Advertisement

ಮರೆಯಲುಂಟೆ ಮಾನವ್ಯ ಕವಿಯ!

06:52 PM Apr 13, 2019 | mahesh |

ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ. ಎ. ಸನದಿ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಅವರನ್ನು ಗೌರೀಶ ಕಾಯ್ಕಿಣಿಯವರು “ಮಾನವ್ಯ ಕವಿ’ ಎಂದು ಕರೆದಿದ್ದರು. ಆ ಕೊಂಡಾಟಕ್ಕೆ ಸಮರ್ಥನೆಯಾಗಿ ಬದುಕಿದ ಸನದಿಯವರು ವೃತ್ತಿಸಂಬಂಧವಾಗಿ ದೇಶದ ಹಲವೆಡೆಗಳಲ್ಲಿ ಓಡಾಡಿದರೂ ಜೀವನದ ಬಹುಕಾಲ ಕಳೆದದ್ದು ಮುಂಬಯಿಯಲ್ಲಿ. ಮರಾಠಿನಾಡಿನಲ್ಲಿ “ಮಿನಿಕರ್ನಾಟಕ’ ಕಟ್ಟುವಲ್ಲಿ ಸಕ್ರಿಯರಾಗಿದ್ದ ಅವರು ನಿವೃತ್ತರಾದ ಬಳಿಕ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನೆಲೆಸಿದ್ದರು.

Advertisement

ಏಳು ಶಿಶು ಸಾಹಿತ್ಯ ಕೃತಿಗಳು, ಮೂರು ಕಥಾ ಸಂಕಲನ, ಏಳು ವಿಮರ್ಶಾ ಸಂಕಲನ, ಮೂರು ನಾಟಕಗಳು, ವ್ಯಕ್ತಿ ಚಿತ್ರ, ಒಂಬತ್ತು ಅನುವಾದಿತ ಕೃತಿಗಳು, ಹಲವು ಸಂಪಾದಿತ ಕೃತಿಗಳು ಹೀಗೆ ಸುಮಾರು 70 ಕ್ಕಿಂತ ಹೆಚ್ಚು ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರು ಕನ್ನಡ ಜನಮಾನಸದಲ್ಲಿ ಸಿªರವಾಗಿರುತ್ತಾರೆ.

ಕೊಕ್ಕರೆ ಬಿಳುಪಿನ ಸ್ವತ್ಛ ತಲೆಗೂದಲು, ಆಪ್ತತೆ ಸೂಸುವ ಕಣ್ಣುಗಳು, ಸದಾ ನಗುವುದಕ್ಕೆ ಸಿದ್ಧವಾದಂತಿರುವ ಮುಖಭಾವ, ಅಪರಿಚಿತರನ್ನು ತನ್ನ ಸಾಹಚರ್ಯೆಗೆ ಅಳವಡಿಸಲು ತವಕಿಸುವ ಮನೋಭಾವ- ಇವು ಸ್ವಲ್ಪದರಲ್ಲೆ ಡಾ. ಬಾಬಾ ಸಾಹೇಬ್‌ ಅಹ್ಮದ್‌ ಸನದಿಯವರ ಬಾಹ್ಯ ವ್ಯಕ್ತಿತ್ವವನ್ನು ನಿರೂಪಿಸಬಹುದಾದ ವಿವರಣೆ.

ಬೆಳಗಾವಿ ಜಿಲ್ಲೆಯ ಸಿಂಗೊಳ್ಳಿಯಲ್ಲಿ ಜನಿಸಿದ ಸನದಿಯವರು ಕರ್ನಾಟಕದಲ್ಲಿ ಕಾಲ ಕಳೆದುದು ಕಡಿಮೆ. ತಮ್ಮ ನೌಕರಿಯ ನಿಮಿತ್ತ ಕರ್ನಾಟಕದ ವಿವಿಧೆಡೆಗಳಲ್ಲಿ ಹಾಗೂ ಕರ್ನಾಟಕದ ಹೊರಗೆ ದುಡಿಯುತ್ತ ಬಹುಭಾಷಾ ಬಾಂಧವ್ಯ ಬೆಳೆಸಿಕೊಂಡರೂ ಮುಂಬಯಿ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ನಿಯುಕ್ತಗೊಂಡ ಸನದಿಯವರು ಆಕಾಶವಾಣಿಯಿಂದ ಪ್ರಸಾರಗೊಳ್ಳುತ್ತಿದ್ದ ಕನ್ನಡ ಕಾರ್ಯಕ್ರಮ ಮುಚ್ಚದಂತೆ ನೋಡಿಕೊಂಡಿದ್ದಲ್ಲದೆ ಕರಾವಳಿ ಕರ್ನಾಟಕದ ಜನಪ್ರಿಯ ಯಕ್ಷಗಾನ ತಾಳಮದ್ದಲೆಗೂ ಸ್ಥಾನ ಒದಗಿಸಿದರು.

ಕವಿಯಾಗಿ ಖ್ಯಾತಿ ಗಳಿಸಿದ ಸನದಿಯವರು ತಮ್ಮ ಮಾತಿನ ಮೋಡಿಯಿಂದ ಮುಂಬಯಿ ಕನ್ನಡಿಗರ ಮನಸೆಳೆದಿದ್ದರು. ಅವರು ನೀಡಿದ ಪ್ರೋತ್ಸಾಹದಿಂದ ಹಲವಾರು ಯುವ ಕವಿಗಳು ಮುಂಬಯಿಯಲ್ಲಿ ಹುಟ್ಟಿಕೊಂಡರು. ಅವರೇ ಹೇಳುತ್ತಿದ್ದಂತೆ “ಮುಂಬಯಿಯ ಎಲ್ಲಾದರೂ ನಿಂತು ಕಲ್ಲು ಬೀಸಿದರೆ, ಅದು ಯಾವನಾದರೂ/ ಯಾವಳಾದರೂ ಕವಿಯ ಸನಿಹ ಬೀಳುತ್ತದೆ’.

Advertisement

ಸಂಘಟನೆಯಲ್ಲಿ ಸನದಿಯವರು ಎತ್ತಿದ ಕೈ. ಮುಂಬಯಿ ಕನ್ನಡಿಗರ ಮಾತೃಸಂಸ್ಥೆಯಾದ ಕರ್ನಾಟಕ ಸಂಘದಲ್ಲಿ ಹಲವಾರು ವರ್ಷ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಬಳಿಕ ಆ ಜವಾಬ್ದಾರಿಯನ್ನು ನನ್ನ ಹೆಗಲಿಗೇರಿಸಿದರು. ಅಧ್ಯಕ್ಷರಾದ ಸದಾನಂದ ಶೆಟ್ಟಿ ಹಾಗೂ ಸಾಹಿತಿ ವ್ಯಾಸರಾಯ ಬಲ್ಲಾಳರ ಜೊತೆಗೂಡಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದ ಸನದಿಯವರು ಆಗಾಗ ಬಹುಭಾಷಾ ಕವಿಗೋಷ್ಠಿಯನ್ನೂ ಯಶಸ್ವಿಯಾಗಿ ಆಯೋಜಿಸುತ್ತಿದ್ದರು.

1993ರಲ್ಲಿ ಮುಂಬಯಿಯಲ್ಲಿ ನಡೆದ ರಕ್ತಪಾತದಿಂದ ಮನ ನೊಂದ ಸದಾನಂದ ಶೆಟ್ಟಿಯವರು ಕರ್ನಾಟಕ ಸಂಘ, ಮುರಿದ ಮನಸ್ಸುಗಳನ್ನು ಹೇಗೆ ಬೆಸೆಯಲು ಸಾಧ್ಯ ಎಂದಾಗ ಸನದಿಯವರು “ಸಂಗೀತ ಹಾಗೂ ಲಲಿತ ಕಲೆಗಳಿಂದ’ ಎಂದರು. ಹೀಗೆ ಹುಟ್ಟಿಕೊಂಡ ಕರ್ನಾಟಕ ಸಂಘದ ಕಲಾ ವಿಭಾಗವೇ ಕಲಾಭಾರತಿ, ಚಿದಾನಂದ ಶೆಟ್ಟರು, ವ್ಯಾಸರಾಯ ಬಲ್ಲಾಳರು, ಬಿ. ಎ. ಸನದಿಯವರು ಹಾಗೂ ನಾನು ಹುಟ್ಟು ಹಾಕಿದ ಕಲಾಭಾರತಿ. ಪ್ರತಿ ಭಾನುವಾರ 10ರಿಂದ 12ರವರೆಗೆ ಖ್ಯಾತ ಕಲಾವಿದರಿಂದ ಸಂಗೀತ ಕಛೇರಿ, ನೃತ್ಯ, ನಾಟಕ ಏರ್ಪಡಿಸುತ್ತ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಕಲಾವಿದರು ಕಲಾಭಾರತಿಯಲ್ಲಿ ಕಾರ್ಯಕ್ರಮ ನೀಡುವುದು ಒಂದು ಪ್ರತಿಷ್ಠೆಯ ವಿಷಯ ಎಂದು ಭಾವಿಸಿದ್ದಾರೆ. ಕರ್ನಾಟಕ ಸಂಘದ ಈ ವಿಭಾಗಕ್ಕೆ ಕಲಾಭಾರತಿ ಎನ್ನುವ ನಾಮಕರಣ ಮಾಡಿದವರೂ ಸನದಿಯವರೇ. ದೇಶದ ಖ್ಯಾತ ಸಂಗೀತ ಸಂಗೀತ ವಿಮರ್ಶಕ ಪಿ. ಜಿ. ಬುರ್ಡೆಯವರು ಕಲಾಭಾರತಿ ತಂಡವನ್ನು ಸೇರಿಕೊಂಡ ಬಳಿಕ, ಇದು ಇನ್ನಷ್ಟು ವಿಸ್ತೃತಗೊಂಡಿತು.

ಸನದಿಯವರು ಉರ್ದು ಮಾತೃಭಾಷೆಯಾದರೂ ಅವರ ಕನ್ನಡ ಸ್ಪುಟ ಹಾಗೂ ಕಳಂಕರಹಿತ. ಕನ್ನಡ, ಸಂಸ್ಕೃತಗಳಲ್ಲಿ ಎಂಎ ಮಾಡಿದ ಅವರು ಬೇಂದ್ರೆಯವರ ಕವಿತೆಯನ್ನು ವರ್ಣಿಸುವಷ್ಟೇ ಸುಲಭವಾಗಿ ಕಾಳಿದಾಸನ ಶಾಕುಂತಲವನ್ನೂ ವರ್ಣಿಸಬಲ್ಲರು. ಎಂದೂ ಕೋಮಿನ ಬಗ್ಗೆ ಮಾತಾಡದ ಅವರ ಸಮನ್ವಯ ದೃಷ್ಟಿಕೋನ ಇತರರಿಗೆ ಆದರ್ಶಪ್ರಾಯವೆನ್ನಬೇಕು. ವಚನ ಸಾಹಿತ್ಯದ ಕುರಿತು ಅಧಿಕೃತವಾಗಿ ಮಾತಾಡಬಲ್ಲ ಅವರು ನಾಗಲಾಂಬಿಕೆ ಎನ್ನುವ ನಾಟಕವನ್ನು ಬರೆದಿದ್ದು ಅದು ಹಲವು ಪ್ರದರ್ಶನಗಳನ್ನು ಕಂಡಿದೆ.

ಸನದಿಯವರ ಕವಿತೆಗಳಲ್ಲಿರುವ ಮಾನವತೆಯ ಸೊಬಗನ್ನು ಕಂಡ ಗೌರೀಶ ಕಾಯ್ಕಿಣಿಯವರು ಅವರನ್ನು ಮಾನವ್ಯ ಕವಿ ಎಂದು ಕೊಂಡಾಡಿದ್ದಾರೆ. ಅಂದಮಾತ್ರಕ್ಕೆ ಸನದಿಯವರ ಕೊಡುಗೆ ಕಾವ್ಯಕ್ಕಷ್ಟೆ ಸೀಮಿತವಾಗಿಲ್ಲ. ವಿಚಾರಸಾಹಿತ್ಯ, ವಿಮರ್ಶೆ, ಪ್ರಬಂಧ, ಸಣ್ಣಕತೆ ಇತ್ಯಾದಿ ಕ್ಷೇತ್ರಗಳಲ್ಲೂ ಅವರು ಕೈಯಾಡಿಸಿದ್ದಾರೆ. ಅವರ ಕಥಾಸಂಕಲನಕ್ಕೆ ನಾನು ಮುನ್ನುಡಿ ಬರೆದಿದ್ದೆ.

ಸನದಿಯವರು ತನ್ನ ಪತ್ನಿಯನ್ನು ನಯನಾ ಎಂದು ಹೆಸರಿಸಿದರೆ, ಕುಮಟಾದ ತನ್ನ ಮನೆಯನ್ನು “ಮಿಲನ’ ಎಂದು ಕರೆದಿದ್ದಾರೆ.

ತಮ್ಮ ಸಾಧನೆಗಾಗಿ ಸನದಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ ಗಳಿಸಿದ್ದಾರೆ. ಹಾಗೂ ಪ್ರತಿಷ್ಠಿತ ಪಂಪ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಯಶವಂತ ಚಿತ್ತಾಲರ ಬಳಿಕ ಮುಂಬಯಿಯ ಕನ್ನಡಿಗನಿಗೆ ಈ ಪ್ರಶಸ್ತಿ ದೊರೆತಿದ್ದು ಮುಂಬಯಿ ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಿತ್ತು.

ವ್ಯಾಸರಾವ್‌ ನಿಂಜೂರು

Advertisement

Udayavani is now on Telegram. Click here to join our channel and stay updated with the latest news.

Next