Advertisement

ಕನ್ನಡ ಜಾತ್ರೆಯ ಸಂಭ್ರಮ: ಕುಣಿದು ಕುಪ್ಪ ಳಿಸಿದ ಕನ್ನಡಿಗರು ಜನಮನ ಸೆಳೆದ ರೂಪಕಗಳು

05:20 PM Nov 02, 2023 | Team Udayavani |

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕನ್ನಡ ಮನಸ್ಸುಗಳ ಸಂಭ್ರಮ, ಕಿಕ್ಕಿರಿದು ಸೇರಿದ ಕನ್ನಡ
ಹೃದಯಗಳು, ಕನ್ನಡ ಜಾತ್ರೆಗೆ ಉಧೋ ಉಧೋ ಎಂದ ಕನ್ನಡಾಭಿಮಾನಿಗಳು, ಕನ್ನಡದ ತೇರೆಳೆದು ಭುವನೇಶ್ವರಿ ತಾಯಿಗೆ
ನಮೋಸ್ತುತೆ, ನಾಡು-ನುಡಿಯ ವೈಭವಕ್ಕೆ ಸಾಕ್ಷಿಯಾದ ಲಕ್ಷ ಲಕ್ಷ ಬೆಳಗಾವಿಗರು…

Advertisement

ಬುಧವಾರ ಬೆಳ್ಳಗೆಯಿಂದಲೇ ಕರ್ನಾಟಕ ರಾಜ್ಯೋತ್ಸವದಂದು ಕನ್ನಡಿಗರ ಸಂಭ್ರಮಕ್ಕೆ ಪಾರವೇ ಇಲ್ಲ. ಇಡೀ ಬೆಳಗಾವಿ ಕನ್ನಡದ ಜಾತ್ರೆಯಾಗಿ ಮಾರ್ಪಟ್ಟಿದ್ದು, ನಗರದೆಲ್ಲೆಡೆ ಕನ್ನಡ ಹಬ್ಬಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು ಸಾಕ್ಷಿಯಾದರು. ನಗರದ ಕೇಂದ್ರ ಬಿಂದು ರಾಣಿ ಚನ್ನಮ್ಮ ವೃತ್ತದಲ್ಲಿ ಕನ್ನಡಿಗರ ಉತ್ಸಾಹ ಮೇರೆ ಮೀರಿತ್ತು.

ಕೈಯಲ್ಲಿ ಹಳದಿ-ಕೆಂಪು ಧ್ವಜ ಹಿಡಿದುಕೊಂಡು ಕುಣಿದ ಯುವಪಡೆಯ ಉತ್ಸಾಹ-ಸಂಭ್ರಮ ಮುಗಿಲು ಮುಟ್ಟಿತ್ತು. ಕಣ್ಣು ಹಾಯಿಸಿದಷ್ಟೂ ಕಿಕ್ಕಿರಿದು ಸೇರಿದ ಕನ್ನಡಿಗರು, ನಾಡು-ನುಡಿಯ ವೈಭವ ಪಸರಿಸಿಕೊಂಡಿತ್ತು. ಹಳದಿ-ಕೆಂಪು ಧ್ವಜಗಳ ಹಾರಾಟ, ಕನ್ನಡ ಚಿತ್ರಗೀತೆಗಳಿಗೆ ಕುಣಿದು ಕುಪ್ಪಳಿಸುವ ಮೂಲಕ ರಾಜ್ಯೋತ್ಸವದ ವೈಭವದ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು, ಯುವತಿಯರು, ಮಹಿಳೆಯರು, ಹಿರಿಯರು ವೈಭವದ
ಮೆರವಣಿಗೆಯಲ್ಲಿ ಭಾಗಿಯಾದರು. ಯುವ ಜನರಂತೂ ಎದೆ ನಡುಗಿಸುವಂಥ ಡಿ.ಜೆ, ಡಾಲ್ಬಿ ಹಾಡಿಗೆ ಕುಣಿದು ಕುಪ್ಪಳಿಸಿದರು. ದೇಸಿ ವಾದ್ಯ ಮೇಳಗಳಿಗೂ ಯುವಕರು ಹೆಜ್ಜೆ ಹಾಕಿದರು.

ಹಳದಿ-ಕೆಂಪು ಧ್ವಜ ಹಿಡಿದುಕೊಂಡು ಕುಣಿದ ಕನ್ನಡಿಗರ ಸಂಭ್ರಮ-ಉತ್ಸಾಹ ಮೇರೆ ಮೀರಿತ್ತು. ಕನ್ನಡ ಶಲ್ಯ ಹಾರಿಸಿ, ದೊಡ್ಡದಾದ ಧ್ವಜಗಳನ್ನು ತಿರುಗಿಸುತ್ತಿರುವ ದೃಶ್ಯ ಮೈನವಿರೇಳಿಸುವಂತಿತ್ತು. ನಗರದ ಮೂಲೆಮೂಲೆಯಿಂದ, ಹಳ್ಳಿಗಳಿಂದ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಜಮಾಯಿಸಿದ್ದರು. ವಿವಿಧ ಕನ್ನಡ ಸಂಘಟನೆಗಳು ಸ್ತಬ್ಧಚಿತ್ರಗಳೊಂದಿಗೆ ಪಾಲ್ಗೊಂಡಿದ್ದವು. ರಾಜ್ಯದಲ್ಲಿಯೇ ಅದ್ಭುತವಾಗಿ ನಡೆಯುವ ಬೆಳಗಾವಿಯ ಮೆರವಣಿಗೆಯ ವೈಭವ ನೋಡುವುದೇ ಸೊಗಸು.
ಬೆಳಗಾವಿ ಕನ್ನಡಿಗರ ಈ ಸಂಭ್ರಮ ಕಣ್ತುಂಬಿಕೊಳ್ಳಲು ಬೆಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಪಕ್ಕದ ಜಿಲ್ಲೆಯಿಂದಲೂ ಜನ ಬಂದಿದ್ದರು.

ಬೈಕ್‌, ಸೈಕಲ್‌ಗ‌ಳಿಗೆ ಕನ್ನಡದ ಅಲಂಕಾರ ಮೆರವಣಿಗೆಯಲ್ಲಿ ಕೆಲವರು ಸೈಕಲ್‌, ದ್ವಿಚಕ್ರ ವಾಹನಗಳು, ಆಟೋ ರಿಕ್ಷಾಗಳನ್ನು ಸುಂದರವಾಗಿ ಅಲಂಕರಿಸಿದ್ದರು. ಕನ್ನಡ ಬಾವುಟ, ಕನ್ನಡದ ಪೋಸ್ಟರ್‌ಗಳನ್ನು ಅಂಟಿಸಿಕೊಂಡು ಭಾಗಿಯಾಗಿದ್ದರು. ಇನ್ನೂ ಕೆಲವರು ಕನ್ನಡದ ಇತಿಹಾಸ ಸಾರುವ ಮಹಾನ್‌ ಪುರುಷರ, ಪೌರಾಣಿಕ ಪಾತ್ರಗಳ ವೇಷ ಧರಿಸಿ ಗಮನಸೆಳೆದರು. ಕೆಲ ಯುವಕರು ಹೆಲ್ಮೆಟ್‌ಗೆ ಹುಲಿ, ಮಂಗ, ನಾಯಿಯ ಮುಖವಾಡ ಹಾಕಿ ಗಮನಸೆಳೆದರು.

Advertisement

ನಿರೀಕ್ಷೆಗೂ ಮೀರಿ ಲಕ್ಷ ಲಕ್ಷ ಜನ!
ರಾಜ್ಯೋತ್ಸವ ಮೆರವಣಿಗೆ ತಡರಾತ್ರಿವರೆಗೂ ನಡೆದಿದ್ದು, ಮೆರವಣಿಗೆಯಲ್ಲಿ ಪೊಲೀಸರ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಲಕ್ಷ ಲಕ್ಷ ಜನರು ಈ ಬಾರಿಯ ಕನ್ನಡ ಹಬ್ಬದಲ್ಲಿ ಕಂಡು ಬಂದರು. ಈ ಬಾರಿಯ ಮೆರವಣಿಗೆಯಲ್ಲಿ ದಾಖಲೆಯ ಜನ  ಪಾಲ್ಗೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಯಿತು. ನಿರಂತರವಾಗಿ ಆಗಮಿಸುತ್ತಿದ್ದ ಜನಸ್ತೋಮ ಜಿಲ್ಲಾಡಳಿತ ಹಾಗೂ ಪೊಲೀಸರನ್ನು ದಿಗ್ಭ್ರಮೆಗೊಳಿಸಿತು. ಅಲ್ಲಲ್ಲಿ ಸಣ್ಣ ಪುಟ್ಟ ಜಗಳ ಬಿಟ್ಟರೆ ಬಹುತೇಕ ಶಾಂತಿಯುತ ಮೆರವಣಿಗೆ ನಡೆಯಿತು.

ಪಂಪ, ರನ್ನ, ಪೊನ್ನರನ್ನು ನೆನೆದ ಕನ್ನಡಿಗರು
ನಗರದ ವಿವಿಧ ಬಡಾವಣೆ, ಓಣಿಗಳು, ತಾಲೂಕಿನ ಹಳ್ಳಿ ಹಳ್ಳಿಯಿಂದ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನಸೆಳೆದವು. ಕರ್ನಾಟಕದ ಗತವೈಭವ ಸಾರುವ ಸ್ತಬ್ಧಚಿತ್ರಗಳು ಆಕರ್ಷಣೀಯವಾಗಿದ್ದವು. ವೈವಿಧ್ಯಮಯ ಸ್ತಬ್ಧಚಿತ್ರಗಳ ಮೆರವಣಿಗೆ ಕೈ ಬೀಸಿ ಕರೆಯುವಂತಿತ್ತು. ಪಂಪ, ರನ್ನ, ಪೊನ್ನ, ಇಮ್ಮಡಿ ಪುಲಿಕೇಶಿ, ಅಕ್ಕ ಮಹಾದೇವಿ, ವಿಶ್ವಗುರು ಬಸವಣ್ಣ, ಶ್ರೀಕೃಷ್ಣದೇವರಾಯ, ಮೈಸೂರು ಅಂಬಾರಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಪುನೀತ್‌ ರಾಜಕುಮಾರ್‌, ಸಾಲು ಮರದ ತಿಮ್ಮಕ್ಕ, ಯಕ್ಷಗಾನ, ದೆ„ವದ ಕೋಲ ಹೀಗೆ ವಿವಿಧ ರೂಪಕಗಳು ಕಣ್ಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next