Advertisement

ಚೆಕ್‌ಪೋಸ್ಟ್‌ ತಲುಪಿದ ಕಮರೊಟ್ಟು

08:23 PM May 23, 2019 | mahesh |

ಈಗಾಗಲೇ ಶೀರ್ಷಿಕೆ, ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ “ಕಮರೊಟ್ಟು ಚೆಕ್‌ಪೋಸ್ಟ್‌’ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಇದೊಂದು ಪ್ಯಾರನಾರ್ಮಲ್‌ ಸಿನಿಮಾ ಅನ್ನುವುದು ಒಂದು ವಿಷಯವಾದರೆ, ಇಲ್ಲೊಂದು ತುಳುನಾಡಿನ ಆಚರಣೆ ಹೈಲೈಟ್‌. ಚಿತ್ರದಲ್ಲಿ ತುಳು ಭಾಷೆಯ ಹಾಡು ಬಳಸಿರುವುದು ಮತ್ತೂಂದು ವಿಶೇಷ. ಭಾರತದ ಪ್ರಥಮ ಮಹಿಳಾ ಪ್ಯಾರನಾರ್ಮಲ್‌ ಸಂಶೋಧಕಿ ನಿಶಾಶರ್ಮ ಅವರು ನಟಿಸಿರುವುದು ಇನ್ನೊಂದು ಹೈಲೈಟ್‌ಗಳಲ್ಲೊಂದು. ಹೀಗೆ ಇನ್ನೂ ಹಲವು ವಿಶೇಷತೆಗಳು “ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರದಲ್ಲಿವೆ.

Advertisement

ಎ.ಪರಮೇಶ್‌ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಲ್ಲದೆ, ಕ್ಯಾಮೆರಾ ಕೆಲಸದಲ್ಲೂ ಸೈ ಎನಿಸಿಕೊಂಡಿದ್ದಾರೆ. “ಮಾಮು ಟೀ ಅಂಗಡಿ’ ಚಿತ್ರದ ಬಳಿಕ ನಿರ್ದೇಶಿಸಿರುವ ಚಿತ್ರವಿದು. ಇತ್ತೀಚೆಗೆ ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು.

ಮೊದಲು ಮಾತಿಗಿಳಿದ ನಿರ್ದೇಶಕ ಎ.ಪರಮೇಶ್‌ ಹೇಳಿದ್ದಿಷ್ಟು. “ಇದು ಭಾರತದ ಮೊದಲ ಪ್ಯಾರನಾರ್ಮಲ್‌ ಚಿತ್ರ. ಪ್ರೇಕ್ಷಕನಿಗೆ ಕಾಣಿಸದೆ, ಸ್ಪರ್ಶಿಸಿದ ಅನುಭವ ಕೊಡುವಂತಹ ಚಿತ್ರವಿದು. ಭೂತಕಾಲ ಮತ್ತು ವರ್ತಮಾನದಲ್ಲಿ ನಡೆಯುವ ಸನ್ನಿವೇಶಗಳು ಏಕಕಾಲದಲ್ಲಿ ಬರುವ ಮೂಲಕ ನೋಡುಗರಲ್ಲಿ ಹೊಸ ಫೀಲ್‌ ತುಂಬಿಕೊಡುತ್ತದಲ್ಲದೆ, ಪುನಃ ಚಿತ್ರ ನೋಡಬೇಕೆಂಬ ಫೀಲ್‌ ಕೊಡುತ್ತದೆ. ಇಲ್ಲಿ ತುಳ ನಾಡಿನ ಭೂತಾರಾಧನೆ ಆಚರಣೆ ಬಳಸಿಕೊಳ್ಳಲಾಗಿದ್ದು, ತುಳು ಭಾಷೆ ಹಾಡನ್ನೂ ಇಲ್ಲಿ ಸೇರಿಸಲಾಗಿದೆ. ನಟ ನವೀನ್‌ಕೃಷ್ಣ ಅವರು ಆ ತುಳು ಹಾಡಿಗೆ ಧ್ವನಿಯಾಗಿದ್ದಾರೆ. ಭೂತಾರಾಧನೆ ಆಚರಣೆ ವೇಳೆ ಯಾರಿಗೂ ತಿಳಿಯದಂತೆ ಚಿತ್ರೀಕರಣ ಮಾಡಿರುವುದು ಇನ್ನೊಂದು ವಿಶೇಷ’ ಎಂದು ವಿವರ ಕೊಟ್ಟರು ನಿರ್ದೇಶಕ ಪರಮೇಶ್‌.

ನಿರ್ದೇಶಕರ ಕನಸಿಗೆ ಸಾಥ್‌ ನೀಡಿದ್ದು, ಚೇತನ್‌ರಾಜ್‌. ಚಿತ್ರ ಪೂರ್ಣಗೊಂಡು, ಬಿಡುಗಡೆಗೆ ಒಂದಷ್ಟು ಸಮಸ್ಯೆ ಎದುರಾದಾಗ, ಮುಂದೆ ಬಂದು, ನಾನಿದ್ದೇನೆ ಅಂತ ಚಿತ್ರಕ್ಕೆ ಇದ್ದಂತಹ ಸಮಸ್ಯೆ ಬಗೆಹರಿಸಿ, ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದಾರೆ ನಿರ್ಮಾಪಕ ಚೇತನ್‌ರಾಜ್‌. ಅವರಿಗೆ ಸಿನಿಮಾ ನೋಡಿದಾಗ, ಇದೊಂದು ಒಳ್ಳೆಯ ಚಿತ್ರವಾಗಲಿದೆ. ಇಂತಹ ಚಿತ್ರಗಳಿಗೆ ಜನರ ಬೆಂಬಲ ಬೇಕು, ಸೂಕ್ತ ಸಮಯದಲ್ಲೇ ಬಿಡುಗಡೆ ಮಾಡಬೇಕು ಅಂದುಕೊಂಡು ಪ್ರಚಾರಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ತಯಾರಿ ಮಾಡಿಕೊಂಡೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ ಚೇತನ್‌ರಾಜ್‌.

ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿರುವ ನಟ ಶ್ರೀಮುರಳಿ, ಹೊಸಬರ ಪ್ರಯತ್ನವನ್ನು ಮೆಚ್ಚಿಕೊಂಡು, ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ. ನಟ ಧ್ರುವಸರ್ಜಾ ಕೂಡ ಚಿತ್ರದ ಗೇಮ್‌ವೊಂದನ್ನು ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಇನ್ನು, ಹೊಸ ಪ್ರತಿಭೆ ಮಹೇಶ್‌ ಎರಡು ಹಾಡುಗಳನ್ನು ಬರೆದಿದ್ದಾರೆ. ಎ.ಟಿ.ರವೀಶ್‌ ಸಂಗೀತವಿದ್ದು, ಅವರ 25ನೇ ಚಿತ್ರವಿದು. ಸೆನ್ಸಾರ್‌ ಮಂಡಳಿ ಯಾವುದೇ ಕಟ್‌ ಇಲ್ಲದೆ, ಯಾವ ಸನ್ನಿವೇಶಕ್ಕೂ ಆಕ್ಷೇಪ ವ್ಯಕ್ತಪಡಿಸದೆ, ಸಂಗೀತ ಅಬ್ಬರವಾಗಿದೆ ಎಂಬ ಕಾರಣಕ್ಕೆ “ಎ’ ಪ್ರಮಾಣ ಪತ್ರ ನೀಡಿದೆ ಎಂಬುದು ಚಿತ್ರತಂಡದ ಮಾತು.

Advertisement

ಚಿತ್ರದಲ್ಲಿ ಉತ್ಪಲ್‌, ಸನತ್‌ಕುಮಾರ್‌ ನಾಯಕರಾದರೆ, ಸ್ವಾತಿಕೊಂಡೆ, ಅಹಲ್ಯಾ ಸುರೇಶ್‌ ನಾಯಕಿಯರು. “ತಿಥಿ’ ಖ್ಯಾತಿಯ ಗಡ್ಡಪ್ಪ ಅವರಿಗಿಲ್ಲಿ ವಿಶೇಷ ಪಾತ್ರವಿದೆ. ಇವರ ಜೊತೆಗೆ “ಊಸರವಳ್ಳಿ’ ಪ್ರಾಣಿಯೊಂದು ಪ್ರಮುಖವಾಗಿ ಕಾಣಿಸಿಕೊಂಡಿದೆ. ಅದು ಯಾಕೆ ಅನ್ನುವುದಕ್ಕೆ ಸಿನಿಮಾ ನೋಡಬೇಕು ಎಂಬುದು ಚಿತ್ರತಂಡದ ಮಾತು. ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಮೇ.31 ರಂದು ತೆರೆಗೆ ಅಪ್ಪಳಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next