Advertisement

ಅಂದಿನ ಮೋಹಕ ನಾಯಕಿ; ಬಿಕಿನಿ ತೊಟ್ಟ ಕನ್ನಡ ಮೊದಲ ನಟಿ ಹರಿಣಿ!

12:54 PM Apr 09, 2020 | Sharanya Alva |

ಕನ್ನಡ ಚಿತ್ರರಂಗದಲ್ಲಿ ಜಗನ್ಮೋಹಿನಿ ಚಿತ್ರದ (1951) ಮೋಹಿನಿ ಪಾತ್ರದಲ್ಲಿನ ತಮ್ಮ ಮಾದಕ ಅಭಿನಯದಿಂದ ಚಿತ್ರರಸಿಕರನ್ನು ಹುಚ್ಚೆಬಿಸಿದ್ದ ನಟಿ ಹರಿಣಿ. ಹರಿಣಿ ಉಡುಪಿಯ ಸಂಪ್ರದಾಯಸ್ಥ ಕುಟುಂಬವಾದ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯ ಮತ್ತು ಭಾರತಿ ದಂಪತಿ ನಾಲ್ಕನೆ ಮಗುವಾಗಿ ಜನಿಸಿದ್ದರು.

Advertisement

1951ರಲ್ಲಿ ತೆರೆಕಂಡಿದ್ದ ಶಂಕರ್ ಸಿಂಗ್ ನಿರ್ದೇಶನದ ಜಗನ್ಮೋಹಿನಿ ಸಿನಿಮಾವನ್ನು ಆಗಿನ ಸಿನಿ ಪ್ರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಯಾಕೆಂದರೆ ಆ ಕಾಲಘಟ್ಟದಲ್ಲಿ ಜಗನ್ಮೋಹಿನಿ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅದಕ್ಕೆ ಕಾರಣ ಹರಿಣಿ!

ಈ ಸಿನಿಮಾ ಬಿಡುಗಡೆಯಾದ ಬಳಿಕ ಎಲ್ಲಾ ದಿನಗಳಲ್ಲಿ ಶತದಿನೋತ್ಸವ ಆಚರಿಸಿ ಇತಿಹಾಸ ಸೃಷ್ಟಿಸಿತ್ತು. ಜಗನ್ಮೋಹಿನಿ ಚಿತ್ರದಲ್ಲಿ ನಟಿಸುವ ಮೂಲಕ ಹರಿಣಿ ನಾಯಕಿಯಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದರು.

ಬಿಕಿನಿ ತೊಟ್ಟ ಮೊಟ್ಟ ಮೊದಲ ನಟಿ ಹರಿಣಿ!

Advertisement

ಜಗನ್ಮೋಹಿನಿ ಸಿನಿಮಾ ದಾವಣಗೆರೆಯಲ್ಲಿ ನಿರಂತರವಾಗಿ 36ವಾರಗಳ ಕಾಲ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತ್ತು. ಹರಿಣಿ ತನ್ನ ಸ್ನಿಗ್ಧ ಮತ್ತು ಮಾದಕ ನಟನೆಯಿಂದ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದರು. ಚಿತ್ರದ ಸನ್ನಿವೇಶವೊಂದರಲ್ಲಿ ಹರಿಣಿ ಈಜುಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಈಜುಡುಗೆ ತೊಟ್ಟ ಮೊದಲ ಕನ್ನಡ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಜನ ಹರಿಣಿಯವರನ್ನು ನೋಡುವ ಸಲುವಾಗಿಯೇ ಟಿಕೆಟ್ ಖರೀದಿಸಲು ಹಣವಿಲ್ಲದೆ ತಮ್ಮ ಹಸು, ಎಮ್ಮೆಗಳನ್ನು ಮಾರಿದ್ದರಂತೆ, ಅಷ್ಟೇ ಅಲ್ಲ ಒಡವೆಗಳನ್ನು ಗಿರವಿ ಇಟ್ಟು ಸಿನಿಮಾ ನೋಡಿದ್ದರಂತೆ. ಕೆಲವರು ಈ ಸಿನಿಮಾವನ್ನು 25, 30 ಬಾರಿ ವೀಕ್ಷಿಸಿದ್ದರಂತೆ. ಆದರೆ ವಿಪರ್ಯಾಸ ಏನೆಂದರೆ ಈ ಸಿನಿಮಾ ನೋಡುವ ಅವಕಾಶ ಮಾತ್ರ ನಾಯಕ ನಟಿಗೆ ಕೊಟ್ಟಿಲ್ಲವಾಗಿತ್ತಂತೆ..ಅದಕ್ಕೆ ಕಾರಣ ಹರಿಣಿ(14ವರ್ಷ) ಅಪ್ರಾಪ್ತ ವಯಸ್ಕಳಾಗಿದ್ದರಿಂದ!

ಜಗನ್ಮೋಹಿನಿ ಪಾತ್ರದಿಂದಾಗಿ ಹರಿಣಿಯವರು ಬಾಲಿವುಡ್ ನ ಶರ್ಮಿಳಾ ಟ್ಯಾಗೋರ್ ರೀತಿ ಎಲ್ಲರ ಗಮನ ಸೆಳೆದಿದ್ದರು. ಆಕೆಯ ಸಿಗ್ಧ ಸೌಂದರ್ಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದರು. ಇದಾದ ಬಳಿಕ ಹರಿಣಿಯವರಿಗೆ ಸ್ಟಾರ್ ಪಟ್ಟ ದಕ್ಕಿತ್ತು. 1960ರ ದಶಕದಲ್ಲಿ ತೆರೆಕಂಡಿದ್ದ ನಂದಾದೀಪಾ ಹಾಗೂ ಮಂಗಲ ಮುಹೂರ್ತ ಸಿನಿಮಾದಲ್ಲಿನ ನಟನೆಗಾಗಿ ಹರಿಣಿಯವರು ರಾಷ್ಟ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಚಿತ್ರವಾದ ನಾಂದಿಯಲ್ಲಿ ಹರಿಣಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದ ಮಹೋನ್ನತ ಚಿತ್ರ.

ಹರಿಣಿಯವರು 1937ರಲ್ಲಿ ಜನಿಸಿದ್ದರು. ಇವರ ತಂದೆ ಪಣಿಯಾಣಿ ಶ್ರೀನಿವಾಸ ಉಪಾಧ್ಯಾಯರು ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಉಡುಪಿಯಲ್ಲಿ ಉದ್ಯಮ ತೀವ್ರ ನಷ್ಟ ಅನುಭವಿಸಿದ್ದರಿಂದ ಕುಟುಂಬ ಉಡುಪಿಯಿಂದ ತಮಿಳುನಾಡಿನ ಮಧುರೆಗೆ ಹೋಗಿ ನೆಲೆಸಬೇಕಾಯಿತು. ಆಗ ಹರಿಣಿಯವರಿಗೆ ಐದು ವರ್ಷ. ಮಧುರೆಯ ರಾಯಲ್ ಟಾಕೀಸ್ ಸಂಸ್ಥೆ ತಯಾರಿಸಿದ ಸುಂದರರಾವ್ ನಾಡಕರ್ಣಿ ನಿರ್ದೇಶನದ ಹರಿದಾಸ್(1944) ಎಂಬ ತಮಿಳು ಚಿತ್ರದಲ್ಲಿ ಬಾಲಕೃಷ್ಣನ ಪಾತ್ರವನ್ನು ನಿರ್ವಹಿಸುವ ಮೂಲಕ ಬೆಳ್ಳಿ ತೆರೆಯನ್ನು ಪ್ರವೇಶಿಸಿದ ಹರಿಣಿ ಮುರುಗನ್ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. 1949ರಲ್ಲಿ ಉತ್ತಮ ಅವಕಾಶದ ನಿರೀಕ್ಷೆಯಿಂದ ಹರಿಣಿಯವರ ಕುಟುಂಬ ಮಧುರೆಯಿಂದ ಮದ್ರಾಸ್ ಗೆ ಬಂದು ನೆಲೆಸಿತ್ತು. ತದನಂತರ ಪುಣ್ಯವತಿ ಎಂಬ ತಮಿಳು ಸಿನಿಮಾದಲ್ಲಿ ಪೂರ್ಣಪ್ರಮಾಣದಲ್ಲಿ ಹೀರೋಯಿನ್ ಆಗಿ ಹರಿಣಿ ಅಭಿನಯಿಸಿದ್ದರು.

ಕನ್ನಡದಲ್ಲೇ ಉಳಿದುಕೊಂಡ ನಟಿ:

ಬಾಲನಟಿಯಾಗಿ ಹೊರತುಪಡಿಸಿದರೆ ಹರಿಣಿಯವರು 1951 ಜಗನ್ಮೋಹಿನಿ ಚಿತ್ರದ ಬಳಿಕ ಸ್ಟಾರ್ ನಟಿ ಪಟ್ಟಕ್ಕೇರಿದ್ದರೂ ಕೂಡಾ ದಕ್ಷಿಣ ಭಾರತದ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲಿಲ್ಲ. ಕೇವಲ ಕನ್ನಡ ಸಿನಿಮಾ ರಂಗದಲ್ಲೇ ಉಳಿದುಕೊಂಡರು. ತಂದೆಯ ಕಟ್ಟುನಿಟ್ಟಿನ ನಿಲುವಿನಿಂದಾಗಿ ಹರಿಣಿಯವರು ತಮ್ಮ ಪಾತ್ರವನ್ನು ಕೂಡಾ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೂ ಹರಿಣಿಯವರು ನಟಿಸಿದ 30 ಚಿತ್ರಗಳೂ ಅತ್ಯುತ್ತಮವಾಗಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ.

1968ರಲ್ಲಿ ತೆರೆ ಕಂಡಿದ್ದ ಸತಿ ಸುಕನ್ಯಾ ಸಿನಿಮಾ ಚಿತ್ರ ರಸಿಕರ ಮನಗೆದ್ದಿದ್ದತ್ತು. ಇದೇ ಹರಿಣಿಯವರು ಕೊನೆಯ ಚಿತ್ರವಾಯ್ತು. ಸಾಕಷ್ಟು ಅವಕಾಶಗಳು ಒದಗಿ ಬಂದರೂ ಸಹ ಹರಿಣಿಯವರು ನಟನೆಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು.

ನಟಿಯಾಗಿ ನಿವೃತ್ತಿ ಹೊಂದಿದ್ದ ಮೇಲೆ ಹರಿಣಿಯವರು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದರು. ವಿಜಯ ಭಾರತಿ ಸಂಸ್ಥೆಯಿಂದ ಪ್ರೇಮಕ್ಕೂ ಪರ್ಮಿಟ್ಟೆ(1967), ನಮ್ಮ ಮಕ್ಕಳು(1969), ಸೀತಾ (1970), ನಾ ಮೆಚ್ಚಿದ ಹುಡುಗ(1979), ಸೀತೆಯಲ್ಲ ಸಾವಿತ್ರಿ (19730 ಹೀಗೆ ಹಲವು ಸದಭಿರುಚಿಯ ಸಿನಿಮಾಗಳನ್ನು ತಯಾರಿಸಿದ್ದರು. ನಮ್ಮ ಮಕ್ಕಳು ಸಿನಿಮಾಕ್ಕೆ ಕನ್ನಡ ಚಿತ್ರ ಫಿಲಂಫೇರ್ ಪ್ರಶಸ್ತಿಯೂ ಲಭಿಸಿತ್ತು. ಈ ಮೂಲಕ ಫಿಲಂಫೇರ್ ಪ್ರಶಸ್ತಿ ಪಡೆದ ಮೊದಲ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1972ರಲ್ಲಿ ವಿವಾಹ, ದುಬೈಯಲ್ಲಿ ವಾಸ:

1972ರಲ್ಲಿ ಹರಿಣಿಯವರು ಇಸ್ರೋ ಸಂಸ್ಥೆಯ ವಿಜ್ಞಾನಿ ಬಿಎಸ್ ರಾವ್ ಅವರ ಕೈಹಿಡಿಯುವ ಮೂಲಕ ಸಪ್ತಪದಿ ತುಳಿದಿದ್ದರು. ಬಳಿಕ 12 ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ವಾಸವಾಗಿದ್ದರು. ಈಗ ಪತಿ ರಾವ್ ಮತ್ತು ಪುತ್ರ ನಿಹಾರ್ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ವಾದಿರಾಜ್ ಹರಿಣಿಯವರ ಅಣ್ಣ, ಅವರು ಸಿನಿಮಾ ನಿರ್ಮಾಣದ ಕಾರ್ಯವನ್ನು ಮುಂದುವರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next