Advertisement

ಮೂರು ಸಾವಿರ ಹೆಕ್ಟೇರ್‌ಗೆ ಪರಿಹಾರ

09:59 AM Aug 16, 2019 | Team Udayavani |

ಕಲಬುರಗಿ: ವಾರದ ಹಿಂದೆ ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಜಲಾಶಯದಿಂದ ಹರಿ ಬಿಡಲಾದ ನೀರಿನಿಂದ ಭೀಮಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಹಾನಿಗೀಡಾದ ಮೂರು ಸಾವಿರ ಹೆಕ್ಟೇರ್‌ಗೆ ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದರು.

Advertisement

ನಗರದ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ದೇಶದ 73ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಹೆಕ್ಟೇರ್‌ಗೆ ಕೇಂದ್ರದ 3800 ರೂ. ಹಾಗೂ ರಾಜ್ಯ ಸರ್ಕಾರದ 6200 ರೂ. ಸೇರಿಸಿ ಒಟ್ಟಾರೆ 10 ಸಾವಿರ ರೂ. ಪರಿಹಾರ ನೀಡಲಾಗುವುದು. ಈಗಾಗಲೇ ಹಾನಿಯಾದ ಭೂಮಿಯನ್ನು ಸಂಪೂರ್ಣ ಗುರುತಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಪರಿಹಾರ ಮೊತ್ತ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಜಿಲ್ಲೆಯ ಅಫಜಲಪುರ ತಾಲೂಕಿನ 17, ಜೇವರ್ಗಿ ತಾಲೂಕಿನ 08, ಕಲಬುರಗಿ ತಾಲೂಕಿನ ಐದು ಹಾಗೂ ಚಿತ್ತಾಪುರ ತಾಲೂಕಿನ ಒಂದು ಗ್ರಾಮ ಹೀಗೆ ಒಟ್ಟು 31 ಗ್ರಾಮಗಳು ಪ್ರವಾಹಕ್ಕೆ ಈಡಾಗಿವೆ. ಜಿಲ್ಲೆಯ ಸಂಸದರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳ ಸಲಹೆ ಪಡೆದು ಕಂದಾಯ, ಪೊಲೀಸ್‌, ಜೆಸ್ಕಾಂ, ಗ್ರಾಮೀಣಾಭಿವೃದ್ಧಿ, ಅಗ್ನಿ ಶಾಮಕ, ನೀರಾವರಿ ಮೊದಲಾದ ಇಲಾಖೆಗಳ ಶ್ರಮದಿಂದ ಪರಿಸ್ಥಿತಿಯನ್ನು ಎದುರಿಸಲಾಯಿತು. ಅಲ್ಲದೇ ವಿಶೇಷವಾಗಿ ಪ್ರವಾಹ ಸಂತ್ರಸ್ತ ಜನರ ಜೀವ ರಕ್ಷಣೆಗೆ ಸಿಕಿಂದರಬಾದ್‌ನ 202 ಇಂಜಿನಿಯರ್ಸ್‌ ರೆಜಿಮೆಂಟ್ ಸೈನಿಕರು ತೋರಿದ ಸೇವೆಯೂ ಸ್ಮರಣೀಯ ಎಂದರು.

ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ದಿನದಂದೇ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕೇಂದ್ರ ಸರ್ಕಾರದ 6000 ರೂ. ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 4000 ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಯೋಜನೆಯಡಿ ಜಿಲ್ಲೆಯಲ್ಲಿ 2,70,226 ರೈತರು ಸ್ವಯಂ ಘೋಷಣಾ ಪತ್ರಗಳನ್ನು ರೈತರಿಂದ ಸ್ವೀಕರಿಸಿ ದತ್ತಾಂಶ ನಿರ್ವಹಣೆ ಮಾಡಲಾಗಿದೆ. ಈ ಪೈಕಿ 88,838 ರೈತ ಫಲಾನುಭವಿಗಳಿಗೆ ಮೊದಲನೇ ಕಂತಾಗಿ 2000 ರೂ. ರಂತೆ ಪ್ರತಿ ರೈತರ ಖಾತೆಗೆ ಸಹಾಯಧನ ನೀಡಲಾಗಿದ್ದು, ಜಿಲ್ಲೆಯ ರೈತರಿಗೆ ಇದುವರೆಗೆ 17.77 ಕೋಟಿ ರೂ. ಸಂದಾಯ ಮಾಡಲಾಗಿದೆ ಎಂದು ತಿಳಿಸಿದರು.

371ನೇ (ಜೆ)ಕಲಂ ಅನ್ವಯ ರಚನೆಯಾದ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2019-20ನೇ ಸಾಲಿಗೆ ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ 1500 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದು, ಈ ಭಾಗದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ ಎಂದರು.

Advertisement

ಬರ, ಪ್ರವಾಹ ಮೊದಲಾದ ಸನ್ನಿವೇಶಗಳಲ್ಲಿ ರೈತರಿಗೆ ನೆರವು ನೀಡಲು ಉದ್ದೇಶಿಸಲಾಗಿದೆ. ಕೃಷಿ ವಿಮೆಗಾಗಿ ಜಿಲ್ಲೆಯ 454 ಹಳ್ಳಿಗಳಲ್ಲಿ ಬೆಳೆಗಳಿಗೆ ಸಂಬಂಧಿಸಿದಂತೆ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಎಳ್ಳು, ಉದ್ದು, ಹೆಸರು ಮತ್ತು ಸೋಯಾಬೀನ್‌ ಮೊದಲಾದ ಬೆಳೆಗಳಿಗೆ ಸಂಬಂಧಿಸಿದಂತೆ ಒಟ್ಟು 3,37,000 ಪ್ಲಾಟುಗಳ ಬೆಳೆ ಸಮೀಕ್ಷೆ ಕೈಗೊಂಡು ಶೇ. 90ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ವಾಡಿ-ಗದಗ ರೈಲ್ವೆ ಯೋಜನೆಯಡಿ ಜಿಲ್ಲೆಯಲ್ಲಿ ಜೇವರ್ಗಿ ಮತ್ತು ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 294 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 251 ಎಕರೆಗೆ ಬೆಲೆ ನಿಗದಿಪಡಿಸಲಾಗಿದೆ. ಈ ಪೈಕಿ 251 ಎಕರೆ ಜಮೀನಿಗೆ ರಾಜ್ಯ ಸರ್ಕಾರ 80 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಆ ಪೈಕಿ 219 ಎಕರೆ ಜಮೀನಿಗೆ ಒಟ್ಟು 55 ಕೋಟಿ ರೂ. ಪರಿಹಾರವನ್ನು ರೈತರ ಖಾತೆಗೆ ಸಂದಾಯ ಮಾಡಲಾಗಿದೆ ಎಂದು ತಿಳಿಸಿದರು.

ಸನ್ಮಾನ: ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಸೈಯದ್‌ ಖುರ್ಶಿದ್‌ ಅಲಿ ಮುನೀರ ಅಲಿ, ವೆಂಕಟರಾವ್‌ ಅರ್ಜುನರಾವ್‌ ಶಿಂಧೆ, ಸೀತಾರಾಮ ಭೀಮುನಾಯ್ಕ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು. ನಂತರ 2019ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಚಿತ ಲ್ಯಾಪಟಾಪ್‌ ವಿತರಿಸಲಾಯಿತು. ದ್ವಿತೀಯ ಪಿಯುಸಿ ಸಿಇಟಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಮೂವರು ಕ್ರೀಡಾಪಟುಗಳನ್ನು ಗಣ್ಯರು ಸನ್ಮಾನಿಸಿದರು.

ಭಾರತದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪರೇಡ್‌ ಕಮಾಂಡರ್‌ ಆರ್‌.ಪಿ.ಐ. ಚನ್ನಬಸಪ್ಪ ಹಾಗೂ ಸಹಾಯಕ ಪರೇಡ್‌ ಕಮಾಂಡರ್‌ ಡಿ.ಎ.ಆರ್‌. ಆರ್‌.ಎಸ್‌.ಐ ಹನುಮಂತ ನೇತೃತ್ವದಲ್ಲಿ ನಡೆದ ಪರೇಡ್‌ನ‌ಲ್ಲಿ ಡಿ.ಎ.ಆರ್‌., ಸಿವಿಲ್, ಕೆ.ಎಸ್‌.ಆರ್‌.ಪಿ., ಗೃಹ ರಕ್ಷಕದಳ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಭಾರತ ಸೇವಾ ದಳ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಅಂಧ ಬಾಲಕರ ವಸತಿ ಶಾಲೆ, ವಿವಿಧ ಶಾಲೆ ವಿದ್ಯಾರ್ಥಿಗಳು, ಪೊಲೀಸ್‌ ವಾದ್ಯ ವೃಂದ ಸೇರಿದಂತೆ ಒಟ್ಟು 13 ತುಕಡಿಗಳು ಭಾಗವಹಿಸಿದ್ದವು.

ಸಾಂಸ್ಕೃತಿಕ ಕಾರ್ಯಕ್ರಮ: ಕೆ.ಜಿ.ಬಿ. ವಸತಿ ಶಾಲೆಯ ಕ್ರಾಂತಿವೀರ ಸಂಗೊಳ್ಳಿ ರಾಮಣ್ಣ ಕುರಿತ ರೂಪಕ ಮತ್ತು ಶರಣಬಸವೇಶ್ವರ ವಸತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಭರತ ನಾಟ್ಯ, ಮಲ್ಲಕಂಭ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.

ಸಂಸದ ಡಾ| ಉಮೇಶ ಜಾಧವ, ಕಲಬುರಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನ ಪರಿಷತ್‌ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶೋಭಾ ಸಿದ್ಧು ಶಿರಸಗಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ, ಈಶಾನ್ಯ ವಲಯದ ಪೊಲೀಸ್‌ ಮಹಾ ನಿರೀಕ್ಷಕ ಹಾಗೂ ಕಲಬುರಗಿ ನಗರ ಪೊಲೀಸ್‌ ಆಯುಕ್ತ ಮನೀಷ ಖರ್ಬಿಕರ್‌, ಜಿಲ್ಲಾ ಪೊಲೀಸ್‌ ವರಿಷಾಧಿuಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಡಾ| ಬಿ. ಗೋಪಾಲಕೃಷ್ಣ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next