Advertisement

ಸಮಸಮಾಜ ನಿರ್ಮಾಣಕ್ಕೆ ದಾಸ ಸಾಹಿತ್ಯ ಸಂದೇಶ

01:03 PM Nov 16, 2019 | Suhan S |

ಹಾವೇರಿ: ಜಿಲ್ಲೆಯಲ್ಲಿ ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಶುಕ್ರವಾರ ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನಕದಾಸರು 15ನೇ ಶತಮಾನದ ಶ್ರೇಷ್ಠಕವಿಗಳು, ಚಿಂತಕರು, ಸಮಾಜ ಸುಧಾರಕರು ಹಾಗೂ ನಾಡಿನ ಸಂಸ್ಕೃತಿಯ ನಿರ್ಮಾತೃಗಳು. ಸಮಾಜದ ಮೌಡ್ಯ ತೊಡೆದುಹಾಕಿ ಮನುಕುಲ ಒಂದೇ ಎಂಬ ಸಮಾನತೆಯ ಮಂತ್ರ ಸಾರಿದ ಹರಿಕಾರರು. ಕನಕರ ತತ್ವ ಆದರ್ಶಗಳು ನಮಗೆ ದಾರಿ ದೀಪವಾಗಲಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಮಾತನಾಡಿ, ದಾಸ ಪರಂಪರೆಯಲ್ಲಿ ಕನಕದಾಸರ ಕೊಡುಗೆ ಅಪಾರ. ಸಮಾಜದಲ್ಲಿರುವ ಮೌಡ್ಯತೆ, ಅಹಂಕಾರ ತೊಡೆದು ಜನರಿಗೆ ಜ್ಞಾನ, ಸೌಹಾರ್ದತೆ ನೀಡುವಲ್ಲಿ ತಮ್ಮ ಜೀವನ ಮುಡುಪಾಗಿಟ್ಟವರು. ಇಂತಹ ಜಗತ್‌ ಪ್ರಖ್ಯಾತ ವ್ಯಕ್ತಿಗಳು ನಮ್ಮ ಜಿಲ್ಲೆಯಲ್ಲಿ ಜನಿಸಿದ್ದು ನಮ್ಮ ಪುಣ್ಯ ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿವೆ. ಆದರೆ, ಕನಕದಾಸರು ಮೇಲು ಕೀಳು ಎಂಬ ಜಾತಿ ಮತ ಸಿದ್ಧಾಂತದ ವಿರುದ್ಧ ಹೋರಾಡಿ ಎಲ್ಲ ಜನಾಂಗದವರ ಮನದಲ್ಲಿ ಆದರ್ಶದ ಬೀಜ ಬಿತ್ತಿದ್ದಾರೆ. ಸಮಸಮಾಜದ ಪ್ರತಿಪಾದನೆಯ ಕನಕರ ಸಿದ್ಧಾಂತಗಳ ಪಾಲನೆ ನಮ್ಮೆಲ್ಲರ ಕರ್ತವ್ಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುರುಬ ಸಂಘದ ಅಧ್ಯಕ್ಷ ಮುದಕಣ್ಣನವರ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next