Advertisement

ಇಂಗ್ಲಿಷ್‌ ಮುಂದೆ ಮಂಡಿಯೂರಿದ ಕನ್ನಡ

10:11 AM Nov 28, 2017 | Team Udayavani |

ಕಲಬುರಗಿ: ಇವತ್ತು ಜಾಗತಿಕ ಒತ್ತಡದಿಂದಾಗಿ ಇಂಗ್ಲಿಷ್‌ ಭಾಷೆ ಮುಂದೆ ಕನ್ನಡ ಮಂಡಿಯೂರುವಂತಹ ಪರಿಸ್ಥಿತಿಯನ್ನು ನಾವುಗಳು ಮಾಡಿಟ್ಟಿದ್ದೇವೆ ಎಂದು ಖ್ಯಾತ ಸಾಹಿತಿ ಹಾಗೂ ವಿಚಾರವಾದಿ ಡಾ| ಬಂಜಗೆರೆ ಜಯಪ್ರಕಾಶ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕನ್ನಡ ಸಮನ್ವಯ ಸಮಿತಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ನಿಮಿತ್ತ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಗ್ಲಿಷ್‌ಗೆ ಮಾರು ಹೋಗುತ್ತಿರುವವರ ಸಂಖ್ಯೆ ಹೆಚ್ಚಳದಿಂದ ಕನ್ನಡವು ಸೋತು ಹೋಗಿದೆ. ಪ್ರಾಥಮಿಕ ಹಂತದಲ್ಲಿಯಾದರೂ ಒಂದು ವಿಷಯವಾಗಿ ಕನ್ನಡ ಉಳಿಸಿ ದಯಮಾಡಿ ಎನ್ನುವಂತಹ ದಯನೀಯ ಸ್ಥಿತಿ ಬಂದೊದಗಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಕನ್ನಡ ವಿಷಯ ಕಡ್ಡಾಯವಾಗಿ ಅಳವಡಿಸಬೇಕು ಎಂದು ಅವರು ಸಲಹೆ ನೀಡಿದರು.

ಇಂಗ್ಲಿಷ್‌ ಭಾಷೆ ಬದುಕಿನ ಸಾಧನವಾಗಿ ಬಳಕೆಯಾಗಬೇಕೇ ಹೊರತು ಜೀವನಕ್ಕಾಗಿ ಅಲ್ಲ. ಕನ್ನಡ ನಮ್ಮ ಬದುಕು. ಆ ಬದುಕನ್ನು ಉಳಿಸಿಕೊಳ್ಳುವ ಮೂಲಕ ಕನ್ನಡ ಭಾಷೆ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆ ನೀಡಿದರು. ಕನ್ನಡಾಭಿಮಾನವು ಕೇವಲ ಒಂದೇ ದಿನಕ್ಕೆ ಸೀಮಿತವಾಗಿರಬಾರದು. ಅದು ನಿತ್ಯೋತ್ಸವ ಆಗಿರಬೇಕು. 
ಗ್ರಾಮೀಣ ಪ್ರದೇಶದಲ್ಲಿ ಪ್ರತಿ ವರ್ಷ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಭಾಷೆ ಉಳಿಸಿ ಬೆಳೆಸಲು
ಸರ್ಕಾರವು ಎಷ್ಟೇ ಹಣ ಬಿಡುಗಡೆ ಮಾಡಿದರೂ, ಉತ್ಸವಗಳನ್ನು ಹಮ್ಮಿಕೊಂಡರೂಯಾವುದೇ ಪ್ರಯೋಜನ ಆಗುತ್ತಿಲ್ಲ. ಕನ್ನಡದ ಶಾಲೆಗಳನ್ನು ಮುಚ್ಚದಂತೆ ತಡೆಯುವುದರ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಕನ್ನಡವನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕು. ಅದಕ್ಕಾಗಿ ರಾಜ್ಯ ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಕನ್ನಡ ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಕನ್ನಡ ಭಾಷೆ ಅಭಿವೃದ್ಧಿಗೆ ಸರ್ಕಾರ ಕಳೆದ ವರ್ಷ 190 ಕೋಟಿ ರೂ. ಮತ್ತು ಈ ವರ್ಷ 360 ಕೋಟಿ ರೂ. ಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡದ ಅಪ್ಪಟ ಅಭಿಮಾನಿಯಾಗಿದ್ದಾರೆ ಎಂದು ಅವರು ಹೇಳಿದರು.

ಕನ್ನಡ ಭಾಷೆ ಅಭಿವೃದ್ಧಿಗೆ ಹೈದ್ರಾಬಾದ್‌ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಅದರಲ್ಲಿಯೂ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಮೂಲಕ ಹೈದ್ರಾಬಾದ ಕರ್ನಾಟಕವು ಕನ್ನಡ ಭಾಷೆಗೆ ಬಹುದೊಡ್ಡ ಕೊಡುಗೆ ನೀಡಿದೆ. ಇವರೆರಡು ಕನ್ನಡದ ಎರಡು ಕಣ್ಣುಗಳು. ಜಾಗತೀಕರಣದ ಈ ಸಂದರ್ಭದಲ್ಲಿ ಅನ್ಯ ಭಾಷೆ ಅಗತ್ಯವಿದ್ದರೂ ಮಾತೃಭಾಷೆಯನ್ನು ಕಡೆಗಣಿಸಬೇಡಿ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಹಿರಿಯ ಬಂಡಾಯ ಸಾಹಿತಿ ಹಾಗೂ ಜಾನಪದ ವಿದ್ವಾಂಸ ಡಾ| ಚನ್ನಣ್ಣ ವಾಲೀಕಾರ ಮಾತನಾಡಿ, ಕನ್ನಡದ ಅಸ್ಮಿತೆಯನ್ನು ನಾವು ಉಳಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೇ ಹೋರಾಟ ಮಾಡುವಂತಹ ದಯನೀಯ ಸ್ಥಿತಿಯಲ್ಲಿದ್ದೇವೆ. ನಾಡ ಜನರೊಂದಿಗೆ ಸರಕಾರಗಳು ಕೂಡ ಭಾಷೆ ಪ್ರೇಮ ಮರೆಯಬೇಕು. ಅದಕ್ಕಾಗಿ ಶಿಕ್ಷಣ ಮಾಧ್ಯಮವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಶ್ರೀಗುರು ವಿದ್ಯಾಪೀಠದ ಟ್ರಸ್ಟಿ ಶಿವರಾಜ ದಿಗ್ಗಾಂವಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ ಡಿ. ಕಲಬುರ್ಗಿ ಇದ್ದರು. ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ವಿಜಯಕುಮಾರ ಬೀಳಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಲಿ ಮತ್ತು ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಸುರೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಸುನೀಲ ಮಾನ್ಪಡೆ, ರಾಜೇಂದ್ರ ರಾಜವಾಳ, ಸಾಯಿಬಣ್ಣ ಜಮಾದಾರ, ಶರಣಗೌಡ ಪಾಟೀಲ, ರಾಮಲಿಂಗ ಬಿರಾದಾರ, ಅನೀಲ ಟೆಂಗಳಿ, ಪವನಕುಮಾರ ವೈ. ಸಿ, ಸುನೀಲ ಶಾಬಾದಿ, ಅಪೂರ್ವಲಾಲ ನದಾಫ್‌ ಇದ್ದರು.

ಇದೇ ಸಂದರ್ಭದಲ್ಲಿ ಪುಸ್ತಕ ಪ್ರಾಧಿಕಾರದ ಸದಸ್ಯೆ ಡಾ| ಜಯದೇವಿ ಗಾಯಕವಾಡ, ಸಾಹಿತ್ಯ ಅಕಾಡೆಮಿಯ ಕನಕ
ಯುವ ಪ್ರಶಸ್ತಿ ಪುರಸ್ಕೃತ ಡಾ| ಗವಿಸಿದ್ದಪ್ಪ ಪಾಟೀಲ ಅವರನ್ನು ಗೌರವಿಸಲಾಯಿತು. ನಂತರ ಕನ್ನಡ ಅಂದು-ಇಂದು-ಮುಂದು ಹಾಗೂ ಸಮೂಹ ಮಾಧ್ಯಮದಲ್ಲಿ ಕನ್ನಡ ಭಾಷೆ ಕುರಿತು ಎರಡು ವಿಚಾರ ಗೋಷ್ಠಿಗಳು ನಡೆದವು.

ಜನವರಿಯಲ್ಲಿ ರಾಷ್ಟ್ರಕೂಟ ಉತ್ಸವ : ಮುಂಬರುವ ಹೊಸ ವರ್ಷದ 2018ರ ಜನವರಿಯಲ್ಲಿಯೇ ರಾಷ್ಟ್ರಕೂಟ ಉತ್ಸವವನ್ನು ರಾಜ್ಯ ಸರ್ಕಾರದಿಂದ ಆಚರಿಸಲಾಗುವುದು. ಸರ್ಕಾರದಿಂದಲೇ ಉತ್ಸವ ಆಚರಿಸಲು ಶೀಘ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಭೆ ಕರೆದು ತೀರ್ಮಾನಿಸಲಾಗುವುದು. ಇದು ಈ ಭಾಗದ ಜನರ ಬಹುದಿನಗಳ ಆಶಯವೂ ಆಗಿತ್ತು. ಅದನ್ನು ಸಿದ್ದು ಸರಕಾರ ಈಡೇರಿಸುವಲ್ಲಿ ಮುಂದಾಗಿದೆ.
 ಡಾ| ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next