Advertisement

ಸ್ನೇಹಕ್ಕೆ ತಲೆಬಾಗುವ ವ್ಯಕ್ತಿತ್ವ

06:00 AM Nov 30, 2018 | |

ಅಂಬರೀಶನನ್ನ ಮೊದಲು ನೋಡಿದ ಸಂದರ್ಭ ಸರಿಯಾಗಿ ನೆನಪಿಲ್ಲ. ಆದ್ರೆ ಆರಂಭದ ದಿನಗಳಲ್ಲಿ ಅವನನ್ನು ನೋಡಿದ್ದು ಮೈಸೂರಿನಲ್ಲಿ ಅನ್ನೋದು ಚೆನ್ನಾಗಿ ನೆನಪಿದೆ. ಆಗಿನ್ನೂ ಆತನಿಗೆ ಹದಿನೆಂಟು-ಇಪ್ಪತ್ತು ವರ್ಷ ವಯಸ್ಸಿರಬಹುದು. ಮೈಸೂರಿನ ಸರಸ್ವತಿಪುರಂನಲ್ಲಿ ಅವರ ಮನೆಯಿತ್ತು. ನನಗೂ ಆಗ ಅಲ್ಲಿ ಹೆಚ್ಚಿನ ಓಡಾಟ ಇದ್ದಿದ್ದರಿಂದ, ಯಾವಾಗಲೂ ಒಂದಷ್ಟು ಸ್ನೇಹಿತರ ಜೊತೆಗೆ ಓಡಾಡಿಕೊಂಡಿದ್ದ ಈ ಹುಡುಗನನ್ನು ಆಗಾಗ್ಗೆ ನೋಡ್ತಿದ್ದೆ. ರಾಜೇಂದ್ರ ಸಿಂಗ್‌ ಬಾಬು ತಮ್ಮ ಸಂಗ್ರಾಮ್‌ ಸಿಂಗ್‌ಗೆ ಅವನು ಆಪ್ತ ಸ್ನೇಹಿತನಾಗಿದ್ದ. ಒಮ್ಮೆ “ನಾಗರಹಾವು’ ಪಾತ್ರವೊಂದಕ್ಕೆ ಹುಡುಕಾಟ ನಡೆಸುತ್ತಿದ್ದಾಗ ಸಂಗ್ರಾಮ್‌ ಸಿಂಗ್‌ ಮೂಲಕ ಈ ಹುಡುಗ ಪರಿಚಯವಾದ. ಅದರಂತೆ ಪುಟ್ಟಣ್ಣ ಕಣಗಾಲ್‌ ಈ ಹುಡುಗನನ್ನು ನೋಡಿ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು. ಆದರೆ ಯಾರಿಗೂ ಕ್ಯಾರೆ ಅನ್ನದ ಆ ಹುಡುಗ‌, ಪುಟ್ಟಣ ಅವರನ್ನು ಕಂಡ್ರೆ ಮಾತ್ರ ಹೆದರುತ್ತಿದ್ದ. ಪುಟ್ಟಣ್ಣ ಅವರಿಗೂ ಕೂಡ ಅವನ ಮೇಲೆ ಅದೇನೊ, ಅತಿಯಾದ ಪ್ರೀತಿ-ವಿಶ್ವಾಸ. ಗದರಿಸುತ್ತಲೇ ಅವನಿಂದ ಕೆಲಸ ತೆಗೆಸುತ್ತಿದ್ದರು. ಬಹುಶಃ ಹಾಗಾಗಿಯೇ ಇರಬೇಕೋ, ಏನೋ.., “ಶುಭ ಮಂಗಳ’, “ಬಿಳಿ ಹೆಂಡ್ತಿ’, “ಪಡುವಾರಳ್ಳಿ ಪಾಂಡವರು’, “ರಂಗನಾಯಕಿ’ ಹೀಗೆ ಪುಟ್ಟಣ್ಣ ಅವರ ಅತಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡ. ಆನಂತರ ಅಮರನಾಥ ಎಂಬ ಹುಡುಗ ಅಂಬರೀಶ್‌ ಆಗಿದ್ದು, ದೊಡ್ಡ ಸ್ಟಾರ್‌ ಅಗಿದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ತೀರಾ ಹತ್ತಿರದಿಂದ ಗಮನಿಸಿದಂತೆ, ಬಲ್ಲಂತೆ ಚಿತ್ರರಂಗ ಮತ್ತು ರಾಜಕೀಯ ಎರಡೂ ಕೂಡ ಅವನಿಗೆ ಬಯಸದೇ ಬಂದ ಸೌಭಾಗ್ಯ. ಎರಡರ ಬಗ್ಗೆಯೂ ಆರಂಭದಲ್ಲಿ ಅಷ್ಟಾಗಿ ಆಸಕ್ತಿ ಇರದಿದ್ದರೂ, ಎರಡೂ ಕ್ಷೇತ್ರಗಳು ಅವನನ್ನು ಆದರಿಸಿ ಅಪ್ಪಿಕೊಂಡವು. 

Advertisement

ಆಗ ಹಿಂದಿಯಲ್ಲಿ ಶತ್ರುಘ್ನ ಸಿನ್ಹಾ ದೊಡ್ಡ ಸ್ಟಾರ್‌ ಆಗಿದ್ದರು. “ನಾಗರಹಾವು’ ಸಿನಿಮಾ ರಿಲೀಸ್‌ ಆದ್ಮೇಲೆ ಎಲ್ಲರೂ ಅಂಬಿಯನ್ನು ನೋಡಿ ಇವನು ನೋಡೋಕೆ ಥೇಟ್‌ ಶತ್ರುಘ್ನ ಸಿನ್ಹಾ ಥರ ಕಾಣಾ¤ನೆ. ಅನೇಕರು ಇವನನ್ನು ನೋಡಿ ಕನ್ನಡದ ಶತ್ರುಘ್ನ ಸಿನ್ಹಾ ಅಂತ ಕರೆಯುತ್ತಿದ್ದರು. ಅದೇ ಅಂಬರೀಶ್‌ ಕೆಲವೇ ವರ್ಷಗಳಲ್ಲಿ ಶತ್ರುಘ್ನ ಸಿನ್ಹಾನಿಗೂ ಆತ್ಮೀಯ ಗೆಳೆಯನಾಗಿಬಿಟ್ಟ. ಅದು ಅವನ ಸ್ನೇಹಕ್ಕಿದ್ದ ಶಕ್ತಿ. ಅವನಿಗೆ ಅಪರಿಚಿತರು ಅಂತಾನೇ ಇರುತ್ತಿರಲಿಲ್ಲ. ಯಾರೇ ಹೊಸಬರು ಕಂಡ್ರೂ ಅವರನ್ನ ತನ್ನ ಸ್ನೇಹದ ಬಳಗಕ್ಕೆ ಸೇರಿಸಿಕೊಳ್ಳುತ್ತಿದ್ದ. ಯಾರಿಗೂ ತಾರತಮ್ಯ ಮಾಡುತ್ತಿರಲಿಲ್ಲ. ಅದರಲ್ಲೂ ತಾನೊಬ್ಬನೇ ಬೆಳೆಯಬೇಕು, ತನ್ನಿಂದಾನೇ ಎಲ್ಲ ನಡೆಯಬೇಕು ಎಂಬ ಯಾವ ಹಮ್ಮು, ಅಸೂಯೆ ನಾನು ಅವನಲ್ಲಿ ಕಂಡಿಲ್ಲ. ನೋಡೋರಿಗೆ ಒರಟು ಮಾತು ಅಂತ ಅನಿಸಿದ್ರೂ, ಜೊತೆಗೆ ಸ್ವಲ್ಪ ಹೊತ್ತು ಇದ್ದವರಿಗೆ ಅವನ ಮನಸ್ಸು ಏನೆಂದು ಅರ್ಥವಾಗ್ತಿತ್ತು. ಅವನಿದ್ದ ಕಡೆ ಒಂಥರಾ ಲವಲವಿಕೆ ಇರುತ್ತಿತ್ತು. 

ಶೂಟಿಂಗ್‌ ಮೂರೇ ದಿನ ಇರಲಿ, ತನ್ನ ಸ್ನೇಹಿತರು ಅಲ್ಲಿದ್ದಾರೆ ಅಂದ್ರೆ ಹದಿನೈದು ದಿನವಾದ್ರೂ ಅಲ್ಲೇ ಇರುತ್ತಿದ್ದ. ಮೊದಲಿನಿಂದಲೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ, ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ, ಹುಡುಗಾಟದ ಸ್ವಭಾವ ಅವನದ್ದು. ತನಗೆ ಇಷ್ಟವಾದವರು ಸಿನಿಮಾ ಮಾಡ್ತಿದ್ದಾರೆ ಅಂದ್ರೆ, ಪಾತ್ರ ದೊಡ್ಡದಿರಲಿ, ಚಿಕ್ಕದಿರಲಿ ಅದ್ಯಾವುದನ್ನೂ ನೋಡದೆ ಆ್ಯಕ್ಟ್ ಮಾಡ್ತಿದ್ದ. ತನಗೆ ಸರಿ ಅನಿಸಿದ್ದನ್ನು ಯಾರ ಮುಲಾಜಿಗೂ ಒಳಗಾಗದೇ ಮಾಡುತ್ತಿದ್ದ. ಆದ್ರೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ. 

ಎಷ್ಟೋ ದಿನ ಶೂಟಿಂಗ್‌ ವೇಳೆ ಇಬ್ಬರೂ ಒಟ್ಟಿಗೆ ಮಲಗುತ್ತಿದ್ದೆವು. “ಬೆಳಿಗ್ಗೆ ಬೇಗ ಎಬ್ಬಿಸಿ ಶಿವರಾಮಣ್ಣ’ ಅಂದೊRಂಡು ಮಲಗೋನು. ಬೆಳಿಗ್ಗೆ ಮಾತ್ರ ಎಷ್ಟು ಎಬ್ಬಿಸಿದ್ರೂ ಏಳುತ್ತಿರಲಿಲ್ಲ. ಆಮೇಲೆ ಅವಸರ ಅವಸರವಾಗಿಯೇ ರೆಡಿಯಾಗಿ ಶೂಟಿಂಗ್‌ಗೆ ಹೋಗೋನು. ಅವನು ಕೊಟ್ಟ ಸಮಯದೊಳಗೆ, ಅವನ ಮೂಡ್‌ ಬದಲಾಗುವುದರೊಳಗೆ ಶೂಟಿಂಗ್‌ ಮಾಡಿ ಮುಗಿಸಿದ್ರೆ ಬಚಾವ್‌. ಇಲ್ಲಾಂದ್ರೆ ಮತ್ತಿನ್ಯಾರೋ ಸ್ನೇಹಿತ ಜೊತೆಗೆ ಇನ್ನೆಲ್ಲೋ ಹೋಗಿರ್ತಿದ್ದ. ಅವನನ್ನು ಹಿಡಿದು ಕೂರಿಸೋದೆ ಕಷ್ಟ. ಅವನು ಸ್ನೇಹಕ್ಕೆ ಬಿಟ್ಟರೆ, ಮತ್ಯಾವುದಕ್ಕೂ ಸಿಗುತ್ತಿರಲಿಲ್ಲ. ಇನ್ನು ಕೊಡುವ ವಿಚಾರದಲ್ಲಿ, ಆತಿಥ್ಯದಲ್ಲಿ  ಅವನು ಎತ್ತಿದ ಕೈ. ಎಲ್ಲರೂ ಬೇಕು ಎನ್ನುವವನು ಅಂಬರೀಶ್‌, ಎಲ್ಲರಿಗೂ ಬೇಕು ಎನ್ನುವವನೂ ಅಂಬರೀಶ್‌. ಒಟ್ಟಾರೆ ಹೇಳಬೇಕು ಅಂದ್ರೆ, ಚಿತ್ರರಂಗ ರಾಜಕೀಯ ಇದೆಲ್ಲವನ್ನು ಬದಿಗಿಟ್ಟು ಹೇಳುವುದಾದರೆ, ಅವನೊಬ್ಬ ವಿಶೇಷ ವ್ಯಕ್ತಿತ್ವದ ವ್ಯಕ್ತಿ. ಅಂಥಹವರು ಎಲ್ಲಾ ಕಡೆ ಸಿಗುವುದು ಬಹಳ ಅಪರೂಪ. 

ಒಮ್ಮೆ ಅಂಬರೀಶ್‌ ರಾಜಕೀಯಕ್ಕೆ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೇ ವೇಳೆ ಎದುರಾದ ಅಂಬಿಗೆ, “ಏನಪ್ಪಾ ರಾಜಕೀಯ ಸೇರುತ್ತಿದ್ದಿಯಾ ಅಂತ ಸುದ್ದಿ ಹರಿದಾಡ್ತಿದೆ’ ಅಂತ ಕೇಳಿದೆ. ಅದಕ್ಕೆ, ಹೌದು ಪಾಲಿಟಿಕ್ಸ್‌ಗೆ ಹೋಗ್ತಿದ್ದೀನಿ. ಎಲ್ಲಾ ವ್ಯವಸ್ಥೆ ಮಾಡ್ಕೊಂಡಿದ್ದೀನಿ. ನೀವು ಬಂದ್ಬಿಡಿ. ಒಟ್ಟಿಗೆ ಅಲ್ಲೇ ಏನಾದ್ರೂ ಮಾಡೋಣ. ಏನಂತೀರಾ..? ಎಂದು ನನಗೇ ಮರು ಪ್ರಶ್ನೆ ಹಾಕಿದ್ದ. 

Advertisement

ಎಷ್ಟೋ ದಿನ ಶೂಟಿಂಗ್‌ ವೇಳೆ ಇಬ್ಬರೂ ಒಟ್ಟಿಗೆ ಮಲಗುತ್ತಿದ್ದೆವು. “ಬೆಳಿಗ್ಗೆ ಬೇಗ ಎಬ್ಬಿಸಿ ಶಿವರಾಮಣ್ಣ’ ಅಂದ್ಕೊಂಡು ಮಲಗೋನು. ಬೆಳಿಗ್ಗೆ ಮಾತ್ರ ಎಷ್ಟು ಎಬ್ಬಿಸಿದ್ರೂ ಏಳುತ್ತಿರಲಿಲ್ಲ. ಆಮೇಲೆ ಅವಸರ ಅವಸರವಾಗಿಯೇ ರೆಡಿಯಾಗಿ ಶೂಟಿಂಗ್‌ಗೆ ಹೋಗೋನು…

ಶಿವರಾಮ್‌ ಹಿರಿಯ ನಟ

ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next