Advertisement

ಮೌಲ್ಯ ಅಧಃಪತನದಿಂದ ಶೋಷಣೆ ಹೆಚ್ಚಳ

12:47 PM Aug 05, 2019 | Naveen |

ಕಲಬುರಗಿ: ನೀತಿ ಇಲ್ಲದ ರಾಜಕೀಯ, ಸಾಮಾಜಿಕ ಬದ್ಧತೆ ಇಲ್ಲದ ಹೋರಾಟ-ಸಂಘಟನೆ, ಜನಪರ ಕಾಳಜಿಯಿಲ್ಲದ ಆಡಳಿತ ವರ್ಗ ಹಾಗೂ ಜನರಲ್ಲಿ ಹೆಚ್ಚಿದ ಸ್ವಾರ್ಥತೆಯಿಂದ ಎಲ್ಲವೂ ಬದಲಾಗಿ ಪ್ರೀತಿ, ಪ್ರೇಮ, ಸಹಾಯ ಹಾಗೂ ಅನುಕಂಪ ಎನ್ನುವುದು ಮೇಲ್ನೋಟಕ್ಕೆ ಮಾತ್ರ ಸೀಮಿತ ಎನ್ನುವಂತಾಗಿದೆ.

Advertisement

ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಗಳ ಅಧಃಪತನದಿಂದ ಶೋಷಣೆ ಹೆಚ್ಚಾಗಿದೆ. ಅಲ್ಲದೇ ಜಾತಿಯತೆ ಬಲಾಡ್ಯವಾಗಿದೆ. ಎಲ್ಲದರ ನಡುವೆ ಅಂತರ ಕಡಿಮೆಯಾಗುವ ಬದಲು ಮತ್ತಷ್ಟು ಜಾಸ್ತಿಯಾಗುತ್ತಿದೆ. ಮೇಲ್ನೋಟಕ್ಕೆ ಬಸವಣ್ಣ ಹಾಗೂ ಅಂಬೇಡ್ಕರ್‌ ತತ್ವಗಳನ್ನು ಹೇಳುತ್ತಿದ್ದೆವೆಯೇ ಹೊರತು ಅವರ ತತ್ವಗಳ ಆಚರಣೆ ಮಾಡುತ್ತಿಲ್ಲ.

-ಹೀಗೆ ವಾಸ್ತವ ಅಂಶಗಳನ್ನು ಬಿಚ್ಚಿಟ್ಟರು ಮಾಜಿ ಸಚಿವ, ಹೋರಾಟಗಾರ, ದಣಿವರಿಯದ ನಾಯಕ ಎಸ್‌.ಕೆ. ಕಾಂತಾ.

ಸಂದರ್ಭ: ಜಿಲ್ಲಾ ಕನ್ನಡ ಪರಿಷತ್‌ ವತಿಯಿಂದ ಕನ್ನಡ ಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೀವನ ಸಂಘರ್ಷ, ನಡೆದು ಬಂದ ದಾರಿಯನ್ನು ತಿಳಿಸಿದರು.

ಹುಟ್ಟೂರು ಹಾಗರಗುಂಡಗಿ ಆದರೂ ಸ್ವಗ್ರಾಮದಲ್ಲಿ ಶಾಲೆ ಕಲಿಯಲಿಲ್ಲ. ಕಲಬುರಗಿಯಲ್ಲಿ ಸೋದರಮಾವನ ಮನೆಯಲ್ಲಿದ್ದು, ಮಕ್ತಂಪುರ ಮಠದಲ್ಲಿ ಏಳನೇ ತರಗತಿವರೆಗೂ ಮಾತ್ರ ಓದಿದೆ. ಕಷ್ಟದ ಹಿನ್ನೆಲೆಯಲ್ಲಿ 16ನೇ ವಯಸ್ಸಿಗೆ ಎಂಎಸ್‌ಕೆ ಮಿಲ್ಗೆ ಸೇರಿದೆ. 18 ವರ್ಷಕ್ಕೆ ಕಾಯಂ ಕಾರ್ಮಿಕನಾದೆ. ಕಾರ್ಖಾನೆಯಲ್ಲಿ ಇಂಗ್ಲಿಷ್‌ಗೆ ಪ್ರಾಧ್ಯಾನ್ಯತೆ ಇದ್ದಿದ್ದರಿಂದ ಬಿರಾದಾರ ಎನ್ನುವರ ಬಳಿ ಎರಡು ವರ್ಷ ಇಂಗ್ಲಿಷ ಕಲಿತೆ. ಕಾರ್ಮಿಕರಿಗೆ ನ್ಯಾಯಕ್ಕಾಗಿ ಹೋರಾಟ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಂಘಟನೆಯೊಂದಿಗೆ ಸೇರಿಕೊಂಡರು. ಎಂಎಸ್‌ಕೆ ಮಿಲ್ ಬಂದಾಗಿದ್ದ ಹಾಗೂ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಪ್ರಬಲ ಹೋರಾಟ ನಡೆಸಲಾಯಿತು. ಲಾಠಿ ಚಾರ್ಜ್‌ ಆಯಿತು. 144 ಕಲಂ ಜಾರಿಯಾಯಿತು. ಆಯಿಲ್ ಮಿಲ್ ವಿರುದ್ಧ ಹೋರಾಟ ನಡೆದಾಗ ತಮ್ಮನ್ನು ಬಂಧಿಸಿ ಜೈಲಿಗಟ್ಟಿದಾಗ ತಮ್ಮ ತಾಯಿ ಸತ್ಯಾಗ್ರಹ ಮುಂದುವರಿಸಿದ್ದರು ಎಂದು ಹೋರಾಟದ ಸಂದರ್ಭಗಳನ್ನು ವಿವರಿಸಿದರು.

Advertisement

ವಿ.ಪಿ. ದೇವುಳಗಾಂವಕರ, ಮಲ್ಲೇಶಯ್ಯ ಕಲ್ಮಠ ಮುಂತಾದವರ ಸಹಕಾರದಿಂದ ಹಾಗೂ ಬಾಬುರಾವ್‌ ಎನ್ನುವರು ನಡೆಸುತ್ತಿದ್ದ ನೂರಾರು ಸಂಘಟನೆಗಳ ನೇತೃತ್ವ ವಹಿಸಿಕೊಂಡು ಲಾರಿ, ಆಟೋ ಹೀಗೆ ಎಲ್ಲ ವರ್ಗದ ಸಂಘಟನೆಗಳ ಕಾರ್ಮಿಕರ ಸಲುವಾಗಿ ಹೋರಾಟದ ಮಾರ್ಗಕ್ಕೆ ಇಳಿದು, ಅದನ್ನೇ ಇಂದಿನ ದಿನದವರೆಗೂ ಮುಂದುವರಿಸಲಾಗಿದೆ. ಇದರ ನಡುವೆ ರಾಜಕೀಯಕ್ಕೆ ಬಂದು ಶಾಸಕನಾಗಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಕಾರ್ಮಿಕ ಸಚಿವನಾಗಿ ಅಮೂಲಾಗ್ರ ಬದಲಾವಣೆ ತರಲು ಯತ್ನಿಸಲಾಗಿತ್ತು. ಇದಕ್ಕೆಲ್ಲ ಜನರಿಟ್ಟಿರುವ ಪ್ರೀತಿಯೇ ಕಾರಣವಾಗಿದೆ ಎಂದರು.

ಎಂಎಸ್‌ಕೆ ಮಿಲ್ ಕಾರ್ಖಾನೆ ಹಾಗೂ ಕಾರ್ಮಿಕರ ಸಲುವಾಗಿ, ಆಳಂದ ಸಕ್ಕರೆ ಕಾರ್ಖಾನೆ ಕಾರ್ಮಿಕರ ಕಾಯಂಗೆ, ಭೂಮಿ ಕಳೆದುಕೊಂಡ ಹೊನ್ನಕಿರಣಗಿ ರೈತರಿಗೆ ಸೂಕ್ತ ಪರಿಹಾರ, ಪಾಲಿಕೆಯಲ್ಲಿನ ಕಾರ್ಮಿಕರು ಸೇರಿದಂತೆ ಹತ್ತಾರು ಬಗೆಯ ಕಾರ್ಮಿಕರ ಹೋರಾಟವಲ್ಲದೇ, ಈಗ ಕಳೆದ ನಾಲ್ಕು ವರ್ಷಗಳಿಂದ ಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ನಡೆಸುತ್ತಿರುವ ಹೋರಾಟ ತಮ್ಮ ಜೀವನದಲ್ಲಿ ಮರೆಯಲಾರದ್ದು ಎಂದು ಹೇಳಿದರು.

ನಾಲ್ಕು ವರ್ಷದಿಂದ ಹೋರಾಟ: ಸೇಡಂ ತಾಲೂಕಿನಲ್ಲಿ ಶ್ರೀ ಸಿಮೆಂಟ್ ಕಾರ್ಖಾನೆ ಪ್ರಾರಂಭಕ್ಕೆ ಭೂಮಿ ಎನ್‌ಎ ಆಗದೇ ಇದ್ದರೂ 2012ರಲ್ಲಿ ಅನುಮತಿ ನೀಡಲಾಗುತ್ತದೆ. ಆದರೆ ಭೂಮಿ 2008ರಲ್ಲಿಯೇ ಖರೀದಿ ಮಾಡಲಾಗಿತ್ತು. ಆದರೂ ಸರ್ಕಾರದ ಭೂಮಿಗೆ ಒಂದು ದರ, ರೈತರ ಭೂಮಿಗೆ ಒಂದು ದರ ನೀಡಲಾಗಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ನಾಲ್ಕು ವರ್ಷಗಳಿಂದ ಸೇಡಂದಲ್ಲಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಹೋರಾಟದಲ್ಲಿ ಪಾಲ್ಗೊಂಡ 16 ಮಂದಿ ರೈತರು ಮೃತಪಟ್ಟಿದ್ದರೂ ಬೇಡಿಕೆಗೆ ಸ್ಪಂದಿಸದಿದ್ದರೇ ಏನು ಮಾಡಬೇಕು? ಯಾವ ರೀತಿ ಹೋರಾಟ ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದರು. ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ನಿರೂಪಿಸಿದರು, ಗೌರವ ಕಾರ್ಯದರ್ಶಿ ಡಾ| ವಿಜಯಕುಮಾರ ಪರೂತೆ ಸ್ವಾಗತಿಸಿದರು, ಸೂರ್ಯಕಾಂತ ಪಾಟೀಲ ವಂದಿಸಿದರು.

ಪ್ರಮುಖರಾದ ಬಸವರಾಜ ಇಂಗಿನ್‌, ಉಮಾಕಾಂತ ನಿಗ್ಗುಡಗಿ, ಶಿವಕಾಂತ ಮಹಾಜನ್‌, ಬಸವರಾಜ ತಡಕಲ್, ಡಿ.ಜಿ. ಸಾಗರ, ದೇವೇಗೌಡ ತೆಲ್ಲೂರ, ಮಹ್ಮದ ಸುಲ್ತಾನ ತಿಮ್ಮಾಪುರಿ, ಅಂಬಾರಾವ್‌ ಬೆಳಕೋಟಾ, ಅಗಸ್ತತೀರ್ಥ, ಬಾಬುರಾವ್‌ ಶೇರಿಕಾರ, ಎಂ.ಬಿ. ಅಂಬಲಗಿ, ಸುರೇಶ ಬಡಿಗೇರ ಹಾಗೂ ಕಸಾಪ ಪದಾಧಿಕಾರಿಗಳು ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next