Advertisement

ಕಾಂಞಂಗಾಡು-ಕಾಣಿಯೂರು ರೈಲು ಹಳಿ ಯೋಜನೆ ಅನಿಶ್ಚಿತ

06:10 AM May 15, 2018 | |

ಕಾಸರಗೋಡು: ಬಹುನಿರೀಕ್ಷಿತ ಮಹತ್ವಾಕಾಂಕ್ಷೆಯ ಕಾಂಞಂಗಾಡು – ಕಾಣಿಯೂರು ರೈಲು ಹಳಿ ಸಂಬಂಧಿಸಿ ಅನುದಾನ ನೀಡುವುದಾಗಿ ತಿಳಿಸುವ ಒಪ್ಪಿಗೆ ಪತ್ರವನ್ನು  ಇದುವರೆಗೆ ಕೇರಳ ಸರಕಾರ ಕೊಡದೆ ಸತಾಯಿಸುತ್ತಿದೆ ಎಂದು ವ್ಯಾಪಕ ಆರೋಪ ಕೇಳಿ ಬಂದಿದೆ.

Advertisement

ಕೇರಳ ಸರಕಾರದ ಅನುಮತಿ ಪತ್ರ ಸಿಗದಿರುವುದರಿಂದ ಮಹತ್ವಾಕಾಂಕ್ಷೆಯ ಕಾಂಞಂಗಾಡ್‌-ಕಾಣಿಯೂರು ರೈಲು ಹಳಿ ಕಡತದಲ್ಲೇ ಉಳಿದುಕೊಳ್ಳಲು ಕಾರಣವಾಗಿದೆ ಎಂದು ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್‌ ಹೇಳಿದ್ದಾರೆ. ಅವರು ಐಎನ್‌ಟಿಯುಸಿ ನೇತಾರರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಈ ಯೋಜನೆಯ ನನೆಗುದಿಗೆ ಬೀಳಲು ರಾಜ್ಯ ಸರಕಾರದ ಅಸಡ್ಡೆ ಕಾರಣವೆಂದಿದ್ದಾರೆ.

2015ರ ಮಾರ್ಚ್‌ 31ರಂದು ಈ ಕುರಿತು ಅಂತಿಮ ವರದಿ ಸಲ್ಲಿಸಲಾಗಿತ್ತು. ಈ ಬೃಹತ್‌ ಯೋಜನೆಗೆ ಸಂಬಂಧಿಸಿ 1300 ಕೋಟಿ ರೂ. ಒಟ್ಟು  ವೆಚ್ಚ  ಅಂದಾಜಿಸಲಾಗಿದೆ. ಇದರಲ್ಲಿ  ಅರ್ಧದಷ್ಟನ್ನು  ಕೇಂದ್ರ ಸರಕಾರ ಹಾಗೂ ಉಳಿದ ಅರ್ಧ ಭಾಗವನ್ನು  ಕೇರಳ ಮತ್ತು  ಕರ್ನಾಟಕ ಸರಕಾರಗಳು ನೀಡಬೇಕಾಗಿದೆ.

ಕೇರಳ ರಾಜ್ಯ ಸರಕಾರದ ಒಪ್ಪಿಗೆ ಪತ್ರ ದೊರಕಿ ರೈಲ್ವೇ ಮಂಡಳಿಯಿಂದ ಅಂಗೀಕಾರವಾದರೆ ಕಾಂಞಂಗಾಡು – ಕಾಣಿಯೂರು ರೈಲು ಹಳಿಯ ಲೊಕೇಶನ್‌ ಸಮೀಕ್ಷೆ  ಶೀಘ್ರದಲ್ಲೇ ಆರಂಭಗೊಳ್ಳಬಹುದು. ಇದರಿಂದ ರೈಲು ಮಾರ್ಗ ಹಾದು ಹೋಗುವ ಭಾಗವನ್ನು  ನಿಖರವಾಗಿ ಗುರುತಿಸಬಹುದಾಗಿದೆ. ಈ ಸರ್ವೇ ಕಾಣಿಯೂರು ಭಾಗಕ್ಕೆ ತಲುಪುವಾಗ ಕರ್ನಾಟಕದ ಒಪ್ಪಿಗೆ ಪತ್ರ ಲಭಿಸಲಿದೆ ಎಂದು ರೈಲ್ವೇಯ ಉನ್ನತಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರದ ಕೇರಳ ಭಾಗದಿಂದ ಆರು ಗಂಟೆಯೊಳಗೆ ಬೆಂಗಳೂರಿಗೆ ತಲುಪಲು ಸಾಧ್ಯವಾಗುವ ರೈಲು  ಮಾರ್ಗ ಇದಾಗಿದೆ. ಅಲ್ಲದೆ ಈ ಯೋಜನೆಯು ವಿದ್ಯುತ್‌ ಇಲಾಖೆಯ ಅಧಿಕಾರಿಯಾಗಿದ್ದ  ಜೋಸ್‌ ಕೊಚ್ಚಿಕುನ್ನೇಲ್‌ ಅವರ ಆಶಯವಾಗಿತ್ತು. ರೈಲು ಮಾರ್ಗದ ದೂರ 90 ಕಿಲೋ ಮೀಟರ್‌ ಆಗಿದ್ದು, ಉಭಯ ರಾಜ್ಯಗಳ ಗಡಿ ಪ್ರದೇಶಗಳನ್ನು ಹಾದುಹೋಗಲಿದೆ.

Advertisement

ಕಾಂಞಂಗಾಡಿನಿಂದ ಪಾಣತ್ತೂರಿಗೆ 41 ಕಿಲೋ ಮೀಟರ್‌ ದೂರವಿದೆ. ಕೇರಳ ಮತ್ತು  ಕರ್ನಾಟಕ ಗಡಿ ಭಾಗದಿಂದ ಕಾಣಿಯೂರು ವರೆಗೆ 49 ಕಿಲೋ ಮೀಟರ್‌ ಅಂದರೆ ಕಾಣಿಯೂರು ಸಮೀಪದ ಎಡಮಂಗಲ ಎಂಬ ಸ್ಥಳದ ತನಕ ಈ ರೈಲು ಮಾರ್ಗವನ್ನು  ಅಧ್ಯಯನ ನಡೆಸಲಾಗಿದೆ.ಕಾಂಞಂಗಾಡಿನಿಂದ ಪಾಣತ್ತೂರಿಗೆ ಕೇವಲ 20 ನಿಮಿಷಗಳಲ್ಲಿ  ತಲುಪಲು ಸಾಧ್ಯವಿದೆ. ಬಳಿಕ 20 ನಿಮಿಷಗಳಲ್ಲಿ  ಕಾಣಿಯೂರಿಗೆ ತಲುಪಿ ಅಲ್ಲಿಂದ ಸುಳ್ಯಕ್ಕೆ ತೆರಳಬಹುದಾಗಿದೆ.

ನಂತರ ಎರಡು ಗಂಟೆಗಳ ಕಾಲ ಪ್ರಯಾಣ ನಡೆಸಿದರೆ ಹಾಸನಕ್ಕೆ ಹಾಗೂ ಅಲ್ಲಿಂದ ಇತ್ತೀಚೆಗೆ ಕಾರ್ಯಾರಂಭಗೊಂಡ ಶ್ರವಣಬೆಳಗೊಳ ಮಾರ್ಗದ ಮೂಲಕ ಸಂಚರಿಸಿದರೆ ಆರು ಗಂಟೆಗಳೊಳಗೆ ಬೆಂಗಳೂರಿಗೆ ತಲುಪಬಹುದಾಗಿದೆ.ಕೇರಳ ಮತ್ತು  ಕರ್ನಾಟಕ ರಾಜ್ಯಗಳು ಒಪ್ಪಿಗೆ ಪತ್ರ ನೀಡಿದ ಬಳಿಕ ರೈಲು ಮಾರ್ಗದ ಅಂತಿಮ ರೂಪುರೇಷೆ ದಕ್ಷಿಣ ರೈಲ್ವೇಯಿಂದ ರೈಲ್ವೇ ಮಂಡಳಿಗೆ ತಲುಪಬೇಕಾಗಿದೆ. ಮಂಡಳಿಯು ಅಂಗೀಕರಿಸಿದ ರೈಲ್ವೇಯ ಪಿನ್‌ಬುಕ್‌ನಲ್ಲಿ  ಈ ಯೋಜನೆಯು ಸ್ಥಾನ ಪಡೆಯಬೇಕು.

ಪ್ರದೇಶ ಸರ್ವೇ ಮುಂತಾದ ಯೋಜನೆ ಯನ್ನು  ತಯಾರಿಸಲು ರೈಲ್ವೇ ಸಚಿವಾಲಯ ಹಸಿರು ನಿಶಾನೆ ತೋರಿಸ ಬೇಕು. ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಬೇಕು. ಸ್ವಾಧೀನಪಡಿಸುವ ಭೂಮಿಯ ಮಾಲಕರಲ್ಲಿ ತಿಳಿವಳಿಕೆ ಮೂಡಿಸಲು ಪ್ರತ್ಯೇಕ ಕ್ರಿಯಾಪಡೆಯನ್ನು  ರಚಿಸಬೇಕು. ಅಲ್ಲದೆ ಯೋಜನೆಗೆ ಸಂಬಂಧಿಸಿ ಅಂತಿಮ ಸಿದ್ಧತೆಗಳನ್ನು  ಮಾಡಿಕೊಳ್ಳಲಾಗುವುದು. ನಂತರವಷ್ಟೇ ಕಾಮಗಾರಿ ಆರಂಭವಾಗಲಿದೆ.

ಕೇರಳ ಸರಕಾರವು 325 ಕೋಟಿ ರೂ. ನೀಡಬೇಕಿದೆ. ಈ ಮೊತ್ತವನ್ನು  ಕೊಡುವುದಾಗಿ ಸೂಚಿಸುವ ಒಪ್ಪಿಗೆಪತ್ರವನ್ನು ಕೇರಳ ಸರಕಾರ ಇನ್ನೂ  ನೀಡದಿರುವುದರಿಂದ ಯೋಜನೆಗೆ ಸಂಬಂಧಪಟ್ಟ  ವರದಿಯು ರೈಲ್ವೇಯ ಚೆನ್ನೈ ಕಚೇರಿಯ ಕಡತದಲ್ಲೇ ಉಳಿದುಕೊಂಡಿದೆ. ಒಪ್ಪಿಗೆ ಪತ್ರಕ್ಕಾಗಿ ಇನ್ನಷ್ಟು  ದಿನ ಕಾಯಲು ಸಾಧ್ಯವಿಲ್ಲ  ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಆದರೆ ಒಪ್ಪಿಗೆ ಪತ್ರವಿಲ್ಲದೆ ಯೋಜನಾ ವರದಿ ಮಾತ್ರ ಕಳುಹಿಸಿದರೆ ರೈಲ್ವೇ ಮಂಡಳಿಯು ಈ ಯೋಜನೆಯನ್ನು  ಕೈಬಿಡುವ ಸಾಧ್ಯತೆ ನಿಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next