Advertisement

ಸುಗಮ ಮತ ಎಣಿಕೆ ನಡೆಸಿ

01:02 PM May 17, 2019 | Team Udayavani |

ಕಲಬುರಗಿ: ಗುಲಬರ್ಗಾ ಮೀಸಲು (ಎಸ್‌.ಸಿ) ಲೋಕಸಭಾ ಕ್ಷೇತ್ರ ಮತ್ತು ಚಿಂಚೋಳಿ ಮೀಸಲು (ಎಸ್‌.ಸಿ) ವಿಧಾನಸಭಾ ಉಪಚುನಾವಣೆಯ ಮತಎಣಿಕೆ ಮೇ 23ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಮತಎಣಿಕೆ ಕಾರ್ಯವನ್ನು ಸುಗಮವಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ಅಂದು ಸರಿಯಾದ ಸಮಯಕ್ಕೆ ತಮ್ಮನ್ನು ನಿಯೋಜಿಸಿರುವ ಆಯಾ ವಿಧಾನಸಭಾವಾರು ಮತ ಎಣಿಕೆ ಕೇಂದ್ರಕ್ಕೆ ಹಾಜರಾಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್‌ ಕುಮಾರ ಮತ ಎಣಿಕೆ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

Advertisement

ನಗರದ ಎಸ್‌.ಎಂ. ಪಂಡಿತ್‌ ರಂಗಮಂದಿರದಲ್ಲಿ ಮತ ಎಣಿಕೆ ದಿನದಂದು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಮತ ಎಣಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮತ ಎಣಿಕೆಯ ದಿನದಂದು ವಿವಿಯ ಮುಖ್ಯದ್ವಾರದಲ್ಲಿ ರ್‍ಯಾಂಡಮೈಸೇಷನ್‌ (ಯಾದೃಚ್ಛೀಕರಣ) ಮಾಡಲ್ಪಟ್ಟಿರುವ ಚುನಾವಣಾ ಸಿಬ್ಬಂದಿಯ ಪಟ್ಟಿಯನ್ನು ಮುಂಜಾನೆ 5:30ಕ್ಕೆ ಫಲಕದಲ್ಲಿ ಪ್ರದರ್ಶಿಸಲಾಗುವುದು. ಈ ಸಂಬಂಧ ಅಂದು ಬೆಳಿಗ್ಗೆ ಎಲ್ಲರ ಮೊಬೈಲ್ಗಳಿಗೆ ಸಂದೇಶಗಳು ಕೂಡ ಬರಲಿವೆ. ಸಿಬ್ಬಂದಿ ಮುಂಜಾನೆ ವಿವಿ ಮುಖ್ಯದ್ವಾರದ ಬಳಿ 6 ಗಂಟೆಗೆ ಆಗಮಿಸಿ, ತಮ್ಮನ್ನು ಯಾವ ಮತ ಎಣಿಕೆ ಕೇಂದ್ರಕ್ಕೆ ನಿಯೋಜಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಬಳಿಕ ಮುಖ್ಯದ್ವಾರದಿಂದ ಆಯಾ ಮತ ಎಣಿಕೆ ಕೇಂದ್ರಕ್ಕೆ ಸರ್ಕಾರಿ ಬಸ್‌ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲಿ ತೆರಳಬೇಕು. ನಂತರ ಆಯಾ ಮತ ಎಣಿಕೆ ಕೇಂದ್ರ (ವಿಧಾನಸಭಾವಾರು)ದ ಸಹಾಯಕ ಚುನಾವಣಾಧಿಕಾರಿಗಳ ಬಳಿ ವರದಿ ಮಾಡಿಕೊಂಡು, ರ್‍ಯಾಂಡಮೈಸೇಷನ್‌ ಮಾಡಲ್ಪಟ್ಟ ಟೇಬಲ್ಗಳಿಗೆ ಹೋಗಿ ಆಸಿನರಾಗಬೇಕು ಎಂದರು.

ಲೋಕಸಭೆಯ ಪ್ರತಿ ವಿಧಾನಸಭಾ ಮತ ಎಣಿಕೆ ಕೇಂದ್ರಕ್ಕೆ 5 ರಿಂದ 10 ಮಂದಿ ಕಾಯ್ದಿರಿಸಿದ (ಹೆಚ್ಚುವರಿ) ಸಿಬ್ಬಂದಿ ನಿಯೋಜಿಸಲಾಗುತ್ತಿದ್ದು, ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೂ ಕಡ್ಡಾಯವಾಗಿ ಕೇಂದ್ರದಲ್ಲೇ ಇರಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಪ್ರತಿ ಸುತ್ತು ಮತ ಎಣಿಕೆ ಕುರಿತ ಪತ್ರಗಳಿಗೆ ಆಯಾ ಟೇಬಲ್ ಏಜೆಂಟರ ಸಹಿ ಕಡ್ಡಾಯವಾಗಿ ಮಾಡಿಸಬೇಕು. ಇಲ್ಲದಿದ್ದರೆ ಮುಂದೆ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳು ಆಕ್ಷೇಪಣೆ ಸಲ್ಲಿಸಬಹುದು. ಹಾಗಾಗಿ ತಪ್ಪದೇ ಸಹಿ ಮಾಡಿಸಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದ 5 ವಿವಿಪ್ಯಾಟ್‌ಗಳ ಸ್ಲಿಪ್‌ ಎಣಿಕೆ ಸಹ‌ ಮಾಡಬೇಕಾಗಿರುವುದರಿಂದ ಯಾವುದೇ ಗೊಂದಲವಾಗದಂತೆ ಎಣಿಸಬೇಕು. ಪ್ರತಿಬಾರಿ 12:30ರ ವರೆಗೆ ಫಲಿತಾಂಶ ಹೊರಬೀಳುತ್ತಿತ್ತು. ಈ ಬಾರಿ ವಿವಿಪ್ಯಾಟ್‌ಗಳ ಸ್ಲಿಪ್‌ ಮತ ಎಣಿಕೆಯಿಂದಾಗಿ ಮಧ್ಯಾಹ್ನ 3 ಅಥವಾ 4 ಗಂಟೆಗೆ ಫಲಿತಾಂಶ ಬರಬಹುದು ಎಂದು ಅವರು ತಿಳಿಸಿದರು. ಸೇಡಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ| ಶಶಿಶೇಖರ್‌ ರೆಡ್ಡಿ ಮಾತನಾಡಿದರು. ಚಿಂಚೋಳಿ ಮೀಸಲು (ಎಸ್‌.ಸಿ) ವಿಧಾನಸಭಾ ಉಪಚುನಾವಣೆಗೆ ನೇಮಕವಾಗಿರುವ ಸಾಮಾನ್ಯ ವೀಕ್ಷಕ ಬಿ.ರಾಮರಾವ್‌, ಉಪ ಚುನಾವಣೆಯ ಚುನಾವಣಾಧಿಕಾರಿ ಸೋಮಶೇಖರ್‌ ಎಸ್‌.ಜಿ, ಪಾಲಿಕೆ ಆಯುಕ್ತೆ ಫೌಜಿಯಾ ಬಿ. ತರನ್ನುಮ, ಜಿಪಂ ಉಪ ಕಾರ್ಯದರ್ಶಿ ಅಶೋಕ್‌ ದುಡಗುಂಟಿ, ಕೆ. ರಾಮೇಶ್ವರಪ್ಪ, ಸುಧೀಂದ್ರ ಅವಧಾನಿ, ಎಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರು ಹಾಜರಿದ್ದರು.

ವಿವಿಯ ಪರೀಕ್ಷಾ ವಿಭಾಗದ ಹಾಲ್ನಲ್ಲಿ ಚಿತ್ತಾಪುರ, ಗುಲ್ಬರ್ಗಾ ಗ್ರಾಮೀಣ ಹಾಗೂ ಜೇವರ್ಗಿ ವಿಧಾನಸಭಾ ಕ್ಷೇತ್ರ, ಒಳಾಂಗಣ ಕ್ರೀಡಾಂಗಣದಲ್ಲಿ ಗುಲ್ಬರ್ಗಾ ಉತ್ತರ ಮತ್ತು ಗುರುಮಠಕಲ್ ಮತಕ್ಷೇತ್ರ, ಗಣಿತಶಾಸ್ತ್ರ ವಿಭಾಗದಲ್ಲಿ ಅಫಜಲಪುರ ಹಾಗೂ ಸಸ್ಯಶಾಸ್ತ್ರ ವಿಭಾಗದಲ್ಲಿ ಗುಲ್ಬರ್ಗಾ ದಕ್ಷಿಣ ಮತಕ್ಷೇತ್ರ, ಕನ್ನಡ ಅಧ್ಯಯನ ಕೇಂದ್ರ ಸಭಾಂಗಣ (ನೆಲಮಹಡಿ) ಸೇಡಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿವೆ. ಹಾಗೆಯೇ ಕನ್ನಡ ಅಧ್ಯಯನ ಕೇಂದ್ರ ಸಭಾಂಗಣದ ಮೊದಲ ಮಹಡಿಯಲ್ಲಿ ಚಿಂಚೋಳಿ ವಿಧಾನಸಭಾ ಉಪಚುನಾವಣೆ ಮತ ಎಣಿಕೆ ನಡೆಯಲಿದೆಂದು ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next