Advertisement

ಕಂಬಳ: ತಿದ್ದುಪಡಿ ಮಸೂದೆ ಮಂಡನೆ

06:00 AM Nov 17, 2017 | Team Udayavani |

ಬೆಳಗಾವಿ:  ಕಂಬಳ ಸಹಿತ ಹೋರಿ ಓಟ ಮತ್ತು ಎತ್ತಿನ ಗಾಡಿ ಓಟಕ್ಕೆ ಕಾನೂನು ಮಾನ್ಯತೆ ದೊರಕಿಸುವ ಉದ್ದೇಶದಿಂದ ರಾಜ್ಯ ಸರಕಾರ ಸಿದ್ಧಪಡಿಸಿರುವ “ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ ಎರಡನೇ ತಿದ್ದುಪಡಿ)’ ಮಸೂದೆಯನ್ನು ಗುರುವಾರ ಮಂಡಿಸಲಾಗಿದೆ. ಆ ಮೂಲಕ ಕಂಬಳ ಕ್ರೀಡೆ ಸಹಿತ ಮೂರು ಜಾನಪದ ಕ್ರೀಡೆಗಳ ಆಯೋಜನೆಗೆ ಶಾಶ್ವತ ಪರಿಹಾರ ಕಲ್ಪಿಸುವುದಕ್ಕೆ ಸರಕಾರ ಮುಂದಾಗಿದೆ.

Advertisement

ರಾಜ್ಯದಲ್ಲಿ ಕಂಬಳ ಕ್ರೀಡೆ ಮತ್ತು ಎತ್ತಿನ ಗಾಡಿ ಓಟ ಸ್ಪರ್ಧೆ ಹಾಗೂ ಹೋರಿ ಓಟದ ಸ್ಪರ್ಧೆ ಆಯೋಜನೆಗೆ ಈಗಾಗಲೇ ಅಧ್ಯಾದೇಶ ಜಾರಿ ಗೊಳಿಸುವ ಮೂಲಕ ರಾಜ್ಯ ಸರಕಾರ ತಾತ್ಕಾಲಿಕ ಪರಿಹಾರ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಕಂಬಳ ಕ್ರೀಡೆ ಆಯೋಜನೆಗೆ ಕಾನೂನು ಮಾನ್ಯತೆ ದೊರಕಿಸಿ ಕೊಡುವ ಕಾಯ್ದೆ ರೂಪಿಸುವ ಮೂಲಕ ಅಧ್ಯಾದೇಶವನ್ನು ಊರ್ಜಿತ ಗೊಳಿಸಬೇಕು ಎಂಬುದು ಕರಾವಳಿ ಭಾಗದ ಜನರ ಬೇಡಿಕೆಯಾಗಿತ್ತು. ಅದರಂತೆ ಕಂಬಳ ಕ್ರೀಡಾಸಕ್ತರ ಹಾಗೂ ಅಭಿಮಾನಿಗಳ ಮನವಿಗೆ ಸ್ಪಂದಿಸಿ ರಾಜ್ಯ ಸರಕಾರ ಸಿದ್ಧ ಪಡಿಸಿರುವ “ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ 2ನೇ ತಿದ್ದುಪಡಿ)’ ಮಸೂದೆಯನ್ನು ಪಶು ಸಂಗೋಪನಾ ಸಚಿವ ಎ. ಮಂಜು ವಿಧಾನ ಸಭೆಯಲ್ಲಿ ಮಂಡಿಸಿದರು. ಆದರೆ ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸದಸ್ಯರು ಕೋರಿರುವ ಕಾರಣ ಈ ಮಸೂದೆ ಮೇಲೆ ಸಮಗ್ರ ಚರ್ಚೆಯಾದ ಬಳಿಕ ಇದಕ್ಕೆ ಒಪ್ಪಿಗೆ ಸಿಗಬೇಕಾಗಿದೆ.

ಮಸೂದೆ ಜಾರಿಯಾದರೆ ಕಂಬಳ ನಿಷೇಧ ಭೀತಿ ದೂರಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next