Advertisement

ಪರ್ಯಾಯ ಜಲಮೂಲ ಪತ್ತೆ ಮಾಡಿ

11:25 AM May 05, 2019 | Naveen |

ಕಲಬುರಗಿ: ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿರುವ 133 ಗ್ರಾಮಗಳಿಗೆ 140 ಟ್ಯಾಂಕರ್‌ ಮೂಲಕ ಪ್ರತಿನಿತ್ಯ ಸುಮಾರು 435 ಟ್ರಿಪ್‌ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರವಾಗಿದೆ. ಇಂತಹ ಕ್ಲಿಷ್ಟಕರ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಲು ಟ್ಯಾಂಕರ್‌ ಬದಲಾಗಿ ಪರ್ಯಾಯವಾಗಿ ಜಲಮೂಲ ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ಸೂಚನೆ ನೀಡಿದರು.

Advertisement

ಶನಿವಾರ ರಾತ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಳೆದ ಎರಡ್ಮೂರು ತಿಂಗಳಿಂದ ಜಿಲ್ಲೆಯ ಹಲವು ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್‌ ನೀರು ಪೂರೈಸುವ ಗ್ರಾಮದಲ್ಲಿ ಜಲಮೂಲ ಪತ್ತೆ ಹಚ್ಚಿ ಹೊಸದಾಗಿ ಕೊಳವೆ ಬಾವಿ, ಬೋರವೆಲ್ ಕೊರೆಯಿರಿ. ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಗ್ರಾಮದ ಅಕ್ಕಪಕ್ಕದ ಖಾಸಗಿ ಜಮೀನಿನಲ್ಲಿರುವ ತೆರೆದ ಬಾವಿ, ಬೋರವೆಲ್ ಜಲಮೂಲಗಳಿದ್ದಲ್ಲಿ ಅದನ್ನು ಸರ್ಕಾರಕ್ಕೆ ವಶಕ್ಕೆ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಬೇಕು ಎಂದರು.

ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವ ಬಗ್ಗೆ ತಾಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಗ್ರಾಪಂ ಪಿ.ಡಿ.ಒ.ಗಳು ನಿಗಾ ವಹಿಸಬೇಕು. ಜಿ.ಪಿ.ಎಸ್‌. ತಂತ್ರಾಂಶ ಪರಿಶೀಲಿಸಿಯೆ ಹಣ ಪಾವತಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತುರ್ತಾಗಿ ಕಾಮಗಾರಿ ಕೈಗೊಳ್ಳಲು ಟಾಸ್ಕ್ ಫೋರ್ಸ್‌ ಸಮಿತಿ ಅನುಮೋದನೆ ನೀಡಿದೆ. ಕುಡಿಯುವ ನೀರಿನ ಯೋಜನೆಗಳನ್ನು ಮಿಷನ್‌ ಮೋಡ್‌ನ‌ಲ್ಲಿ ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸೂಚಿಸಿದರು.

ಜಿಲ್ಲೆಯ ಆಳಂದ, ಅಫಜಲಪುರ ಮತ್ತು ಜೇವರ್ಗಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು ಖುದ್ದಾಗಿ ನೀರಿನ ಅಭಾವವಿರುವ ಗ್ರಾಮಗಳಿಗೆ ತೆರಳಿ ವಾಸ್ಥವ ಸ್ಥಿತಿ ಅರಿತು ಪರಿಹಾರ ಕಾರ್ಯಕ್ಕೆ ಚರುಕು ಮೂಡಿಸಬೇಕು. ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮಕ್ಕೆ ಕಳೆದೆರಡು ತಿಂಗಳಿನಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಗ್ರಾಮದ ಆಸುಪಾಸು ತೆರೆದ ಬಾವಿಗಳಲ್ಲಿ ನೀರು ಲಭ್ಯವಿದ್ದಲ್ಲಿ ಪೈಪ್‌ಲೈನ್‌ ಅಳವಡಿಸಿ ಗ್ರಾಮಕ್ಕೆ ನೀರು ಸರಬರಾಜು ಮಾಡುವತ್ತ ಅಧಿಕಾರಿಗಳು ಯೋಚಿಸಬೇಕು ಎಂದರು.

Advertisement

ನೀರಿನ ಸಮಸ್ಯೆಯಿರುವ ಅಫಜಲಪುರ ತಾಲೂಕಿನ ಅತನೂರ, ಮಾಶಾಳ ಸೇರಿದಂತೆ ಇನ್ನೀತರ ಗ್ರಾಮಗಳಲ್ಲಿ ಭೂವಿಜ್ಞಾನಿಯ ಸಲಹೆ ಪಡೆದು ಕೂಡಲೆ ಕೊಳವೆ ಬೋರವೆಲ್ ಕೊರೆಯಬೇಕು. ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮಕ್ಕೆ ಓರಿಯೆಂಟ್ ಸಿಮೆಂಟ್ ಕಂಪನಿಯಿಂದಲೆ ನೀರು ಸರಬರಾಜು ಮಾಡುವಂತೆ ನಿರ್ದೇಶನ ನೀಡಬೇಕು. ಬೆಣ್ಣೂರ, ಪೇಠಶಿರೂರನಲ್ಲಿಯೂ ಕೊಳವೆ ಬೋರವೆಲ್ ಕೊರೆಯಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಸ್ವಚ್ಛತೆ ಕಾಪಾಡಿ: ನಗರ-ಪಟ್ಟಣ ವಾಸಿಗಳಿಗೆ ನೀರು ಸರಬರಾಜು ಮಾಡಲು ಯಾವುದೇ ತೊಂದರೆಯಿಲ್ಲ, ಆದರೆ ಜಲಮಂಡಳಿಯವರು ಸ್ವಚ್ಛ ಕುಡಿಯುವ ನೀರು ಸರಬರಾಜಿಗೆ ಗಮನಹರಿಸಬೇಕು ಎಂದರು.

ಜಿಪಂ ಸಿಇಒ ಡಾ| ರಾಜಾ ಪಿ. ಮಾತನಾಡಿ, ಬರ ಪರಿಹಾರ ಕಾಮಗಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪಿ.ಡಿ.ಒ., ತಾಪಂ, ತಹಶೀಲ್ದಾರರು, ಜಲ ಮಂಡಳಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಆಳಂದ ತಾಲೂಕಿನ ರುದ್ರವಾಡಿ ಗ್ರಾಮದಲ್ಲಿ ಖಾಸಗಿ ಬೋರವೆಲ್ ಮೂಲಕ ನೀರು ಪಡೆಯಲು ಒಪ್ಪಂದ ಮಾಡಿಕೊಂಡರೂ ನೀರು ಸರಬರಾಜಿಗೆ ಕ್ರಮ ವಹಿಸದ ಅಲ್ಲಿನ ಪಿ.ಡಿ.ಒ ಹಾಗೂ ನೀರು ಸರಬರಾಜು ಕಿರಿಯ ಅಭಿಯಂತರರಿಗೆ ನೋಟಿಸ್‌ ಜಾರಿ ಮಾಡಬೇಕು ಎಂದು ಹೇಳಿದರು.

ವಿ.ಕೆ. ಸಲಗರ್‌ ಗ್ರಾಮದಲ್ಲಿ ಈಗಾಗಲೆ ಖಾಸಗಿ ಜಮೀನಿನಲ್ಲಿ ಬಾವಿ ಕೊರೆದಿದ್ದು, ಕೊರೆದ ಬಾವಿಯ ಮಣ್ಣು ನೀರಿನಲ್ಲಿ ಬೀಳುತ್ತಿದೆ. ಇದನ್ನು ತಪ್ಪಿಸಲು ತಡೆಗೋಡೆ ನಿರ್ಮಿಸಿ ಅಲ್ಲಿಂದ ನೀರು ಪಡೆಯಲು ಜಮೀನು ಮಾಲೀಕರೊಂದಿಗೆ ಗ್ರಾಮ ಪಂಚಾಯತಿಯೂ ಒಪ್ಪಂದ ಮಾಡಿಕೊಳ್ಳಬೇಕು ಎಂದರು.

ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ 14 ಮೇವು ಬ್ಯಾಂಕ್‌ ಸ್ಥಾಪಿಸಲಾಗಿದ್ದು, ರೈತರು ಇಲ್ಲಿಂದ ಹಸುಗಳಿಗೆ ಮೇವು ಪಡೆಯುತ್ತಿದ್ದಾರೆ. 10 ವಾರಗಳಿಗೆ ಬೇಕಾಗುವಷ್ಟು 44 ಮೆಟ್ರಿಕ್‌ ಟನ್‌ ಮೇವು ಲಭ್ಯವಿದೆ ಎಂದರು. ಪಾಲಿಕೆ ಆಯುಕ್ತೆ ಬಿ.ಫೌಜಿಯ ತರನ್ನುಮ, ರಾಹುಲ್ ಪಾಂಡ್ವೆ, ಜಿಲ್ಲೆಯ ತಹಶೀಲ್ದಾರರು, ಇದ್ದರು.

ಗ್ರಾಮಕ್ಕೆ ಸಮರ್ಪಕವಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ತಪ್ಪು ಮಾಹಿತಿ ನೀಡಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿರುವ ಆಳಂದ ತಾಲೂಕಿನ ಬೋಳನಿ ಪಿ.ಡಿ.ಒ.ಗೆ ಶೋಕಾಸ ನೋಟಿಸ್‌ ಜಾರಿ ಮಾಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಬರ ಪರಿಹಾರ ಕಾಮಗಾರಿಗಳಲ್ಲಿ ಯಾವುದೇ ಅಧಿಕಾರಿ-ಸಿಬ್ಬಂದಿ ರಾಜಕೀಯ ಮಾಡುತ್ತಿರುವವರ ಮಾಹಿತಿ ನೀಡಿದಲ್ಲಿ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next