Advertisement

ತೈಲ ಸಿರಿಯ ಕುವೈತಿನಲ್ಲಿ ಕನ್ನಡದ ಮಲ್ಲಿಗೆಯ ಘಮ…

12:30 AM Nov 02, 2018 | |

ಹೊರ ದೇಶದ ಮಣ್ಣಲಿ ಕರುನಾಡ ಘಮವನ್ನು ಆಸ್ವಾದಿಸುವುದೇ ಒಂದು ರೀತಿಯ ಪುಳಕ. ಕುವೈತಿನಲ್ಲಿ ಕನ್ನಡ ಕೂಟವೊಂದು 35 ವರ್ಷದಿಂದ ತನ್ನತನವ ಬಿಡದೆ ಕನ್ನಡ ಕಸ್ತೂರಿಯ ಪರಿಮಳವನ್ನು ಅನಿವಾಸಿ ತನ್ನುಡಿಗರಲ್ಲಿ, ತನ್ನಾಡಿಗರಲ್ಲಿ ತನ್ನದೇಶದವರಲ್ಲಿ ಹಂಚುತ್ತಾ ಬಂದಿದೆ ಎಂದರೆ ನಿಜಕ್ಕೂ ಹೆಮ್ಮೆಪಡುವಂತಾಗುತ್ತದೆ. ಕೆಲವೇ ಕನ್ನಡ ನಾಡಿನ ಅನಿವಾಸಿ ಕುಟುಂಬಗಳು ಹಬ್ಬ ಹರಿದಿನಗಳಲ್ಲಿ ಒಂದುಗೂಡುತ್ತಾ ಕುಟುಂಬಗಳ ಮಟ್ಟದಲ್ಲಿ ಕಟ್ಟಿದ “ಕುವೈತ್‌ ಕನ್ನಡ ಕೂಟ’ ಈಗ 35 ವಸಂತಗಳನ್ನು ಕಂಡಿದೆ. 

Advertisement

ಕೂಟ ತನ್ನ ಸುಮಾರು 200ಕ್ಕೂ ಹೆಚ್ಚು ಸದಸ್ಯ ಕುಟುಂಬಗಳ (600-700 ಸಂಖ್ಯಾಬಲದ) ಸದಸ್ಯರ ಪ್ರತಿಭೆಗಳ ಅನಾವರಣದ ಮೂಲಕ ಸಾರ್ವಜನಿಕ ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಳ್ಳುತ್ತದೆ. ವರ್ಷಾರಂಭದ ಕ್ರಿಸ್ಮಸ್‌, ಹೊಸವರ್ಷ ಸ್ವಾಗತ ಸಂಭ್ರಮ ಮತ್ತು ಸಂಕ್ರಾಂತಿಗಳ ಸಂಗಮ ಕಾರ್ಯಕ್ರಮ ಹಳೆಯ ಕಾರ್ಯಕಾರಿ ಸಮಿತಿಯ ಮುಕ್ತಾಯಕ್ಕೆ ಮತ್ತು ಹೊಸ ಪದಾಧಿಕಾರಿಗಳ ಚಯನಕ್ಕೆ ವೇದಿಕೆಯಾಗುತ್ತದೆ. ಯಾವುದೇ ಸ್ಪರ್ಧೆಯಿಲ್ಲದೇ ಸರ್ವಾನುಮತದಿಂದ ಕೂಟದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ಆಯ್ಕೆಮಾಡುತ್ತ ಬಂದಿರುವುದು ಕೂಟದ ಸದಸ್ಯರ ಸಾಮರಸ್ಯ ಸೋದರಭಾವಕ್ಕೆ ಸಾಕ್ಷಿಯಾಗಿದೆ,

ಕೂಟದ ಪ್ರಮುಖ ಕಾರ್ಯಕ್ರಮ ಕರ್ನಾಟಕ ರಾಜ್ಯೋತ್ಸವ. ಕರ್ನಾಟಕದ ಅನಿವಾಸಿಗಳು (ಇತರ ಮಾತೃಭಾಷಿಗರಾದರೂ ಕನ್ನಡ ಮಾತನಾಡಬಲ್ಲವರು) ಸದಸ್ಯರಾಗಿರುವುದು ಕೂಟದ ವೈಶಿಷ್ಟ್ಯ. ರಾಜ್ಯೋತ್ಸವದ ಆಚರಣೆಗೆ ಶಕ್ತಿ ಮತ್ತು ಚಾಲನೆಗೆ ವೇಗೋತ್ಕರ್ಷಗಳೇ ಇತರ ಕಾರ್ಯಕ್ರಮಗಳು. ಪ್ರತಿ ವರ್ಷ ಆಯ್ಕೆಯಾಗುವ ಕಾರ್ಯಕಾರಿ ಸಮಿತಿ ಸಾಮಾನ್ಯವಾಗಿ “ದಾಸೋತ್ಸವ’ ಎಂಬ ಭಕ್ತಿ-ಪ್ರಧಾನ ಮತ್ತು ಮಕ್ಕಳ ಹಾಗೂ ಹಿರಿಯರ ಕಲಾ ಮತ್ತು ಸತ್ಸಂಗದ ಚಟುವಟಿಕೆಗೆ ಮೀಸಲಾದ ಕಾರ್ಯಕ್ರಮ. ನಂತರ ಏಪ್ರಿಲ್‌-ಮೇ ತಿಂಗಳಿನಲ್ಲಿ  ಸೃಜನ ಮತ್ತು ಕಲಾ ಪ್ರತಿಭೆಗಳ ಪ್ರದರ್ಶನ ಮರಳ ಮಲ್ಲಿಗೆ ದಿನಾಚರಣೆಯನ್ನು, ಬೇಸಿಗೆ ಸಮಯದಲ್ಲಿ ಒಳಾಂಗಣ ವಿಹಾರ ಮತ್ತು ಕ್ರೀಡಾ ಸ್ಪರ್ಧೆಯನ್ನೂ, ಚಳಿಗಾಲದ ಹೊರಾಂಗಣ ವಿಹಾರ ಮತ್ತು ಕ್ರೀಡಾ ಕೂಟವನ್ನೂ, ಕೂಟದ ಪ್ರಮುಖ ಆಕರ್ಷಣೆಯಾದ ರಾಜ್ಯೋತ್ಸವನ್ನು ನವೆಂಬರಿನಲ್ಲಿ ಮತ್ತು ವರ್ಷಾಂತ್ಯ/ವರ್ಷಾರಂಭದ ಕ್ರಿಸ್ಮಸ್‌ ಆಚರಣೆಯ ಸರ್ವಸದಸ್ಯ ಸಭೆಯನ್ನು ಡಿಸೆಂಬರ್‌/ಜನವರಿಯಲ್ಲೂ ಹಮ್ಮಿಕೊಳ್ಳುತ್ತದೆ. ಈ ಎಲ್ಲಾ ಕಾರ್ಯವನ್ನು ಸುಸೂತ್ರವಾಗಿ ನಡೆಸಲು ಹಲವಾರು ಸಮಿತಿಗಳನ್ನು ಕಾರ್ಯಕಾರಿ ಸಮಿತಿ ನೇಮಿಸುತ್ತದೆ. ಸಾಂಸ್ಕೃತಿಕ ಸಮಿತಿ ರಾಜ್ಯೋತ್ಸವ, ದಾಸೋತ್ಸವ ಕಾರ್ಯಕ್ರಮಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದರೆ, ಕ್ರೀಡಾ ಸಮಿತಿ ಮತ್ತು ಗೃಹತಂಡ ನಾಯಕರ ಜೊತೆ ಕ್ರೀಡೆಗಳೇ ಅಲ್ಲದೇ ಊಟೋಪಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೂಟ ತನ್ನ ಈ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಮಕ್ಕಳು ಹಾಗೂ ಹಿರಿಯರಿಂದ ಆಹ್ವಾನಿಸಿದ ಲೇಖನ (ಕವನ, ಕಥೆ ,ಕಥನ, ಪ್ರಹಸನ, ಪವಾಸ ಕಥನ, ಅನುಭವ ಗಾಥೆ, ಚಿತ್ರಕಲೆ, ಛಾಯಾಗ್ರಹಣ)ಗಳನ್ನು ಸಂಪಾದಿಸಿ ತನ್ನ ಅಂತರ್ಜಾಲ ತಾಣದಲ್ಲೂ ಮತ್ತು ಪ್ರಮುಖ ಸಂದರ್ಭಗಳಲ್ಲಿ ಮುದ್ರಿತ ಪ್ರತಿಗಳನ್ನೂ ಹೊರತರುತ್ತದೆ. ಈ ಎಲ್ಲಾ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಜೊತೆಗೆ ಸೃಜನ ಪ್ರಧಾನ ಕಾರ್ಯಕ್ರಮವಾದ “ಮರಳ ಮಲ್ಲಿಗೆ ದಿನಾಚರಣೆ’ಯನ್ನು ಆಚರಿಸುವ ಜವಾಬ್ದಾರಿಯನ್ನು ಹೊರುವುದೇ ಮರಳ ಮಲ್ಲಿಗೆ ಸಮಿತಿ. ಕಾರ್ಯಕ್ರಮಗಳ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವಂತೆ ಮಾಡುವುದು ಮಾಧ್ಯಮ ಸಮಿತಿಯಾದರೆ, ಸ್ಮರಣ ಸಂಚಿಕೆ ಸಮಿತಿ ರಾಜ್ಯೋತ್ಸವದ ವಿಶೇಷ ಸ್ಮರಣ ಸಂಚಿಕೆಯನ್ನು ಹೊರತರುತ್ತದೆ. ಎಲ್ಲಾ ಕಾರ್ಯಕ್ರಮಗಳಿಗೆ ತಾಂತ್ರಿಕ ಸಹಾಯ ಸಹಕಾರ ನೀಡುವುದು ತಾಂತ್ರಿಕ ಕ್ರಿಯಾ ಸಮಿತಿಯಾದರೆ, ಅಂತರ್ಜಾಲ ಸಮಿತಿ ಕೂಟದ ಅಂತರ್ಜಾಲ ಚಾಲನೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊರುತ್ತದೆ. ಈ ಎಲ್ಲಾ ವಿವರಗಳನ್ನು ನೀಡಲು ಕಾರಣ: ರಾಜ್ಯೋತ್ಸವ ಕಾರ್ಯಕ್ರಮ ಈ ಎಲ್ಲಾ ಸಮಿತಿಗಳ ವಿವಿಧ ಜವಾಬ್ದಾರಿ ನಿರ್ವಹಣೆಯ ಮೇಳೈಸಿದ ಅದ್ಭುತ ಸಂಗಮವಾಗಿರುತ್ತದೆ ಎನ್ನುವ ಕಾರಣಕ್ಕೆ. 

ರಾಜ್ಯೋತ್ಸವ ಆಚರಣೆಯ ತಯಾರಿ ಜೂನ್‌ ತಿಂಗಳ ಬೇಸಿಗೆ ರಜಗಳಿಗಿಂತಾ ಮೊದಲೇ ಪ್ರಾರಂಭವಾಗುತ್ತದೆ. ಸಾಂಸ್ಕೃತಿಕ ಸಮಿತಿ ಕಾರ್ಯಕ್ರಮದ ಸ್ಥೂಲ ರೂಪುರೇಶೆಯನ್ನು ಕಾರ್ಯಕಾರಿ ಸಮಿತಿಯ ನಿರ್ದೇಶನದಲ್ಲಿ ಪೂರ್ಣಗೊಳಿಸಿ ಒಂದು ವಿಷಯದ ಆಧಾರದ ಮೇಲೆ ರಾಜ್ಯೋತ್ಸದ ಇಡೀ ಕಾರ್ಯಕ್ರಮವನ್ನು ರೂಪಿಸುತ್ತದೆ. ನಾಡಿನಿಂದ ಹಿರಿಯ ಸಾಹಿತಿ, ಕಲಾವಿದರನ್ನು ರಾಜ್ಯೋತ್ಸವದ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಗೌರವಿಸಿ, ಕುವೈತ್‌ನ ಅನಿವಾಸಿ ಭಾರತೀಯರಲ್ಲದೇ ಕುವೈತ್‌ ವಾಸಿಗಳನ್ನೂ ಆಹ್ವಾನಿಸಿ ಕಲಾಪ್ರಕಾರಗಳ ಪ್ರದರ್ಶನದ ಮೂಲಕ ದರ್ಶಿಸುತ್ತದೆ. ನವೆಂಬರಿನಲ್ಲಿ ನಡೆಯುವ ಈ ನಾಡಹಬ್ಬದಂದು ಕನ್ನಡನಾಡಿಗರು ಅನಿವಾಸಿ ದೇಶವಾಸಿಗರಿಗೆ ಉಣಬಡಿಸುವ ಕಲಾರಸದೌತಣ ರಾಜ್ಯೋತ್ಸವ ಕಾರ್ಯಕ್ರಮ ಎನ್ನಬಹುದು. ಸುಮಾರು 4-5 ತಿಂಗಳ ಕಟು ಅಭ್ಯಾಸಗಳ ನಂತರ ಫ‌ಲನೀಡುವ ಕಲಾಪ್ರದರ್ಶನದಲ್ಲೇ ಸಾರ್ಥಕ್ಯ ಇದೆ. ಈ ಸಂದರ್ಭದಲ್ಲಿ ಹಲವೊಮ್ಮೆ ನಾಡಿನಿಂದ ಕಲಾವಿದರನ್ನು ಕರೆಸಿ ಕಾರ್ಯಮಕ್ಕೆ ಹೆಚ್ಚಿನ ಆಕರ್ಷಣೆಯನ್ನು ಪಸಾದಿಸುವ ಕೆಲಸವನ್ನೂ ಕೂಟ ತನ್ನ ಆರ್ಥಿಕ ಬಲದ ಆಧಾರದ ಮೇಲೆ ಹಮ್ಮಿಕೊಳ್ಳುತ್ತದೆ.

ಕರ್ನಾಟಕ ಸರ್ಕಾದಿಂದ ಯಾವುದೇ ಧನಸಹಾಯ ಪಡೆಯದೇ ಸದಸ್ಯತ್ವ ಮತ್ತು ಕ್ರೊಢೀಕರಿಸಿದ ಪ್ರಾಯೋಜಕತ್ವ ಮುಂತಾದುವುಗಳ ಬಲದಿಂದ ವರ್ಷದ ಇಡೀ ಕಾರ್ಯಕ್ರಮ ಸರಣಿಯನ್ನು ಕೈಗೊಳ್ಳುತ್ತದೆ. ಕುವೈತ್‌ ಕನ್ನಡ ಕೂಟ ಕರ್ನಾಟಕ ಸರ್ಕಾರದಿಂದ ಕೋರುವುದಿಷ್ಟೇ, ರಾಜ್ಯೋತ್ಸವ ಸಮಯದಲ್ಲಿ ಕೂಟ ಕೋರುವ ಕಲಾ ತಂಡ ಮತ್ತು ವಿಶೇಷ ಗೌರವಾನ್ವಿತರನ್ನು (ಸಾಹಿತಿಗಳು, ಗಣ್ಯರು, ಕಲಾವಿದರು) ಕುವೈತ್‌ಗೆ ಬಂದು ಕಾರ್ಯಕ್ರಮ ನೀಡಿ ನಾಡಿಗೆ ವಾಪಸಾಗುವ ಎಲ್ಲಾ ಖರ್ಚು ವೆಚ್ಚ ಭರಿಸಿದರೆ ನಮ್ಮ ಕೂಟದ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಸಿರಿಗನ್ನಡಂ ಗೆಲ್ಗೆ- ಜೈ ಕರ್ನಾಟಕ – ಜೈಹಿಂದ್‌.

Advertisement

(ಲೇಖಕರು ವಿಜ್ಞಾನಿ, ಕುವೈತ್‌ ವೈಜ್ಞಾನಿಕ ಸಂಶೋಧನಾ ಸಂಸ್ಥೆ) 

ಡಾ. ಆಜಾದ್‌ ಐಎಸ್‌, ಕುವೈತ್‌ ಕನ್ನಡ ಕೂಟ

Advertisement

Udayavani is now on Telegram. Click here to join our channel and stay updated with the latest news.

Next