Advertisement

ಕಲಬುರಗಿ: ಸಕಲರನ್ನು ಮೋಡಿ ಮಾಡಿದಾತ ಶೇಕ್ಸಪಿಯರ್‌; ಡೋಣೂರು

06:23 PM Apr 13, 2023 | Team Udayavani |

ಕಲಬುರಗಿ: ವಿಲಿಯಂ ಶೇಕ್ಸಪಿಯರ್‌ ಮಾನವ ಸ್ವಭಾವವಗಳನ್ನು ಪ್ರಚೋದಿಸುವಂತಹ ನಾಟಕಕಾರರಲ್ಲಿ ಒಬ್ಬ. ಅವನ ಕೃತಿಗಳು ಮಾನವ ಜೀವನದ ವಿವಿಧ ಆಯಾಮಗಳಲ್ಲಿನ ಮೌಲ್ಯಗಳನ್ನು ವ್ಯಾಖ್ಯಾನಿಸುತ್ತವೆ. ಆತ ಎಲ್ಲ ವರ್ಗದ ಚಿಂತಕರು, ಬರಹಗಾರರು, ಶಿಕ್ಷಣ ತಜ್ಞರು, ಓದುಗರು, ರಂಗಕರ್ಮಿಗಳನ್ನು ಮೋಡಿ ಮಾಡುವ ವ್ಯಕ್ತಿಯಾಗಿದ್ದಾನೆ ಎಂದು ಸಿಯುಕೆ ಮಾನವಿಕ, ಭಾಷಾ ನಿಕಾಯದ ಡೀನ್‌ ಪ್ರೊ|ಬಸವರಾಜ ಪಿ.ಡೋಣೂರು ಹೇಳಿದರು.

Advertisement

ಸಿಯುಕೆನಲ್ಲಿ ಏ.24, 25ರಂದು ನಡೆಯಲಿರುವ “ವಿಲಿಯಂ ಶೇಕ್ಸಪಿಯರ್‌: ವ್ಯಾಖ್ಯಾನಗಳು, ಅಳವಡಿಕೆಗಳು ಮತ್ತು ವಿನಿಯೋಗ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತದಲ್ಲಿ ವಸಾಹತುಶಾಹಿ ಯುಗದಲ್ಲಿ ಬ್ರಿಟಿಷ್‌ ಅಧಿಕಾರಿಗಳನ್ನು ರಂಜಿಸಲು ಶೇಕ್ಸಪಿಯರ್‌ನ ನಾಟಕಗಳನ್ನು ಪ್ರದರ್ಶಿಸಲಾಯಿತು. ತರುವಾಯ, ಶೇಕ್ಸಪಿಯರ್‌ನ ನಾಟಕಗಳ ಪ್ರದರ್ಶನಗಳು ಬೆಳೆದು ಯಶಸ್ಸು ಕಂಡು, ಅನೇಕ ದೇಶೀಯ ನಾಟಕಕಾರರು ಶೆಕ್ಸ್‌ಪಿಯರ್‌ನ ನಾಟಕಗಳನ್ನು ಭಾಷಾಂತರಿಸಲು ಮತ್ತು ಅಳವಡಿಸಿಕೊಳ್ಳಲು ಪ್ರೇರೇಪಿಸಿತು. ಇದರಿಂದಾಗಿ ಹಲವಾರು ಭಾರತೀಯ ಭಾಷೆಗಳಲ್ಲಿ ಶೇಕ್ಸಪಿಯರ್‌ನ ನಾಟಕಗಳನ್ನು ಅನುವಾದಿಸಿ ಅಳವಡಿಸಲಾಯಿತು. ಅಂದಿನಿಂದ, ಶೇಕ್ಸಪಿಯರ್‌ ಭಾರತೀಯರ ಕಲ್ಪನೆಯನ್ನು ಸೆರೆಹಿಡಿದು ಆವರಿಸಿಕೊಂಡಿದ್ದಾನೆ ಎಂದರು.

ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಿಯುಕೆ ಕುಲಪತಿ ಪ್ರೊ|ಬಟ್ಟು ಸತ್ಯನಾರಾಯಣ, ಇಂತಹ ಸಮ್ಮೇಳನಗಳು ಜ್ಞಾನವನ್ನು ಪ್ರಸಾರ ಮಾಡಲು ಮತ್ತು ಬುದ್ಧಿಜೀವಿಗಳನ್ನು ಒಂದೇ ವೇದಿಕೆಯಲ್ಲಿ ತರುತ್ತವೆ. ಇದು ಯುವ ಅಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತಮ್ಮ ಜ್ಞಾನ ಪ್ರದರ್ಶಿಸಲು ಮತ್ತು ತಜ್ಞರಿಂದ ಕಲಿಯಲು ವೇದಿಕೆ ಒದಗಿಸುತ್ತದೆ. ಈ ಸಮ್ಮೇಳನದ ಯಶಸ್ಸಿಗೆ ಶುಭ ಹಾರೈಸುತ್ತೇನೆ ಮತ್ತು ಶಿಕ್ಷಕರು ಆಗಾಗ್ಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕೋರುತ್ತೇನೆ ಎಂದು ಹೇಳಿದರು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ|ಪ್ರಕಾಶ ಬಾಳಿಕಾಯಿ ಮಾತನಾಡಿ, ಎರಡು ದಿನಗಳ ಈ ವಿಚಾರ ಸಂಕಿರಣದಲ್ಲಿ ವಿಲಿಯಂ ಶೇಕ್ಸಪಿಯರ್‌ನ ಬದಲಾವಣೆ ಮತ್ತು ನಿಶ್ಚಲತೆ, ಜನಪ್ರಿಯ ಸಂಸ್ಕೃತಿಯಲ್ಲಿ ಶೇಕ್ಸಪಿಯರ್‌, ಶೇಕ್ಸಪಿಯರ್‌ ಮತ್ತು ಅಂಗವೈಕಲ್ಯ ಅಧ್ಯಯನಗಳು, ಪೋಸ್‌ r-ಹ್ಯೂಮನಿಸಂ ಮತ್ತು ಶೇಕ್ಸಪಿಯರ್‌, ಶೇಕ್ಸಪಿಯರ್‌ನ ನಾಟಕಗಳಲ್ಲಿ ಮಾನವ ಸಂಬಂಧಗಳ ಜಟಿಲತೆಗಳು, ಶೆಕ್ಸ ಪಿಯರ್‌ ಮತ್ತು ನಾಟಕಗಳಲ್ಲಿನ ಬದಲಾವಣೆಗಳು,
ಶೇಕ್ಸಪಿಯರ್‌ ಮತ್ತು ಟ್ರಾಮಾ ಸ್ಟಡೀಸ್‌, ಶೇಕ್ಸಪಿಯರ್‌ನ ನಾಟಕಗಳಲ್ಲಿ ರಾಜರು ಮತ್ತು ಮುರ್ಖರು, ಭಾರತೀಯ ಭಾಷೆ, ಚಲನಚಿತ್ರಗಳಲ್ಲಿ ಶೇಕ್ಸಪಿಯರ್‌, ಶೇಕ್ಸಪಿಯರ್‌ನ ಭಾಷಾಂತರದಲ್ಲಿಯ ಸವಾಲುಗಳು, ಶೇಕ್ಸಪಿಯರ್‌ನ ನಾಟಕಗಳಲ್ಲಿ ಲಿಂಗದ ಮರು ವ್ಯಾಖ್ಯಾನ, ಸಂಸ್ಕೃತಿಗಳನ್ನು ಓದುವ ಸಾಧನವಾಗಿ ಶೇಕ್ಸಪಿಯರ್‌, ಶೇಕ್ಸಪಿಯರ್‌ ಮತ್ತು ಸಬಾಲ್ಟರ್ನ್ ಅಧ್ಯಯನಗಳ ಕುರಿತು ಲೆಖನಗಳ ಮಂಡನೆ ಮತ್ತು ಸಂವಾದ ನಡೆಯಲಿದೆ ಎಂದು ಹೇಳಿದರು.
ಡಾ|ಸಂಜೀವರಾಯಪ್ಪ ಎನ್‌.ಸಿ, ಡಾ|ಆಶಿಶ ಆಗಸರ, ಡಾ|ಶ್ರೀಲತಾ ಮಾದಾ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next