Advertisement

Vijayapura: 3 ಬಾರಿ ಗೆದ್ದರೂ ಮತದಾರರು ಜಿಗಜಿಣಗಿ ಮುಖ ನೋಡಿಲ್ಲ: ರಾಜು ಆಲಗೂರ

04:30 PM Apr 12, 2024 | Team Udayavani |
ವಿಜಯಪುರ : ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಕ್ಷೇತ್ರದಲ್ಲಿ ನಾನು ಪ್ರಚಾರ ಆರಂಭಿಸಿದ್ದು, ಮತದಾರರಿಂದ ವ್ಯಾಪಕ ಸ್ಪಂದನೆ, ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಸತತ ಮೂರು ಬಾರಿ ಗೆದ್ದಿರುವ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ಕ್ಷೇತ್ರದ ಮತದಾರರಿಗೆ ಮುಖವನ್ನೇ ತೋರಿಸಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜು ಆಗಲೂರ ಕುಟುಕಿದ್ದಾರೆ.
ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿ ಕಛೇರಿ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮತದಾರರಿಗೆ ಹೆಚ್ಚು ಪರಿಚಯ ಇಲ್ಲದ ನಾನು ಕ್ಷೇತ್ರದಲ್ಲಿ ಸುತ್ತುವ ವೇಳೆಗೆ ಚುನಾವಣೆ ಮುಗಿದು ಹೋಗಲಿದೆ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಗೇಲಿ ಮಾಡಿದ್ದಾರೆ ಎಂದಬ ಪ್ರಶ್ನೆಗೆ  ಆಲಗೂರ ತೀಕ್ಷಣವಾಗಿಯೇ ತಿರುಗೇಟು ನಿಡಿದರು.
ಕಳೆದ ಮೂರು ಚುನಾವಣೆಯಲ್ಲಿ ಸತತವಾಗಿ ಗೆದ್ದಿರುವ ಅವರ ಮುಖವನ್ನೇ ಕ್ಷೇತ್ರದ ಮತದಾರರು ನೋಡಿಲ್ಲ ಎಂಬುದು ದುರ್ದೈವ. ಶಾಸಕನಾಗಿ, ಪಕ್ಷದ ಜಿಲ್ಲಾಧ್ಯಕ್ಷನಾಗಿರುವ ಜಿಲ್ಲೆಯಾದ್ಯಂತ ಸಂಚರಿಸಿರುವ ನಾನು ಪರಿಚಿತನಲ್ಲ ಎಂದಿರುವ ಅವರ ಹೇಳಿಕೆಗೆ ಪಾಪ ಎನಿಸುತ್ತಿದೆ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷನಾಗಿ ಇಡೀ ಜಿಲ್ಲೆ ಸಂಚರಿಸಿರುವ ನಾನು, ಎರಡು ಬಾರಿ ಜಿಲ್ಲೆಯಲ್ಲಿ ಶಾಸಕನಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ, ಒಂದು ಬಾರಿ ನಿಗಮ ಮಂಡಳಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ನಾನು ಕ್ಷೇತ್ರದ ಜನರಿಗೆ ಚಿರಪರಿಚಿತನಾಗಿದ್ದೇನೆ ಎಂದು ಬಿಜೆಪಿ ಘೋಷಿತ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ತಿರುಗೇಟು ನೀಡಿದರು.
ವಿಜಯಪುರ ಲೋಕಸಭೆ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಪಕ್ಷದ ಪರ ಅಲೆ ಇದ್ದು, ಕಾಂಗ್ರೆಸ್ ಅರ್ಭರ್ಥಿಯಾಗಿ ನನ್ನ ಗೆಲುವು ಶತಸಿದ್ಧ ಎಂದು ರಾಜು ಆಲಗೂರು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಶುಕ್ರವಾರ ಆಗಿರುವ ಕಾರಣ ಗೆಳೆಯರೊಂದಿಗೆ ಬಂದು ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಬಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ.15 ರಂದು ಸಿದ್ಧೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಬೃಹತ್ ಮೆರವಣಿಗೆ ಮೂಲಕ ಪಕ್ಷದ ಶಾಸಕರು, ನಾಯಕರೊಂದಿಗೆ ಬಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾರು ಏನೇ ಟೀಕೆ ಮಾಡಬಹುದು. ಆದರೆ ಬಡ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಎಷ್ಟು ನೆರವಾಗಿವೆ ಎಂಬುದು ಫಲಾನುಭವಿಗಳಿಗೆ ಗೊತ್ತಿದೆ. ಕಷ್ಟದಲ್ಲಿರುವವರಿಗೆ ಗ್ಯಾರಂಟಿ ಯೋಜನೆಗಳು ಹೆಚ್ಚು ನೆರವಾಗಿವೆ. ನನ್ನ ಗೆಲುವಿಗೆ ಇದು ಸಹಕಾರಿ ಆಗಲಿದೆ ಎಂದರು.
ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ವಿಜಯಪುರ ವಿದ್ಯಾರ್ಥಿ ವೇದಾಂತ ನಾವಿ ಸರ್ಕಾರ ನೀಡುವ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ನನ್ನ ತಾಯಿಗೆ ಬರುತ್ತಿದ್ದು, ಕಷ್ಟದಲ್ಲಿರುವ ನನಗೆ ಅದರಿಂದ ನನ್ನ ಓದಿಗೆ ನೆರವಾಗಿದೆ ಎಂದು ಹೇಳಿರುವುದೇ ಇದಕ್ಕೆ ಜೀವಂತ ನಿದರ್ಶನ ಎಂದರು.
ನನ್ನಿಂದಾಗಿ ಇತರೆ ನಾಮಪತ್ರ ಸಲ್ಲಿಕೆಗೆ ಬಂದವರಿಗೆ ವಿಳಂಬವಾಗಿಲ್ಲ. ಬೇರೆಯವರು ನಾಮಪತ್ರ ಸಲ್ಲಿಸುವಾಗ ಅವರ ಪ್ರಕ್ರಿಯೆ ಮುಗಿಯುವ ವರೆಗೆ ಇತರರು ಕಾಯಲೇಬೇಕು. ನಾನು ಸಹ ದಾವಣಗೆರೆಯಿಂದ ಬಂದಿದ್ದರೊಬ್ಬರು ನಾಮಪತ್ರ ಸಲ್ಲಿಸುವಾಗ ನಾನು ಕೂಡ 2 ಗಂಟೆ ಕಾದಿದ್ದೇನೆ. ಬೆಳಿಗ್ಗೆ 11 ಗಂಟೆಗೆ ಆಗಮಿಸಿ 1 ಗಂಟೆ ವರೆಗೆ ಕಾದಿದ್ದೇನೆ, ಇಂಥ ಸಂದರ್ಭದಲ್ಲಿ ಸ್ವಲ್ಪ ವಿಳಂಬ ಆಗುವುದ ಸಹಜ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next