Advertisement

ಹೈಕದಲ್ಲಿ ಕೆಂಡ ಉಗುಳುತ್ತಿರುವ ಸೂರ್ಯ

09:39 AM May 30, 2019 | Team Udayavani |

ರಂಗಪ್ಪ ಗಧಾರ
ಕಲಬುರಗಿ:
ಬಿಸಿಲಿಗೆ ಹೆಸರಾಗಿರುವ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಪ್ರಸಕ್ತ ವರ್ಷ ಸೂರ್ಯ ಕೆಂಡ ಉಗುಳುತ್ತಿದ್ದು, ಸೂರ್ಯನ ಪ್ರತಾಪಕ್ಕೆ ನಾಗರಿಕರು ಕಂಗೆಟ್ಟು ಹೋಗಿದ್ದಾರೆ. ಗರಿಷ್ಠ 45 ಡಿಗ್ರಿ ಸೆಲಿಯಸ್ಸ್ ಉಷ್ಣಾಂಶ ಇದ್ದರೆ, ಕನಿಷ್ಠ ಉಷ್ಣಾಂಶವೇ ಪ್ರತಿ ದಿನ 30 ಡಿಗ್ರಿ ಸೆಲಿಯಸ್ಸ್ ದಾಖಲಾಗುತ್ತಿದೆ.

Advertisement

ಹೈಕ ಪ್ರದೇಶದ ಜನತೆಗೆ ಬಿಸಿಲು ಹೊಸದಲ್ಲ. ಆದರೆ, ಬಿಸಿಲಿನ ಝಳದೊಂದಿಗೆ ಬಿಸಿ ಗಾಳಿ ಬೀಸುತ್ತಿದೆ. ಮುಖಕ್ಕೆ ಗಾಳಿ ತಾಗುತ್ತಿದ್ದಂತೆ ಸುಡುವ ಕೆಂಡವೇ ತೆಗೆದು ಬಾರಿಸಿದಂತೆ ಭಾಸವಾಗುತ್ತದೆ. ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಿತ್ಯ 42ರಿಂದ 45 ಡಿಗ್ರಿ ಸೆಲಿಯಸ್ಸ್ ತಾಪಮಾನ ದಾಖಲಾಗುತ್ತಿದೆ.

ಕಲಬುರಗಿಯಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಬಿಸಿಲಿನ ತಾಪ ಹೆಚ್ಚುತ್ತಲೇ ಹೋಗುತ್ತದೆ. ಇದರಿಂದ ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರಗೆ ಕಾಲಿಡಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಮಾರ್ಚ್‌, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾದರೂ ಮೇ ಅಂತ್ಯದ ವೇಳೆಗೆ ಕಡಿಮೆ ಆಗಬೇಕಿತ್ತು. ಮೇ ಮಾಸದ ಅಂತ್ಯದಲ್ಲೂ 44, 45 ಡಿಗ್ರಿ ಸೆಲಿಯಸ್ಸ್ ಉಷ್ಣಾಂಶ ದಾಖಲಾಗುತ್ತಿದೆ. 2015ರ ಬಳಿಕ ಪ್ರಸಕ್ತ ಮೇನಲ್ಲಿ 45 ಡಿಗ್ರಿ ಸೆಲಿಯಸ್ಸ್ ತಾಪಮಾನ ದಾಖಲಾಗಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಬಿಸಿಲಿನ ಝಳ ಸಾರ್ವಜನಿಕರನ್ನು ಹಿಂಡಿ ಸಿಪ್ಪೆ ಮಾಡುತ್ತಿದೆ.

ಬಿಸಿಲಿಗೆ ಕಂಗಾಲಾಗಿರುವ ಜನತೆ ತಂಪು ಪಾನೀಯ, ಎಳನೀರಿಗೆ ಮೊರೆ ಹೋಗುತ್ತಿದ್ದಾರೆ ಪುರುಷರು ಮುಖಕ್ಕೆ ಕರ್ಚೀಪು, ಮಹಿಳೆಯರು ವೇಲ್ ಮತ್ತು ಕ್ಯಾಪ್‌ ಧರಿಸಿ ಸೂರ್ಯನಿಂದ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಬಿಸಿಲಿಗೆ ಸೆಡ್ಡು ಹೊಡೆಯಲು ಸೋಲಾರ್‌ ಫ್ಯಾನ್‌ ಅಳವಡಿಸಿರುವ ಕೂಲ್ ಕ್ಯಾಪ್‌ಗ್ಳನ್ನು ತೊಟ್ಟು ಓಡಾಡುತ್ತಿದ್ದಾರೆ.

ಶಾಲೆಗಳ ರಜೆ ವಿಸ್ತರಣೆ: ರಾಜ್ಯಾದ್ಯಂತ ಮೇ 29ರಿಂದ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾದರೂ ಹೈಕ ಭಾಗದಲ್ಲಿ ಬಿಸಿಲಿನ ತಾಪದಿಂದ ಪ್ರಾಥಮಿಕ ಶಾಲೆಗಳ ರಜೆಯನ್ನು ವಿಸ್ತರಣೆ ಮಾಡಲಾಗಿದೆ. ಮಕ್ಕಳ ಆರೋಗ್ಯದ ಮೇಲೆ ಬಿಸಿಲು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿದ ಮನವಿ ಮೇರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಗಳ ಪ್ರಾರಂಭವನ್ನು ಮುಂದೂಡಿ ಆದೇಶ ಹೊರಡಿಸಿದ್ದಾರೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೂ.14ರಿಂದ ಶಾಲೆಗಳು ಆರಂಭವಾಗಲಿವೆ. ರಾಯಚೂರಿನಲ್ಲಿ ಜೂ.5ರಂದು ತರಗತಿ ಪ್ರಾರಂಭಗೊಳ್ಳಲಿವೆ. ಈಗಾಗಲೇ ಪಕ್ಕದ ತೆಲಂಗಾಣದಲ್ಲಿ ಬಿಸಿಲಿನಿಂದಾಗಿ 2 ವಾರ ಶಾಲೆಗಳ ಪ್ರಾರಂಭ ಮುಂದೂಡಿರುವ ಉದಾಹರಣೆ ಇದೆ.

Advertisement

ಕನಿಷ್ಠ ಉಷ್ಣಾಂಶವೂ ಏರಿಕೆ
ಕಲಬುರಗಿ ಜಿಲ್ಲೆಯಲ್ಲಿ 2010ರಲ್ಲಿ 46.1 ಡಿಗ್ರಿ ಸೆಲಿಯಸ್ಸ್ ಉಷ್ಣಾಂಶ ದಾಖಲಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಉಷ್ಣಾಂಶವಾಗಿದೆ. ಕನಿಷ್ಠ ಉಷ್ಠಾಂಶ ಸಾಮಾನ್ಯವಾಗಿ 20 ಡಿಗ್ರಿಯಿಂದ 26, 28 ಡಿಗ್ರಿ ಸೆಲಿಯಸ್ಸ್ ಇರುತ್ತದೆ. ಪ್ರಸಕ್ತ ವರ್ಷ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗಿದ್ದು, 30 ಡಿಗ್ರಿ ಸೆಲಿಯಸ್ಸ್ ದಾಖಲಾಗಿದೆ. ಮೇ 29ರಂದು ಕಲಬುರಗಿಯಲ್ಲಿ 30.2, ರಾಯಚೂರಲ್ಲಿ 28.5, ಕೊಪ್ಪಳದಲ್ಲಿ 25.5, ಬೀದರ್‌ನಲ್ಲಿ 26.0 ಡಿಗ್ರಿ ಸೆಲಿಯಸ್ಸ್ ಕನಿಷ್ಠ ತಾಪಮಾನ ಇತ್ತು. ಅದೇ ರೀತಿ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 44.7, ರಾಯಚೂರಿನಲ್ಲಿ 42.5, ಬೀದರ್‌ನಲ್ಲಿ 42 ಹಾಗೂ ಕೊಪ್ಪಳದಲ್ಲಿ 38.5 ಡಿಗ್ರಿ ಸೆಲಿಯಸ್ಸ್ ದಾಖಲಾಗಿತ್ತು. ಕಲಬುರಗಿ ಭಾಗದಲ್ಲಿ ಸದ್ಯಕ್ಕೆ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಇನ್ನೂ ಮೂರ್‍ನಾಲ್ಕು ದಿನ ಇದೇ ತಾಪಮಾನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next