Advertisement

ಶರಣಬಸವೇಶ್ವರ ರಥೋತ್ಸವ

04:34 PM Mar 14, 2020 | Naveen |

ಕಲಬುರಗಿ: ಐತಿಹಾಸಿಕ, ಮಹಾದಾಸೋಹಿ. ಕಲ್ಯಾಣ ನಾಡಿದ ಆರಾಧ್ಯದೈವ ಶರಣಬಸವೇಶ್ವರ ಮಹಾರಥೋತ್ಸವ ಕೊರೊನಾ ಭೀತಿ ನಡುವೆಯೂ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

Advertisement

ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೂಜ್ಯ ದಾಕ್ಷಾಯಣಿ ಎಸ್‌.ಅಪ್ಪ, ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಶರಣಬಸವೇಶ್ವರ ಪರುಷ ಬಟ್ಟಲು ಪ್ರದರ್ಶಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮುಂಚೆ ಸಂಸ್ಥಾನದ ಅನುಭವ ಮಂಟಪದಲ್ಲಿ ಸಂಸ್ಥಾನದ 8ನೇ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಪರುಷ ಬಟ್ಟಲು ಪ್ರದರ್ಶಿಸಿ, ಶರಣಬಸವೇಶ್ವರರ ಜಾತ್ರೆ ಎಂದರೆ ಶರಣರ ದರ್ಶನ ಪಡೆಯುವುದು ಹಾಗೂ ಅವರ ತತ್ವಗಳನ್ನು ಮೆಲಕು ಹಾಕಿ ಅವುಗಳಂತೆ ನಡೆಯುವುದಾಗಿದೆ. ಶರಣಬಸವೇಶ್ವರ ಜಾತ್ರಾ ಮಹೋತ್ಸವ ರಥೋತ್ಸವ ದಿನದಿಂದ 11 ದಿನಗಳ ಕಾಲ ಅಂದರೆ ಯುಗಾದಿ ಹಬ್ಬದ ವರೆಗೂ ನಡೆಯಲಿದೆ. ಈ 11 ದಿನಗಳುದ್ದಕ್ಕೂ ಬೇಡ ಎಂದರೂ ಭಕ್ತರು ಶರಣರ ದೇವಾಲಯಕ್ಕೆ ಬಂದು ಭಕ್ತಿ ಭಾವದಿಂದ ದರ್ಶನ ಪಡೆಯುತ್ತಾರೆ ಎಂದರು.

198 ವರ್ಷಗಳಿಂದ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ರಥೋತ್ಸವ ನೆರವೇರಿಸಿಕೊಂಡು ಬರಲಾಗುತ್ತಿದೆ. ಒಂದು ವರ್ಷವೂ ಆಚರಣೆ ಮಾಡುವುದನ್ನು ಬಿಟ್ಟಿಲ್ಲ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಾತ್ರೆ ಮುಂದೂಡುವಂತೆ ಜಿಲ್ಲಾಡಳಿತ ಕೋರಿದೆ. ಹೀಗಾಗಿ ಜನ ಸೇರುವ ಮುನ್ನವೇ ಸಾಂಕೇತಿಕವಾಗಿ ಮಹಾ ಸಂಸ್ಥಾನದವರು ಹಾಗೂ ಭಕ್ತರ ವತಿಯಿಂದ ರಥೋತ್ಸವ ನೆರವೇರಿಸಲಾಗಿದೆ ಎಂದು ಡಾ| ಅಪ್ಪ ವಿವರಣೆ ನೀಡಿದರು.

ಕೊರೊನಾ ಭೀತಿ ಹಿನ್ನಲೆಯಲ್ಲಿ ಬಹಳ ಜನ ಕೂಡಬಾರದು. ಮಾಂಸ ತಿನ್ನೊದು ಕಡಿಮೆ ಮಾಡಬೇಕು. ಉಳ್ಳಾಗಡ್ಡಿಗೆ ಉಪ್ಪು ಲೇಪಿಸಿ ತಿನ್ನಬೇಕೆಂದು ಡಾ| ಶರಣಬಸವಪ್ಪ ಅಪ್ಪ ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಕಲಬುರಗಿ ಜಿಲ್ಲಾಧಿಕಾರಿ ಶರತ್‌ ಬಿ.ಮಾತನಾಡಿ, ಶರಣಬಸವೇಶ್ವರರ ಜಾತ್ರೆ ರದ್ದುಗೊಳಿಸಿ ಆದೇಶ ಹೊರಡಿಸಿಲ್ಲ. ಜಾತ್ರೆ ಮುಂದೂಡುವಂತೆ ಹಾಗೂ ಜನ ಸೇರದಂತೆ ಸಂಸ್ಥೆ ವತಿಯಿಂದ ಸಾಂಪ್ರದಾಯಿಕವಾಗಿ ರಥೋತ್ಸವ ಆಚರಿಸುವಂತೆ ಜಿಲ್ಲಾಡಳಿತದಿಂದ ಮನವಿ ಮಾಡಲಾಗಿತ್ತು ಎಂದು ವಿವರಣೆ ನೀಡಿದರು.

Advertisement

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ್‌ ನಿಷ್ಠಿ ಮುಂತಾದವರಿದ್ದರು. ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಲ್ಲದೇ ನಾಡಿನ ಮೂಲೆ- ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ರಥೋತ್ಸವ ಸಂಜೆ 6ರ ಬದಲು ಮಧ್ಯಾಹ್ನ 4ಕ್ಕೆ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next