ಮುಂಬಯಿ : ಸ್ವಾತಂತ್ರ್ಯದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿರುವ ನಟಿ ಕಂಗನಾ ರಣಾವತ್ ಅವರು ಶನಿವಾರ ಇನ್ನೊಂದು ಸವಾಲು ಮುಂದಿಟ್ಟಿದ್ದು, 1947 ರಲ್ಲಿ ಯಾವ ಯುದ್ಧ ನಡೆದಿತ್ತು ಎಂದು ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.
ಕಂಗನಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಪ್ರಶ್ನೆಗಳ ಸರಣಿಯನ್ನು ಪೋಸ್ಟ್ ಮಾಡಿದ್ದು,ಮಹಾತ್ಮಾ ಗಾಂಧಿಜಿ ದೇಶದ ವಿಭಜನೆಗೆ ಕಾರಣರಾದರು ಮತ್ತು ಅವರು ಭಗತ್ ಸಿಂಗ್ ಅವರನ್ನು ಸಾಯಲು ಬಿಟ್ಟರು, ಸುಭಾಷ್ ಚಂದ್ರ ಬೋಸ್ ಅವರನ್ನು ಬೆಂಬಲಿಸಲಿಲ್ಲ ಎಂದು ಆರೋಪಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಸ್ವಾತಂತ್ರ್ಯದ ಕುರಿತಾಗಿನ ಪುಸ್ತಕವೊಂದನ್ನು ಉಲ್ಲೇಖಿಸಿರುವ ಕಂಗನಾ, ಬಾಲಗಂಗಾಧರ ತಿಲಕ್, ಅರಬಿಂದೋ ಘೋಷ್ ಮತ್ತು ಬಿಪಿನ್ ಚಂದ್ರ ಪಾಲ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರನ್ನು ಹೆಸರನ್ನು ಬರೆದು, ‘1857 ರ “ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಹೋರಾಟ” ದ ಬಗ್ಗೆ ನನಗೆ ತಿಳಿದಿದೆ ಆದರೆ 1947 ರ ಯುದ್ಧದ ಬಗ್ಗೆ ಏನೂ ತಿಳಿದಿಲ್ಲ’ ಎಂದು ಬರೆದಿದ್ದಾರೆ.
”1947 ರಲ್ಲಿ ಯಾವ ಯುದ್ಧ ನಡೆಯಿತು ಎನ್ನುವುದನ್ನು ನನಗೆ ವಿವರಿಸಿ ನನಗೆ ಅರಿವು ಮೂಡಿಸಿದಲ್ಲಿ, ನಾನು ಪದ್ಮಶ್ರೀ ವಾಪಾಸ್ ನೀಡುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ” ಎಂದು ಸುದೀರ್ಘವಾಗಿ ಬರೆದಿದ್ದಾರೆ.
ಮಾಧ್ಯಮವೊಂದರ ಸಂದರ್ಶನದ ವೇಳೆ ”1947ರಲ್ಲಿ ಸಿಕ್ಕಿದ್ದು ಭಿಕ್ಷೆ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ 2014ರಲ್ಲಿ ಸಿಕ್ಕಿತು’ ಎಂದು ವಿವಾದಕ್ಕೆ ಗುರಿಯಾಗಿದ್ದರು. ಕಂಗನಾ ಹೇಳಿಕೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದವು. ದೇಶದ ವಿವಿಧೆಡೆ ಆಕೆಯ ವಿರುದ್ಧ ಪ್ರತಿಭಟನೆಗಳನ್ನೂ ನಡೆಸಲಾಗುತ್ತಿದೆ.