Advertisement

ಸರ್ಕಾರಿ ಉತ್ಸವಕ್ಕಷ್ಟೇ ಕನ್ನಡ ಸೀಮಿತ

05:04 PM Nov 29, 2018 | Team Udayavani |

ದಾವಣಗೆರೆ: ಕನ್ನಡವೆಂದರೆ ಅದು ಬರೀ ಭಾಷೆಯಲ್ಲ. ಕನ್ನಡ ವಿಜ್ಞಾನ, ಕಲೆ, ತಂತ್ರಜ್ಞಾನ, ರಾಜಕೀಯ, ಆರ್ಥಿಕತೆ, ಜೀವನ ವಿಧಾನ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಬಸವರಾಜ ಸಬರದ ವಿಶ್ಲೇಷಿಸಿದ್ದಾರೆ.

Advertisement

ಬುಧವಾರ, ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ 63ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವಂತಹ ಕನ್ನಡ ಕೇವಲ ಸರ್ಕಾರಿ ಉತ್ಸವವಾಗಿ ಉಳಿದಿದೆ ಎಂದು ವಿಷಾದಿಸಿದರು.

ಕನ್ನಡ ಭಾಷೆ ಇಂದು ಜೀವಂತವಾಗಿರುವುದು ಗ್ರಾಮೀಣ ಪ್ರದೇಶಗಳಲ್ಲಿನ ಜನರ ಬಳಕೆಯಿಂದ ಮಾತ್ರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕವಿಗಳ ಹೊರತಾಗಿಯೂ ಕನ್ನಡವನ್ನು ಬೆಳೆಸಿದವರು ಎಲೆಮರೆ ಕಾಯಿಯಾಗಿಯೇ ಉಳಿದಿದ್ದಾರೆ. ಪ್ರಶಸ್ತಿಯನ್ನೇ ಮಾನದಂಡವಾಗಿ ನೋಡುವ ಮನೋಭಾವ ಹಲವು ಉತ್ಕೃಷ್ಟ ಕನ್ನಡದ ಸಾಹಿತಿಗಳನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಭಾಷೆ ಪ್ರಾಚೀನ ಕನ್ನಡವೆಂಬ ಅಂಧಾಭಿಮಾನ ಇದ್ದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಕನ್ನಡವನ್ನು ಕಂಪ್ಯೂಟರೀಕರಣಗೊಳಿಸಬೇಕು. ವಿಜ್ಞಾನ- ತಂತ್ರಜ್ಞಾನದಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವಂತಾಗಬೇಕು. ಆಗ ಮಾತ್ರ ಕನ್ನಡ ಭಾಷೆಯ ಅಸ್ತಿತ್ವ ಉಳಿಯಲು ಸಾಧ್ಯ. ಅದರ ಜೊತೆಗೆ ಬೇರೆ ಭಾಷೆಯ ಶಬ್ದಗಳನ್ನು ತದ್ಭವ ರೂಪದಲ್ಲಿ ಬಳಸಬೇಕು
ಎಂದು ಅಭಿಪ್ರಾಯಪಟ್ಟರು. 

ಶುದ್ಧ ಕನ್ನಡವೆಂಬ ತತ್ವದಲ್ಲಿ ಯಾವುದೇ ಹುರುಳಿಲ್ಲ. ಅಲ್ಲಮಪ್ರಭು ಹೇಳುವಂತೆ ಪದವ ಹೇಳಬಹುದಲ್ಲದೇ ಪದಾರ್ಥವನ್ನು ಹೇಳಲಾಗದಯ್ಯ… ಎಂಬಂತೆ ಯಾವುದೇ ಪದಕ್ಕೂ ಅರ್ಥ ಇರುವುದಿಲ್ಲ. ಅದು ಸಂದರ್ಭ, ಕಾಲಕ್ಕೆ ತಕ್ಕಂತೆ  ನಿರ್ಧರಿತವಾಗುತ್ತದೆ. ಅಂತೆಯೇ ಕನ್ನಡವನ್ನು ನಾವು ಒಂದು ಭಾಷೆಗೆ ಕೇಂದ್ರೀಕರಿಸಬಾರದು ಎಂದು ತಿಳಿಸಿದರು.

Advertisement

ರಾಜ್ಯದ ಎಲ್ಲಾ ಭಾಗದ ಭಾಷೆಯ ಸಮ್ಮಿಳನವೇ ನಿಜವಾದ ಕನ್ನಡ ಎನ್ನುವ ಸೂತ್ರದಲ್ಲಿನ ಸರಳತೆಯ ಅರ್ಥಮಾಡಿಕೊಂಡು ಭಾಷೆಯನ್ನು ಬೆಳೆಸಬೇಕು. ಬೇರೆ ಭಾಷಿಗರು ಕನ್ನಡ ಮಾತನಾಡಲು ಪ್ರಯತ್ನಿಸಿದರೆ ಅದನ್ನು ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ದಾದಾಪೀರ್‌ ನವಿಲೇಹಾಳ್‌ ಮಾತನಾಡಿ, ಕನ್ನಡ ಎಂದರೆ ಮನೋಧರ್ಮ. ಕನ್ನಡ ಹಿಂದಿನಿಂದಲೇ ಶ್ರೀಮಂತವಾಗಿ ಬೆಳೆದಿದೆ .ನಮ್ಮ ಪರಂಪರೆಯಲ್ಲಿ ಕನ್ನಡದ ಧಾತುವನ್ನು ನಾವು ದಕ್ಕಿಸಿಕೊಳ್ಳಬೇಕು. ಕನ್ನಡ ಪ್ರತಿಯೊಬ್ಬರ ಪ್ರಜ್ಞೆಯ ಭಾಗವಾಗಬೇಕು ಎಂದು ಆಶಿಸಿದರು. 

ಕನ್ನಡ ಓದುವ ಹವ್ಯಾಸ ಮಾತ್ರವಿರದೆ ಅದನ್ನು ಕ್ರಿಯಾಶೀಲವಾಗಿ ಬಳಸುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು. ಒಂದು ಚರಿತ್ರೆಯನ್ನು ವರ್ತಮಾನಕ್ಕೆ ತರದೆ ಅದರ ಭವಿಷ್ಯತ್ತನ್ನು ಸಾಧಿಸುವುದು ಅಸಾಧ್ಯ. ಈ ನಿಟ್ಟಿನಲ್ಲಿ ಪ್ರಶ್ನಾ ಮತ್ತು ಹೋರಾಟ ಮನೋಭಾವ ರೂಢಿಸಿಕೊಂಡಾಗ ಮಾತ್ರ ಭಾಷೆ ಉಳಿಯಲು ಸಾಧ್ಯ. ಇಂದಿನ ದಿನಗಳಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸವೇ ಇಲ್ಲದಂತಾಗಿದೆ. ಸಮಷ್ಟಿ ಪ್ರಜ್ಞೆಯನ್ನು ಕಟ್ಟಿಕೊಟ್ಟ ಕುವೆಂಪುರವರ ಸಾಹಿತ್ಯ ಓದಬೇಕು. ಆ ರೀತಿ ಸಾಹಿತ್ಯವನ್ನು ಓದುವಿಕೆಯಲ್ಲಿ ತೊಡಗಿದಾಗ ಮಾತ್ರ ಭಾಷಾ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಪಿ. ಕಣ್ಣನ್‌ ಮಾತನಾಡಿ, ಭಾಷೆಗಾಗಿ ಕರ್ನಾಟಕದಲ್ಲಿ ಆದ ತೀವ್ರ ಸ್ವರೂಪದ ಹೋರಾಟ ಬೇರೆ ಎಲ್ಲಿಯೂ ನಡೆದಿಲ್ಲ. ಅಂತಹ ಕನ್ನಡಾಭಿಮಾನ ನಮ್ಮಲ್ಲಿದೆ. ಬೇರೆ ಬೇರೆ ಪ್ರದೇಶದ ಜನರ ವಿಭಿನ್ನ ಕನ್ನಡ ಭಾಷೆಯು ಇಡೀ ಕನ್ನಡದ ವಿಶೇಷತೆಯನ್ನು ಹೆಚ್ಚಿಸಿದೆ. ಟಿ.ಪಿ. ಕೈಲಾಸಂ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಮೂಲತಃ ಕನ್ನಡದವರಲ್ಲದಿದ್ದರೂ ಅವರ ಕನ್ನಡ ಪ್ರೇಮ ಕಲಿಯುವಂಥದ್ದು. ಅಂತಹ ಸೇವೆಯನ್ನು ನಾವು ಕನ್ನಡಕ್ಕಾಗಿ ಸಲ್ಲಿಸೋಣ ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕಲಾನಿಕಾಯ ಮುಖ್ಯಸ್ಥ ಪ್ರೊ| ಬಿ.ಪಿ. ವೀರಭದ್ರಪ್ಪ, ಪರೀಕ್ಷಾಂಗ ಕುಲಸಚಿವ ಕೆ.ಎನ್‌. ಗಂಗಾನಾಯ್ಕ, ಹಣಕಾಸು ಅಧಿಕಾರಿ ಡಾ. ಜೆ.ಕೆ ರಾಜು ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next