Advertisement

ಕನ್ನಡ ಮೀಡಿಯಂ ಗುರು

02:01 PM Sep 15, 2017 | |

ಆ ಹುಡುಗ ಚಿಕ್ಕಮಗಳೂರು ಕುವರ. ಅವನದು ಮಧ್ಯಮ ವರ್ಗದ ಕುಟುಂಬ. ಓದಿದ್ದು ಅತ್ತೆ ಮನೆಯಲ್ಲಿ. ಎಂಟನೆ ತರಗತಿ ಇರುವಾಗಲೇ, ಸ್ಕೂಲ್‌ ಬಂಕ್‌ ಮಾಡಿ ಬೆಂಗಳೂರಿಗೆ ಓಡಿ ಬಂದಿದ್ದ! ಕಾರಣ, ಅವನಿಗೆ ಸಿನಿಮಾ ಗೀಳು. ಪುನಃ ಯೂ ಟರ್ನ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ, ಒಂದಷ್ಟು ಓದಿಕೊಂಡ. ಆಮೇಲೆ ಸಿನಿಮಾ ಮೇಲಿನ ಪ್ರೀತಿ ಅವನನ್ನು ಬೆಂಗಳೂರಿಗೆ ಬರುವಂತೆ ಮಾಡಿತು. ಬಂದವನಿಗೆ ಸುಲಭವಾಗಿ ಅವಕಾಶ ಸಿಗಲಿಲ್ಲ. ಬದುಕಿಗೊಂದು ಕೆಲಸ ಹುಡುಕಿಕೊಂಡ. ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಲೇ, ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಅಲೆದಾಡಿದ. ಅಲ್ಲಿ ಯಾರೂ ಬಾಗಿಲು ತೆಗೆಯದಿದ್ದ ಕಾರಣ, ಕಿರುತೆರೆಯತ್ತ ಮುಖ ಮಾಡಿದ. ಅಲ್ಲೊಂದಷ್ಟು ಸಣ್ಣಪುಟ್ಟ ಪಾತ್ರ ಮಾಡುವ ಮೂಲಕ ಗುರುತಿಸಿಕೊಂಡ. ಕೆಲ ಸಿನಿಮಾಗಳಲ್ಲೂ ಸೈಡ್‌ ಪಾತ್ರಗಳನ್ನು ನಿರ್ವಹಿಸಿದ. ಸಿಕ್ಕ ಸಿನಿಮಾಗಳು ಕೈ ತಪ್ಪಿಹೋದವು. ಮುಹೂರ್ತ ಕಂಡ ಸಿನಿಮಾ ಮರುದಿನವೇ ಪ್ಯಾಕಪ್‌ ಆಗಿಹೋಯ್ತು. ಮನಸ್ಸಲ್ಲಿ ದುಗುಡ ಜಾಸ್ತಿಯಾಯ್ತು. ಆದರೆ, ಪ್ರಯತ್ನ ಬಿಡಲಿಲ್ಲ. ಹನ್ನೆರೆಡು ವರ್ಷದ ಸತತ ಪರಿಶ್ರಮಕ್ಕೆ ಕೊನೆಗೊಂದು ಸಿನಿಮಾ ಸಿಕು¤. ಆ ಮೂಲಕ “ಫ‌ಸ್ಟ್‌ ರ್‍ಯಾಂಕ್‌’ ಪಡೆದುಕೊಂಡ! ಇಷ್ಟು ಹೇಳಿದ ಮೇಲೆ ಆ ಹುಡುಗ ಯಾರು ಅಂತ ಗೊತ್ತಾಗಿರಲೇಬೇಕು. ಹೌದು, ಅದು “ಫ‌ಸ್ಟ್‌ ರ್‍ಯಾಂಕ್‌ ರಾಜು’ ಖ್ಯಾತಿಯ ಗುರುನಂದನ್‌.

Advertisement

ಇದು ಚಿಕ್ಕಮಗಳೂರು ಹುಡುಗನ ಸಕ್ಸಸ್‌ಫ‌ುಲ್‌ ಸ್ಟೋರಿ. ಸರಿ ಸುಮಾರು ಒಂದು ದಶಕದ ಕಾಲ ಕೆಲ ಹೀರೋ ಆಗಲು ಸೈಕಲ್‌ ಹೊಡೆದ ಗುರುನಂದನ್‌, ಆಗೋದೆಲ್ಲಾ ಒಳ್ಳೇಯದೇ ಅಂತಂದುಕೊಂಡಿದ್ದರು. ಬಂದದ್ದನ್ನು ಸ್ವೀಕರಿಸುತ್ತಾ ಹೋದರು. ಕೊನೆಗೆ ಜನ ಅವರನ್ನು ಒಪ್ಪಿಕೊಂಡರು. ಈಗ ಗುರುನಂದನ್‌, ಸಕ್ಸಸ್‌ ಹೀರೋ. ಅಷ್ಟೇ ಅಲ್ಲ, ಕೈಯಲ್ಲಿ ಮೂರು ಮತ್ತೂಂದು ಚಿತ್ರಗಳಿವೆ. ಸಾಕಷ್ಟು ಕಥೆ ಬರುತ್ತಲೇ ಇವೆ. ಯಾವುದನ್ನೂ ಒಪ್ಪಿಕೊಂಡಿಲ್ಲ. ಹಾಗಾದರೆ, ಗುರುನಂದನ್‌, ಈಗ ಏನು ಮಾಡುತ್ತಿದ್ದಾರೆ. ಯಾವೆಲ್ಲಾ ಸಿನಿಮಾ ಅವರ ಬಳಿ ಇವೆ, ಮುಂದೆ ಏನೆಲ್ಲಾ ಪ್ಲ್ರಾನ್‌ ಮಾಡಿಕೊಂಡಿದ್ದಾರೆ ಎಂಬಿತ್ಯಾದಿ ಕುರಿತು ಅವರೊಂದಿಗೆ ಒಂದು ಮಾತುಕತೆ.

“ಫ‌ಸ್ಟ್‌ ರ್‍ಯಾಂಕ್‌ ರಾಜು’ ಬಳಿಕ ಬಂದ ಕಥೆ ಎಷ್ಟು, ತಿರಸ್ಕರಿಸಿದ್ದೆಷ್ಟು?
“ಫ‌ಸ್ಟ್‌ ರ್‍ಯಾಂಕ್‌ ರಾಜು’ ಹಿಟ್‌ ಆಗಿದ್ದೇ ತಡ ಸಾಕಷ್ಟು ಮಂದಿ ಕಥೆ ಹಿಡಿದು ಬಂದರು. ಅದರಲ್ಲಿ ಹಳಬರು, ಹೊಸಬರ ಕಥೆಗಳೂ ಇದ್ದವು. ನಾನು ಹೊಸಬರಿಗೆ ಮೊದಲ ಆದ್ಯತೆ ಕೊಡಬೇಕು ಅಂತ ಬಂದ 50 ಕಥೆಗಳಲ್ಲಿ ನಾಲ್ಕು ಕಥೆ ಆಯ್ಕೆ ಮಾಡಿಕೊಂಡೆ. ಹೊಸ ನಿರ್ದೇಶಕರ ಜತೆ ಕೆಲಸ ಮಾಡೋಕೆ ಮುಂದಾದೆ. ಆ ಪೈಕಿ ರಘುಸಮರ್ಥ್, ಶಂಕರ್‌, ನರೇಶ್‌ಕುಮಾರ್‌ ಮತ್ತು ರಘು ಅವರ ಚಿತ್ರ ಮಾಡುತ್ತಿದ್ದೇನೆ. 50 ಕ್ಕೂ ಹೆಚ್ಚು ಕಥೆಗಳಲ್ಲಿ ನಾಲ್ಕೈದು ಕಥೆ ಓಕೆ ಮಾಡಿದೆ. ಉಳಿದದ್ದು ಬೇಡವೆನಿಸಿತು.

ಯಾವ್ಯಾವ ಸಿನಿಮಾಗಳು ಕೈಯಲ್ಲಿವೆ?
ಈಗ ಕೆ.ಮಂಜು ನಿರ್ಮಾಣದ ಚಿತ್ರವನ್ನು ರಘುಸಮರ್ಥ್ ನಿರ್ದೇಶಿಸಿದ್ದಾರೆ. ಅದು “ಸ್ಮೈಲ್ ಪ್ಲೀಸ್‌’. ಇನ್ನೊಂದು ಕೆ.ಸುರೇಶ್‌ ನಿರ್ಮಾಣದ, ನರೇಶ್‌ಕುಮಾರ್‌ ನಿರ್ದೇಶನದ “ರಾಜು ಕನ್ನಡ ಮೀಡಿಯಂ’, ರಘು ನಿರ್ದೇಶನದ “ಮಿಸ್ಸಿಂಗ್‌ ಬಾಯ್‌’ ಹಾಗೂ ಪವನ್‌ ಒಡೆಯರ್‌ ಅಸೋಸಿಯೇಟ್‌ ಶಂಕರ್‌ ನಿರ್ದೇಶಿಸಲಿರುವ “ಎಂಟಿವಿ ಸುಬ್ಬುಲಕ್ಷ್ಮಿ’ ಚಿತ್ರಗಳು ಕೈಯಲ್ಲಿವೆ. ಈಗ “ಸ್ಮೈಲ್ ಪ್ಲೀಸ್‌’ ರಿಲೀಸ್‌ಗೆ ರೆಡಿ ಇದೆ. “ರಾಜು ಕನ್ನಡ ಮೀಡಿಯಂ’ ಸ್ವಲ್ಪ ಬಾಕಿ ಇದೆ. “ಮಿಸ್ಸಿಂಗ್‌ ಬಾಯ್‌’ ಕೂಡ ಮುಗಿದಿದೆ. “ಎಂಟಿವಿ ಸುಬ್ಬುಲಕ್ಷ್ಮಿ’ ಪ್ರಿಪೇರ್‌ ಆಗುತ್ತಿದೆ. 

ಸಕ್ಸಸ್‌ ಟೀಮ್‌ ಜತೆ ಮತ್ತೂಂದು ಸಿನ್ಮಾ ಮಾಡಬೇಕಿತ್ತಲ್ವಾ?
ಹೌದು, “ಫ‌ಸ್ಟ್‌ರ್‍ಯಾಂಕ್‌ ರಾಜು’ ಚಿತ್ರ ಸಕ್ಸಸ್‌ ಆದ ಮೇಲೆ ಅದೇ ಚಿತ್ರತಂಡದ ಜತೆ ಇನ್ನೊಂದು ಸಿನಿಮಾ ಮಾಡಬೇಕಿತ್ತು. ನಿರ್ಮಾಪಕರೂ ಅನೌನ್ಸ್‌ ಮಾಡಿದ್ದರು. ಆದರೆ, ನಿರ್ಮಾಪಕರದ್ದು ಬೇರೆ ಬಿಜಿನೆಸ್‌ ಇತ್ತು. ಅದರ ಕಡೆ ಗಮನಹರಿಸಬೇಕು. ಒಂದು ವರ್ಷ ಗ್ಯಾಪ್‌ ಕೊಟ್ಟು  ಮಾಡೋಣ ಅಂದರು. ಅಷ್ಟರಲ್ಲಿ, “ಶಿವಲಿಂಗ’ ನಿರ್ಮಾಪಕ ಸುರೇಶ್‌ ಅವರು ನಮ್ಮ ಸಕ್ಸಸ್‌ ಟೀಮ್‌ ಜತೆ ಸಿನಿಮಾ ಮಾಡೋಕೆ ಮುಂದಾದರು. ನಿರ್ದೇಶಕ ನರೇಶ್‌ ನಾಲ್ಕೈದು ಕಥೆ ಹೇಳಿದರು. ಅವರಿಗೆ “ರಾಜು ಕನ್ನಡ ಮೀಡಿಯಂ’ ಕಥೆ ಇಷ್ಟವಾಯ್ತು. ತಡಮಾಡದೆ ಚಿತ್ರಕ್ಕೆ ಚಾಲನೆ ಸಿಕು¤. 

Advertisement

ನಿಮ್ಮ ಮಿಸ್ಸಿಂಗ್‌ ಬಾಯ್‌, ಸುಬ್ಬುಲಕ್ಷ್ಮೀ ಕಥೆ ಏನು?
2004 ರಲ್ಲಿ ಕ್ರೈಮ್‌ ನ್ಯೂಸ್‌ವೊಂದು ಬಂದಿತ್ತು. ಅದೇ ಎಳೆ ಇಟ್ಟುಕೊಂಡು ರಘುರಾಮ್‌ “ಮಿಸ್ಸಿಂಗ್‌ ಬಾಯ್‌’ ಚಿತ್ರ ಮಾಡಿದ್ದಾರೆ. ಅದು ಕಳೆದು ಹೋದ ಹುಡುಗನ ಕಥೆ. ನನಗೆ ಅದರ ಮೇಲೆ ತುಂಬಾ ನಂಬಿಕೆ ಇದೆ. ಹೊಸ ಜಾನರ್‌ನ ಸಿನಿಮಾ ಅದಾಗಲಿದೆ. ಇನ್ನು, “ಎಂಟಿವಿ ಸುಬ್ಬುಲಕ್ಷ್ಮೀ’ ಕೂಡ ಹೊಸಬಗೆಯ ಚಿತ್ರ ಆಗಲಿದೆ. ಪವನ್‌ ಒಡೆಯರ್‌ ಅಂಡ್‌ ಟೀಮ್‌ ಆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 

ಕಾಮಿಡಿಗೇ ಬ್ರ್ಯಾಂಡ್‌ ಆಗಿಬಿಟ್ಟರೆ ಹೇಗೆ?
ಇಲ್ಲಾ, ನಾನೊಬ್ಬ ನಟ ಎಲ್ಲಾ ತರಹದ ಪಾತ್ರ ಮಾಡಬೇಕು. “ಫ‌ಸ್ಟ್‌ರ್‍ಯಾಂಕ್‌ ರಾಜು’ ಸ್ಟುಡೆಂಟ್‌ ಮೇಲೆ ಬಂತು. ಅವನು ರ್‍ಯಾಂಕ್‌ ಇದ್ದಾಗ ಹೇಗಿರ್ತಾನೆ. ಚೇಂಜ್‌ ಆದಾಗ ಹೇಗಾಗ್ತಾನೆ ಎಂಬ ಪಾತ್ರ ಹೊಸದಾಗಿತ್ತು. “ಸ್ಮೈಲ್ ಪ್ಲೀಸ್‌’ನಲ್ಲಿ ಒಳಗೆ ನೋವಿದ್ದರೂ, ಚದುರಿದ ಫ್ಯಾಮಿಲಿಯನ್ನು ನಗಿಸುತ್ತಲೇ ಒಂದು ಮಾಡುವ ಪಾತ್ರವದು. “ಮಿಸ್ಸಿಂಗ್‌ ಬಾಯ್‌’ ಎಮೋಷನಲ್‌ ಕಥೆ. “ಎಂಟಿವಿಸುಬ್ಬುಲಕ್ಷ್ಮೀ’ ಚಿತ್ರದಲ್ಲಿ ಆ್ಯಕ್ಷನ್‌ಗೂ ಒತ್ತು ಕೊಡಲಾಗಿದೆ. “ರಾಜು ಕನ್ನಡ ಮೀಡಿಯಂ’ನಲ್ಲಿ ಕನ್ನಡ ಶಾಲೆ ವಿದ್ಯಾರ್ಥಿಯ ಪಾತ್ರ. ಹಾಗಾಗಿ ನಾನು ಒಂದೇ ಪಾತ್ರಕ್ಕೆ ಬ್ರ್ಯಾಂಡ್‌ ಆಗುವ ಮಾತೇ ಇಲ್ಲ.

“ರಾಜು ಕನ್ನಡ ಮೀಡಿಯಂ’ ಬಗ್ಗೆ ಹೇಳಿ?
–  ಇದೊಂದು ಕನ್ನಡ ಶಾಲೆ ವಿದ್ಯಾರ್ಥಿ ಕುರಿತ ಕಥೆ. ಇದರಲ್ಲಿ 9 ನೇ ತರಗತಿ ಹುಡುಗನಾಗಿ ನಟಿಸಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಿದೆ. ಹುಡುಗನಾಗಿ ಕಾಣಿಸಿಕೊಳ್ಳಬೇಕಿದ್ದರಿಂದ ಮೊದಲು ಎಲ್ಲಾ ಪೋಷನ್ಸ್‌ ಮುಗಿಸಿ, ಕೊನೆಗೆ ಶಾಲೆ ವಿದ್ಯಾರ್ಥಿ ಪೋಷನ್ಸ್‌ ಮಾಡೋಣ ಅಂತ ಡಿಸೈಡ್‌ ಆಗಿತ್ತು. ಆದರೆ, ಕೊನೆಗೆ, ಮೊದಲು ಶಾಲೆ ಹುಡುಗನ ಪೋಷನ್ಸ್‌ ಶುರುವಾಯ್ತು. ಅದಕ್ಕಾಗಿ ತೂಕ ಇಳಿಸಿಕೊಳ್ಳಬೇಕಿತ್ತು. ಕೇವಲ ಹತ್ತು ದಿನದಲ್ಲಿ 6 ಕೆಜಿ ತೂಕ ಇಳಿಸಿಕೊಂಡೆ. ಊಟ ಬಿಟ್ಟೆ, ಸಿಕ್ಕಾಪಟ್ಟೆ ವರ್ಕ್‌ಔಟ್‌ ಮಾಡಿದೆ. ನಾವಿರು ಹೋಟೇಲ್‌ಗ‌ೂ, ಶೂಟಿಂಗ್‌ ಪ್ಲೇಸ್‌ಗೂ ಹದಿನೈದು ಕಿ.ಮೀ ದೂರ ಇತ್ತು. ಎಲ್ಲರೂ ಕಾರಲ್ಲಿ ಹೋದರೆ, ನಾನು ಸೈಕಲ್‌ನಲ್ಲಿ ಹೋಗುತ್ತಿದ್ದೆ. ಹಾಗಾಗಿ, ಹತ್ತು ದಿನದಲ್ಲಿ ತೂಕ ಇಳಿಸಿಕೊಂಡು ಆ ಪಾತ್ರಕ್ಕೆ ಒಗ್ಗಿಕೊಂಡೆ. ಯೂನಿಫಾರಂ ಹಾಕಿರುವ ಫೋಟೋ ನೋಡಿದರೆ ಗೊತ್ತಾಗುತ್ತೆ. ನಾನು ಹೇಗೆ ಕಾಣಿ¤àನಿ ಅಂತ.  ಕನ್ನಡ ಮೀಡಿಯಂ ಓದಿದವರೂ ಸಾಧನೆ ಮಾಡಿದ್ದಾರೆ. ಮಾಡ್ತಾರೆ ಅನ್ನೋದು ಹೈಲೆಟ್‌. ಮೂರು ಶೇಡ್‌ ಇರುವಂತಹ ಪಾತ್ರವದು. ಹಳ್ಳಿಯಿಂದ ಕನ್ನಡ ಮೀಡಿಯಂ ಓದಿ ಬೆಂಗಳೂರಿಗೆ ಬಂದು, ಏನು ಸಾಧನೆ ಮಾಡ್ತಾನೆ ಅನ್ನೋದು ಕತೆ. “ರಾಜು ಕನ್ನಡ ಮೀಡಿಯಂ’ ಮತ್ತೂಂದು ಯಶಸ್ಸಿನ ಚಿತ್ರ ಆಗುತ್ತೆ ಎಂಬ ನಂಬಿಕೆ ನನ್ನದು.

ಸಕ್ಸಸ್‌ ನಂತರ ಜವಾಬ್ದಾರಿ ಜಾಸ್ತಿಯಾಗಿದೆ ಅನ್ನಿ 
– ಹೌದು, ಗೆಲುವು ಸಿಗೋದು ಕಷ್ಟ. ಹಾಗೆಯೇ ಅದನ್ನು ಉಳಿಸಿಕೊಂಡು ಹೋಗೋದು ಬಲು ಕಷ್ಟ. ಸಕ್ಸಸ್‌ ಬಂದಾಗ ಬೆನ್ನು ತಟ್ಟಿದವರು ಇದ್ದಾರೆ. ಕಾಲು ಎಳೆದವರೂ ಇದ್ದಾರೆ. ಉಲ್ಟಾ ಮಾತಾಡಿದವರೂ ಉಂಟು.  “ಫ‌ಸ್ಟ್‌ ರ್‍ಯಾಂಕ್‌ ರಾಜು’ ಬಳಿಕ ಕೆಲವರು ಗುರುನಂದನ್‌ಗೆ ಕೊಬ್ಬು ಬಂದಿದೆ ಅಂದ್ರು. ಸಿಕ್ಕಾಪಟ್ಟೆ ಸಂಭಾವನೆ ಕೇಳ್ತಾನೆ ಅಂತ ಮಾತಾಡಿದ್ರು. ಆದರೆ, ನಾನ್ಯಾವುದಕ್ಕೂ ಕಿವಿಗೊಡಲಿಲ್ಲ. ಸಂಭಾವನೆ ಕೊಡೋರು ನಿರ್ಮಾಪಕರು. ಪಡೆಯೋನು ನಾನು. ಸಿನಿಮಾ ಮಾಡಲಾಗದವರು ಹೇಳಿಕೊಂಡು ತಿರುಗಾಡಿದರೆ ನಾನು ರಿಯಾಕ್ಟ್ ಮಾಡಲ್ಲ. ನನ್ನ ಕೆಲಸ ಸ್ಕ್ರೀನ್‌ ಮೇಲೆ ತೋರಿಸ್ತೀನಿ. ಕೊಬ್ಬು ಇದ್ದರೆ ಜಿಮ್‌ ಹೋಗಿ ಕರಗಿಸ್ತೀನಿ. ನಾನೂ ಕಷ್ಟಪಟ್ಟು ಬಂದವನು. ಗೆಲುವು ಪಡೆಯೋಕೆ ಎಷ್ಟೆಲ್ಲಾ ಅಲೆದಾಡಿದೆ ಎಂಬುದು ಗೊತ್ತಿದೆ. ಹತ್ತು ವರ್ಷ ಸೈಕಲ್‌ ತುಳಿದಿದ್ದೇನೆ. ಸಣ್ಣ ಪಾತ್ರಮಾಡಿದ್ದೇನೆ. ಹತ್ತು ರೂಪಾಯಿಗೂ ಪರಿತಪಿಸಿದ್ದು ನೆನಪಿದೆ. ಐನೂರು ರೂಪಾಯಿಗೂ ಕೆಲಸ ಮಾಡಿದ್ದು ಮರೆತಿಲ್ಲ. ನಾನು ರಾತ್ರೋ ರಾತ್ರಿ ಸ್ಟಾರ್‌ ಆದವನಲ್ಲ. ಕಷ್ಟಪಟ್ಟು ಕೆಲಸ ಮಾಡಿ ಸಕ್ಸಸ್‌ ಪಡೆದಿದ್ದೇನೆ. ಉಳಿಸಿಕೊಂಡು ಹೋಗ್ತಿàನಿ ಎಂಬ ನಂಬಿಕೆಯೂ ಇದೆ. 

ಅನ್ಯ ಭಾಷೆಯಿಂದ ಅವಕಾಶ ಬಂದಿತ್ತಾ?
– ತೆಲುಗಿನಿಂದ ಅವಕಾಶ ಬಂದಿವೆ. “ಫ‌ಸ್ಟ್‌ರ್‍ಯಾಂಕ್‌ ರಾಜು’ ಸಿನಿಮಾ ಮಾಡಿ ಅಂತ ಬಂದಿದ್ದರು. ಆದರೆ, ನಾನು ಮಾಡ್ತಾ ಇಲ್ಲ. ನಿರ್ದೇಶಕರು ಮಾಡ್ತಾರೆ. ಈಗಲೂ ಹತ್ತಾರು ಫೋನ್‌ ಕಾಲ್ಸ್‌ ಬರಿ¤ವೆ. ಆದರೆ, ನಾನು ಬೇರೆ ಭಾಷೆಗೆ ಹೋಗಲ್ಲ. ಸದ್ಯಕ್ಕೆ ನಾನಿಲ್ಲೇ ಬಿಜಿಯಾಗಿದ್ದೇನೆ. ಕೈ ತುಂಬ ಕೆಲಸ ಇರುವಾಗ, ಬೇರೆ ಕಡೆ ಯಾಕೆ ಹೋಗಲಿ?

ಹೋದಲ್ಲೆಲ್ಲಾ ನಿಮ್ಮನ್ನು ಜನ ಏನಂತ ಕರೀತಾರೆ?
– ಎಲ್ಲೇ ಹೋಗಲಿ, ರಾಜು ಅಂತಾರೆ. ಇನ್ನು ಕೆಲವರು ರ್‍ಯಾಂಕ್‌ ಸ್ಟಾರ್‌ ಅಂತಾರೆ. ಪ್ರೀತಿಯಿಂದಲೇ ಮಾತಾಡಿಸ್ತಾರೆ. ನಾನೇನೂ ಸ್ಟಾರ್‌ ಅಲ್ಲ. ಆದರೆ, ಜನ ತೋರಿಸುವ ಪ್ರೀತಿಗೆ ಋಣಿಯಾಗಿರಿ¤àನಿ. ಮುಂದೆಯೂ ಒಳ್ಳೆಯ ಸಿನಿಮಾ ಕೊಡ್ತೀನಿ. ನನಗೇನೂ ಸಂಘಗಳಿಲ್ಲ. ಆದರೆ, ಒಂದಷ್ಟು ಮಂದಿ ಅಭಿಮಾನಿಗಳಿದ್ದಾರೆ. ಕಾಲೇಜ್‌ಗೆ ಹೋದರೆ, ಸ್ಟುಡೆಂಟ್ಸ್‌ ಮುಗಿಬಿದ್ದು ಮಾತಾಡ್ತಾರೆ ಅಷ್ಟು ಸಾಕು. 

ಹುಡುಗಿಯರ್ಯಾರೂ ಐ ಲವ್‌ಯು ಅಂದಿಲ್ವಾ?
– ಹ್ಹಹ್ಹಹ್ಹ ಎಂಥದ್ದೂ ಇಲ್ಲ. ಆದರೆ, ಫೇಸ್‌ಬುಕ್‌ನಲ್ಲಿ ಮೆಸೇಜ್‌ ಹಾಕ್ತಾರೆ. ಆದರೆ, ನಾನು ರಿಯಾಕ್ಟ್ ಮಾಡಲ್ಲ. ಸಿಕ್ಕ ಹುಡುಗೀರು ಸಿಕ್ಕಾಪಟ್ಟೆ ಮಾತಾಡ್ತಾರೆ. ನಾನು ಜಸ್ಟ್‌ ಸ್ಮೈಲ್ ಕೊಡ್ತೀನಷ್ಟೇ. 

ಟ್ಯೂಬ್‌ಲೈಟ್‌ ಕಥೆ ಏನಾಯ್ತು?
– ಅದಿನ್ನೂ ಐಸಿಯುನಲ್ಲಿದೆ. ಹೊರಗೆ ಬರೋದು ಕಷ್ಟ ಅನಿಸುತ್ತೆ. ಅವರು ಸಿನಿಮಾ ಮಾಡಲ್ಲ. ಆದರೆ, ಸುಮ್ಮನೆ ನನ್ನ ಬಗ್ಗೆ ಹೇಳಿಕೊಂಡು ತಿರುಗುತ್ತಿದ್ದಾರೆ. ಈಗಲೂ ನಾನು ರೆಡಿ. ಅವರು ಬರ್ತಾರಾ? ನಾನು ಈಗ ಸಿನಿಮಾ ಮಾಡ್ತಾ ಇಲ್ವಾ? ಪ್ರಮೋಷನ್‌ಗೆ ಹೋಗ್ತಾ ಇಲ್ವಾ? ನನ್ನ ಸಿನಿಮಾ ಹಿಟ್‌ ಆದಮೇಲೆ ಯಾಕೆ ಹೀಗೆಲ್ಲಾ ಮಾಡಿದ್ರು. ಮೊದಲೇ ಯಾಕೆ ಬಂದು ಮಾತಾಡಲಿಲ್ಲ. ನನಗೂ ಮಾನವೀಯತೆ ಇದೆ. ನಿರ್ಮಾಪಕರು ಹಣ ಹಾಕಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಕೆಲಸ ಮಾಡಲು ರೆಡಿಯಾಗಿದ್ದೇನೆ. ಆದರೆ, ಅವರೇ ಬರುತ್ತಿಲ್ಲ. ಅವರನ್ನೇ ಕಾದು ಕೂರಲು ನನಗೆ ಸಾಧ್ಯವಿಲ್ಲ. ನನ್ನದೂ ಲೈಫ್ ಇದೆ. ಕಮಿಟ್‌ ಆದ ಸಿನಿಮಾ ಮಾಡಬೇಕಲ್ಲವೇ.

Advertisement

Udayavani is now on Telegram. Click here to join our channel and stay updated with the latest news.

Next