Advertisement

32 ಗಂಟೆ ಉಲಿದ ಕಲಬುರಗಿ ಬಾನುಲಿ

01:25 PM Feb 23, 2020 | Naveen |

ಕಲಬುರಗಿ: ಆಕಾಶವಾಣಿ ಕೇಂದ್ರವು ಕಲಬುರಗಿಯಲ್ಲಿ ನಡೆದ 85ನೇ ಅಖಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 32 ಗಂಟೆಗಳಷ್ಟು ಕಾಲ ಪ್ರಸಾರ ಮಾಡಿ ದಾಖಲೆ ನಿರ್ಮಿಸಿದೆ ಎಂದು ಆಕಾಶವಾಣಿ ತಿಳಿಸಿದೆ.

Advertisement

ಕಲಬುರಗಿ ಆಕಾಶವಾಣಿ ಕೇಂದ್ರವು “ಕನ್ನಡ ನುಡಿ ಹಬ್ಬ’ ಶೀರ್ಷಿಕೆಯಡಿ ಜ. 1ರಿಂದ ಫೆ. 4ರ ವರೆಗೆ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಗಳ ಪುನರಾವಲೋಕನ ಮಾಡಿದ ವಿಶೇಷ ಕಾರ್ಯಕ್ರಮ ಪ್ರತಿದಿನ ಬೆಳಗ್ಗೆ 6:45 ರಿಂದ 6:55ರ ವರೆಗೆ 24 ದಿನಗಳ ಕಾಲ ಪ್ರಸಾರವಾಯಿತು.

ಈ ಹಿಂದಿನ ಸಮ್ಮೇಳನ ನೋಡಿದ ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನು ಸುಮಾರು 45 ನಿಮಿಷಗಳ ಕಾಲ ಬಿತ್ತರಿಸಲಾಗಿದೆ. ಈ ಸಂದರ್ಭದಲ್ಲಿ ಭಾಲ್ಕಿ ಮಠದ ಡಾ| ಬಸವಲಿಂಗ ಪಟ್ಟದ್ದೇವರು, ಪ್ರೊ| ವಸಂತ ಕುಷ್ಟಗಿ, ಶಿವಶರಣಪ್ಪ ಗೋಗಿ ಮತ್ತಿತರರು ಅಭಿಪ್ರಾಯ ಹಂಚಿಕೊಂಡರು.

ಪುಸ್ತಕ ಮಳಿಗೆ ಸಮಿತಿ ಅಧ್ಯಕ್ಷರಾಗಿದ್ದ ಶಾಸಕ ಡಾ| ಅಜಯಸಿಂಗ್‌, ಸ್ಮರಣಿಕೆ ಸಮಿತಿ ಅಧ್ಯಕ್ಷರಾದ ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಸಮಿತಿ ಸದಸ್ಯರಾದ ರಮೇಶ ಸಂಗಾ ಅವರ ಜೊತೆಗಿನ ಸಂದರ್ಶನ ಸುಮಾರು 45 ನಿಮಿಷ ಬಿತ್ತರಿಸಲಾಗಿತ್ತು.

ಪೊಲೀಸ್‌ ಭದ್ರತೆ ಕುರಿತು ಕಲಬುರಗಿಯ ಪೊಲೀಸ್‌ ಕಮಿಷನರ್‌ ಜೊತೆ 15 ನಿಮಿಷಗಳ ಸಂದರ್ಶನ ಪ್ರಸಾರ ಮಾಡಲಾಗಿದೆ. ಇದರೊಂದಿಗೆ ಬಾಲಲೋಕ ಮಕ್ಕಳ “ರೇಡಿಯೋ ಶಾಲೆ’ಯಲ್ಲಿ ನಿವೃತ್ತ ಪ್ರಾಧ್ಯಾಪಕ ಶಿವಶರಣಪ್ಪ ಗೋಗಿ ಅವರು ಕಲಬುರಗಿ ವಾಣಿವಿಲಾಸ ಶಾಲೆಯ ವಿದ್ಯಾರ್ಥಿಗಳಾದ ನೀಲಾಕ್ಷಿ ಮತ್ತು ಶರಣಬಸವ ಜೊತೆ ಸಮ್ಮೇಳನದ ಕುರಿತು 30 ನಿಮಿಷ ವಿಶೇಷ ಕಾರ್ಯಕ್ರಮ ಮೂಡಿಬಂತು.

Advertisement

ರಾಜ್ಯವ್ಯಾಪಿ ಪ್ರಸಾರದಲ್ಲಿ ಫೆ.1ರಂದು ಸಮ್ಮೇಳನಾಧ್ಯಕ್ಷರ ಜೊತೆ 30 ನಿಮಿಷದ ಸಂದರ್ಶನ ಹಾಗೂ ಫೆ.2ರಂದು ಸಂಜೆ 7:45ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಜೊತೆ 15 ನಿಮಿಷದ ಸಂದರ್ಶನ, ಫೆ. 3ರಂದು ಸಮ್ಮೆಳನದ ಸಂಚಾಲಕರು, ಜಿಲ್ಲಾ ಧಿಕಾರಿ ಬಿ.ಶರತ್‌ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ವೀರಭದ್ರ ಸಿಂಪಿ ಅವರೊಂದಿಗೆ ಒಟ್ಟು 30 ನಿಮಿಷಗಳ ಸಂದರ್ಶನ ಪ್ರಸಾರ ಮಾಡಲಾಗಿತ್ತು.

ಫೆ. 4ರಿಂದ 7ರ ವರೆಗೆ ಬೆಳಗ್ಗೆ 9 ಗಂಟೆ 5ನಿಮಿಷಕ್ಕೆ ಪ್ರತಿ ಐದು ನಿಮಿಷದಂತೆ 20 ನಿಮಿಷಗಳಷ್ಟು ಕಾಲ “ಸಮ್ಮೇಳನದಲ್ಲಿ ಇಂದು’ ಕಾರ್ಯಕ್ರಮ ವಿವರ ಪ್ರಸಾರಗೊಂಡಿದೆ. ಇದರೊಂದಿಗೆ ರಾಜ್ಯವ್ಯಾಪಿ 14 ಕೇಂದ್ರಗಳಿಂದ ಫೆ. 5ರಂದು ಉದ್ಘಾಟನಾ ಕಾರ್ಯಕ್ರಮದ ಬಾನುಲಿ ವರದಿ, ಅದೇ ದಿನ ರಾತ್ರಿ 8 ಗಂಟೆಗೆ 30 ನಿಮಿಷ, ಮೊದಲ ದಿನದ ಗೋಷ್ಠಿಗಳ ವರದಿಯನ್ನು ಫೆ. 6 ರಂದು ಬೆಳಗ್ಗೆ 9:10ಕ್ಕೆ ತಲಾ 30 ನಿಮಿಷ ಹಾಗೂ ಎರಡನೇ ದಿನದ ಫೆ. 6 ರ ಗೋಷ್ಠಿಯನ್ನು ಫೆ. 7ರಂದು ಬೆಳಗ್ಗೆ 9:10ಕ್ಕೆ 30 ನಿಮಿಷ ಹಾಗೂ ಫೆ. 7ರಂದು ನಡೆದ ಮೂರನೇ ದಿನದ ಗೋಷ್ಠಿಗಳ ಹಾಗೂ ಸಮಾರೋಪ ಸಮಾರಂಭದ ಬಾನುಲಿ ವರದಿಯನ್ನು ಫೆ. 8ರಂದು ರಾತ್ರಿ 8 ಗಂಟೆಗೆ 30 ನಿಮಿಷಗಳ ಕಾಲ ಏಕಕಾಲಕ್ಕೆ ಪ್ರಸಾರ ಮಾಡಲಾಗಿದೆ.

ಫೆ. 5ರಿಂದ 7ರ ತನಕ ಕಲಬುರಗಿ ಆಕಾಶವಾಣಿ ಕೇಂದ್ರವು ಪ್ರತಿ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1:10ರವರೆಗೆ ಹಾಗೂ ಮಧ್ಯಾಹ್ನ 2.36 ರಿಂದ ಸಂಜೆ 6 ಗಂಟೆಯ ವರೆಗೆ ಒಟ್ಟು 19 ಗಂಟೆ 45 ನಿಮಿಷಗಳಷ್ಟು ಕಾಲ ನಿರಂತರವಾಗಿ ಸಮ್ಮೇಳನದ ಕಾರ್ಯಕಲಾಪಗಳನ್ನು ಬಿತ್ತರಿಸಿದೆ. ಫೆ. 4ರಂದು ವನಿತಾ ವಿಹಾರ ಕಾರ್ಯಕ್ರಮದಲ್ಲಿ ರಾಜ್ಯವ್ಯಾಪಿ ಕೇಂದ್ರಗಳಿಂದ ಮಧ್ಯಾಹ್ನ 12:30 ರಿಂದ 30 ನಿಮಿಷಗಳ ಕಾಲ ಗದಗದಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ನಾಡೋಜ ಡಾ| ಗೀತಾ ನಾಗಭೂಷಣ ಅವರೊಡನೆ ನಡೆಸಿದ ಸಂದರ್ಶನ ಪ್ರಸಾರಗೊಂಡಿದೆ.

ಫೆ.4ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12:30ರ ವರೆಗೆ ಸಮ್ಮೇಳನಾಧ್ಯಕ್ಷರಾದ ಡಾ| ಎಚ್‌.ಎಸ್‌. ವೆಂಕಟೇಶಮೂರ್ತಿ ಜೊತೆ ಕಲಬುರಗಿ ಆಕಾಶವಾಣಿ ಕೇಂದ್ರವು ಒಂದುವರೆ ತಾಸಿನ ನೇರ ಫೋನ್‌ ಇನ್‌ ಸಂವಾದ ಕಾರ್ಯಕ್ರಮ ಬಿತ್ತರಿಸಿತ್ತು. ಇದರ ಪೂರ್ವದಲ್ಲೆ ಸಮ್ಮೇಳನದ ಸಿದ್ಧತೆ ಕುರಿತು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಡಾ| ಮನು ಬಳಿಗಾರ ಜೊತೆ 25 ನಿಮಿಷಗಳ ಸಂದರ್ಶನ ಪ್ರಸಾರಗೊಂಡಿತ್ತು.

ಕಾರ್ಯಕ್ರಮಕ್ಕೆ ನೆರವಾದವರು
ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್‌. ಕುಲಕರ್ಣಿ, ನೇತೃತ್ವದಲ್ಲಿ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಅನಿಲಕುಮಾರ ಎಚ್‌.ಎನ್‌, ಡಾ| ಸದಾನಂದ ಪೆರ್ಲ, ಸೋಮಶೇಖರ ರುಳಿ, ಹಿರಿಯ ಉದ್ಘೋಷಕಿ ಶಾರದಾ ಜಂಬಲದಿನ್ನಿ ನೇರಪ್ರಸಾರದ ವೀಕ್ಷಕವಿವರಣೆ ಸೇರಿದಂತೆ ಪ್ರಸಾರದ ಹೊಣೆ ಹೊತ್ತಿದ್ದರು. ಶೋಭಾ ಪಾಟೀಲ, ಲಕ್ಷ್ಮೀಕಾಂತ ಪಾಟೀಲ, ರಾಘವೇಂದ್ರ ಭೋಗಲೆ, ಮಧು ದೇಶಮುಖ, ಗೋವಿಂದ ರಾಠೊಡ ನೆರವಾಗಿದ್ದರು. ತಾಂತ್ರಿಕ ಮುಖ್ಯಸ್ಥರಾದ ಶ್ರೀನಿವಾಸ ಎಲ್‌. ನೇತೃತ್ವದಲ್ಲಿ ಅಶೋಕ ಕುಮಾರ ಸೋಂಕಾವಡೆ, ಮಹ್ಮದ್‌ ಅಬ್ದುಲ್‌ ರವೂಫ್‌, ರವಿ ಎ., ಗೋವಿಂದ ಕುಲಕರ್ಣಿ, ಶಿವಲಿಂಗಪ್ಪ
ಡಿ. ಕೋಟನೂರು, ಸತೀಶ್‌ ಕುಲಕರ್ಣಿ, ಶಿವಯೋಗಿ ಎಂ. ಕೋರಿ ಪ್ರಸಾರಕ್ಕೆ ನೆರವಾಗಿದ್ದರು. ಸಮ್ಮೇಳನದ ಸ್ವಾಗತ ಸಮಿತಿ, ಕರ್ಣಾಟಕ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ಪ್ರಸಾರ ಕಾರ್ಯಕ್ರಮ ಅಪೂರ್ವ ದಾಖಲೆಯೊಂದಿಗೆ ಪ್ರಸಾರವಾಗಿ ಯಶಸ್ವಿಗೊಂಡಿತು ಎಂದು ಆಕಾಶವಾಣಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next