Advertisement

ಕನ್ನಡ ಬೆಳವಣಿಗೆ ಮಾಧ್ಯಮದಲ್ಲಿ ಅಡಕ

09:59 AM Oct 28, 2021 | Team Udayavani |

ಕಲಬುರಗಿ: ಕನ್ನಡ ಭಾಷೆ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಆರ್‌. ವೆಂಕಟೇಶ ಕುಮಾರ ಹೇಳಿದರು.

Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾಧ್ಯಮದಲ್ಲಿ ಕನ್ನಡ ಬಳಕೆ ಕುರಿತು ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನತೆ ಹೆಚ್ಚೆಚ್ಚು ಪತ್ರಿಕೆ ಓದುತ್ತಿರುತ್ತಾರೆ. ಹೀಗಾಗಿ ಕನ್ನಡ ಅಭಿವೃದ್ಧಿ ಮಾಧ್ಯಮಗಳಲ್ಲಿಯೇ ಅಡಕವಾಗಿದೆ. ಆದ್ದರಿಂದ ಪತ್ರಕರ್ತರು ಕನ್ನಡ ಭಾಷೆ ಪರಿಪೂರ್ಣವಾಗಿ ಬಲ್ಲವರಾಗಿರಬೇಕು. ಸ್ಥಳೀಯತೆ ಬಿಂಬಿಸುವ ಶಬ್ದಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಕೆಕೆಆರ್‌ ಡಿಬಿಯಿಂದ ಕಾರ್ಯಕ್ರಮ ರೂಪಿಸಲಾಗುವುದು ಎಂದು ಪ್ರಕಟಿಸಿದರು. ಕಲ್ಯಾಣ ಕರ್ನಾಟಕದ ಇತಿಹಾಸ, ಭಾಷೆ ಹಾಗೂ ಸಂಸ್ಕೃತಿ ಉನ್ನತಿಗೆ ಗುಲ್ಬರ್ಗಾ ವಿವಿಯಲ್ಲಿ ಅಧ್ಯಯನ ಪೀಠ ಕಾರ್ಯ ಕೈಗೊಳ್ಳುತ್ತಿದ್ದು, ಇದರಿಂದ ಕನ್ನಡ ಬೆಳವಣಿಗೆ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯ ಕೈಗೊಳ್ಳಬಹುದು. ಅಲ್ಲದೇ ವಿದ್ಯಾರ್ಥಿಗಳು ಸೇರಿದಂತೆ ಜನತೆ ಪ್ರತಿನಿತ್ಯ ಒಂದು ಗಂಟೆಯಾದರೂ ದಿನಪತ್ರಿಕೆಗಳನ್ನು ಓದಿ, ಅಂದಿನ ದಿನದ ಮಾಹಿತಿಯನ್ನು ಅರಿಯಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಜಾಗೃತಿ ಸಮಿತಿ ಸದಸ್ಯರೂ ಆಗಿರುವ ಹಿರಿಯ ಸಾಹಿತಿ ಡಾ| ಸ್ವಾಮಿರಾವ್‌ ಕುಲಕರ್ಣಿ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಕೆಲವು ವಿದ್ಯುನ್ಮಾನಗಳಲ್ಲಿ ಕನ್ನಡ ಭಾಷೆಯ ಸೊಗಡು ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತ ಚಾಮರಾಜ ಸವಡಿ ವಿಷಯ ಮಂಡಿಸಿ, ನಾವು ಬಳಸುವ ಪ್ರತಿ ಶಬ್ದ ಹಾಗೂ ಉದ್ಘಾರವಾಚಕಗಳನ್ನು ಹಲವಾರು ಬಾರಿ ಯೋಚಿಸಿ ಬಳಸಬೇಕು. ಆದರೆ ತಾಂತ್ರಿಕ ಯುಗದಲ್ಲಿ ಅವಸರದಿಂದ ಶಬ್ದಗಳ ಬಳಕೆಯಾಗುತ್ತಿದೆ. ಇದರಿಂದ ಭಾಷೆಯ ಗಟ್ಟಿತನಕ್ಕೆ ಹೊಡೆತ ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅಧ್ಯಯನ ಶೀಲತೆ ಕೊರತೆ ಎಲ್ಲರಲ್ಲೂ ಕಾಡುತ್ತಿದೆ. ಒತ್ತಡದ ಬದುಕಿನಲ್ಲಿ ಇವತ್ತಿನ ಕೆಲಸ ಮುಗಿಯಿತು ಸಾಕು ಎನ್ನುವ ಮನೋಭಾವನೆ ಹೆಚ್ಚುತ್ತಿದೆ. ಇದರಿಂದ ಭಾಷೆ ಬಳಕೆಯಲ್ಲಿ ಅಧ್ಯಯನ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದ ಓದುವಿಕೆಯನ್ನು ಕಡ್ಡಾಯವಾಗಿ ಮೈಗೂಡಿಸಿಕೊಳ್ಳಬೇಕು ಎಂದರು.

ಸಾಹಿತ್ಯ ಹಾಗೂ ಮಾಧ್ಯಮದ ಭಾಷೆ ಬೇರೆ ಬೇರೆಯಾಗಿದೆ. ಕನ್ನಡ ಸರಿಯಾಗಿ ಅರಿತರೆ ಎಲ್ಲ ಭಾಷೆ ಕಲಿಕೆಗೂ ಪೂರಕವಾಗುವುದು. ಹೀಗಾಗಿ ಆಸಕ್ತಿಯಿಂದ ಶಬ್ದ ಬಳಕೆ ಮಾಡಿ ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ಠಾಕೂರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಪ್ರಾಧಿಕಾರದಿಂದ ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದರು.

ಮಾಧ್ಯಮ ಅಕಾಡೆಮಿ ಸದಸ್ಯ ದೇವಿಂದ್ರಪ್ಪ ಕಪನೂರ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಣಮಂತರಾವ ಭೈರಾಮಡಗಿ, ಖಜಾಂಚಿ ರಾಜು ದೇಶಮುಖ ಮುಂತಾದವರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಆವಂಟಿ, ಕಾರ್ಯಕಾರಿ ಸಮಿತಿ ಸದಸ್ಯ ಸಂಗಮನಾಥ ರೇವತಗಾಂವ ನಿರೂಪಿಸಿದರು.

ಇದನ್ನೂ ಓದಿ: ಮದ್ಯ ಅಂಗಡಿ ತೆರವಿಗೆ ಒತ್ತಾಯ

ಭಾಷೆ ಮರೆತರೆ ತಾಯಿ ಮರೆತಂತೆ

ಭಾಷೆ ಅಭಿಮಾನ ಮರೆತರೆ ಸಂಸ್ಕೃತಿ ಹಾಗೂ ತಾಯಿಯನ್ನೇ ಮರೆತಂತೆ ಎಂದು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂಹನದ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್‌ ಹೇಳಿದರು.

ಕಾರ್ಯಾಗಾರದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾಷೆ ಬಗ್ಗೆ ಹೆಮ್ಮೆ ಇರಬೇಕು. ಭಾಷೆ ಸರಿಯಾಗಿ ಕೇಳಬೇಕು. ಸರಿಯಾಗಿ ಮಾತನಾಡಬೇಕು ಎಂದರು.

ಭಾಷೆ ಅಭಿಮಾನ ಬೆಳೆಸಬೇಕು. ಕೇರಳ ಹಾಗೂ ತಮಿಳನಾಡು ರಾಜ್ಯದವರ ಹಾಗೆ ನಾವೂ ಭಾಷೆ ಬಗ್ಗೆ ಅಭಿಮಾನ, ಹೆಮ್ಮೆ ಬೆಳೆಸಿಕೊಳ್ಳಬೇಕು. ತಮ್ಮದು ಮೂಲತಃ ಭಾಷೆ ಬೇರೆಯದಾಗಿದ್ದರೂ ಕನ್ನಡವನ್ನೇ ಮಾತೃಭಾಷೆಯನ್ನಾಗಿ ಮಾಡಿಕೊಂಡಿದ್ದೇನೆ. ಕನ್ನಡ ಅನ್ನ, ನೀರು ಕೊಟ್ಟಿದೆ ಎಂದರು.

ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿ ಡಾ| ಸದಾನಂದ ಪೆರ್ಲಾ ಮಾತನಾಡಿ, ಭಾಷಾ ಜ್ಞಾನ ಹೊಂದಿರಬೇಕು. ಪತ್ರಿಕೋದ್ಯಮದಲ್ಲಿ ಪ್ರಮಾಣಿಕತೆ ಮುಖ್ಯ. ಸಾಮಾಜಿಕ ಕಾಳಜಿ ಅತ್ಯವಶ್ಯಕ ಎಂದು ಹೇಳಿದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ| ಆನಂದ ಸಿದ್ಧಾಮಣಿ ಮಾತನಾಡಿದರು. ಪತ್ರಕರ್ತ ಮಹಾದೇವ ವಡಗಾಂವ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next