Advertisement

ಕನ್ನಡ ಶಾಲೆಯಲ್ಲಿ ತ.ನಾಡು ಮಕ್ಕಳ ವಿದ್ಯಾಭ್ಯಾಸ

04:52 PM Nov 01, 2022 | Team Udayavani |

ಮಾಸ್ತಿ: ಮಾಲೂರು ತಾಲೂಕಿನ ಮಾಸ್ತಿ ಹೋಬಳಿ ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿ ಹೊಸಮನೆಗಳು ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ತಮಿಳುನಾಡಿನ 5 ಮಕ್ಕಳು ಕನ್ನಡ ಕಲಿಯಲು ಬರುತ್ತಿದ್ದು, ಇದು ಭಾಷಾ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

Advertisement

ದಿನ್ನಹಳ್ಳಿ ಗ್ರಾಪಂ ಗಡಿ ಭಾಗದಲ್ಲಿರುವ ಹೊಸಮನೆಗಳು ಗ್ರಾಮದಲ್ಲಿನ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 7 ಮಂದಿ ವಿದಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಕೂಗಳತೆ ದೂರದಲ್ಲಿರುವ ನೆರೆಯ ತಮಿಳುನಾಡು ರಾಜ್ಯದ ಹಳ್ಳಿಯಿಂದ 5 ಮಂದಿ ವಿದ್ಯಾರ್ಥಿಗಳು ಗ್ರಾಮದ ಕನ್ನಡ ಶಾಲೆಗೆ ಸೇರಿ, ಕನ್ನಡ ಕಲಿಯುತ್ತಿರುವುದು ಎರಡು ರಾಜ್ಯಗಳ ಬಾಂಧವ್ಯಕ್ಕೆ ಕಾರಣವಾಗಿದೆ.

ಹೊಸಮನೆಗಳು ಶಾಲೆಗೆ ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆ ಹೊಸೂರು ತಾಲೂಕಿನ “ಚಾಪರಪಲ್ಲಿ’ ಗ್ರಾಮದ ಐದು ಮಂದಿ ವಿದ್ಯಾರ್ಥಿಗಳು ಕನ್ನಡ ಕಲಿಯಲು ಬರುತ್ತಿದ್ದಾರೆ. ಚಾಪರಪಲ್ಲಿಯಲ್ಲಿ ಶಾಲೆ ಇಲ್ಲ ಎಂದಲ್ಲ. ಅಲ್ಲಿಯೂ ತಮಿಳು ಶಾಲೆ ಇದ್ದರೂ ಕನ್ನಡ ಶಾಲೆಯಲ್ಲಿ ಕಲಿಯಬೇಕೆನ್ನುವ ದೃಷ್ಟಿಯಿಂದಲೇ ಇಲ್ಲಿಗೆ ಬರುತ್ತಿದ್ದಾರೆ. ಒಂದನೇ ತರಗತಿಗೆ ಜಿ.ಕುಮಾರ್‌, ಎರಡನೇ ತರಗತಿಗೆ ಶಂಕರನ್‌ ಹಾಗೂ ಪ್ರಜ್ವಲ್‌, ಮೂರನೇ ತರಗತಿಗೆ ನಿತೀನ್‌ ಹಾಗೂ ಐದನೇ ತರಗತಿಗೆ ದೀಪಾ ಎಂಬ ವಿದ್ಯಾರ್ಥಿಗಳು ತಮಿಳುನಾಡಿನಿಂದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬರುತ್ತಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಬರೆಯಲು, ಓದಲು ಕಲಿತಿದ್ದಾರೆ ವಿಶೇಷವಾಗಿದೆ.

ವಿದ್ಯಾರ್ಥಿಗಳು ಬಲುಚುರುಕು: ತಮಿಳುನಾಡಿನಿಂದ ಬರುವ ಐದು ಮಂದಿ ವಿದ್ಯಾರ್ಥಿಗಳು ಬಹಳ ಚೆನ್ನಾಗಿ ನಮ್ಮ ಶಾಲೆಯಲ್ಲಿ ಕನ್ನಡ ಕಲಿಯು ತ್ತಿದ್ದಾರೆ. ಒಟ್ಟು ನಮ್ಮ ಶಾಲೆಯಲ್ಲಿ 7 ಮಂದಿ ವಿದ್ಯಾರ್ಥಿಗಳಿದ್ದು, ಅವರಲ್ಲಿ ಐದು ಮಂದಿ ಮಕ್ಕಳೂ ನೆರೆಯ ತಮಿಳುನಾಡಿನಿಂದ ಬಂದು ನಮ್ಮ ಭಾಷೆ ಕಲಿಯುತ್ತಿದ್ದಾರೆ. ಎಲ್ಲಾ ಮಕ್ಕಳೊಡನೆ ಉತ್ತಮ ಬಾಂಧವ್ಯ ಹೊಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯಾದ ಬೇದಭಾವವಿಲ್ಲ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಸತ್ಯನಾರಾಯಣ.

ಹೊರ ರಾಜ್ಯದಿಂದ ಗಡಿಯಲ್ಲಿನ ಗ್ರಾಮಗಳಿಂದ ಕನ್ನಡ ಶಾಲೆಗೆ ಬರುವ ಮಕ್ಕಳು ಉತ್ಸಾಹದಿಂದ ಕನ್ನಡ ಕಲಿಯುತ್ತಿದ್ದಾರೆ ಅನ್ನುವುದು ಹೆಮ್ಮೆ ಸಂಗತಿಯಾಗಿದೆ. ಹೀಗಿರುವಾಗ ಮಕ್ಕಳ ಕಲಿಕೆಗೆ ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ. ಹಾಗಾಗಿ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. – ಚಂದ್ರಕಲಾ, ಮಾಲೂರು ಕ್ಷೇತ್ರಶಿಕ್ಷಣಾಧಿಕಾರಿ

Advertisement

ಹೊರ ರಾಜ್ಯದಿಂದ ಗಡಿ ಗ್ರಾಮಗಳಿಂದ ಕನ್ನಡ ಶಾಲೆಗೆ ಮಕ್ಕಳು ಬಂದು ಕನ್ನಡ ಕಲಿಯುತ್ತಿದ್ದಾರೆ. ಶಾಲೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ. ಇಂಥ ಸಮಯದಲ್ಲಿ ಶಾಲೆಗೆ ಮೂಲ ಸೌಲಭ್ಯ ಗಳನ್ನು ಒದಗಿಸಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. – ಉಮಾಜಲಂದರ್‌, ದಿನ್ನಹಳ್ಳಿ ಗ್ರಾಪಂ ಅಧ್ಯಕ್ಷ

– ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next