Advertisement

Kalaburagi: ಲಿಂಗಾಯಿತರ ಮೇಲಿನ ದೌರ್ಜನ್ಯ- ಕಿರುಕುಳ ಮರುಕಳಿಸಿದರೆ ತಕ್ಕಪಾಠದ ಎಚ್ಚರಿಕೆ

12:10 PM Oct 16, 2023 | Team Udayavani |

ಕಲಬುರಗಿ: ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವೀರಶೈವ-ಲಿಂಗಾಯತ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲೆ ದೌರ್ಜನ್ಯ ಹಾಗೂ ಕಿರುಕುಳ ಹೆಚ್ಚಳವಾಗುತ್ತಿದ್ದು, ಇದು ನಿಲ್ಲದಿದ್ದರೆ ತಕ್ಕಪಾಠ ಕಲಿಸುವುದಾಗಿ ವೀರಶೈವ- ಲಿಂಗಾಯಿತ ಸ್ವಾಭಿಮಾನ ಬಳಗ ಎಚ್ಚರಿಕೆ ನೀಡಿದೆ.

Advertisement

ಲಿಂಗಾಯಿತ ನೌಕರರ ಮೇಲಿನ ಕಿರುಕುಳ ಹಾಗೂ ದೌರ್ಜನ್ಯ ಹೆಚ್ಚಳವಾಗುತ್ತಿರುವುದರ ಜತೆಗೆ ನಿರ್ಲಕ್ಷ್ಯತನ ಪ್ರಕರಣ ಕಲಬುರಗಿ ಜಿಲ್ಲೆಯಲ್ಲೂ ವ್ಯಾಪಕವಾಗಿ ಕಂಡು ಬರುತ್ತಿದೆ ಎಂದು  ಮೂಲಕ ಬಳಗದ ಸಂಚಾಲಕರಾದ ಎಂ.ಎಸ್. ಪಾಟೀಲ್ ನರಿಬೋಳ, ವಿಶ್ವನಾಥ ಪಾಟೀಲ್ ಗವನಳ್ಳಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಸಮಾಜಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲೂ ವೀರಶೈವ ಲಿಂಗಾಯತ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲೆ ಕಿರುಕುಳ ಹಾಗೂ ನಿರ್ಲಕ್ಷ್ಯತನ ವಿರುದ್ದ ಧ್ವನಿ ಎತ್ತಲಾಗುತ್ತಿದೆ ಎಂದರು.

ಪಾಲಿಕೆಯಲ್ಲಿ ಸಮಾಜದ ನೌಕರರ ಮೇಲೆ ರಾಜಾರೋಷವಾಗಿ ಹಲ್ಲೆ ನಡೆದಿದ್ದರೂ ಇಲ್ಲಿಯವರೆಗೂ ಹಲ್ಲೆಕೋರರನ್ನು ಬಂಧಿಸಿಲ್ಲ. ಅದೇ ತೆರನಾಗಿ ಚಿತ್ತಾಪುರ ತಾಲೂಕಿನ ಹಲಕರ್ಟಿಯಲ್ಲಿ ಸಮಾನತೆ ಸಾರಿದ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಎಸಗಲಾಗಿದೆ. ಇಲ್ಲೂ ಕೂಡಾ ದುಷ್ಕರ್ಮಿಗಳನ್ನು ಬಂಧಿಸಿಲ್ಲ. ಪ್ರಮುಖವಾಗಿ ಕಲಬುರಗಿ ನಗರಾಭಿವೃದ್ಧಿ ಆಯುಕ್ತ ದಯಾನಂದ ಪಾಟೀಲ್ ಅವರಿಗೆ ಕಿರುಕುಳ ಕೊಡಲಾಗುತ್ತಿದೆ. ನಿವೃತ್ತಿಯಾಗಲು ಕೇವಲ ಎಂಟು ತಿಂಗಳು ಉಳಿದಿದೆ. ಎರಡು ತಿಂಗಳು ಹಿಂದೆ ವರ್ಗಾವಣೆಗೊಳಿಸಿದ್ದಕ್ಕೆ ಕೆಎಟಿಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಆದರೆ ತಡೆಯಾಜ್ಞೆ ತಂದಿದ್ದಕ್ಕೆ ಪ್ರತಿಕಾರ ಎನ್ನುವಂತೆ ಯಾವದೇ ತಳಬುಡ ಇಲ್ಲದ ಪ್ರಕರಣದಲ್ಲಿ ಅಮಾನತ್ತುಗೊಳಿಸಲಾಯಿತು. ಇದರ ವಿರುದ್ಧವೂ ದಯಾನಂದ ಪಾಟೀಲ್ ಕೆಇಟಿಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ವರ್ಗಾವಣೆಗೊಳಿಸಿದ್ದರೂ ಹೋಗಲಿಲ್ಲ ಎಂದು ದ್ವೇಷ ಮುಂದಿಟ್ಟುಕೊಂಡು ಕಿರುಕುಳ ಕೊಡಲಾಗುತ್ತಿದೆ. ಲಿಂಗಾಯತ ಎಂಬ ಕಾರಣಕ್ಕೆ ಹೀಗೆಲ್ಲ ಮಾಡಲಾಗುತ್ತಿದೆ. ಇದು ಇಲ್ಲಿಗೆ ನಿಲ್ಲಬೇಕು ಎಂದು ಬಳಗದ ಸಂಚಾಲಕರು ಆಗ್ರಹಿಸಿದರು.

ವಿರೇಂದ್ರ ಪಾಟೀಲ್ ನಂತರ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳು ಬರುವಲ್ಲಿ ಲಿಂಗಾಯಿತರೇ ಕಾರಣರು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹಿಂದಿನ ಅಂದರೆ 2013-18ರ ಅವಧಿಯಲ್ಲೂ ಲಿಂಗಾಯಿತರನ್ನು ಕಡೆಗಣನೆ ಮಾಡಿದ್ದಕ್ಕೆ ತದನಂತರ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಯಿತು. ಈಗಲಾದರೂ ಎಚ್ಚೆತ್ತುಕೊಂಡು ಪ್ರಮಾದ ಆಗದ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಮತ್ತೆ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲೆ ಕಿರುಕುಳ ಮರುಕಳಿಸಿದರೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದು ನಿಶ್ಚಿತ ಎಂದು ಗುಡುಗಿದರು.

Advertisement

ಕಲಬುರಗಿ ಮಹಾನಗರದ 14 ಇನ್ಸಪೆಕ್ಟರ್ ಹುದ್ದೆಗಳಲ್ಲಿ 04 ಲಿಂಗಾಯತ, 05 ಮುಸ್ಲಿಂ, 04 ಎಸ್ಸಿ ಹಾಗೂ ಓರ್ವ ಕಬ್ಬಲಿಗ ವರ್ಗಕ್ಕೆ ಸೇರಿದ್ದಾರೆ. ಪ್ರಮುಖವಾಗಿ ಕಲಬುರಗಿ ಮಹಾನಗರದ ನಾಲ್ಕು ಎಸಿಪಿಗಳಲ್ಲಿ ಇಬ್ಬರು ಎಸ್ಸಿ, ಓರ್ವ ಮುಸ್ಲಿಂ ಹಾಗೂ ಓರ್ವರು ಒಕ್ಕಲಿಗ ವರ್ಗಕ್ಕೆ ಸೇರಿದ್ದಾರೆ. ಅದೇ ರೀತಿ ಗ್ರಾಮೀಣ ಭಾಗದಲ್ಲಿ ನಾಲ್ಕು ಡಿಎಸ್ಪಿ ಹುದ್ದೆಗಳಲ್ಲಿ ಇಬ್ಬರು ಎಸ್ಸಿ, ಓರ್ವ ಎಸ್ಟಿ ಹಾಗೂ ಓರ್ವರು ಲಿಂಗಾಯತ ವರ್ಗಕ್ಕೆ ಸೇರಿದ್ದಾರೆ. ಇನ್ನುಳಿದಂತೆ ಪ್ರಮುಖ 28 ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯ ಅಧಿಕಾರಿಗಳಲ್ಲಿ 18 ಅಧಿಕಾರಿಗಳನ್ನು ವರ್ಗವಾರು ಗುರುತಿಸಲಾಗಿದ್ದು, 06 ಲಿಂಗಾಯಿತರು, 03 ಮುಸ್ಲಿಂರು, 05 ಎಸ್ಸಿ ಹಾಗೂ 04 ಹಿಂದುಳಿದ ವರ್ಗದವರೆಂದು ಗುರುತಿಸಲಾಗಿದೆ ಎಂದು ವೀರಶೈವ ಲಿಂಗಾಯಿತ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತಾಗಿ ವಿವರಣೆ ನೀಡಿದರು.

ಸ್ವಾತಂತ್ರ್ಯ ಬಂದ 77 ವರ್ಷಗಳ ಇತಿಹಾಸದಲ್ಲಿ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಈ ಹಿಂದಿನ ಅವಧಿಯಲ್ಲಿ ಯಶ್ವಂತ ಗುರುಕರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಬದೋಲೆ ಅವರು ಲಿಂಗಾಯತ ವರ್ಗದ ಪ್ರಥಮ ಡಿಸಿ ಹಾಗೂ ಸಿಇಓ ಆಗಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ವರ್ಗಾವಣೆಗೊಳಿಸಲಾಯಿತು. ಹೊಸ ಸರ್ಕಾರ ಬಂದಾಗ ವರ್ಗಾವಣೆ ಸಾಮಾನ್ಯವಾದರೂ ಲಿಂಗಾಯತ ವರ್ಗವನ್ನು ನಿರ್ಲಕ್ಷ್ಯತನ ಹಾಗೂ ಕಿರುಕುಳ ರೀತಿಯಲ್ಲಿ ನಡೆದಿರುವುದು ಸಮಾಜಕ್ಕೆ ಮಾಡಿದ ದೊಡ್ಡ ಅವಮಾನವಾಗಿದೆ. ಡಿಸಿ,ಸಿಇಒ ಅವರ ವರ್ಗಾವಣೆಯಾದರೂ ಸುಮ್ಮನಿರಲಾಗಿತ್ತು. ಆದರೆ ತದನಂತರ ಒಂದರ ಮೇಲೆ ಒಂದು ಪ್ರಕರಣಗಳು ಲಿಂಗಾಯಿತರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೀದಿಗೆ ಬರಲಾಗುತ್ತಿದೆ. ಒಟ್ಟಾರೆ ವೀರಶೈವ ಲಿಂಗಾಯತ ಸಮಾಜ ಹಾಗೂ ಸಮಾಜದ ಅಧಿಕಾರಿಗಳ ಮೇಲಿನ ಹಲ್ಲೆ ಹಾಗೂ ಕಿರುಕುಳ ಮರುಕಳಿಸಿದ್ದಲ್ಲಿ ಮುಂಬರುವ ಲೋಕಸಭಾ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದು ಘೋಷಿಸಿದರು.

ಡಿಸೆಂಬರ್‌ದಲ್ಲಿ ದಾವಣಗೆರೆಯಲ್ಲಿ ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧಿವೇಶನಕ್ಕೆ ಕಲಬುರಗಿ ಜಿಲ್ಲೆಯಿಂದ ಹತ್ತು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ಮೂಲಕ ಶಾಮನೂರು ಶಿವಶಂಕರಪ್ಪ ಅವರ ಕೈ ಬಲಪಡಿಸಿ ಸಮಾಜದ ಒಳಿತಿಗಾಗಿ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ದ ಎಂಬುದಾಗಿ ತಿಳಿಯಪಡಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್ ಪಾಟೀಲ್ ನರಿಬೋಳ ಇದೇ ಸಂದರ್ಭದಲ್ಲಿ ತಿಳಿಸಿದರು.

ವೀರಶೈವ ಲಿಂಗಾಯತ ಸ್ವಾಭಿಮಾನ ಬಳಗದ ಸಂಚಾಲಕರಾದ ಸೋಮಶೇಖರ ಟೆಂಗಳಿ, ರಾಜುಗೌಡ ನಾಗನಹಳ್ಳಿ, ಮಲ್ಲಿಕಾರ್ಜುನ ಸಾರವಾಡ, ಪ್ರಕಾಶ ಪಾಟೀಲ್ ಹೀರಾಪುರ, ಮಲ್ಲಿಕಾರ್ಜುನ ನಾಗನಹಳ್ಳಿ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next