Advertisement

ಪಟಾಕಿ ಯಾವಂದೇ ಆಗಿರ್ಲಿ ಅಂಟ್ಸೋರ್‌ ನಾವಾಗಿರ್ಬೇಕು…: ಹಬ್ಬಗಳತ್ತ ಸ್ಟಾರ್‌ ಸಿನ್ಮಾ ಚಿತ್ತ

11:11 AM May 31, 2024 | Team Udayavani |

ಪರಭಾಷಾ ಚಿತ್ರರಂಗಗಳು ಹಬ್ಬಗಳ ದಿನವನ್ನು ತಮ್ಮ ಸಿನಿಮಾ ರಿಲೀಸ್‌ಗೆ ಬಳಸಿಕೊಂಡಷ್ಟು, ನಮ್ಮ ಕನ್ನಡ ಚಿತ್ರರಂಗ ಬಳಸಿಕೊಳ್ಳುತ್ತಿಲ್ಲ ಎಂಬ ಮಾತಿದೆ. ಸಂಕ್ರಾಂತಿ, ದೀಪಾವಳಿ, ಗಣೇಶನ ಹಬ್ಬ,ಕ್ರಿಸ್ಮಸ್‌.. ಹೀಗೆ ಯಾವುದೇ ಹಬ್ಬವಿರಲಿ ಆ ಸಂದರ್ಭದಲ್ಲಿ ಪರಭಾಷಾ ಚಿತ್ರಗಳು ಬರುತ್ತವೆ. ಅದಕ್ಕೆ ಕಾರಣ ಸ್ಟಾರ್‌ ಸಿನಿಮಾಗಳು ಇಂತಹ ಹಬ್ಬಗಳ ಸಂದರ್ಭದಲ್ಲಿ ಬಂದರೆ ದೊಡ್ಡ ಬಿಝಿನೆಸ್‌ ಮಾಡಬಹುದು ಎಂಬ ಲೆಕ್ಕಾಚಾರ.

Advertisement

ಆದರೆ, ಈ ಬಾರಿ ನಮ್ಮ ಸ್ಯಾಂಡಲ್‌ವುಡ್‌ ಕೂಡಾ ಹಬ್ಬಗಳತ್ತ ಗಮನ ಹರಿಸಿದಂತಿದೆ. ಸದ್ಯಕ್ಕೆ ಮೂರು ಸ್ಟಾರ್‌ ಸಿನಿಮಾಗಳು ದಿನಾಂಕ ಘೋಷಿಸಿವೆ. ಶಿವರಾಜ್‌ಕುಮಾರ್‌ ನಟನೆಯ “ಭೈರತಿ ರಣಗಲ್‌’ ಸ್ವಾತಂತ್ರ್ಯ ದಿನವಾದ ಆಗಸ್ಟ್‌ 15ರಂದು ಬರುವುದಾಗಿ ಅನೌನ್ಸ್‌ ಮಾಡಿದೆ. ಇದರ ಜೊತೆಗೆ ದಸರಾ ಹಬ್ಬವಾದ ಅಕ್ಟೋಬರ್‌ 11ಕ್ಕೆ ಧ್ರುವ ಸರ್ಜಾ “ಮಾರ್ಟಿನ್‌’ ಹಾಗೂ ಕ್ರಿಸ್ಮಸ್‌ಗೆ ದರ್ಶನ್‌ “ಡೆವಿಲ್‌’ ಚಿತ್ರಗಳು ಬಿಡುಗಡೆಯಾಗಿವೆ.

ಸಿನಿಮಾ ಬಿಡುಗಡೆ ಕುರಿತು ಮಾಡಿಕೊಂಡಿರುವ ಈ ಪ್ಲ್ರಾನ್‌ ಕುರಿತು ಈಗಾಗಲೇ ಚಿತ್ರರಂಗದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಹಾಗಂತ ಅಷ್ಟಕ್ಕೂ ಖುಷಿ ಪಡುವಂತಿಲ್ಲ. ಏಕೆಂದರೆ ದೀಪಾವಳಿ, ಗಣೇಶನ ಹಬ್ಬವನ್ನೂ ಈ ಬಾರಿ ಸ್ಯಾಂಡಲ್‌ ವುಡ್‌ನ‌ ಸ್ಟಾರ್‌ ಸಿನಿಮಾಗಳು ಬಳಸಿಕೊಳ್ಳಬೇಕಾಗಿದೆ. ದೀಪಾವಳಿ, ಗಣೇಶನ ಹಬ್ಬದ ಸಮಯದಲ್ಲೂ ಒಂದೊಂದು ಸ್ಟಾರ್‌ ಸಿನಿಮಾಗಳು ಬಿಡುಗಡೆಯಾದರೆ, ಇಲ್ಲಿವರೆ ಕನ್ನಡ ಚಿತ್ರರಂಗ ಅನುಭವಿಸಿದ ಸಂಕಷ್ಟಗಳಿಗೆ ಪರಿಹಾರ ಸಿಗಬಹುದು. ಈ ನಿಟ್ಟಿನಲ್ಲಿ ಇತರ ಸ್ಟಾರ್‌ ಸಿನಿಮಾಗಳು ತಮ್ಮ ಡೇಟ್‌ ಅನೌನ್ಸ್‌ ಮಾಡಬೇಕು ಎಂಬುದು ಕನ್ನಡ ಸಿನಿಮಾ ಪ್ರೇಮಿಗಳ ಒತ್ತಾಯ.

ದಿಟ್ಟ ನಿರ್ಧಾರಕ್ಕೆ ಜೈ ಅನ್ನಿ..

ಸಾಮಾನ್ಯವಾಗಿ ಪರಭಾಷಾ ಚಿತ್ರಗಳು ಬಿಡುಗಡೆಯಾಗುತ್ತವೆ ಎಂದಾಗ ನಮ್ಮ ಕನ್ನಡ ಸಿನಿಮಾಗಳು ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಿದ ಉದಾಹರಣೆ ಸಾಕಷ್ಟಿವೆ. ಆದರೆ, ಈ ಬಾರಿ ಕನ್ನಡ ಸಿನಿಮಾಗಳು ದಿಟ್ಟ ನಿರ್ಧಾರ ತಗೊಂಡಿವೆ. ಈ ವಿಚಾರದಲ್ಲಿ “ಭೈರತಿ ರಣಗಲ್‌’ ಹಾಗೂ “ಮಾರ್ಟಿನ್‌’ ಚಿತ್ರತಂಡಕ್ಕೆ ಸಿನಿಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಭೈರತಿ ರಣಗಲ್‌’ ಬಿಡುಗಡೆ (ಆಗಸ್ಟ್‌ 15) ದಿನವೇ ಅಲ್ಲು ಅರ್ಜುನ್‌ “ಪುಷ್ಪ-2′ ಬಿಡುಗಡೆಯಾಗುತ್ತಿದೆ. “ಮಾರ್ಟಿನ್‌’ ಚಿತ್ರ ಅಕ್ಟೋಬರ್‌ 11ಕ್ಕೆ ತೆರೆಕಂಡರೆ ಜೂ.ಎನ್‌ಟಿಆರ್‌ ನಟನೆಯ “ದೇವರ’ ಚಿತ್ರ ಅಕ್ಟೋಬರ್‌ 10ಕ್ಕೆ ತೆರೆಕಾಣುತ್ತಿದೆ. ಅವರ ಚಿತ್ರ ಅವರಿಗೆ ಹೇಗೆ ದೊಡ್ಡದೋ, ನಮ್ಮ ಚಿತ್ರ ನಮಗೆ ದೊಡ್ಡದು ಎಂದು ನಮ್ಮ ನಿರ್ಮಾಪಕರು ಭಾವಿಸಿರುವುದು ಒಳ್ಳೆಯ ಬೆಳವಣಿಗೆ.

Advertisement

“ದೇವರ’ ಚಿತ್ರದ ಮುಂದೆ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ “ಮಾರ್ಟಿನ್‌’ ನಿರ್ದೇಶಕ ಅರ್ಜುನ್‌, “ವಿಜಯ ದಶಮಿ ಅನ್ನೋದು ಕನ್ನಡ ನಾಡಿನ ದೊಡ್ಡ ಹಬ್ಬ. ವಿಜಯದಶಮಿಗೆ ನಾವೇನಾದರೂ ಕೊಡಬೇಕು ಎಂಬ ಕಾರಣಕ್ಕೆ ನಾವು ರಿಲೀಸ್‌ಗೆ ಮುಂದಾಗಿರುವುದು. ನಮ್ಮ “ಮಾರ್ಟಿನ್‌’ ನಮ್ಮತನದ ಸಿನಿಮಾ. ನಮ್ಮ ದೇಶದಲ್ಲಿ ಎರಡು ಸಿನಿಮಾ ಪ್ರದರ್ಶಿಸುವ ಸಾಮರ್ಥ್ಯವಿದೆ  ಎನ್ನುತ್ತಾರೆ.

ಇನ್ನು ಈ ಹಿಂದೆ ಶಿವಣ್ಣ ಕೂಡಾ “ಪುಷ್ಪ-2′ ಮುಂದೆ ಬರುತ್ತಿರುವ ಬಗ್ಗೆ ಮಾತನಾಡಿದ್ದರು. “ಇಲ್ಲಿ ನಾವು ಯಾರ ಜೊತೆಯೂ ಸ್ಪರ್ಧೆಗೆ ಇಳಿದಿಲ್ಲ. ಎಲ್ಲರಿಗೂ ರಜಾದಿನಗಳು ಮುಖ್ಯ. ರಜಾ ಇದ್ದಾಗ ಜನ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ನಂಬಿಕೆ. ಇದನ್ನು ಚೆನ್ನಾಗಿ ಬಳಸಿಕೊಳ್ಳ ಬೇಕೆಂದು ಪ್ರತಿಯೊಂದು ತಂಡಗಳು ಕಾಯುತ್ತಿವೆ. ನಾವು ಕೂಡಾ ಅದೇ ಕಾರಣಕ್ಕಾಗಿ ಆ.15ರಂದು ಬರುತ್ತಿರುವುದು’ ಎಂದಿದ್ದಾರೆ. ಈಗ ಒಳ್ಳೆಯ ಸಿನಿಮಾಗಳಿಗೆ ಜೈ ಅನ್ನಲು ಪ್ರೇಕ್ಷಕರು ಸಿದ್ಧರಾಗಬೇಕಷ್ಟೇ.

ಸರತಿಯಲ್ಲಿವೆ ಮತ್ತಷ್ಟು ಸ್ಟಾರ್‌ ಸಿನಿಮಾ

ಈಗಾಗಲೇ “ಮಾರ್ಟಿನ್‌’, “ಭೈರತಿ’ ಹಾಗೂ “ಡೆವಿಲ್‌’ ಚಿತ್ರಗಳಷ್ಟೇ ತಮ್ಮ ಸಿನಿಮಾ ಬಿಡುಗಡೆ ಬಗ್ಗೆ ಹೇಳಿವೆ. ಆದರೆ, ಮತ್ತಷ್ಟು ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆ ಸಿದ್ಧವಾಗಿವೆ. ಉಪೇಂದ್ರ “ಯುಐ’, ವಿಜಯ್‌ “ಭೀಮ’, ಗಣೇಶ್‌ “ಕೃಷ್ಣಂ ಪ್ರಣಯ ಸಖೀ’, ಸುದೀಪ್‌ “ಮ್ಯಾಕ್ಸ್‌’, ಧ್ರುವ “ಕೆಡಿ’ ಸೇರಿದಂತೆ ಇನ್ನೂ ಕೆಲವು ನಟರ ಚಿತ್ರಗಳು ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿವೆ. ಈ ಸಿನಿಮಾಗಳು ಕೂಡಾ ಸೆಕೆಂಡ್‌ ಹಾಫ್ನಲ್ಲಿ ಬಂದು ರಂಜಿಸಲಿವೆ. ಈ ಚಿತ್ರಗಳು ಕೂಡಾ ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿದರೆ, ಚಿತ್ರರಂಗವನ್ನು ನಂಬಿಕೊಂಡಿರುವವರಿಗೆ ಹಾಗೂ ಸಿನಿಮಾ ಪ್ರೇಮಿಗಳಿಗೆ ಒಂದು ಭರವಸೆ ಬರುತ್ತದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next