Advertisement

ಕರಾವಳಿ ಮಹಿಳೆಯರಲ್ಲಿನ ಧೈರ್ಯ ನಮ್ಮಲ್ಲೂ ಬರಲಿ

04:17 PM Oct 14, 2019 | Naveen |

ಕಲಬುರಗಿ: ಮಂಗಳೂರು, ಉಡುಪಿ, ಕಾರವಾರ, ಜಿಲ್ಲೆಗಳಲ್ಲಿನ ಕುಟುಂಬದಲ್ಲಿ ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡಿ, ಅವರುಗಳಿಗೆ ಪುರುಷರು ಪರಸ್ಪರ ಹೊಂದಾಣಿಕೆ ಮನೋಭಾವದಿಂದ ಸಹಕಾರ ನೀಡುತ್ತಿರುವುದರಿಂದ ಅಲ್ಲಿನ ಮಹಿಳೆಯರು ಧೈರ್ಯದಿಂದ ಮುಂದೆ ಬರಲು ಸಾಧ್ಯವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದನ್‌ ಹೇಳಿದರು.

Advertisement

ನಗರದ ಹಿಂದಿ ಪ್ರಚಾರ ಸಭಾದಲ್ಲಿ ಕಲಬುರಗಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾದ ಸಂಯೋಗ-ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕರಾವಳಿ ರೀತಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿಯೂ ಮಹಿಳೆಯರಿಗೂ ಎಲ್ಲ ರಂಗಗಳಲ್ಲಿ ಮುಂದೆ ಬರಲು, ತಮ್ಮ ಪ್ರತಿಭೆ ತೋರಲು ಸಹಕಾರ ಮನೋಭಾವನೆಯಿಂದ ಪರಸ್ಪರ ಪ್ರೀತಿ, ವಿಶ್ವಾಸ ತೋರಿಸಿ ಮಹಿಳೆಯರು ಪ್ರಗತಿ ಹೊಂದಲು ಸಹಕಾರ ನೀಡಬೇಕೆಂದು ಪುರುಷರಿಗೆ ಕರೆ ನೀಡಿದರು.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅನ್ಯಾಯ ಅತ್ಯಾಚಾರಗಳನ್ನು ಒಗ್ಗಟ್ಟಿನಿಂದ ಗಟ್ಟಿ ಧನಿಯಿಂದ ಪ್ರತಿಭಟಿಸಿ ಮಹಿಳಾ ಆಯೋಗದ ಮುಖಾಂತರ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಮೀರಾ ಪಂಡಿತ ಮಾತನಾಡಿ, ಸರಕಾರಿ ಕಚೇರಿಯಲ್ಲಿ ವೈಯಕ್ತಿಕವಾಗಿ ತನಗೆ ಪುರುಷ ಮೇಲಾಧಿಕಾರಿಗಳಿಂದ ಆದ ದೌರ್ಜನ್ಯವನ್ನು ಹೇಳಿಕೊಂಡು ಅದನ್ನು ಧೈರ್ಯವಾಗಿ ಎದುರಿಸಿ ಆರೋಪಿ ಅಧಿಕಾರಿಗೆ ಶಿಕ್ಷೆ ಕೊಡಿಸಿದ ಬಗ್ಗೆ ವಿವರಿಸಿದರು.

Advertisement

ಪ್ರತಿಯೊಂದು ಸರ್ಕಾರಿ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ ಮಹಿಳಾ ಸಹೋದ್ಯೋಗಿಗಳ ಮೇಲೆ ಮೇಲಾಧಿಕಾರಿಗಳಿಂದ ಆಗುವ ಲೈಂಗಿಕ ದೌರ್ಜನ್ಯ, ಅನ್ಯಾಯ ಅತ್ಯಾಚಾರಗಳನ್ನು ಪ್ರತಿಭಟಿಸಿ ಆರೋಪಿತ ಅಧಿಕಾರಿ, ನೌಕರರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕೆಂದು ಮೀರಾ ಪಂಡಿತ ಆಗ್ರಹಿಸಿದರು.

ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಶಿವಾನಂದ ಕಲಿಕೇರಿ ಮಾತನಾಡಿ, ಐ.ಎ.ಎಸ್‌ ಹಾಗೂ ಐ.ಪಿ.ಎಸ್‌ ಪರೀಕ್ಷೆಗಳಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗುತ್ತಾರೆ.

ಆದರೆ ಇತ್ತೀಚೆಯ ದಿನಗಳಲ್ಲಿ ಕರ್ನಾಟಕದ ಅಭ್ಯಾರ್ಥಿಗಳು ಪಾಸಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದ್ದರಿಂದ ಕರ್ನಾಟಕದ ವಿದ್ಯಾರ್ಥಿಗಳು ಶ್ರಮವಹಿಸಿ, ನಿರಂತರ ಅಭ್ಯಾಸ ಮಾಡಿ ಹೆಚ್ಚು ಸಂಖ್ಯೆಯಲ್ಲಿ ಐಎಎಸ್‌ ಹಾಗೂ ಐಪಿಎಸ್‌ ಪರೀಕ್ಷೆಯಲ್ಲಿ ಪಾಸಾಗಬೇಕೆಂದರು.

ನಿವೃತ್ತ ಅಧಿಕಾರಿ ಅಪ್ಪಾರಾವ್‌ ಅಕ್ಕೋಣಿ ಅಧ್ಯಕ್ಷತೆ ವಹಿಸಿ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಕಾನೂನು ಕಾಯ್ದೆ ಮುಖಾಂತರ ಇತ್ಯರ್ಥ ಪಡಿಸಿಕೊಳ್ಳಲು ನ್ಯಾಯಲಯವು ಸೂಕ್ತ ಸಾಕ್ಷಿ ಹಾಗೂ ಪೂರಕ ದಾಖಲೆಗಳನ್ನು ಕೇಳುತ್ತದೆ. ಅದನ್ನು ಒದಗಿಸಿಕೊಡಲು ಮಹಿಳೆಯರಿಗೆ ಕಷ್ಟವಾಗುತ್ತದೆ. ಇದರಿಂದ ವ್ಯತಿರಿಕ್ತ ತೀರ್ಮಾನ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಹಿಳೆಯರು ಮತ್ತು ಪುರಷರು ಮುಕ್ತ ಮನ್ನಸ್ಸಿನಿಂದ ಪರಸ್ಪರ ಹೊಂದಣಿಕೆ ಮನೋಭಾವದಿಂದ ಹಾಗೂ ರಾಜೀ ಸೂತ್ರಗಳ ಆಧಾರದ ಮೇಲೆ ಇತ್ಯರ್ಥ ಪಡೆಸಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ವೇಳೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಧಾರ್ಶನಿಕ ಸಮೂಹ ಸಂಸ್ಥೆ, ಬೆಂಗಳೂರು ಕೊಡಮಾಡುವ 2018-19ನೇ ಸಾಲಿನ ರಾಜ್ಯ ಮಟ್ಟದ ಸಂಶೋಧನಾ ಪ್ರಕಟಣಾ ಪುರಸ್ಕಾರಕ್ಕೆ ಭಾಜನಾರಾದ ಗುಲಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ| ಎ.ದಯಾನಂದ ಅವರಿಗೆ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ನಾಗಣ್ಣ ಗಣಲಖೇಡ, ಅರವಿಂದ ಗುರುಜೀ, ಶಿವಕುಮಾರ ಮಡಿವಾಳ, ದೇವಿಂದ್ರಪ್ಪ ತೋಟನಳ್ಳಿ, ಅಶೋಕ ರಂಜೋಳ, ಬಸವರಾಜ ಸಾಹು ಸೇಡಂ, ಡಾ| ಸರ್ವಮಂಗಳ ಪಾಟೀಲ, ಸುಜಾತಾ ಪಾಟೀಲ, ಸುನಂದಾ ಹೊನ್ನರಾವ್‌, ನಂದರಾಣಿ ಹಮೀಲ್‌ಪುರಕರ್‌ ಇನ್ನಿತರರು ಇದ್ದರು.

ಅರ್ಚನಾ ತಾಜಸುಲ್ತಾನಪುರ ಪ್ರಾರ್ಥನಾಗೀತೆ ಹಾಡಿದರು. ಉಪನ್ಯಾಸಕ ಸವಿತಾ ನಾಶಿ ನಿರೂಪಿಸಿದರು, ಅಶೋಕ ಗುರೂಜಿ ಸ್ವಾಗತಿಸಿದರು. ಪ್ರೊ|ಡಾ| ಎ. ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಣ್ಣ ಮಡಿವಾಳ, ಶ್ವೇತಾ ಎಸ್‌. ಮಡಿವಾಳ ಪರಿಚಯಿಸಿದರು, ರವಿ ಶಹಾಪೂರಕರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next