Advertisement

ತುಂಗಭದ್ರಾ ಸೇತುವೆ ದುರಸ್ತಿಗೆ ಚಾಲನೆ

05:09 PM Aug 18, 2019 | Team Udayavani |

ಕಂಪ್ಲಿ: ಕಂಪ್ಲಿ-ಕೋಟೆಯ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ನದಿ ಪ್ರವಾಹದಿಂದ ಸೇತುವೆ ಮೇಲ್ಪದರು ಹಾಗೂ ರಕ್ಷಣಾ ಕಂಬಗಳು ಕಿತ್ತಿ ಹೋಗಿದ್ದು, ಇದರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ, ಈಗ ಸೇತುವೆ ಮೇಲ್ಪದರು ಹಾಗೂ ರಕ್ಷಣಾ ಕಂಬಗಳ ದುರಸ್ತಿ ಕಾರ್ಯ ಶನಿವಾರ ಭರದಿಂದ ಸಾಗಿರುವುದು ಕಂಡು ಬಂತು.

Advertisement

ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕಂಪ್ಲಿಯ ತುಂಗಭದ್ರಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಸೇತುವೆ ಸಿಮೆಂಟ್ ಮೇಲ್ಪದರು ಹಾಗೂ ರಕ್ಷಣಾ ಕಂಬಿಗಳು ಸಂಪೂರ್ಣವಾಗಿ ಕಿತ್ತಿ ಹೋಗಿವೆ. ನದಿ ಪ್ರವಾಹ ಹಾಗೂ ಸೇತುವೆ ದುರಸ್ತಿ ಹಿನ್ನೆಲೆ ಜನಪ್ರತಿನಿಧಿಗಳು ಹಾಗೂ ಬಳ್ಳಾರಿ, ಕೊಪ್ಪಳ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಲ್ಲದೇ, ತ್ವರಿತಗತಿಯಲ್ಲಿ ದುರಸ್ತಿ ಮಾಡಲು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸೇತುವೆ ಮೇಲೆ ಕಿತ್ತಿಹೋದ ಸಿಮೆಂಟ್ ಮೇಲ್ಪದರಿನ ಭಾಗದಲ್ಲಿ ಹೊಸದಾಗಿ ಫೆವಿಕಲ್ ಹಚ್ಚಿ, ಕಬ್ಬಿಣದ ರಾಡ್‌ಗಳನ್ನು ಕಟ್ಟಿ, ಸಿಮೆಂಟ್ ಹಾಕುವ ಕಾರ್ಯ ನಡೆಯುತ್ತಿದೆ. ಸತತ ಎರಡು ದಿನ ನದಿ ಸೇತುವೆ ಮೇಲೆ ನೀರು ಹರಿದು ಹಾಗೂ ಕಸದ ರಾಶಿಯಿಂದಾಗಿ ಸೇತುವೆಯ ಎರಡು ಪಕ್ಕದಲ್ಲಿ ರಕ್ಷಣೇಗಾಗಿ ನಿರ್ಮಿಸಿದ್ದ ರಕ್ಷಣಾ ಕಂಬಿಗಳನ್ನು ಕಿತ್ತು ಹೋಗಿದ್ದು, ಸೇತುವೆ ದುರಸ್ತಿ ಕಾರ್ಯದಿಂದ ಸಂಚಾರ ನಿಷೇಧಿಸಲಾಗಿದೆ.

ಇದರಿಂದ ಕಂಪ್ಲಿ ಹಾಗೂ ಚಿಕ್ಕಜಂತಕಲ್ನ ಜನರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಂಪ್ಲಿಯಿಂದ ಗಂಗಾವತಿ, ಗಂಗಾವತಿಯಿಂದ ಕಂಪ್ಲಿಗೆ ತೆರಳಬೇಕಾದರೆ ಬುಕ್ಕಸಾಗರದ ಮಾರ್ಗದಲ್ಲಿ 35ರಿಂದ40 ಕಿ.ಮೀ ಸುತ್ತುವರೆಯಬೇಕಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಹಾಗೂ ರೈತರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ಅಡಚಣೆಯಿಂದ ಸಂಕಷ್ಟಕೀಡಾಗಿದ್ದಾರೆ. ಸೇತುವೆ ಮೇಲಿನ ದುರಸ್ತಿ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ದುರಸ್ತಿ ಕಾರ್ಯ ತಡವಾದರೆ, ಪಾದಚಾರಿಗಳಿಗಾದರೂ ಸೇತುವೆ ಮೇಲಿನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next