Advertisement

ಕನ್ನಡದ ಕಣವಿಯಲಿ ಸಮನ್ವಯದ ಚೆಂಬೆಳಕು

10:33 PM Feb 16, 2022 | Team Udayavani |

ಮನದ ಕಣಿವೆ ತುಂಬಾ ಸಜ್ಜನಿಕೆ, ಕಲ್ಲು ಹೃದಯಗಳನ್ನು ಕರಗಿಸುವ ಭಾವಜೀವಿ, ಪೆನ್ನಿನ ಮಸಿಯಲ್ಲೇ ಕಾವ್ಯಾಕ್ಷಿಗಳನ್ನು ಗರಿಗೆದರಿಸುವ ಚೆನ್ನ, ಶ್ರೇಷ್ಠದಾನಿ ಸಮಾಧಾನಿ ನಾಡೋಜ. ನೆಲವನ್ನು ಮುಗಿಲಾಗಿಸಿ ಅಲ್ಲೊಂದು ಹೊಳೆಯುವ ಆಕಾಶಬುಟ್ಟಿ ಕಟ್ಟಿದ ಕವಿ ವೀರನೆ ಕನ್ನಡಿಗರಿಗೆಲ್ಲ ಸದಾ ಚೆನ್ನ.
ಹೌದು, ಅದೊಂದು ದೈತ್ಯ ಹರಿವು ಹೊಂದಿದ ಕನ್ನಡದ ದೊಡ್ಡ ಕಣಿವೆ, ಏನಿಲ್ಲ ಅಲ್ಲಿ ? ಹಸುರು, ಚೆಲುವು, ತಂಗಾಳಿ, ಸಂಪ್ರೀತಿ, ಸೌಜನ್ಯ, ಹಾಡು, ಪಾಡು, ಗೆಳೆತನ, ಒಲವು, ನವ್ಯ, ನವೋದಯಕ್ಕೂ ಸಾಕ್ಷಿಯಾಗಿ ನಿಲ್ಲುವ ಮನೋಧರ್ಮ. ನಾಡೋಜ ಚೆನ್ನವೀರ ಕಣವಿ ಎಂಬ ಅಪ್ಪಟ ದೇಶಿ ಸಜ್ಜನಿಕೆಯ ಕವಿ ಹೃದಯದ ಕಾವ್ಯದ ಉಸಿರು ನಿಲ್ಲಿಸಲಾದೀತೆ? ಇದು ಅಸಾಧ್ಯ. ಏಕೆಂದರೆ ಅದು ಕವಿತ್ವದ ಸೆಲೆ, ಸ್ಫೂರ್ತಿಯ ಚಿಲುಮೆ. ಹೀಗಾಗಿ ಅದು ನಿತ್ಯ ನಿರಂತರ.

Advertisement

ಧಾರವಾಡವೆಂಬ ಸಾಂಸ್ಕೃತಿಕ ನಗರಿ ಹಸುರು ಸಿರಿ ಹೊದ್ದು ಮಲಗಿದ ತುಣುಕು ಅಷ್ಟೇ. ಆ ಊರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಗದಗ ಜಿಲ್ಲೆಯ ಹೊಂಬಳದಿಂದ ಯುವಕನೊಬ್ಬ ಬಂಡಿ ಏರಿ ಬಂದಾಗ ವ್ಯಂಗ್ಯದ ನಗೆ ನಕ್ಕವರಿಗೆ ಲೆಕ್ಕವಿಲ್ಲ. ಆದರೆ ಅಕ್ಷರಕ್ಕೊಂದು ಅಕ್ಷರ, ಪ್ರಾಸಕ್ಕೊಂದು ಪ್ರಾಸ, ಜನ್ಯಕ್ಕೊಂದು ಸೌಜನ್ಯವನ್ನು ಸೇರಿಸಿಕೊಂಡು ದೈತ್ಯ ಆಲದ ಮರಗಳ ಪಕ್ಕದಲ್ಲಿಯೇ ಕೋಗಿಲೆಗಳು ಕುಳಿತು ಕೂಗುವ ಸಿಹಿ ಹಣ್ಣಿನ ಮಾಮರವಾಗಿ ಬೆಳೆದು ನಿಂತವರು ಕವಿ ಚೆನ್ನವೀರ ಕಣವಿ.

ಕಣವಿಯಲ್ಲಿಯೇ ಹೈಟ್ಸ್‌: ಚೆನ್ನವೀರನೆಂಬ ಯುವ ತರುಣ ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ ಅವರಂತಹ ಮಹಾನ್‌ ಚೇತನಗಳ ಸಮ್ಮೊàಹನಾಸ್ತ್ರಗಳ ಪ್ರಯೋಗದ ಅಲೆಯಲ್ಲಿ ತೇಲಿದವರು. 40ರ ದಶಕದಲ್ಲಿಯೇ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲ ಮುಗಿಲು ಕೃತಿಗಳು ಹೊರ ಬಂದಾಗ ಈ ತರುಣನನ್ನು ಕನ್ನಡ ಸಾಹಿತ್ಯ ಲೋಕ ಬೆರಗಿನಿಂದ ನೋಡಿದ್ದು ನಿಜ. ಯಾವ ನೆಲದಲ್ಲಿ ಬೇಂದ್ರೆ ಕೊಡೆ ಹಿಡಿದುಕೊಂಡು ನಡೆದಾಡಿ ಕಾವ್ಯಗಳನ್ನು ಹೆಕ್ಕಿದ್ದರೋ ಅದೇ ನೆಲದಲ್ಲಿ ಚೆನ್ನವೀರ ಕೈಯಲ್ಲಿ ಊರುಗೋಲು ಹಿಡಿದು ಕಾವ್ಯದ ಕಣಿವೆಯನ್ನೇ ತೋಡಿದ್ದು ಧಾರವಾಡದ ಮತ್ತೂಂದು ಸೊಗಸು ಎನ್ನಬಹುದು. ಅದೇ ಸಾಧನಕೇರಿ, ಅದೇ ಅತ್ತಿಕೊಳ್ಳ, ಅದೇ ಕವಿವಿ ಆವರಣ, ಅದೇ ಕಲ್ಯಾಣ ನಗರ, ಅದೇ ಸುಭಾಸ ರಸ್ತೆ, ಮತ್ತದೇ ಮಳೆ, ಬೆಳೆ, ಹಳೆಬೇರು, ಹೊಸಚಿಗುರು ಎಲ್ಲವೂ ಅಲ್ಲಿಯದ್ದೇ ಆದರೂ ಕಣವಿಯವರ ಕಾವ್ಯದ ಭಾವ ಭಿನ್ನವಾಗಿತ್ತು. ಅದು ಕಣಿವೆ ಅಷ್ಟೇ, ಅಲ್ಲೇನಿದೆ ಹೈಟ್ಸ್‌ ಎಂದು ಹಿರಿಯ ಕವಿಗಳು ಕಣವಿಯವರನ್ನು ಗೇಲಿ ಮಾಡಿದ್ದುಂಟು. ಅಂಥ ಸಂದರ್ಭದಲ್ಲಿ- ಶಿಖರದ ಮಹತ್ವ ಗೊತ್ತಾಗುವುದು ಕಣಿವೆ ಇದ್ದಾಗಲೇ ಎಂದು ಮುಗುಳ್ನಕ್ಕವರು ಕಣವಿ. ಶಿಖರ ಆರಂಭಗೊಳ್ಳುವುದೇ ಕಣಿವೆಯಲ್ಲಿ ಎಂದು ಒಮ್ಮೆ ಟಾಂಗ್‌ಕೊಡಬಹುದಿತ್ತಾದರೂ ಕಣವಿ ಅವರ ಸಹೃದಯತೆ ಎಂದಿಗೂ ಎಲ್ಲೆ ಮೀರಲೇ ಇಲ್ಲ.

ಶಿಶಿರದಲ್ಲಿ ಬಂದ ಸ್ನೇಹಿತ: ಸ್ನೇಹ, ಪ್ರೀತಿ, ಔದಾರ್ಯ, ಸಜ್ಜನಿಕೆ, ಸ್ನೇಹಕ್ಕೆ ಸದಾ ಮಿಡಿಯುವ ಮನ ಕವಿ ಕಣವಿ ಅವರದಾಗಿತ್ತು. ಅವರ ಸಾಂಗತ್ಯ ಹೊಂದಿದ್ದ ಅವರ ಸಮಕಾಲೀನರು ಮಾತ್ರವಲ್ಲ, ಯುವ ಪೀಳಿಗೆಯವರ ಕೃತಿಗಳು, ಲೇಖನಗಳಿಗೆ ಅವರು ನೀಡುತ್ತಿದ್ದ ಪ್ರತಿಕ್ರಿಯೆ ಕೂಡ ಅಷ್ಟೇ ಸಿಹಿಯಾಗಿರುತ್ತಿತ್ತು. ಸಾಹಿತ್ಯ ವಲಯದಲ್ಲಿ ಶಾಲ್ಮಲೆಯಷ್ಟೇ ಗುಪ್ತಗಾಮಿನಿಯಂತೆ ಹರಿಯುತ್ತಿದ್ದ ಸಿದ್ಧಾಂತಗಳ ಒಣ ಜಗಳದ ಬಣಗಳೆಲ್ಲದರಲ್ಲೂ ಕವಿ ಕಣವಿ ಸ್ಥಾನ ಪಡೆದುಕೊಂಡಿದ್ದರು.

ಅತ್ತ ಡಾ|ಕಲಬುರ್ಗಿ ಸೌಜನ್ಯದ ಗಾಂಭೀರ್ಯತೆ, ಡಾ|ಗಿರಡ್ಡಿ ವಿಮರ್ಶೆಯ ಪ್ರಖರತೆ, ಚಂಪಾ ವಿಡಂಬನೆಯ ಚೇಳು ಕುಟುಕು, ಡಾ|ಪಟ್ಟಣಶೆಟ್ಟಿ ಅವರ ರಮ್ಯತೆ, ಡಾ|ಕಂಬಾರರ ಶಿವಾಪುರದ ಜಾನಪದವನ್ನು ತಮ್ಮ ಭಾವ ಲೀಲೆಯ ಚೆಂಬೆಳಕಿನಲ್ಲಿ ನೋಡಿದವರು ಕಣವಿ. ಬಸವರಾಜ ಕಟ್ಟಿàಮನಿ ಅವರೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದ ಅವರು, ಚೆಂಬೆಳಕಿನ ಚೆಂದದ ಮನೆಯಲ್ಲಿ ಕುಳಿತು ಭೇಟಿಗೆ ಬಂದ ಸಹೃದಯಿಗಳಿಗೆಲ್ಲ ಧಾರವಾಡದ ಫೇಡಾ ತಿನ್ನಿಸುತ್ತಿದ್ದರು.

Advertisement

ಇನ್ನೊಂದು ಬಳಗದಲ್ಲಿದ್ದ ಡಾ| ಕಾರ್ನಾಡ್‌, ಡಾ| ಜಿ.ಎಸ್‌. ಆಮೂರ, ಡಾ| ಕೀರ್ತಿನಾಥ ಕುರ್ತಕೋಟಿ, ಜಿ.ಬಿ.ಜೋಶಿ, ಡಾ|ಪಾಟೀಲ ಪುಟ್ಟಪ್ಪ, ಶಂ.ಭಾ. ಜೋಶಿ, ವಿ.ಕೃ.ಗೋಕಾಕ ಹೀಗೆ ಎಲ್ಲ ಕಡೆಗೂ ಸಲ್ಲುವ ಮನಃಸ್ಥಿತಿ. ಸ್ನೇಹ ಸಮ್ಮಿಲನಕ್ಕೆ ಕೊಂಡಿ ಯಾಗಿದ್ದ ಅವರ ಕಪಾಟುಗಳ ತುಂಬಾ ಎಲ್ಲರ ಬರಹ, ಎಲ್ಲರ ವಿಚಾರಗಳು, ಎಲ್ಲರ ಪುಸ್ತಕಗಳು ತುಂಬಿದ್ದುದು ಅವರ ಶಿಶಿರ ಸ್ನೇಹಕ್ಕೆ ಸಾಕ್ಷಿ.

ಸುಗಮ ಸಂಗೀತಕ್ಕೆ ಸಿಕ್ಕ ಚೆನ್ನ: ಕವಿ ಕಣವಿ ಅವರ ಕಾವ್ಯಗಳು ನವೋದಯ, ನವ್ಯದ ಸಾಹಿತ್ಯದ ವರ್ತುಲದಲ್ಲಿ ಮಾತ್ರ ಉಳಿಯಲಿಲ್ಲ. ವಿವಿಗಳ ವಿಚಾರ ಸಂಕಿರಣ, ಕವಿಗೋಷ್ಠಿಯಲ್ಲಿನ ಪರಾಮರ್ಶೆಗಷ್ಟೇ ಸೀಮಿತವಾಗಲಿಲ್ಲ. ಬದಲಾಗಿ ಎಲ್ಲ ವರ್ಗದ ಜನರನ್ನೂ ತಲುಪಿದವು. ಕನ್ನಡದ ಸುಗಮ ಸಂಗೀತ ಪರಂಪರೆ, ಆಕಾಶವಾಣಿ, ಕರ್ನಾಟಕ ವಿವಿ ಸಂಗೀತ ವಿಭಾಗದ ಯುವ ಮತ್ತು ಉತ್ಸಾಹಿ ಮನಸ್ಸುಗಳಿಗೆ ಕಣವಿ ಅವರ ಕಾವ್ಯ ಆಹಾರವಾಯಿತು. ಸುಗಮ ಸಂಗೀತ ಲೋಕದ ಖ್ಯಾತ ಗಾಯಕರಾದ ಸಿ.ಅಶ್ವತ್ಥ್, ಮೈಸೂರು ಅನಂತಸ್ವಾಮಿ, ಜಿ.ವಿ. ಅತ್ರಿ, ಸಂಗೀತಾ ಕಟ್ಟಿ ಮುಂತಾದವರ ಸಿರಿಕಂಠದಲ್ಲಿ ಕಣವಿಯವರ ರಚನೆಯ ಭಾವಗೀತೆಗಳು ಮೊಳಗಿದವು. ಪರಿಣಾಮ ವಿಶ್ವ ಭಾರತಿಗೆ ಕನ್ನಡದಾರತಿ, ಮುಂಜಾವದಲಿ ಸೂರ್ಯನ ಮಕಮಲ್ಲಿನಲಿ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ, ವಿಶ್ವ ವಿನೂತನ ವಿದ್ಯಾಚೇತನದಂತಹ ಹಾಡುಗಳು ಜನಮಾನಸದಲ್ಲಿ ನಲಿಯುಂತಾಯಿತು.

ಕನ್ನಡ ಉಸುರಿದ ಕಾವ್ಯಕಣಿ: ಕನ್ನಡ ನಾಡು-ನುಡಿಯ ವಿಚಾರ ಬಂದಾಗ ನಾಡ ಪ್ರೇಮ ಮೆರೆಸುವಂಥ ಕಾವ್ಯ ರಚಿಸುವ ಮೂಲಕ ಕವಿ ಕಣವಿ ಕನ್ನಡಿಗರ ಮನಗೆದ್ದರು. “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ…’ ಕಣವಿಯವರ ಅತ್ಯುತ್ತಮ ರಚನೆಗಳಲ್ಲಿ ಒಂದು. ಕವಿವಿ ಪ್ರಸಾರಾಂಗದಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದ ಸಿರಿವಂತಿಕೆ ಹೆಚ್ಚಿಸುವಂಥ ಕೃತಿಗಳನ್ನು ರಚಿಸಿದ್ದು ಅವರ ಹೆಚ್ಚುಗಾರಿಕೆ. ಕಣವಿ ಅವರಿಗೆ ಬಲಗೈಯಂತೆ ಇದ್ದವರು ಸಂಶೋಧಕ ಡಾ| ಎಂ.ಎಂ.ಕಲಬುರ್ಗಿ. ಇಬ್ಬರದೂ ಅಕ್ಕ ಪಕ್ಕದ ಮನೆಗಳು. ಅವರೊಂದಿಗೆ ಒಡನಾಟ. ಕಾವ್ಯದ ಅನುಸಂಧಾನ, ಸಂಶೋಧನೆ ಯ ಫಲ ಒಟ್ಟೊಟ್ಟಿಗೆ ಸಂಭ್ರಮಿಸುವ ಅವರ ಸ್ನೇಹ ಕೊನೆವರೆಗೂ ಅಪ್ಪಟವಾಗಿ ತ್ತು. ಡಾ| ಕಲಬುರ್ಗಿ ಅವರ ಹತ್ಯೆ ಕಣವಿ ಅವರನ್ನು ಹಿಂಡಿ ಹಿಪ್ಪೆ ಮಾಡಿದ್ದು ಅಷ್ಟೇ ಸತ್ಯ.

ಎಲ್ಲೆಲ್ಲೂ ಸಲ್ಲುತ್ತಿದ್ದ ಕವಿ ಹೃದಯಿ: ಚೆನ್ನವೀರ ಕಣವಿ ಬರೋಬ್ಬರಿ 94 ವರ್ಷ ಬದುಕಿದವರು. ಅವರು ತಮ್ಮ 58ನೇ ವಯಸ್ಸಿನಲ್ಲಿ ನಿವೃತ್ತರಾದರೂ ಅನಂತರವೂ ಸಾಹಿತ್ಯ ಲೋಕದ ಸಾಂಗತ್ಯದಲ್ಲಿಯೇ ಕಾಲ ಕಳೆದವರು. ಸಾಹಿತ್ಯದ ಎಲ್ಲ ಬಣಗಳ ಜತೆಗೂ ಸಲ್ಲುತ್ತಿದ್ದರು. “ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ ‘ ಎಂದು ಕುಟು ಕಿದವರಿಗೆ, ನಾನು ಎಲ್ಲೆಲ್ಲೂ ಸಲ್ಲುತ್ತೇನಯ್ಯಾ ಎಂದು ಮೆಲುದನಿಯಲ್ಲೇ ಹೇಳಿದವರು ಕಣವಿ.

ಕಡೆಗೂ ದಕ್ಕದ “ರಾಷ್ಟ್ರಕವಿ’ಭಾಗ್ಯ
ಕವಿ ಕಣವಿ ಅವರು ಡಾ|ಜಿ.ಎಸ್‌.ಶಿವರುದ್ರಪ್ಪ ಅವರ ಅನಂತರ ರಾಷ್ಟ್ರಕವಿ ಸಮ್ಮಾನ ಪಡೆಯುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರು. ಈ ಬಗ್ಗೆ ಹಲವು ಬಾರಿ ಸರಕಾರದ ಮಟ್ಟದಲ್ಲಿ ಚರ್ಚೆಯೂ ನಡೆದು, ಇನ್ನೇನು ಕವಿ ಕಣವಿ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಗುತ್ತದೆ ಎಂಬೆಲ್ಲ ಸುದ್ದಿಗಳು ದಟ್ಟವಾಗಿದ್ದವು. ಆದರೆ ಸರಕಾರದಿಂದ ನೇಮಕವಾಗಿದ್ದ ಹಿರಿಯ ವಕೀಲರಾದ ಕೋ.ಚೆನ್ನಬಸಪ್ಪ ನೇತೃತ್ವದ ಸಮಿತಿ, ರಾಷ್ಟ್ರಕವಿ ಎಂಬ ಬಿರುದು ಕೊಡುವುದೇ ಸರಿಯಾದ ಪದ್ಧತಿ ಅಲ್ಲ ಎಂದು ಅಭಿಪ್ರಾಯ ಪಟ್ಟು, ವರದಿ ನೀಡಿದ್ದರಿಂದ ಕವಿ ಕಣವಿ ಅವರು ರಾಷ್ಟ್ರಕವಿ ಆಗುವುದು ತಪ್ಪಿತು ಎನ್ನುವ ಮಾತು ಸಾಹಿತ್ಯ ಲೋಕದಲ್ಲಿ ಪ್ರಸ್ತಾವವಾಗುತ್ತಲೇ ಇದೆ.

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next