Advertisement

ಸಿಎಂ ಗ್ರಾಮ ವಾಸ್ತವ್ಯ ಯಶಸ್ವಿಗೊಳಿಸಿ

11:00 AM Jun 20, 2019 | Naveen |

ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂ. 22ರಂದು ತಾಲೂಕಿನ ಹೇರೂರ (ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಇಲಾಖಾವಾರು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನತಾ ದರ್ಶನ ಕಾರ್ಯಕ್ರಮ ಮುಖ್ಯಮಂತ್ರಿಗಳಿಗೆ ಪ್ರೀಯವಾದದ್ದಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ. ಸುಮಾರು ಎಂಟØತ್ತು ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.

ಮಳೆ ಬಂದರೂ, ಯಾವುದೇ ತೊಂದರೆಯಾಗದಂತೆ ಜನತಾ ದರ್ಶನ ನಡೆಯುವ ಕಾರ್ಯಕ್ರಮ ಸ್ಥಳವನ್ನು ವಾಟರ್‌ ಪ್ರೂಪ್‌ ವ್ಯವಸ್ಥೆಯಿಂದ ನಿರ್ಮಿಸಲಾಗಿದೆ. ಅರ್ಜಿದಾರರು ಬಿಸಿಲಿನಿಂದ ಪರಿತಪಿಸದಂತೆ ಪಕ್ಕದಲ್ಲೇ ಶಾಮಿಯಾನ ಹಾಕಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರ ವಾಹನಗಳು ಹಾಗೂ ಗಣ್ಯರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ನಿಗದಿತ ಸ್ಥಳಗಳಲ್ಲ್ಲಿ ಸಾರ್ವಜನಿಕರು ತಮ್ಮ ವಾಹನಗಳ ನಿಲುಗಡೆ ಮಾಡಬೇಕು. ಯಾವುದೇ ಗೊಂದಲವಾಗದಂತೆ ಗಣ್ಯರು, ಅಧಿಕಾರಿಗಳು, ಮಾಧ್ಯಮದವರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಭೋಜನಾ ವ್ಯವಸ್ಥೆ ಮಾಡಲಾಗಿದೆ ಎಂದರಲ್ಲದೇ, ಸಾರ್ವಜನಿಕರಿಗಾಗಿ 50 ಕಡೆ ಊಟದ ಸ್ಟಾಲ್ ವ್ಯವಸ್ಥೆ ಮಾಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇಂಜಿನಿಯರ್‌ಗೆ ಸೂಚಿಸಿದರು.

ಅಂಗವಿಕಲರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದ್ದು, ಮುಖ್ಯಮಂತ್ರಿಗಳ ಭೇಟಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 20ಕ್ಕೂ ಹೆಚ್ಚು ವ್ಹೀಲ್ ಚೇರ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಇಲಾಖಾವಾರು ಸುಮಾರು 40 ವಸ್ತು ಪ್ರದರ್ಶನ ಮಳಿಗೆ ತೆರೆಯಲಾಗುತ್ತಿದ್ದು, ಇವುಗಳ ಮೂಲಕ ಸಾರ್ವಜನಿಕರಿಗೆ ಆಯಾ ಇಲಾಖೆಗಳಲ್ಲಿ ಇರುವ ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಹಾಗೂ ಅರ್ಜಿ ಸಲ್ಲಿಕೆ ವಿಧಾನ ಮುಂತಾದವುಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

ಜನತಾ ದರ್ಶನಕ್ಕೆ ಬರುವ ಸಾರ್ವಜನಿಕರಿಗಾಗಿ ಹೆಲ್ಪ್ ಡೆಸ್ಕ್, ಅರ್ಜಿ ಸ್ವೀಕೃತಿ ಕೌಂಟರ್‌ ಹಾಗೂ ರಿಜಿಸ್ಟ್ರೇಷನ್‌ ಕೌಂಟರ್‌ ತೆರೆಯಲಾಗಿದೆ. ರಿಜಿಸ್ಟ್ರೇಷನ್‌ ಕೌಂಟರ್‌ನಲ್ಲಿ ನೀಡುವ ಟೋಕನ್‌ ನಂಬರ್‌(ರೆಫೆರೆನ್ಸ್‌ ಸಂಖ್ಯೆ) ಇದ್ದಲ್ಲಿ ಮಾತ್ರ ಸಿಎಂ ಜನತಾ ದರ್ಶನಕ್ಕೆ ಅವಕಾಶವಿರುತ್ತದೆ. ರೆಫೆರೆನ್ಸ್‌ ಸಂಖ್ಯೆಯಿಂದ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿ-ಗತಿ ತಿಳಿಯಬಹುದಾಗಿದೆ ಎಂದರು.

ಆಯಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿ ಇಟ್ಟುಕೊಂಡಿರಬೇಕು. ಜನತಾ ದರ್ಶನ ಸಂದರ್ಭದಲ್ಲಿ ತಮ್ಮ ಇಲಾಖೆಗಳ ಬಗ್ಗೆ ಅರ್ಜಿದಾರರು ಸಮಸ್ಯೆಗಳ ಬಗ್ಗೆ ಅರ್ಜಿ ನೀಡುವಾಗ ಸಂಬಂಧಪಟ್ಟ ಅಧಿಕಾರಿಗಳು ವೇದಿಕೆ ಮೇಲೆ ಬಂದು ಸಮಸ್ಯೆಗಳ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ, ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌, ಅಪರ ಜಿಲ್ಲಾಧಿಕಾರಿ ಬಿ. ಶರಣಪ್ಪ, ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ ಹಾಗೂ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಜನತಾ ದರ್ಶನಕ್ಕೂ ಮುನ್ನ ಸುಮಾರು ಅರ್ಧ ಗಂಟೆ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಚೆಕ್‌, ವಾಹನಗಳ ಕೀಲಿ ಕೈ ಮುಂತಾದವುಗಳ ಮುಂತಾದ ಹಲವು ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಈ ಸಂಬಂಧ ಫಲಾನುಭವಿಗಳನ್ನು ಆಯಾ ಇಲಾಖೆಗಳು ಕರೆತರಬೇಕು. ಜಿಲ್ಲಾ ಪಂಚಾಯತಿಯಿಂದ 264 ಫಲಾನುಭವಿಗಳಿಗೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಹೊಲಿಗೆ ಯಂತ್ರ, ಅಂಗವಿಕಲರಿಗೆ ಝೆರಾಕ್ಸ್‌ ಮಷಿನ್‌ ವಿತರಣೆ, ಕೃಷಿ ಇಲಾಖೆಯಿಂದ 100 ಜನಕ್ಕೆ ಕೃಷಿ ಭಾಗ್ಯ, 25 ಜನಕ್ಕೆ ಡಿಜಿಟಲ್ ಇಂಜಿನ್‌, ಕೃಷಿ ಯಂತ್ರ ಟ್ರ್ಯಾಕ್ಟರ್‌, ಕೃಷಿ ಸಲಕರಣೆ ಮುಂತಾದವುಗಳನ್ನು ಮುಖ್ಯಮಂತ್ರಿಗಳು ವಿತರಿಸುವರು.
ಆರ್‌. ವೆಂಕಟೇಶಕುಮಾರ,
  ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next