Advertisement

Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್‌!: 7 ಮಂದಿ ಸೆರೆ

12:24 PM May 12, 2024 | Team Udayavani |

ಕಲಬುರಗಿ: ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟಗಾರ ಹಾಗೂ ಆತನ ಸ್ನೇಹಿತರನ್ನು ಹಣಕ್ಕಾಗಿ ಬೇಡಿಕೆಯಿಟ್ಟು ಕೂಡಿ ಹಾಕಿ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಬ್ಯಾಟರಿ ಶಾಕ್‌ ನೀಡಿ ಕೊಲೆಗೆ ಯತ್ನಿಸಿದ ಘಟನೆ ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಸೇಡಂ ತಾಲೂಕಿನ ದೇವನೂರದ ಅರ್ಜುನಪ್ಪ ಹಣಮಂತ, ಇಸ್ಲಾಮಾಬಾದ್‌ ಕಾಲೋನಿಯ ಮಹ್ಮದ್‌ ಸಮಿರೊದ್ದೀನ್‌ ಮತ್ತು ಹೀರಾಪುರದ ಅಬ್ದುಲ್‌ ರೆಹಮಾನ್‌ ಹಲ್ಲೆಗೊಳಗಾದವರು. ಗಣೇಶ ನಗರದ ನಿವಾಸಿಗಳಾದ ಇಮ್ರಾನ್‌ ಪಟೇಲ್‌, ಮಹ್ಮದ್‌ ಮತೀನ್‌, ಮುಹಾಹೀರ್‌ ನಗರ ನಿವಾಸಿ ಮಹ್ಮದ್‌ ಜಿಯಾ ಅಲ್‌ ಹುಸೈನಿ, ಇಸ್ಲಾಮಾಬಾದ್‌ ಕಾಲೋನಿಯ ಮಹ್ಮದ್‌ ಅಫ‌ಜ್ಲ್ ಸೈಕ್‌, ಮಿಲತ್‌ ನಗರದ ಹುಸೈನ್‌ ಸೈಕ್‌, ಚಿತ್ತಾಪುರದ ರಮೇಶ ದೊಡ್ಡಮನಿ ಹಾಗೂ ವಾಡಿಯ ಸಾಗರ ಶ್ರೀಮಂತ ಸೇರಿ ಇತರರ ವಿರುದ್ಧ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಚೇತನ ಆರ್‌.ತಿಳಿಸಿದ್ದಾರೆ.

ಘಟನೆ ಹಿನ್ನೆಲೆ
ಅರ್ಜುನಪ್ಪ ಬೆಂಗಳೂರಿನಿಂದ ಸೆಕೆಂಡ್‌ ಹ್ಯಾಂಡ್‌ ಕಾರ್‌ಗಳನ್ನು ತಂದು ಮಾರುತ್ತಿದ್ದರು. ಪರಿಚಯಸ್ಥ ರಮೇಶ ದೊಡ್ಡಮನಿ ಸೆಕೆಂಡ್‌ ಹ್ಯಾಂಡ್‌ ಕಾರು ಕೊಡಿಸುವಂತೆ ಕೇಳಿದಾಗ ಆರು ಲಕ್ಷ ರೂ.ನ ಸೆಕೆಂಡ್‌ ಹ್ಯಾಂಡ್‌ ಕಾರಿದೆ, ಒಂದು ಲಕ್ಷ ರೂ. ಕಮೀಷನ್‌ ಕೊಡಿ ಎಂದಿದ್ದರು. ಅಂತೆಯೇ ಮೇ 4ರಂದು ಚಿತ್ತಾಪುರದಿಂದ ಕಾರಿನಲ್ಲಿ ಅರ್ಜುನಪ್ಪ ಮತ್ತು ರಮೇಶ ಕಾರು ಮಾರಾಟಗಾರ ಅಬ್ದುಲ್‌ ರಹೆಮಾನ್‌ ಹೇಳಿದ ನಾಗನಹಳ್ಳಿ ಕ್ರಾಸ್‌ಗೆ
ಬಂದಿದ್ದಾರೆ. ಅಬ್ದುಲ್‌ ಅಲ್ಲಿಗೆ ತನ್ನ ಪರಿಚಯಸ್ಥ ಸಮಿರೊದ್ದೀನ್‌ನನ್ನು ಕರೆದುಕೊಂಡು ಬಂದಿದ್ದರು.

ಈ ವೇಳೆ ರಮೇಶ ಹಣ ತರೋಣವೆಂದು ಮೂವರನ್ನು ಹಾಗರಗಾ ರಸ್ತೆಯ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿದ್ದ ಇಮ್ರಾನ್‌ ಸೇರಿ ಇಬ್ಬರು ಟೆಸ್ಟ್‌ ಡ್ರೈವ್‌ಗಾಗಿ ಕಾರು ತೆಗೆದುಕೊಂಡು ಹೋಗಿ ವಾಪಸ್‌ ಬಂದವರೇ ಮೂವರನ್ನು ನಿಂದಿಸಿ, ಕಾರಿನಿಂದ ಎಳೆದೊಯ್ದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. 10 ರಿಂದ 12 ಮಂದಿ ಸುತ್ತುವರಿದು ಮೂವರ ಬಟ್ಟೆ ಬಿಚ್ಚಿಸಿದ್ದು, ಇಮ್ರಾನ್‌ ಬ್ಯಾಟರಿ ಕರೆಂಟ್‌ನಿಂದ ಮೂವರ ಗುಪ್ತಾಂಗಕ್ಕೆ ಶಾಕ್‌
ಕೊಟ್ಟಿದ್ದಾನೆ. ಮತೀನ್‌ ಹಾಗೂ ಇತರರು ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆ. ಸಿಗರೇಟ್‌ನಿಂದ ಸುಟ್ಟು ಗಾಯ ಮಾಡಿದ್ದಾರೆ. ಇಮ್ರಾನ್‌ ಅಬ್ದುಲ್‌ ಎದೆಗೆ ಲಾಂಗ್‌ಗಳಿಂದ ಚುಚ್ಚಿ, ಬೆನ್ನಿಗೂ ಸವರಿದ್ದಾನೆ ಎಂದು ಸಂತ್ರಸ್ತರು ದೂರಿನಲ್ಲಿ ಆರೋಪಿಸಿದ್ದಾರೆ.

ಕೂಡಿ ಹಾಕಿದ ಮರುದಿನ ಮೇ 5ರಂದು ಇಮ್ರಾನ್‌ ಅರ್ಜುನಪ್ಪಗೆ ಜೀವ ಬೆದರಿಕೆ ಹಾಕಿದ್ದು, ಅವರು ಪತ್ನಿಗೆ ಕರೆ ಮಾಡಿ, 50 ಸಾವಿರ ರೂ. ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. ಅರ್ಜುನಪ್ಪ ಮೊಬೈಲ್‌ ಕಿತ್ತುಕೊಂಡ ಇಮ್ರಾನ್‌ ಪಾಸ್‌ವರ್ಡ್‌, ಫೋನ್‌ ಪೇ ಮಾಹಿತಿ ಪಡೆದು, 4,200 ರೂ. ಖರ್ಚು ಮಾಡಿದ. ಅಲ್ಲದೇ ಸಂಜೆ 7ರೊಳಗೆ ಏಳು ಲಕ್ಷ ರೂ. ಕೊಡುವಂತೆ ಹಾಗೂ ತಿಂಗಳಿಗೆ ಒಂದು ಲಕ್ಷ ರೂ. ಕಮೀಷನ್‌ ಕೊಡುವಂತೆ ತಾಕೀತು ಮಾಡಿದ್ದ. ಸಂಜೆ ಪೊಲೀಸರು ಸ್ಥಳಕ್ಕೆ ಧಾವಿಸುತ್ತಲೇ ಆರೋಪಿಗಳು ಪರಾರಿಯಾಗಿದ್ದರು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next