Advertisement

ಇಂದಿನಿಂದ ಕಲಘಟಗಿ ಜಾತ್ರೆ

10:52 AM Mar 04, 2020 | Suhan S |

ಕಲಘಟಗಿ: ಪ್ರತಿ ಮೂರು ವರ್ಷಗಳಿಗೊಮ್ಮೆ ಆಚರಿಸುವ ಪಟ್ಟಣದ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಮಾ. 4ರಂದು ಆರಂಭಗೊಂಡು 12ರ ವರೆಗೆ ಬಹು ವಿಜೃಂಭಣೆಯಿಂದ ಜರುಗಲಿದೆ. ಫೆ. 25ರಂದು ಕೊನೆಯ ಹೊರಬಿಡಿಕೆ ವಾರದ

Advertisement

ನಂತರ ಗ್ರಾಮದೇವತೆಯರಿಗೆ ಬಣ್ಣಕ್ಕೆ ಬಿಡಲಾಗಿತ್ತು. ಮಾ. 3ರಂದು ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಹೋಮ, ಹವನ, ದೇವಿಯರ ಪ್ರತಿಷ್ಠಾಪನೆ ನಂತರ ಬಾಬುದಾರರಿಂದ ಮಾಂಗಲ್ಯ ಧಾರಣೆ (ಗುಡದಾಳ) ಕಾರ್ಯಕ್ರಮ ಜರುಗಿತು. ಶ್ರೀ ದೇವಿಯರ ಗಂಡಿನ ಕಡೆಯವರೆನ್ನುವ ಕಲಘಟಗಿ ಬಾಬುದಾರರು ಬೆಂಡಿಗೇರಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಗುಡಿಯ ಸನಿಹ ದಾಸ್ತಿಕೊಪ್ಪ, ಮಾಚಾಪುರ, ಕಲಕುಂಡಿ ಮತ್ತು ಬೆಂಡಿಗೇರಿ ಗ್ರಾಮಗಳ ಬೀಗರನ್ನು ಬರ ಮಾಡಿಕೊಂಡು ದೇವಸ್ಥಾನಕ್ಕೆ ಕರೆತಂದ ಮೇಲೆ ಬೀಗರು ಉಡಿ ತುಂಬಿದರು. ಬಳಿಕ ಕಲಘಟಗಿ ಗ್ರಾಮಸ್ಥರು ಉಡಿ ತುಂಬಿದರು.

ಮಾ. 4ರಂದು ದೇವಸ್ಥಾನದಲ್ಲಿ ಮೂರು ಮುಖದವ್ವಳನ್ನು ಇರಿಸಿ, ಮಧ್ಯಾಹ್ನ ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗವ್ವರನ್ನು ಮೆರವಣಿಗೆಯಲ್ಲಿ ಜೋಳದ ಓಣಿ, ಮಾರ್ಕೆಟ್‌ ರಸ್ತೆ ಮುಖಾಂತರ ಅಕ್ಕಿ ಓಣಿಯಲ್ಲಿರುವ ಚೌತಮನೆ ಕಟ್ಟೆಯ ಜಾತ್ರಾ ಮಂಟಪಕ್ಕೆ ತೆಗೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ.

4ರಂದು ಉಡಿ ತುಂಬುವ ಕಾರ್ಯಕ್ರಮ ಇರುವುದಿಲ್ಲ. 5ರಿಂದ ಉಡಿ ತುಂಬುವ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 5ರಿಂದ 11ರ ವರೆಗೆ ರಾತ್ರಿ 10 ಗಂಟೆಗೆ ಮಹಾ ಮಂಗಳಾರತಿ ಮುಗಿದ ನಂತರ ಭಕ್ತಿ ಗೀತೆ, ಜಾನಪದ ಗೀತೆ, ಡೊಳ್ಳಿನ ಪದ, ಸೋಬಾನ ಪದ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ದೇವಿಯರು ವಿರಾಜಮಾನರಾದ ನಂತರ ಜಾತ್ರಾ ಉತ್ಸವ ಮಂಟಪದಲ್ಲಿ 9 ದಿನಗಳ ಕಾಲ ರಾಣಿಗೇರರು ರಂಗ ಹೊಯ್ದುಕೊಂಡು ಅಕ್ಕಿಯ ರಾಶಿಯನ್ನು ಹರವಿ ದೀಪವನ್ನು ನಿರಂತರವಾಗಿ ಒಂಭತ್ತು ದಿನಗಳವರೆಗೆ ಬೆಳಗುವಂತೆ ಕಾಯುತ್ತಾರೆ. ಮಂಟಪದ ಗೇಟಿನ ಎದುರಿಗೆ ಮಾತಂಗಿಯರು ಗುಡಿಸಲು ನಿರ್ಮಿಸಿ ಹಿಟ್ಟಿನಿಂದ ಕೋಣನ ತಲೆಯನ್ನು ಮಾಡಿ ಅದರ ಮೇಲೆ ದೀಪ ಬೆಳಗಿ 9 ದಿನಗಳ ಕಾಲ ಕಾಯುತ್ತಿರುತ್ತಾರೆ. ದೀಪ ಸದಾ ಬೆಳಗುತ್ತಿದ್ದು ಈ ಆಚರಣೆಯಿಂದ ದುಷ್ಟರ ನಿಗ್ರಹ ಮಾಡಿ ಶಿಷ್ಟರ ರಕ್ಷಣೆಯನ್ನು ದೇವಿಯರು ಮಾಡುವರು ಎಂಬ ವಿಶ್ವಾಸ ಭಕ್ತ ಜನರದ್ದಾಗಿದೆ.

Advertisement

12ರಂದು ಮಧ್ಯಾಹ್ನದ ನಂತರ ಶ್ರೀ ದೇವಿಯರನ್ನು ಜಾತ್ರಾ ಮಂಟಪದಿಂದ ಭಕ್ತರು ಹೊತ್ತುಕೊಂಡು ಹೊರಬರುತ್ತಿದ್ದಂತೆಯೇ ಮಾತಂಗಿ ಗುಡಿಸಲು ಹಾಗೂ ಹಿಟ್ಟಿನಿಂದ ಮಾಡಿದ ಕೋಣವನ್ನು ಸಾಂಕೇತಿಕವಾಗಿ ಸುಟ್ಟು ಬಲಿ ನೀಡಲಾಗುತ್ತದೆ. ಆ ಬೆಂಕಿಯ ಜ್ವಾಲೆಗೆ ಗ್ರಾಮ ದೇವಿಯರು ಮೂರು ಪ್ರದಕ್ಷಿಣೆಗಳನ್ನು ಹಾಕುವರು. ನಂತರ ಗ್ರಾಮ ದೇವಿಯರನ್ನು ಎಪಿಎಂಸಿ ಸನಿಹದಲ್ಲಿರುವ ಪಾದಗಟ್ಟೆಗೆ ತಂದ ನಂತರ ಜಾತ್ರೆಯು ಸಂಪನ್ನಗೊಳ್ಳಲಿದೆ. ಸಂಬಂಧಿ ಸಿದ ಗ್ರಾಮಗಳಲ್ಲಿ ಮಾ. 24ರ ವರೆಗೂ ಸೂತಕವೆಂದು ಆಚರಿಸಲಾಗುತ್ತಿದ್ದು, ಮಾ. 25ರ ಯುಗಾದಿ ಪಾಡ್ಯದಂದು ದೇವಸ್ಥಾನದಲ್ಲಿ ಹೋಮ, ಹವನ ಹಾಗೂ ಶ್ರೀ ದೇವಿಯರ ಪುನರ್‌ ಪ್ರತಿಷ್ಠಾಪನೆ ಜರುಗುವುದರೊಂದಿಗೆ ಶುಭ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತದೆ.

ಇಂದು ಜಾತ್ರೋತ್ಸವಕ್ಕೆ  ಸ್ವಾಮೀಜಿಯಿಂದ ಚಾಲನೆ :  ಮಾ. 4ರಂದು‌ ಸಂಜೆ 7 ಗಂಟೆಗೆ ಅಕ್ಕಿ ಓಣಿಯ ಗ್ರಾಮದೇವಿ ಜಾತ್ರಾ ಮಹಾ ಮಂಟಪದಲ್ಲಿ ಜಾತ್ರಾ ಉತ್ಸವವನ್ನು ಶಿರಹಟ್ಟಿ ಶ್ರೀ ಫಕ್ಕಿರೇಶ್ವರ ಸಂಸ್ಥಾನ ಮಠದ ಶ್ರೀ ಫಕ್ಕಿರೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಮ್ಮಿನಭಾವಿ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು ಉಪದೇಶಾನೃತ ನೀಡಲಿದ್ದಾರೆ. ಗ್ರಾಮದೇವಿ ಟ್ರಸ್ಟ್‌ ಅಧ್ಯಕ್ಷ ಹಾಗೂ ಶಾಸಕ ಸಿ.ಎಂ. ನಿಂಬಣ್ಣವರ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ಮಾಜಿ ಸಚಿವ ಸಂತೋಷ ಲಾಡ್‌ ಆಗಮಿಸಲಿದ್ದಾರೆ.

ಮೂವರು ದೇವಿಯರು :  ಗ್ರಾಮದೇವಿ ದೇವಸ್ಥಾನದಲ್ಲಿ ದ್ಯಾಮವ್ವ, ದುರ್ಗವ್ವ ಮತ್ತು ಮೂರು ಮುಖದವ್ವಾ ಎಂಬ ಮೂವರು ಗ್ರಾಮದೇವತೆಯರಿದ್ದಾರೆ. ಕೆಂಪು ಬಣ್ಣದಲ್ಲಿ ದ್ಯಾಮವ್ವಾ, ಹಸಿರು ಬಣ್ಣದಲ್ಲಿ ದುರ್ಗವ್ವಾ ಮತ್ತು ಮೂರು ಮುಖದವ್ವನ ಒಂದು ಮುಖಕ್ಕೆ ಕೆಂಪು ನಡುವಿನ ಮುಖಕ್ಕೆ ಹಸಿರು ಮತ್ತೂಂದು ಮುಖಕ್ಕೆ ಹಳದಿ ಬಣ್ಣದಲ್ಲಿ ವಿರಾಜಮಾನರಾಗಿದ್ದಾರೆ.

ಬಣ್ಣದೋಕುಳಿ ಇಲ್ಲ  :  ಜಾತ್ರೆಯ ಪೂರ್ವದ ಐದು ವಾರ ಮನೆ ಹಾಗೂ ಗ್ರಾಮದಿಂದ ಹೊರಬಿಡಿಕೆ ವಾರವನ್ನಾಗಿ ಪ್ರತಿಯೊಬ್ಬರೂ ಜಾತ್ಯತೀತವಾಗಿ ಕಡ್ಡಾಯವಾಗಿ ಆಚರಿಸಿದ್ದಾರೆ. ಗ್ರಾಮದೇವಿಯರ ಜಾತ್ರಾ ಆಚರಣೆ ವರ್ಷದಲ್ಲಿ ಹೋಳಿ ಹುಣ್ಣಿಮೆಯ ಬಣ್ಣದ ಓಕುಳಿಯನ್ನೂ ಆಡಬಾರದೆಂಬ ಸಾಂಪ್ರದಾಯಿಕ ಕಟ್ಟಳೆ ಆಚರಣೆಯಲ್ಲಿದೆ.

 

-ಪ್ರಭಾಕರ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next