Advertisement

ರಾಜ್ಯೋತ್ಸವಕ್ಕೆ ಕಳೆಗಟ್ಟಿದ ಕನ್ನಡ ಮಕ್ಕಳ ಕಲರವ

06:31 PM Nov 14, 2020 | mahesh |

ಟೊರೊಂಟೊ: ಇಲ್ಲಿನ ಕನ್ನಡ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವವನ್ನು ನ. 1ರಂದು ಅಂತರ್ಜಾಲದ ಮೂಲಕ ಹಿರಿಯ ಸಾಹಿತಿ ಡಾ| ದೊಡ್ಡರಂಗೇಗೌಡ ಅವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷ ನಾಗೇಂದ್ರ ಕೃಷ್ಣಮೂರ್ತಿ ಸ್ವಾಗತಿಸಿ, ತಮ್ಮ ಕನ್ನಡ ಸಂಘದ ಕುರಿತು ವಿವರಿಸಿದರು.

Advertisement

ರಾಜ್ಯೋತ್ಸವವನ್ನು ನ. 1ರಂದು ಆಚರಿಸಿದರೆ ಮಾತ್ರ ಒಂದು ವಿಶೇಷ ಸೊಬಗು ಬರುತ್ತದೆ. ಮುಂದೆ ಭಾರತದ ಸ್ವಾತಂತ್ರ್ಯ ದಿನಾಚರಣೆ, ಕೆನಡಾ ದಿನದ ಆಚರಣೆಗಳನ್ನು ಸಹ ನಡೆಸುವಂತಹ ಒಂದು ಸತ್‌ಸಂಪ್ರದಾಯ ಇಂದು ಮತ್ತು ಮುಂದೆಯೂ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಹಚ್ಚೇವು ಕನ್ನಡ ಸಮೂಹ ಗಾಯನದೊಂದಿಗೆ ಕಾರ್ಯಕ್ರಮವನ್ನು ಸಂಘದ ಸ್ಥಾಪಕರಲ್ಲಿ ಒಬ್ಬರಾದ ರಾಮ ಮೂರ್ತಿ ಮತ್ತು ಶಾರದಾ ರಾವ್‌ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕಕ್ಕೆ ಮೈಸೂರು ಸಂಸ್ಥಾನದ ಕೊಡುಗೆಯನ್ನು ಸ್ಮರಿಸುವ ಸೂಚಕವಾಗಿ ಮೈಸೂರು ಸಂಸ್ಥಾನದ ಗೀತೆ ಕಾಯೋ ಶ್ರೀ ಗೌರಿ ಹಾಡನ್ನು ಹಾಡಲಾಯಿತು. ಕನ್ನಡ ಸಂಘದ ಪ್ರಸ್ತುತ ಅಧ್ಯಕ್ಷರಾದ ನಾಗೇಂದ್ರ ಕೃಷ್ಣಮೂರ್ತಿ ಅವರು ಕನ್ನಡ ಧ್ವಜಾರೋಹಣಗೈದರು.

ಇವರೊಂದಿಗೆ ಸತೀಶ್‌ ವೆಂಕೋಬ್‌ ಮತ್ತು ರೂಪಶ್ರೀ ಸತೀಶ್‌ ನಾಡಗೀತೆಯನ್ನು ಹಾಡಿದರು. ಕಾರ್ಯಕ್ರಮದ ಆಕರ್ಷಣೆಯಾಗಿ ಟೊರೊಂಟೋದಲ್ಲಿ ಹಲವು ಕನ್ನಡ ಅಧ್ಯಾಪಕರು ನಡೆಸುತ್ತಿರುವ ಕನ್ನಡ ತರಗತಿಗಳ ಪುಟ್ಟ ಮಕ್ಕಳಿಂದ ಕನ್ನಡ ಕಲಿಕೆಯ ಭಾಗಗಳನ್ನು ಪ್ರದರ್ಶಿಸಲಾಯಿತು.

ಡಾ| ದೊಡ್ಡರಂಗೇಗೌಡ ಅವರನ್ನು ಸುಬ್ರಹ್ಮಣ್ಯ ಶಿಶಿಲ ಅವರು ಪರಿಚಯಿಸಿದರು.

Advertisement

ವಿನಾಯಕ ಹೆಗಡೆ, ಶಶಿ ಗೌರಕ್ಕಲ್, ಪವನ್‌ ರಾವ್‌, ನಮ್ರದಾ ಪ್ರಸಾದ್‌ ಮತ್ತು ಕುಮಾರಿ ನಿಧಿ ಸುಬ್ರಹ್ಮಣ್ಯ ಅವರು ಡಾ| ದೊಡ್ಡರಂಗೇಗೌಡ ಅವರ ಕನ್ನಡ ಹಾಡುಗಳನ್ನು ಹಾಡಿ ಅವರಿಗೆ ಗೌರವ ಸೂಚಿಸಿದರು.

ಬಳಿಕ ಸುಬ್ರಹ್ಮಣ್ಯ ಶಿಶಿಲ ಅವರು ಡಾ| ದೊಡ್ಡರಂಗೇಗೌಡ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಾಜಶೇಖರ ಬೀಚನಹಳ್ಳಿ ವಂದಿಸಿದರು. ಚೇತನ್‌ ಭಾರದ್ವಾಜ್‌, ತೇಜಸ್‌ ಐವಳ್ಳಿ ಮತ್ತು ನಿವೇದಿತಾ ಪುರಾಣಿಕ್‌ ಅವರು ತಾಂತ್ರಿಕವಾಗಿ ಸಹಕರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಯುವ ಸಮಿತಿಯ ವಿದ್ಯಾರ್ಥಿಗಳು ಕೆನಡಾದ ದೇಶಭಕ್ತಿ ಗೀತೆ “ಓ ಕೆನಡಾ’ ಮತ್ತು ಭಾರತದ “ಜನಗಣಮನ’ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಕಾರ್ಯಕ್ರಮದ ಅನಂತರವೂ ಕನ್ನಡ ಧ್ವಜ ಆಗಸದೆತ್ತರದಲ್ಲಿ ಹಾರುತ್ತಿತ್ತು.

ಕನ್ನಡ ಇಂದು ವಿಶ್ವಮುಖೀಯಾಗಿದೆ: ಡಾ| ದೊಡ್ಡರಂಗೇಗೌಡ
ನಾವು ಎಲ್ಲಿದ್ದರೇನು? ಎಂತಿದ್ದರೇನು? ಕನ್ನಡ ನಮ್ಮ ಜೀವದ ಉಸಿರು. ಕನ್ನಡ ಸದಾಕಾಲ ನಮ್ಮಲಿ ಹಸಿರು. ಕನ್ನಡವೇ ಹೊಳೆ ಹೊಳೆಯುವ ಕದಿರು, ಇಂತಹ ಕನ್ನಡ ನಮಗೆ ಕಾಮಧೇನುವೂ ಹೌದು, ಕಲ್ಪವೃಕ್ಷವೂ ಹೌದು ಎಂದು ಕನ್ನಡ ನಾಡಿನ ಕುರಿತು, ಕನ್ನಡ ಅಭಿಮಾನದ ಕುರಿತು ಹಿರಿಯ ಕವಿ, ಸಾಹಿತಿ, ಡಾ| ದೊಡ್ಡರಂಗೇಗೌಡ ಅವರು ವ್ಯಾಖ್ಯಾನಿಸಿದರು.

ಟೊರೊಂಟೊ ಕನ್ನಡ ಸಂಘದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಮಣ್ಣಿನಲ್ಲಿ ಹುಟ್ಟಿದ ನಾನು ಮತ್ತು ನೀವು ಎಲ್ಲೇ ಹೋಗಲಿ, ಕನ್ನಡದ ಸೊಲ್ಲನ್ನು ಆಡುತ್ತಾ, ಕನ್ನಡದ ನಿಜವಾಗಿರತಕ್ಕಂತಹ ಸಾಹಿತ್ಯವನ್ನೇ ಹೀರುತ್ತಾ, ಕನ್ನಡದ ಸಂಸ್ಕೃತಿಯ ಸೌಗಂಧವನ್ನು ಮೈಗೂಡಿಸಿಕೊಳ್ಳುತ್ತಾ, ಕನ್ನಡತನವನ್ನ ನಾವು ಇರುವೆಡೆಯಲ್ಲೇ ಪ್ರದರ್ಶಿಸುತ್ತಾ, ಕನ್ನಡ ವ್ಯಕ್ತಿತ್ವದ ಮುದ್ರೆಯ ಛಾಪನ್ನು ಒತ್ತಬೇಕು ಎಂದರು.

ಇಂದು ನನಗೆ ಆನಂದವಾಗಿದೆ. ಇವತ್ತು ಟೊರೊಂಟೊದ ಕನ್ನಡದ ಮಕ್ಕಳು ಕನ್ನಡವನ್ನು ಮರೆತಿಲ್ಲ. ಕನ್ನಡದ ಗೀತೆಗಳನ್ನು ಹಾಡಿದ್ದನ್ನು ಕೇಳಿದೆ. ನಿಜವಾಗಿಯೂ ಯಾವ ಕನ್ನಡಿಗರಿಗೂ ಇದು ಬಹಳ ಸಂತೋಷವನ್ನು ತಂದುಕೊಡುವಂತಹ ಸಂಗತಿ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕನ್ನಡಕ್ಕೆ ಭವ್ಯ ಇತಿಹಾಸವಿದೆ ಎಂದರೆ ನಾನು ಮತ್ತು ನೀವು ಹೆಮ್ಮೆ ಪಡಬೇಕು. ಈ ಬೃಹತ್‌ ಬೆಂಗಳೂರಿನ ಕೆಲ ಭಾಗದ ಕನ್ನಡಿಗರು ಅಭಿಮಾನ ಶೂನ್ಯರಾಗಿದ್ದಾರೆ. ಈ ವೇದಿಕೆಯ ಮುಖಾಂತರ ವಿಶ್ವದ ಎಲ್ಲ ಕನ್ನಡಿಗರಿಗೆ ನಾನು ಹೇಳಬಯಸುವುದೆಂದರೆ. ಕನ್ನಡ ನಮ್ಮ ತಾಯಿ, ಹೃದಯ, ಮನಸ್ಸು, ಬದುಕಿನ ಭಾಷೆ. ಇಂತಹ ಕನ್ನಡವನ್ನು ನಾವು ನಿತ್ಯವೂ, ಕ್ಷಣ ಕ್ಷಣವೂ ನಮ್ಮ ನಾಲಿಗೆಯಲ್ಲಿ ನರ್ತಿಸುವ ಹಾಗೆ ಮಾಡಬೇಕು. ಬರಿಯ ಮಾತನಾಡಿದರೆ ಸಾಲದು. ಕನ್ನಡದ ಸಂಸ್ಕೃತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಕನ್ನಡದ ವ್ಯಕ್ತಿತ್ವವನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.

ಪಂಜೆ ಮಂಗೇಶರಾಯರು ದೂರದ ಗ್ರೀಸ್‌ನ ನಾಟಕವೊಂದರಲ್ಲಿ ಕನ್ನಡದ ಆರು ಪದಗಳಿದ್ದವು ಎಂದು ತಿಳಿಸಿದ ಒಬ್ಬ ಧೀಮಂತರು. ಅವರ ಪ್ರಭಾವದಿಂದ ನಾನು ಸಂಶೋಧನೆಗೆ ಇಳಿದೆ ಎಂದು ಹೇಳಿದರು. ಇಂದು ಸಂಶೋಧನೆಗಳು ಬೆಳೆದು ಹಲ್ಮಿಡಿ ಶಾಸನಕ್ಕಿಂತ ಮೊದಲು ಸುಮಾರು ಕ್ರಿಸ್ತ ಶಕ 2ನೇ ಶತಮಾನದಲ್ಲೇ ಊರೊಳ್‌ ಎನ್ನುವ ಕನ್ನಡ ಪದ ಬಳಕೆಯಲ್ಲಿತ್ತು ಮತ್ತು ಆ ಕನ್ನಡ ಪದವನ್ನು ಈಜಿಪ್ಟಿನ ವಿಜಯಸ್ತಂಭವೊಂದರಲ್ಲಿ ಕಣ್ಣಾರೆ ಕಾಣುವ ಭಾಗ್ಯ ನನ್ನದಾಗಿತ್ತು ಎಂದು ಕನ್ನಡದ ಭವ್ಯ ಇತಿಹಾಸವನ್ನು ಸ್ಮರಿಸಿದರು.

ಪ್ರಾಚೀನ ಪರಂಪರೆಯುಳ್ಳ ನಮ್ಮ ಕನ್ನಡ ಭಾಷೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಗಳಿಸಿದೆ. ಆಧುನಿಕ ಕನ್ನಡವಂತೂ ವಿಶಾಲ ಆಲದ ಮರದ ಹಾಗೆ ವಿಶಾಲ ವೃಕ್ಷ. ಕೊಂಬೆ ರೆಂಬೆಗಳಿಂದ, ಟೊಂಗೆ ಟಿಸಿಲುಗಳಿಂದ ಇಡೀ ದೇಶವನ್ನಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಕನ್ನಡ ಇವತ್ತು ವಿಶ್ವಮುಖೀಯಾಗಿದೆ ಎಂಬ ಹೆಮ್ಮೆಯಿದೆ ಎಂದರು.  ಕನ್ನಡ ಚಿತ್ರರಂಗದ ಕುರಿತು ಮಾತನಾಡಿದ ಅವರು, ಹಲವು ಕನ್ನಡ ಸಂಗೀತ ನಿರ್ದೇಶಕರನ್ನು, ಇತ್ತೀಚೆಗೆ ದಿವಂಗತರಾದ ಎಸ್‌.ಪಿ. ಬಾಲ ಸುಬ್ರಹ್ಮಣ್ಯಂ ಮತ್ತು ರಾಜನ್‌ ನಾಗೇಂದ್ರ ಅವರು ಒಡನಾಟವನ್ನು ಸ್ಮರಿಸಿ  ಕವಿತೆಯೊಂದನ್ನು ಹಾಡಿದರು.

ಸಂಸ್ಕೃತಿ ಮೈಗೂಡಿಸಿಕೊಳ್ಳಿ
ಕನ್ನಡ ನಮ್ಮ ತಾಯಿ, ಹೃದಯ, ಮನಸ್ಸು, ಬದುಕಿನ ಭಾಷೆ. ಇಂತಹ ಕನ್ನಡವನ್ನು ನಾವು ನಿತ್ಯವೂ, ಕ್ಷಣ ಕ್ಷಣವೂ ನಮ್ಮ ನಾಲಿಗೆಯಲ್ಲಿ ನರ್ತಿಸುವ ಹಾಗೆ ಮಾಡಬೇಕು. ಬರಿಯ ಮಾತಾಡಿದರೆ ಸಾಲದು. ಕನ್ನಡದ ಸಂಸ್ಕೃತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು.
-ಡಾ| ದೊಡ್ಡರಂಗೇಗೌಡ, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next