Advertisement

ಕಾಳಿ ನದಿ ಜೋಡಣೆ; ಪರಿಸರಕ್ಕೆ ಇಲ್ಲ ಹಾನಿ

02:49 PM May 06, 2019 | Suhan S |

ಬಾಗಲಕೋಟೆ: ಉತ್ತರ ಕನ್ನಡ ಕರಾವಳಿ ಪ್ರದೇಶದ ಕಾಳಿ ನದಿಯನ್ನು ಬಯಲು ಸೀಮೆಯ ಘಟಪ್ರಭಾ, ಮಲಪ್ರಭಾ ನದಿಗೆ ಜೋಡಿಸುವುದರಿಂದ ಆ ಭಾಗದ ಪರಿಸರ ಅಥವಾ ವನ್ಯ ಜೀವಿಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಈ ಕುರಿತು ಸಮಗ್ರ ಅಧ್ಯಯನ ನಡೆಸಿಯೇ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಅಮತಧಾರೆ ಕಾಳಿ-ಘಟಪ್ರಭಾ-ಮಲಪ್ರಭಾ ನದಿ ಜೋಡಣೆಯ ನಿರಾಣಿ ಸಮಗ್ರ ನೀರಾವರಿ ವರದಿಯ ರೂವಾರಿ ಸಂಗಮೇಶ ನಿರಾಣಿ ಹೇಳಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆ ಹಾಗೂ ಪರಿಸರದ ಮೇಲೆ ಪರಿಣಾಮವಾಗುವುದಿಲ್ಲ. ನಾವು ಬಯಲು ಸೀಮೆಯವರಾದರೂ ಪರಿಸರ, ವನ್ಯಜೀವಿಗಳು ಹಾಗೂ ಅರಣ್ಯದ ಬಗ್ಗೆ ಅಪಾರ ಕಾಳಜಿ ಇದೆ. ಕಾಡು ಬೆಳಿಸಿದಾಗ ಮಾತ್ರ ನಾಡು ಉಳಿಯುತ್ತದೆ ಎಂಬ ಪರಿಸರ ಕಾಳಜಿ ನಮ್ಮಲ್ಲೂ ಇದೆ. ಉತ್ತರ ಕನ್ನಡ ಜಿಲ್ಲೆಗೆ ಹಾಗೂ ನಮ್ಮ ನಾಡಿನ ಅರಣ್ಯಕ್ಕೆ ಕಾಳಿ ನದಿಯಿಂದ ಇರುವ ಮಹತ್ವತೆಯನ್ನು ಅರಿತು ಅರಣ್ಯ ಹಾಗೂ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಸೌಹಾರ್ದತೆಯೊಂದಿಗೆ ದಟ್ಟವಾದ ಅರಣ್ಯಕ್ಕೆ ಹಾನಿ ಮಾಡದೇ, ರಸ್ತೆಯ ಇಕ್ಕೆಲಗಳಲ್ಲಿ ಪೈಪಲೈನ ಮೂಲಕ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗಳಿಗೆ ಹರಿಸಬಹುದು ಎಂದು ತಿಳಿಸಿದರು.

2009ರ ಅರಣ್ಯ ಕಾಯ್ದೆ ತಿದ್ದುಪಡಿಯನ್ವಯ ಕುಡಿಯುವ ನೀರು ಹಾಗೂ ಕೆರೆ ತುಂಬಲು ಯೋಜನೆ ಅನುಷ್ಠಾನಗೊಳಿಸುವಾಗ ಅರಣ್ಯ ಕಾಯ್ದೆ. ವನ್ಯಜೀವಿ ಕಾಯ್ದೆ, ಜೀವವೈವಿಧ್ಯ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಈ ಕಾಯ್ದೆಯ ಅಡಿಯಲ್ಲಿ ಹೆಚ್ಚಿನ ವಿಚಾರಣೆ ಮಾಡದೇ ಅನುಮತಿ ನೀಡಬೇಕು ಎಂದು ತೀರ್ಪು ಹೇಳಿದೆ. ಹೀಗಾಗಿ ಈ ಯೋಜನೆಗೆ ಉತ್ತರ ಕನ್ನಡದ ಪರಿಸರವಾದಿಗಳು ಅಪಸ್ವರ ಎತ್ತಬಾರದು. ಈ ಕುರಿತು ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ಜಲ ವಿದ್ಯುತ್‌ಗೂ ತೊಂದರೆ ಇಲ್ಲ: ಕಾಳಿನದಿಯ ಅಥವಾ ಸೂಪಾ ಜಲಾಶಯದ ಸಂಪೂರ್ಣ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗೆ ಸೇರಿಸಿ ಕಾಳಿನದಿ ಪಾತ್ರವನ್ನು ಬರಿದಾಗಿಸುವ ದುರುದ್ದೇಶ ನಮ್ಮಲ್ಲಿ ಇಲ್ಲ. ಕಾಳಿ ನದಿಯು ವರ್ಷದ 12 ತಿಂಗಳು ಸಮೃದ್ದವಾಗಿ ಹರಿಯುವುದರಿಂದ ಸೂಪಾ ಜಲಾಶಯದಲ್ಲಿ ವಿದ್ಯುತ್‌ ಉತ್ಪಾದನೆಯಾದ ನಂತರ ಬಿಡುಗಡೆಯಾಗುವ ನೀರಿನಲ್ಲಿಯ ಸ್ವಲ್ಪ ಪ್ರಮಾಣದ ನೀರನ್ನು ಅಂದರೆ ವಾರ್ಷಿಕ 10 ರಿಂದ 20 ಟಿಎಂಸಿ ನೀರನ್ನು ಮಾತ್ರ ಏತ ನೀರಾವರಿ ಯೋಜನೆಯ ಮೂಲಕ ಘಟಪ್ರಭಾ, ಮಲಪ್ರಭಾ ನದಿಗಳಿಗೆ ಕೇಳುತ್ತಿದ್ದೇವೆ. ಹೀಗಾಗಿ ಚಾಲ್ತಿಯಲ್ಲಿರುವ ಜಲ ವಿದ್ಯುತ್‌ ಯೋಜನೆಗಳು ಸ್ಥಗಿತಗೊಳ್ಳುವ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಡಿಯುವ ಉದ್ದೇಶಕ್ಕೆ ಮಾತ್ರ: ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಧಾರವಾಡ ಗದಗ ಜಿಲ್ಲೆಗಳ ಜನರ ಕುಡಿಯುವ ನೀರಿನ ಬವಣೆ ತಪ್ಪಿಸಲು ಮತ್ತು ಕೆರೆ ತುಂಬುವ ಮೂಲಕ ಸಾಂಪ್ರದಾಯಕ ನೀರಿನ ಮೂಲಗಳ ಅಭಿವೃದ್ಧಿ ಹಾಗೂ ಪುನಶ್ಚೇತನದ ಉದ್ದೇಶಕ್ಕಾಗಿ ಮಾನವಿಯತೆಯ ದೃಷ್ಟಿಯಿಂದ ನೀರು ಕೇಳುತ್ತಿದ್ದೇವೆ. ವಾಣಿಜ್ಯೀಕರಣ, ವಿದ್ಯುತ್‌ ಉತ್ಪಾದನೆಯಂತಹ ಯೋಜನೆಗಳಿಗಿಂತ ಕುಡಿಯುವ ನೀರು, ಜನರ ನಿತ್ಯದ ಬಳಕೆಗಾಗಿ, ಮೂಲಭೂತ ಸೌಕರ್ಯ ಮತ್ತು ಕೆರೆ ತುಂಬುವ ಯೋಜನೆಗಳಿಗೆ ನದಿ ನೀರಿನ ಬಳಕೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸುಪ್ರಿಂಕೋರ್ಟ್‌ ನಿರ್ದೇಶನವಿದೆ. ಹೀಗಾಗಿ ನಾವು ನೀರು ಕೇಳುತ್ತಿರುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

Advertisement

ಜಗತ್ತಿನ ಒಂದು ಹೊತ್ತಿನ ಊಟಕ್ಕೆ ಬೇಕಾಗುವ ಎಲ್ಲ ಆಹಾರ ಪದಾರ್ಥಗಳನ್ನು ಬೆಳೆಯುವ ಶಕ್ತಿ ಇರುವುದು ಕೇವಲ ಬಯಲು ಸೀಮೆಯ ರೈತರಿಗೆ ಮಾತ್ರ. ಅವನು ಬೆಳೆಯುವ ಅಕ್ಕಿ, ಗೋದಿ, ಜೋಳ, ರಾಗಿಯನ್ನೇ ಇಡೀ ಜಗತ್ತು ನಿತ್ಯ ಸ್ಮರಿಸಿ ಊಟ ಮಾಡುತ್ತದೆ. ಅಂತಹ ರೈತನ ಬಗ್ಗೆ ಅಸಡ್ಡೆಯ ಮಾತುಗಳು ಬೇಡ. ಕಾಳಿ ನದಿ ಸಮೃದ್ಧವಾಗಿ ಹರಿಯುವ ನದಿಯಾಗಿದ್ದು, ಈ ನದಿ ಹರಿವಿನಲ್ಲಿಯ ಶೇ.5 ಅಥವಾ ಶೇ. 10ರಷ್ಟು ಪ್ರಮಾಣದ ಅಂದರೆ 10ರಿಂದ 20ಟಿಎಂಸಿ ನೀರನ್ನು ಮಾತ್ರ ನಾವು ಕೇಳುತ್ತಿದ್ದು, ಇದರಿಂದ ಕಾಳಿನದಿ ಹಾಗೂ ಅದರ ಜಲಾಶಯಗಳ ಒಳ ಹಾಗೂ ಹೊರ ಹರಿವಿನಲ್ಲಿ ಭಾರಿ ವ್ಯತ್ಯಾಸವಾಗುವುದಿಲ್ಲ. ಈ ಭಾಗದ ಅರಣ್ಯ, ವನ್ಯಜೀವಿ, ರಕ್ಷಿತ ಅಭಯಾರಣ್ಯ, ಜೀವ ವೈವಿಧ್ಯದ ಮೂಲಸೌಕರ್ಯಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದರು.

ಕಾಳಿ ನದಿ ತಿರುವು ಯೋಜನೆಯಿಂದ ಸಮುದ್ರದಲ್ಲಿ ನಿರ್ದಿಷ್ಟ ಪ್ರಮಾಣದ ಸಿಹಿನೀರು ಸಮುದ್ರಕ್ಕೆ ಸೇರದೇ ಲವಣಾಂಶ ಪ್ರಮಾಣದಲ್ಲಿ ವ್ಯತ್ಯಾಸ ಅಥವಾ ಜಲಚರಗಳಿಗೆ ಹಾನಿಯಾಗುವುದಿಲ್ಲ. ಬಯಲು ಸೀಮೆಯ ಕುಡಿಯುವ ನೀರು ಹಾಗೂ ಕೆರೆ ತುಂಬಲು ಪಡೆಯುವ 10-20 ಟಿಎಂಸಿ ನೀರಿನಿಂದಾಗಿ ಕಾಳಿ ನದಿ ಬರಿದಾಗುವುದಿಲ್ಲ ಮತ್ತು ಸಮುದ್ರಕ್ಕೆ ಸೇರುವ ದೊಡ್ಡ ಪ್ರಮಾಣದ ನೀರಿನಲ್ಲಿ ವ್ಯತ್ಯಾಸವಾಗುವುದಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕದಲ್ಲಿ ಪ್ರತಿವರ್ಷ ಬೀಳುವ ಮಳೆಯಿಂದಾಗಿ ವಾರ್ಷಿಕ 3600 ಟಿಎಂಸಿ ನೀರು ಲಭಿಸುತ್ತದೆ. ಅದರಲ್ಲಿ 1600 ಟಿಎಂಸಿಯಷ್ಟು ನೀರನ್ನು ಮಾತ್ರ ಕೃಷಿ, ಕುಡಿಯುವ ನೀರು, ಕೈಗಾರಿಕೆ, ನೀರಾವರಿ ಯೋಜನೆಗಳಿಗೆ ಬಳಸಿ 2000 ಟಿಎಂಸಿ ನೀರು ಸಮುದ್ರ ಸೇರುತ್ತದೆ ಎಂದು ವರದಿಯ ಪ್ರಮುಖ ಅಂಶಗಳನ್ನು ಪ್ರಸ್ತುತಪಡಿಸಿದರು.

ಅಲ್ಲದೇ ಕೃಷ್ಣಾ, ನರ್ಮದಾ, ಕಾವೇರಿ ಸೇರಿದಂತೆ ದೇಶದ ದೊಡ್ಡ ನದಿಗಳಿಗೆ ಬೃಹತ್‌ ಯೋಜನೆ ರೂಪಿಸಿ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿದ್ದಾರೆ. ಕೇವಲ ಕಾಳಿ ನದಿ ನೀರಿನಿಂದ ಮಾತ್ರ ಸಮುದ್ರದ ಲವಣಾಂಶ ಪ್ರಮಾಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಸಮುದ್ರದ ಉಪ್ಪಿನಾಂಶ ನಿರ್ವಹಣೆಗೆ ತನ್ನದೆಯಾದ ಮಾನದಂಡಗಳಿವೆ. ಅಲ್ಲದೇ ಸಾಗರವು ಸದಾ ತನ್ನ ಸಮತೋಲನ ಕಾಯ್ದುಕೊಳ್ಳುತ್ತಿರುತ್ತದೆ ಎಂದು ತಿಳಿಸಿದರು. ಪ್ರಗತಿಪರ ರೈತ ಮುಖಂಡ ಈಶ್ವರ ಕತ್ತಿ, ಪ್ರಮುಖರಾದ ಲಕ್ಷ್ಮಣ ದೊಡಮನಿ, ನಾಗೇಶ ಗೋಲಶೆಟ್ಟಿ, ಹಿಪ್ಪರಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next