Advertisement

ಕನ್ನಡ ವೆಲ್ಫೇರ್‌ ಸೊಸೈಟಿ: ಸುವರ್ಣ ಮಹೋತ್ಸವ ಸಮಾರೋಪ

05:00 PM Dec 11, 2018 | |

ಮುಂಬಯಿ: ನಮಗೆ ಜನ್ಮ ನೀಡಿದ ತಂದೆ-ತಾಯಿಯಂತೆ ನಮ್ಮ ಮಾತೃ ಭಾಷೆಯನ್ನು ರಕ್ಷಿಸುವ ಕರ್ತವ್ಯ ನಮ್ಮದಾಗಿದೆ. ಸರಕಾರದ ಉದಾಸೀನತೆ ಮತ್ತು ಇಂಗ್ಲಿಷ್‌ ವ್ಯಾಮೋಹದಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವುದು ವಿಷಾದನೀಯವಾಗಿದೆ. ಅದನ್ನು ಸರಕಾರ ಹಾಗೂ ನಾವು ಮನಸ್ಸು ಮಾಡಿದರೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಶಿಕ್ಷಣ ಸಂಸ್ಥೆಯನ್ನಾಗಿ ಪರಿವರ್ತಿಸಿ ಉಳಿಸಿಕೊಳ್ಳಬಹುದು. ನನ್ನ ಶಿಕ್ಷಣ ಸಂಸ್ಥೆ ಆಳ್ವಾಸ್‌ನಲ್ಲಿ ಕನ್ನಡ ಮಾಧ್ಯಮವನ್ನು ಪ್ರಾರಂಭಿಸಿದ್ದೇನೆ. ಪ್ರಸ್ತುತ ನಿರೀಕ್ಷೆಗೂ ಮೀರಿದ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಆಳ್ವಾಸ್‌ ಶಿಕ್ಷಣ ಸಂಸ್ಥೆ ಮೂಡಬಿದ್ರೆಯ ಕಾರ್ಯಾಧ್ಯಕ್ಷ ಡಾ| ಮೋಹನ್‌ ಆಳ್ವ ಅವರು ನುಡಿದರು.

Advertisement

ಡಿ. 8 ರಂದು ಪೂರ್ವಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಇದರ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮಗೆ ಭಾಷೆಗಿಂತ ಮೊದಲು ನಮ್ಮ ನಾಡಿನ ಸಂಸ್ಕೃತಿಯಿದೆ. ಸಂಸ್ಕೃತಿ ಉಳಿದರೆ ಭಾಷೆ ಉಳಿಯಲು ಸಾಧ್ಯವಿದೆ. ಹಿರಿಯರು ಕಟ್ಟಿದ ಇಂತಹ ಸಂಸ್ಥೆಗಳಿಂದಾಗಿ ಭಾಷೆ, ಸಂಸ್ಕೃತಿಯನ್ನು ಕಟ್ಟಲು ಸಾಧ್ಯ. ಇದರಿಂದ ನಮ್ಮ ಮಕ್ಕಳಿಗೆ ನಮ್ಮ ಕೂಡು ಕುಟುಂಬದ ತುಳುನಾಡಿನ ಸಂಸ್ಕೃತಿ, ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬಹುದು. ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಪಡೆಯುವ ಶಿಕ್ಷಣಕ್ಕಿಂತಲೂ ನಮ್ಮ ಸಂಸ್ಕಾರ, ಮತ್ತು ಸಂಸ್ಕೃತಿಯಿಂದ ದೊರೆಯುವ ಮೌಲ್ಯಗಳು ಜೀವನದಲ್ಲಿ ಮುಖ್ಯವಾಗಿರುತ್ತವೆ  ಎಂದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಪಯ್ಯಡೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ತುಳು-ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಸಮಾಜದಲ್ಲಿಂದು ತುಳು-ಕನ್ನಡ ಬಾರದಿದ್ದರೆ ಮುಜುಗರಕ್ಕೀಡಾಗಬಹುದು. ಈ ಭಾಷೆಗಳು ಪರಸ್ಪರ ಅರಿತುಕೊಳ್ಳಲು, ಸ್ನೇಹಮಯ ಸಂಪರ್ಕಕ್ಕೆ ದಾರಿದೀಪವಾಗಿವೆ.  ಇಂದಿನ ಈ ಕಾರ್ಯಕ್ರಮಕ್ಕೆ ಬಂಟರ ಸಂಘದ ಪದಾಧಿಕಾರಿಗಳು ಉತ್ಸಾಹದಿಂದ ಸಮಾರಂಭದ ಯಶಸ್ಸಿಗೆ ಸಹಕರಿಸಿರುವುದು ಕನ್ನಡ ವೆಲ್ಫೆàರ್‌ ಸೊಸೈಟಿ ಮಾಡುತ್ತಿರುವ ಕಾರ್ಯವಾಗಿದೆ ಎಂದು ನುಡಿದರು.

ಅತಿಥಿಯಾಗಿ ಆಗಮಿಸಿದ ಕೈಗಾರಿಕೋದ್ಯಮಿ ಕೆ. ಎಂ. ಶೆಟ್ಟಿ ಅವರು ಮಾತನಾಡಿ, ತುಳು-ಕನ್ನಡ ಭಾಷೆಗಳು ನಮ್ಮ ಸಂಸ್ಕೃತಿ-ಸಂಸ್ಕಾರವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿವೆ. ಕನ್ನಡವನ್ನು ಉಳಿಸುವಲ್ಲಿ ನಾವು ಸದಾ ಪ್ರಯತ್ನಪಡಬೇಕು. ಈ ಬಗ್ಗೆ ನನ್ನ ಹುಟ್ಟೂರಲ್ಲಿ ಇರುವ ಕನ್ನಡ ಶಾಲೆಯನ್ನು ಗುಣಮಟ್ಟಕ್ಕೇರಿಸುವಲ್ಲಿ ಪ್ರಯತ್ನಿಸಿದ ಫಲವಾಗಿ  ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗಿದೆ. ಆದ್ದರಿಂದ ಎಲ್ಲರೂ ಹುಟ್ಟೂರಿನ ಶಾಲೆಗಳತ್ತ ಗಮನಹರಿಸಿ ಕನ್ನಡವನ್ನು ಉಳಿಸಬೇಕು ಎಂದು ಹೇಳಿದರು.

ಬಂಟರ ಸಂಘ ಮುಂಬಯಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಮಾತನಾಡಿ, ಸಮಾಜಪರ ಕಾರ್ಯಗಳತ್ತ ನಾವು ಗಮನ ನೀಡಿದಾಗ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿರುವ ಉದ್ದೇಶ ಸಾರ್ಥಕವಾಗುತ್ತದೆ. ಮಹಾನಗರದಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣವನ್ನು ನೀಡುವತ್ತ ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು,  ಕನ್ನಡ ವೆಲ್ಫೆàರ್‌ ಸೊಸೈಟಿಯು ಸುವರ್ಣ ಮಹೋತ್ಸವವನ್ನು ಆಚರಿಸಲು ನನಗೆ ಹಲವಾರು ಮಹಾನೀಯರು ಸಹಕರಿಸಿದ್ದಾರೆ. ಸಮಾರಂಭದ ಬಗ್ಗೆ ಆಲೋಚಿಸಿದಾಗ ಮಹೇಶ್‌ ಶೆಟ್ಟಿ ಮತ್ತು ರವೀಂದ್ರನಾಥ ಭಂಡಾರಿ ಇವರು ಬೆನ್ನೆಲುಬಾಗಿ ಸಹಕರಿಸಿದರು. ಅಲ್ಲದೆ ಕಡಂದಲೆ ಸುರೇಶ್‌ ಭಂಡಾರಿ ಇವರು ನೀಡಿದ ಸಹಕಾರದಿಂದ ಇಂತಹ ಭವ್ಯ ಸಮಾರಂಭವನ್ನು ಆಯೋಜಿಸಲು ಸಾಧ್ಯವಾಯಿತು. ಸಮಿತಿಯ ಸದಸ್ಯರು, ತುಳು-ಕನ್ನಡಿಗರ ಸಹಕಾರ ಹಾಗೂ ಉದ್ಯಮಿಗಳು, ಗಣ್ಯರ ಬೆಂಬಲದಿಂದ ಸುವರ್ಣ ಮಹೋತ್ಸವ ಅರ್ಥಪೂರ್ಣವಾಗಿ ನಡೆದಿದೆ. ಸುವರ್ಣ ಮಹೋತ್ಸವವು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗಿರದೆ ಸಮಾಜಮುಖೀ ಕಾರ್ಯಗಳನ್ನು ಮಾಡಲಾಗಿದೆ. ಸಂಸ್ಥೆಯ ಎಲ್ಲ ಕಾರ್ಯಗಳಿಗೆ ನಿಮ್ಮೆಲ್ಲರ ಸಹಕಾರ ಸದಾಯಿರಲಿ ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಉದ್ಯಮಿ ಉದಯ ಶೆಟ್ಟಿ ಇನ್ನ ಮಾತನಾಡಿ ಶುಭಹಾರೈಸಿದರು. ಸಮಾರಂಭದಲ್ಲಿ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ, ನ್ಯಾಯವಾದಿ ಎಚ್‌. ಕೆ. ಸುಧಾಕರ ಅರಾಟೆ, ದಾನಿಗಳಾದ ಪ್ರವೀಣ್‌ ಭೋಜ ಶೆಟ್ಟಿ, ಉಮಾ ಕೆ. ಶೆಟ್ಟಿ, ಎಂ. ಜಿ. ಶೆಟ್ಟಿ, ಜಯಂತ್‌ ಶೆಟ್ಟಿ, ಹರೀಶ್‌ ಎಂ. ಶೆಟ್ಟಿ ಮೊದಲಾದವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಸ್ಥೆಯ ಶಾಂತಾ ನಾರಾಯಣ ಶೆಟ್ಟಿ ನಂದಳಿಕೆ ರಂಗಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ ಸುಂದರ ಮೂಡಬಿದ್ರೆ ಅವರಿಗೆ ಪ್ರದಾನಿಸಲಾಯಿತು. ಸೊಸೈಟಿಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ದಂಪತಿ,  ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್‌ ಎಸ್‌. ಶೆಟ್ಟಿ, ಉಪಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಕಡಂದಲೆ ಸುರೇಶ್‌ ಭಂಡಾರಿ, ರಂಗನಟ ಅಶೋಕ್‌ ಪಕ್ಕಳ ಅವರನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷರುಗಳಾದ ನಂದಳಿಕೆ ನಾರಾಯಣ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಕನ್ನಡ ವೆಲ್ಫೆàರ್‌ ಸೊಸೈಟಿಯ ಉಪಾಧ್ಯಕ್ಷ ಜಯರಾಜ್‌ ಜೈನ್‌, ಗೌರವ ಕೋಶಾಧಿಕಾರಿ ಹರೀಶ್‌ ಎಂ. ಶೆಟ್ಟಿ, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜತೆ ಕೋಶಾಧಿಕಾರಿ ಪೀಟರ್‌ ರೋಡ್ರಿಗಸ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎನ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಎಲ್ಲೂರು ಸ್ವಾಗತಿಸಿದರು.

Advertisement

ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿ-ಗಣ್ಯರನ್ನು ಸಂಸ್ಥೆಯ ವತಿಯಿಂದ ಪದಾಧಿಕಾರಿಗಳು ಗೌರವಿಸಿದರು. ಅಪರಾಹ್ನ ಸಾಂಪ್ರದಾಯಿಕ ಚೆಲುವು-ನಲಿವು ಫ್ಯಾಶನ್‌ ಶೋ, ಸಾಕ್ಷÂಚಿತ್ರ, ರಾತ್ರಿ ನಂದಳಿಕೆ ನಾರಾಯಣ ಶೆಟ್ಟಿ ರೂಪಾಂತರಿಸಿದ, ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದ ಪ್ರಶಸ್ತಿ ವಿಜೇತ ನಾಗ ಸಂಪಿಗೆ ಏಕಾಂಕ ತುಳು ನಾಟಕ ಪ್ರದರ್ಶನಗೊಂಡಿತು.  ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

 ಕನ್ನಡವು ಪೂಜನೀಯ ಭಾಷೆ ಯಾಗಿದೆ. ಪ್ರಪಂಚದಲ್ಲೇ ವಿಶ್ವಕೋಶವನ್ನು ನೀಡಿದ ಹೆಗ್ಗಳಿಕೆ ಕನ್ನಡಕ್ಕಿದೆ. ಪ್ರಾಚೀನ ಭಾಷೆಗಳಲ್ಲಿ ಮೂರನೇ ಸ್ಥಾನವನ್ನು ಕನ್ನಡ ಪಡೆದಿದೆ. ಭಾಷೆಯನ್ನು ಉಳಿಸಲು ನಾವು ಶಾಲೆಗಳಿಂದ ಪ್ರಯತ್ನಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವತ್ತ ನಾವು ಗಮನ ಹರಿಸದಿದ್ದಲ್ಲಿ ಈ ಭಾಷೆ ಇಂತಹ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಬಹುದು. ಭಾಷೆಯನ್ನು ಉಳಿಸಿ-ಬೆಳೆಸುವಲ್ಲಿ ತಾಯಂದಿರ ಪಾತ್ರ ತುಂಬಾ ಇದೆ. ಮುಂದಿನ ಪೀಳಿಗೆಗೆ ನಾವು ಕನ್ನಡವನ್ನು ಕೊಂಡೊಯ್ಯುವ ಕಾರ್ಯ ಮಾಡಬೇಕು .
  –  ಹರೀಶ್‌ ಪೂಂಜಾ , ಶಾಸಕರು, ಬೆಳ್ತಂಗಡಿ

 ಸಂಸ್ಥೆಯ ಸುವರ್ಣ ಮಹೋತ್ಸವದ ಯಶಸ್ಸಿಗೆ ಎಲ್ಲರೂ  ತುಂಬು ಹೃದಯದಿಂದ ಸಹಕರಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆಯವರ ತಂಡದ ಕಾರ್ಯವೈಖರಿಯನ್ನು ಕಂಡು ಸಂಸ್ಥೆಯ ಈ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡು ಸುಸಾಂಗವಾಗಿ ನಡೆಸಿಕೊಟ್ಟ ಆತ್ಮತೃಪ್ತಿ ನನಗಿದೆ. ಭವಿಷ್ಯದಲ್ಲೂ ಸಂಸ್ಥೆಯು ಸಮಾಜಮುಖೀ ಕಾರ್ಯಗಳಲ್ಲಿ ತೊಡಗುವುದಲ್ಲದೆ, ತುಳು-ಕನ್ನಡಿಗರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಅದಕ್ಕಾಗಿ ಬೇಕಾಗುವ ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ಸದಾಯಿದೆ
– ಮಹೇಶ್‌ ಎಸ್‌. ಶೆಟ್ಟಿ ,ಕಾರ್ಯಾಧ್ಯಕ್ಷರು, ಸುವರ್ಣ  ಮಹೋತ್ಸವ ಸಮಿತಿ

ಕನ್ನಡ ಭಾಷೆಗಾಗಿ ಮತ್ತು ಸಮಾಜದ ಅಭಿವೃದ್ಧಿಗಾಗಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಅನೇಕ ಯೋಜನೆಗಳನ್ನು ಸಂಸ್ಥೆಯು ಹೊಂದಿದೆ. ವಿಧವಾ ವೇತನ, ಶೈಕ್ಷಣಿಕ ನೆರವು, ಸಂಸ್ಕೃತಿ-ಸಂಸ್ಕಾರಗಳನ್ನು ಮಾಡುತ್ತಿರುವಂತಹ ಕ್ರಿಯಾಶೀಲ ಸಂಸ್ಥೆ ಇದಾಗಿದೆ.  ಸಂಘವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇನ್ನಷ್ಟು ಅಭಿವೃದ್ಧಿಯತ್ತ ಸಂಘವು ಬೆಳೆದು ತುಳು-ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವಂತಾಗಲಿ.
ರವೀಂದ್ರನಾಥ ಎಂ. ಭಂಡಾರಿ, ಉಪ ಕಾರ್ಯಾಧ್ಯಕ್ಷರು,  ಸುವರ್ಣ ಮಹೋತ್ಸವ ಸಮಿತಿ

 ಮುಂಬಯಿಯಲ್ಲಿ  ವಿವಿಧ ರಾಜ್ಯಗಳ ಜನತೆ ನೆಲೆಸಿದ್ದು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಗರದಲ್ಲಿ ಹೊಟ್ಟೆಪಾಡಿಗಾಗಿ ಬಂದ ತುಳು-ಕನ್ನಡಿಗರು 50 ವರ್ಷಗಳ ಹಿಂದೆ ಕಂಡ ಕನಸು ಇಂದು ಹೆಮ್ಮರವಾಗಿ ನನಸಾಗುತ್ತಿರುವುದು ಅಭಿನಂದನೀಯ. ಕನ್ನಡಿಗರನ್ನು ಒಂದಾಗಿಸಿ ಅವರ ಶ್ರೇಯೋಭಿವೃದ್ದಿಗೆ ತುಳುನಾಡಿನ ಭಾಷೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸಲು ಕಟ್ಟಿದ ಈ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದರಲ್ಲಿ ಭಾಗಿಯಾಗಲು ಹೆಮ್ಮೆಯಾಗುತ್ತಿದೆ.
 ಕಡಂದಲೆ ಸುರೇಶ್‌ ಭಂಡಾರಿ, ಉಪಕಾರ್ಯಾಧ್ಯಕ್ಷರು : ಸುವರ್ಣ ಮಹೋತ್ಸವ ಸಮಿತಿ

ಚಿತ್ರ-ವರದಿ:ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next