Advertisement

ಸಂಗೀತದ ಹೊಸ ನೆಲೆ ಕಲಾಕೋಸ್ಟ್‌

03:50 AM Mar 31, 2017 | |

ನಗರದ ಗದ್ದಲದಿಂದ ದೂರದ ಹಳ್ಳಿಯ ಪರಿಸರ, ಹಸಿರು ತುಂಬಿದ ಕಾನನ, ಪ್ರಾಣಿ ಪಕ್ಷಿಗಳ ಸ್ವಾಭಾವಿಕ ಕಲರವ, ಹರಿಯುವ ನೀರಿನ ಜುಳು ಜುಳು ನಾದ, ಪ್ರಶಾಂತ ಗ್ರಾಮೀಣ ವಾತಾವರಣ ಸಂಗೀತ ಪ್ರಿಯರಿಗೆ ಸ್ವರ್ಗ ಇದ್ದಂತೆ. ಪ್ರಾಕೃತಿಕ ಲಯದೊಂದಿಗೆ ತಮ್ಮ ಸಂಗೀತವನ್ನು ಅಭ್ಯಸಿಸುವುದು ಸರ್ವ ಕಲಾವಿದರ ಕನಸು. ಕನ್ನಡ ಚಲನಚಿತ್ರ ಮಲಯ ಮಾರುತದ “ಎಲ್ಲೆಲ್ಲೂ ಸಂಗೀತವೇ’ ಎನ್ನುವ ಹಾಡಿನಂತೆ ಸಂಗೀತದಲ್ಲೇ ಮಿಂದೇಳುವ ಪರಿಸರ ಬ್ರಹ್ಮಾವರ ಸಮೀಪ ಕರ್ಜೆಯಲ್ಲಿ ಸೃಷ್ಟಿಯಾಗುತ್ತಿದೆ. ಇದುವೇ ಕಲಾಕೋಸ್ಟ್‌ ಗ್ಲೋಬಲ್‌ ಮ್ಯೂಸಿಕ್‌ ಮತ್ತು ಆರ್ಟ್‌ ವಿಲೇಜ್‌ ಸಂಗೀತ ಕೇಂದ್ರ.

Advertisement

ಕ್ಷೀಣಿಸಿ ನಶಿಸುತ್ತಿರುವ ಸಂಗೀತ, ವಾದ್ಯಗಳು, ಜಾನಪದೀಯ ಗಾಯನ ಹಾಗೂ ಸಂಗೀತ ಕಲೆಯ ಸಕಲ ಪ್ರಕಾರಗಳನ್ನು ಉಳಿಸಿ ಬೆಳೆಸುವ ವಿಭಿನ್ನ ಪ್ರಯತ್ನವಿದು. ಇತರ ಕೇಂದ್ರಗಳಂತೆ ಕೇವಲ ವರ್ಷದಲ್ಲಿ ಕೆಲವು ಸಂಗೀತದ ಕಾರ್ಯಕ್ರಮ ನಡೆಸುವುದು ಈ ಸಂಗೀತ ಸಂಸ್ಥೆಯ ಉದ್ದೇಶವಲ್ಲ. ಇಂತಹ ಕಾರ್ಯಕ್ರಮಗಳ ಜತೆಯಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಂಗೀತದ ಶಿಬಿರ, ಸಂವಾದ, ಸಂಗೀತ ಶಿಕ್ಷಣ ಹೀಗೆ ವರ್ಷವಿಡಿ ಸಂಗೀತ ಹಾಗೂ ಅದಕ್ಕೆ ಸಂಬಂಧಿಸಿದಂತಹ ಹತ್ತು ಹಲವು ಯೋಜನೆಗಳಿವೆ. 

ಬರೇ ಗಾಯನ, ಕಛೇರಿ, ವಾದ್ಯ ನುಡಿಸುವುದರಿಂದ ಸಂಗೀತವನ್ನು ಉಳಿಸುವುದು ಕಷ್ಟ. ಅದಕ್ಕೇ ಭದ್ರ ಬುನಾದಿಯ ಮೂಲಕ ಕ್ರಮಬದ್ಧವಾಗಿ ಸರಿಯಾದ ವ್ಯವಸ್ಥೆಯ ಅಡಿಯಲ್ಲಿ ಪೋಷಿಸಿ ಸಲಹುವ ಅಗತ್ಯವಿದೆ ಎನ್ನುವ ನಿಟ್ಟಿನಲ್ಲಿ ಈ ಕಲಾಕೇಂದ್ರ ಶ್ರಮಿಸಲಿದೆ.

ಈ ಸಂಸ್ಥೆಯ ರೂವಾರಿ ಕರಾವಳಿ ಮೂಲದ ಮುಂಬೈನ ಸುಧೀರ್‌ ನಾಯಕ್‌. ಮೂಲತ ಕುಂದಾಪುರ ತಾಲೂಕಿನ ಕೋಟದವರಾದ ಇವರು ಅಂತಾರಾಷ್ಟ್ರೀಯ ಮಟ್ಟದ ಹಾರ್ಮೋನಿಯಂ ವಾದಕ. ಕಾನೂನು ಪದವೀಧರರಾದ ಇವರು ಮನೆಯಲ್ಲಿನ ಸಂಗೀತದ ವಾತಾವರಣ, ಪೋಷಕರ ಸಹಕಾರ, ಪ್ರೋತ್ಸಾಹದಿಂದ ಸಂಗೀತವನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ತಮ್ಮ ಗುರುಗಳಾದ ತುಳಸೀದಾಸ್‌ ಬೋರ್ಕರ್‌ ಅವರಿಂದ ಹಾರ್ಮೋನಿಯಂನ ಆರಂಭಿಕ ಶಿಕ್ಷಣವನ್ನು ಪಡೆದು ಜಿತೇಂದ್ರ ಅಭಿಷೇಕಿ ಅವರ ಗಾಯನದಲ್ಲಿ ಹಾರ್ಮೋನಿಯಂನಲ್ಲಿ ಸಾಥ್‌ ನೀಡಿದರು. ಪಂಡಿತ್‌ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್‌, ಉಸ್ತಾದ್‌ ರಶೀದ್‌ ಖಾನ್‌ ಮುಂತಾದ ಸಂಗೀತದ ಮೇರು ಕಲಾವಿದರೊಂದಿಗೆ ಸಂಗೀತದ ಕಛೇರಿಗಳಲ್ಲಿ ಹಾರ್ಮೋನಿಯಂ ವಾದಕರಾಗಿ ಸಾಥ್‌ ನೀಡಿದ್ದಾರೆ. ಗಾಯಕಿ ಶುಭಾ ಮುದಗಲ್‌, ತಬಲಾ ವಾದಕ ಅನೀಶ್‌ ಪ್ರಧಾನ್‌ ಅವರೊಂದಿಗೆ ಹೆಚ್ಚಿನ ಒಡನಾಟವಿದೆ. ಅಲ್ಲದೇ ಹಲವು ಪ್ರಖ್ಯಾತ ಕಲಾವಿದರ ಕಾರ್ಯಕ್ರಮಗಳನ್ನು ಸಂಘಟಿಸಿದ ಅನುಭವ ಇವರದು. ದೇಶ ವಿದೇಶಗಳಲ್ಲಿ ಪ್ರದರ್ಶನ ಹಾಗೂ ಮೇರು ಕಲಾವಿದರೊಂದಿಗೆ ಒಡನಾಟದಿಂದ ಸಂಗೀತದ ಕಲೆಗೆ ಸಂಬಂಧಿಸಿದ ಪ್ರತ್ಯೇಕವಾದ ಕೇಂದ್ರದ ಅಗತ್ಯತೆಯನ್ನು ಮನಗಂಡು ಈ ಕೇಂದ್ರವನ್ನು ಆರಂಭಿಸಿದ್ದಾರೆ.

ಸಂಗೀತ ಕೇವಲ ಕಾರ್ಯಕ್ರಮಕ್ಕೆ, ನುಡಿಸುವುದಕ್ಕೆ, ಪ್ರದರ್ಶನಕ್ಕೆ ಸೀಮಿತವಾಗಬಾರದು, ಕಲೆಯ ಪ್ರತಿಯೊಂದು ಪ್ರಕಾರದಲ್ಲಿ ಅಧ್ಯಯನದ ಅಗತ್ಯವಿದೆ. ಹಲವು ವಾದ್ಯಗಳು ವಿನಾಶದ ಅಂಚಿನಲ್ಲಿವೆ, ಅವುಗಳ ಜ್ಞಾನವನ್ನು ಮುಂದಿನ ಪೀಳಿಗೆಗೆ ಒದಗಿಸುವ ಕಾರ್ಯ ನಡೆಯಬೇಕು ಹಾಗೂ ಈ ನಿಟ್ಟಿನಲ್ಲಿ ಅಧ್ಯಯನಕ್ಕೆ ಅನುಕೂಲವಾದ ವಾತಾವರಣದ ನಿರ್ಮಾಣದ ಅಗತ್ಯವನ್ನು ಈ ಸಂಸ್ಥೆ ಮನಗಂಡಿದೆ. ಈ ಹಿಂದೆ 2015ರಲ್ಲಿ ಸಂಗೀತ ಹಬ್ಬವನ್ನು ಆಯೋಜಿಸಿ ಹತ್ತು ಹಲವು ಕಲಾವಿದರ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿ ಸಂಗೀತದ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದು ಮರೆಯಲಾಗದ ಸಂಗತಿ. 

Advertisement

ಕಲಾಕೋಸ್ಟ್‌ ವಿಶೇಷತೆ

ಸುಮಾರು 2,200 ಚದರ ಅಡಿಯ ಬಯಲು ರಂಗಮಂದಿರವಿದೆ. ಸುಮಾರು 5.5 ಎಕರೆ ಸ್ಥಳದಲ್ಲಿ ಸುಮಾರು 20 ಮನೆಗಳನ್ನು ನಿರ್ಮಿಸಿದ್ದಾರೆ. ಕಲಾವಿದರು, ವಾದ್ಯಗಳು, ಕಲಾ ಸಾಮಗ್ರಿ, ಉಪಕರಣ ತಯಾರಕರು, ಕಾರ್ಯಕ್ರಮ ಸಂಘಟಕರು, ಸಂಗೀತ ತಂಡಗಳು, ಸಂಗೀತ ನಿರ್ಮಾಣ ಸಂಸ್ಥೆ, ಪ್ರಾಯೋಜಕ ಸಂಸ್ಥೆ ಇದೇ ರೀತಿಯಲ್ಲಿ ಸಂಗೀತ ಹಾಗೂ ಅದಕ್ಕೆ ಸಂಬಂಧಿಸಿದ ಸರ್ವರನ್ನು ಒಂದೇ ಸೂರಿನಡಿ ಒಗ್ಗೂಡಿಸುವುದು ಈ ಸಂಸ್ಥೆಯ ಮೂಲ ಉದ್ದೇಶ.

ಸಂಗೀತ ಕಲಿಕೆಗೆ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಪಾಶ್ಚಾತ್ಯ ದೇಶಗಳಲ್ಲಿರುವಂತೆ ಪ್ರತ್ಯೇಕವಾದ ಸಂಗೀತದ ಪಠ್ಯಕ್ರಮ, ಶೈಕ್ಷಣಿಕ ತರಗತಿಗಳು, ಪ್ರಖ್ಯಾತ ಕಲಾವಿದರಿಂದ ಶಿಬಿರ, ತರಬೇತಿಗಳು ಈ ಕೇಂದ್ರದ ವಿಶೇಷತೆ. ಹೀಗೆ ವರ್ಷವಿಡೀ ಸಂಗೀತಕ್ಕೆ ಮೀಸಲಿಟ್ಟು ಸಾಂಪ್ರದಾಯಿಕವಾಗಿ ಗುರುಕುಲದ ಮಾದರಿಯಲ್ಲಿ ವಿದ್ಯಾರ್ಥಿಗಳು ಕಲಿತು ವೃತ್ತಿಪರರಾಗುವ ಗುರಿ ಇದರದ್ದು. 

ಹಾರ್ಮೋನಿಯಂ ಮ್ಯೂಸಿಯಂ
ಸ್ವತಃ ಹಾರ್ಮೋನಿಯಂ ವಾದಕರಾಗಿರುವ ಸುಧೀರ್‌ ನಾಯಕ್‌ ಇವರಿಗೆ ಇಲ್ಲಿ ಹಾರ್ಮೋನಿಯಂ ಉಪಕರಣದ ಮ್ಯೂಸಿಯಂ ನಿರ್ಮಿಸುವ ಕನಸಿದೆ. ವಿವಿಧ ಬಗೆಯ ಅಪರೂಪದ ಹಾರ್ಮೋನಿಯಂಗಳು, ಅದಕ್ಕೆ ಸಂಬಂಧಿಸಿದ ಕಲಿಕಾ ಪುಸ್ತಕ, ಗ್ರಂಥಗಳು ಇಲ್ಲಿರುತ್ತವೆ.

ಇಂದಿನ ಯವಜನರಲ್ಲಿ ಅಗಾಧವಾದ ಪ್ರತಿಭೆ, ಶಕ್ತಿಯಿದೆ. ಅವರಿಗೆ ಅನುರೂಪವಾದ ಮಾರ್ಗದರ್ಶನ, ತರಬೇತಿಯ ಕಾರ್ಯ ನಡೆಯಬೇಕಿದೆ. ಆಗ ಅವರು ಅದ್ಭುತವನ್ನು ಸೃಷ್ಟಿಸಬಲ್ಲರು. ಸಂಗೀತ ಕೇವಲ ಗಾಯನ, ವಾದ್ಯ ನುಡಿಸುವುದಲ್ಲ; ಅದಕ್ಕೆ ಅಪಾರ ಏಕಾಗ್ರತೆ, ತಪಸ್ಸು ಅಗತ್ಯ. ಭಾಷೆಯ ಅಧ್ಯಯನದಿಂದ ಆಯಾ ಭಾಷೆಯ ಉಚ್ಛಾರ, ಸೊಗಡನ್ನು ಆಸ್ವಾದಿಸಬೇಕು ಎನ್ನುತ್ತಾರೆ ಸುಧೀರ್‌ ನಾಯಕ್‌.

ರಮೇಶ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next