಾಡಿಯೆದ್ದು, ಗದ್ದೆಯಂತಾಗಿದೆ. ಪ್ರತಿ ಬಾರಿಯೂ ಭರವಸೆ ಕೊಡುವ ಜನಪ್ರತಿನಿಧಿಗಳು ಈ ರಸ್ತೆ ಅಭಿವೃದ್ಧಿ ಬಗ್ಗೆ ಮಾತ್ರ ಮೀನಾಮೇಷ ಎಣಿಸುತ್ತಿದ್ದಾರೆ.

Advertisement

ಕನ್ನಡಕುದ್ರುವಿನಿಂದ 5 -6 ವರ್ಷಗಳ ಹಿಂದೆ ಹೆಮ್ಮಾಡಿ ಅಥವಾ ಕುಂದಾಪುರಕ್ಕೆ ಸಂಪರ್ಕ ಸಾಧ್ಯವಾಗಬೇಕಾದರೆ ದೋಣಿಯೇ ಆಧಾರವಾಗಿತ್ತು. ಬಹು ವರ್ಷಗಳ ಬೇಡಿಕೆ ಬಳಿಕ 2016ರಲ್ಲಿ ದ್ವೀಪವಾಸಿಗಳ ಸೇತುವೆಯ ಕನಸು ಈಡೇರಿತ್ತು. ಆದರೆ ಕನ್ನಡಕುದ್ರುವಿನಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯು ಹಲವು ವರ್ಷಗಳಿಂದ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ.

ನಿತ್ಯದ ಗೋಳು : ಕೇಳ್ಳೋರ್ಯಾರು?:

ಇಲ್ಲಿ ಯಾವುದೇ ಅಂಗಡಿಗಳಾಗಲಿ ಅಥವಾ ಇತರೆ ಯಾವುದೇ ಸೌಕರ್ಯಗಳಾಗಲಿ ಇಲ್ಲ. ಇಲ್ಲಿನ ನಿವಾಸಿಗರು ಎಲ್ಲದಕ್ಕೂ ಹೆಮ್ಮಾಡಿ ಪೇಟೆಯನ್ನೇ ಆಶ್ರಯಿಸಿದ್ದಾರೆ. ಪಂಚಾಯತ್‌ ಕಚೇರಿ, ಪಡಿತರ, ಇನ್ನಿತರ ಕೆಲಸಗಳು ಆಗಬೇಕಾದಲ್ಲಿ ಹೆಮ್ಮಾಡಿಗೆ ಬರಬೇಕು. ಬಸ್‌ ವ್ಯವಸ್ಥೆಯೂ ಇಲ್ಲ. ಒಂದೋ ಕನ್ನಡಕುದ್ರುವಿನಿಂದ ಮೂವತ್ತುಮುಡಿಯವರೆಗೆ ನಡೆದುಕೊಂಡು ಬಂದು ಹೆದ್ದಾರಿಯಲ್ಲಿ ಬಸ್‌ ಹತ್ತಬೇಕು. ಇಲ್ಲದಿದ್ದರೆ ರಿಕ್ಷಾ ಬಾಡಿಗೆ ಮಾಡಿಕೊಂಡು ಬರಬೇಕು. ರಸ್ತೆ ಸರಿಯಿದ್ದರೆ ಅನುಕೂಲವಾಗಲಿದೆ. ಈಗಂತೂ ಈ ಕೆಸರುಮಯ ರಸ್ತೆಯಿಂದಾಗಿ ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಮರಳು, ಕಲ್ಲು ಸಾಗಾಟ ವಾಹನಗಳಿಂದಲೂ ಈ ರಸ್ತೆ ಮತ್ತಷ್ಟು ಜರ್ಜರಿತಗೊಂಡಿದೆ.

61 ಕುಟುಂಬಗಳು:

Advertisement

ಕನ್ನಡಕುದ್ರುವಿನಿಂದ ರಾಷ್ಟ್ರೀಯ ಹೆದ್ದಾರಿಯ ಮೂವತ್ತುಮುಡಿಗೆ ಸಂಪರ್ಕ ಕಲ್ಪಿಸುವ 8.50 ಕೋ.ರೂ. ವೆಚ್ಚದಲ್ಲಿ 200 ಮೀ. ಉದ್ದ ಹಾಗೂ 7.5 ಮೀ. ಅಗಲದ ಸೇತುವೆ ನಿರ್ಮಾಣಗೊಂಡಿತ್ತು. ಮೂವತ್ತುಮುಡಿ ಬಳಿಯ ಹೆದ್ದಾರಿಯಿಂದ ಕನ್ನಡಕುದ್ರುವಿನ ಕೊನೆಯಲ್ಲಿ ಇರುವ ಮನೆಗಳಿಗೆ ಸುಮಾರು 2 ಕಿ.ಮೀ. ದೂರವಿದೆ. ಈ ಪೈಕಿ ಹೆದ್ದಾರಿಯಿಂದ ಸೇತುವೆಯವರೆಗಿನ ರಸ್ತೆಗೆ ಈಗಾಗಲೇ ಡಾಮರು ಕಾಮಗಾರಿಯಾಗಿದೆ. ಅಲ್ಲಿಂದ ಮುಂದಕ್ಕೆ ಮಾತ್ರ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. 100 ಎಕರೆ ವಿಸ್ತೀರ್ಣವಿರುವ ಈ ಕನ್ನಡಕುದ್ರುವಿನಲ್ಲಿ 61 ಕುಟುಂಬಗಳು ನೆಲೆಸಿವೆ. ನಿತ್ಯ ನೂರಾರು ಮಂದಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ.

ತುಂಬಾ ಸಮಸ್ಯೆ:

ಕನ್ನಡಕುದ್ರುವಿನ ಗ್ರಾಮಸ್ಥರು ಈ ಹದಗೆಟ್ಟ ರಸ್ತೆಯಿಂದಾಗಿ ಸಂಕಷ್ಟಪಡುತ್ತಿದ್ದು, ಈ ರಸ್ತೆಗೆ ಡಾಮರು ಕಾಮಗಾರಿ ಅಥವಾ ಕಾಂಕ್ರೀಟ್‌ ಕಾಮಗಾರಿ ಮಾಡಿದಲ್ಲಿ ಅನುಕೂಲವಾಗಲಿದೆ. ಇದು ಕುದ್ರು ಆಗಿರುವುದರಿಂದ ಕಾಂಕ್ರೀಟ್‌ ಕಾಮಗಾರಿ ಮಾಡಿದಲ್ಲಿ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರಬಹುದು. ಈ ಬಗ್ಗೆ ಗ್ರಾಮಸಭೆಯಲ್ಲಿಯೂ ಗಮನಸೆಳೆದಿದ್ದು, ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ.  – ರಾಘವೇಂದ್ರ ಪೂಜಾರಿ, ಹೆದ್ದಾರಿಮನೆ, ಸ್ಥಳೀಯ ಗ್ರಾ.ಪಂ.ಸದಸ್ಯರು

ಪ್ರಸ್ತಾವನೆ ಸಲ್ಲಿಕೆ:

ಈ ಕನ್ನಡಕುದ್ರು ರಸ್ತೆಯ ಅಭಿವೃದ್ಧಿಗೆ ಪಂಚಾಯತ್‌ನಿಂದ ಅಷ್ಟೊಂದು ಅನುದಾನ ಇಲ್ಲದಿರುವುದರಿಂದ, ಈ ಬಗ್ಗೆ ಈಗಾಗಲೇ ಗ್ರಾ.ಪಂ.ನಿಂದ ಶಾಸಕರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಗಾಗಿ ಜಿಲ್ಲಾಧಿಕಾರಿಗಳಿಗೂ ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು. ಸತ್ಯನಾರಾಯಣ, ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next