Advertisement

Kalaburagi: ಸಿಎಂ ಬದಲಾವಣೆ ಕೇವಲ ಚರ್ಚೆಗೆ ಸೀಮಿತ: ಪ್ರಿಯಾಂಕ್ ಖರ್ಗೆ

02:25 PM Sep 09, 2024 | Team Udayavani |

ಕಲಬುರಗಿ; ಮುಖ್ಯಮಂತ್ರಿಗಳ ಬದಲಾವಣೆ ಪ್ರಸ್ತಾವನೆ ಹೈಕಮಾಂಡ್ ಮುಂದಿಲ್ಲ. ಒಂದು ವೇಳೆ ಬದಲಾವಣೆ ವಿಷಯ ಇದ್ದಿದ್ದರೆ ಶೇ. 60 ರಷ್ಟಾದರೂ ಗೊತ್ತಿರುತ್ತಿತ್ತು. ಮುಂಚೆ ತರಹ ಇಲ್ಲವಲ್ಲ, ಸಿಎಂ ಬದಲಾವಣೆ ವಿಷಯ ಕೇವಲ ಚರ್ಚೆಗೆ ಸಿಮಿತವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಂ.ಬಿ. ಪಾಟೀಲ್ ಹೇಳಿದ್ದೇ ಬೇರೆ ಮಾಧ್ಯಮಗಳು ಅರ್ಥ ಮಾಡಿಕೊಂಡಿದ್ದೇ ಬೇರೆ ಎಂದರು.

ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಯಲಿದೆ. ಸಾಮಾನ್ಯವಾಗಿ ಸಚಿವ ಸಂಪುಟ ಸಭೆಯಲ್ಲಿ ಇಡೀ ರಾಜ್ಯದ ಅಭಿವೃದ್ದಿ ಕುರಿತಂತೆ ಚರ್ಚೆ ನಡೆಯುತ್ತದೆ. ಆದರೆ, ಬಹಳ ವರ್ಷಗಳ ನಂತರ ಕಲಬುರಗಿಯಲ್ಲಿ ನಡೆಯುತ್ತಿರುವ ಸಂಪುಟ ಸಭೆಯಲ್ಲಿ ನಮ್ಮ ಭಾಗದ ಜನರ ಆಶಯದಂತೆ ಚರ್ಚೆ ನಡೆಸಿ ಅಭಿವೃದ್ದಿಯ ನೀಲಿನಕ್ಷೆ ತಯಾರಿಸಲಾಗುವುದು ಎಂದು ವಿವರಣೆ ನೀಡಿದರು.

ನಿಪುಣ ಕರ್ನಾಟಕ ಯೋಜನೆ

ಕಕ ಭಾಗದದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. “ಈ ನಿಟ್ಟಿನಲ್ಲಿ ಈಗಾಗಲೇ ಕೌಶಲ್ಯಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಂಟಿ ವತಿಯಿಂದ “ನಿಪುಣ – ಕರ್ನಾಟಕ” ಎನ್ನುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆ ಇದ್ದು ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ” ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.

Advertisement

ಶಾಸಕರ, ಅಧಿಕಾರಗಳ ಸಭೆ

ಸಚಿವ ಸಂಪುಟ ಸಭೆ ನಡೆಸುವ ಹಿನ್ನೆಲೆಯಲ್ಲಿ ಕಕ ಭಾಗಕ್ಕೆ ಅಗತ್ಯವಿರುವ ಯೋಜನೆಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲು ಈಗಾಗಲೇ ಸಂಬಂಧಿಸಿದ ಕ್ಷೇತ್ರಗಳ ಶಾಸಕರ ಹಾಗೂ ಅಧಿಕಾರಿಗಳ ಜೊತೆ ಎರಡು ಸುತ್ತಿನ ವಿಸಿ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಚರ್ಚಿಸಲಾಗಿದೆ.

ಸಿಎಸ್ ಜತೆ ಸಭೆ

ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ‌ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಾಳೆ ಸಭೆ ನಡೆಸಲಾಗುವುದು. ಇದೇ ರೀತಿ ಸಚಿವರ ಸಭೆ ನಡೆಸಲು ಸಿಎಂ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಪ್ರತ್ಯೇಕ ಸಚಿವಾಲಯ

ಆರ್ಟಿಕಲ್ 371 (J) ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಕುರಿತಂತೆ ಬೇಡಿಕೆ ಎದ್ದಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆಯೂ ಕೂಡಾ ಚರ್ಚಿಸಲಾಗುವುದು.‌ ಆರ್ಟಿಕಲ್ 371 (J) ಅಡಿಯಲ್ಲಿ ಈ ಭಾಗದಲ್ಲಿ 22,000 ಇಂಜಿನಿಯರಿಂಗ್ ಹಾಗೂ 2000 ವೈದ್ಯಕೀಯ‌ ಸೀಟು ಹಂಚಿಕೆಯಾಗಿವೆ. ಇದೂ ಕೂಡಾ ಕಟ್ಟುನಿಟ್ಟಿನ ಜಾರಿಯಲ್ಲವೇ? ಈ ಬಗ್ಗೆ ಟೀಕೆಗಳು ಸಹಜ. ಆದರೆ, ನಮ್ಮ‌ ಪ್ರಾಮಾಣಿಕ ಪ್ರಯತ್ನ ನಡೆಯಲಿದೆ ಎಂದರು.

ಹನಿ ಟ್ರ್ಯಾಪ್ ಕಲಬುರಗಿಗೆ ಕಪ್ಪುಚುಕ್ಕೆ

ಜಿಲ್ಲೆಯಲ್ಲಿ ಹನಿಟ್ರ್ಯಾಪ್ ನಡೆದಿರುವ ಕುರಿತಂತೆ ಈಗಾಗಲೇ ದೂರು ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಫಾರೆನ್ಸಿಕ್ ವರದಿ ಕೇಳಲಾಗಿದ್ದು ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಇದೊಂದು ಗಂಭೀರ ಪ್ರಕರಣವಾಗಿದ್ದು ಹೆಚ್ಚಿನ‌ ವಿವರ ಈಗಲೇ ಹೇಳಲು ಆಗದು. “ಹನಿಟ್ರ್ಯಾಪ್ ಸಮಾಜಕ್ಕೆ ಅದರಲ್ಲೂ ಕಲಬುರಗಿ ಜಿಲ್ಲೆಗೆ ಒಂದು ಕಪ್ಪುಚುಕ್ಕೆಯಾಗಿದೆ. ಆರೋಪಿಗಳು ಯಾವುದೇ ಸಂಘಟನೆಯವರು ಇರಲಿ ಅಥವಾ ಎಂತದ್ದೆ ವ್ಯಕ್ತಿಗಳಾಗಿರಲಿ, ಪೊಲೀಸ್ ತನಿಖೆ ನಂತರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.‌ ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲು ಸೆನ್ ಇಲಾಖೆಗೆ ವಹಿಸಲಾಗಿದ್ದು, ಸೆನ್ ವಿಭಾಗದ ಎಸಿಪಿ ಅವರು ತನಿಖೆ ನಡೆಸಲಿದ್ದಾರೆ.‌ ಹನಿಟ್ರ್ಯಾಪ್ ಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ನೊಂದವರು ನೇರವಾಗಿ ನನಗೆ ಇಲ್ಲವೇ ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ಸಲ್ಲಿಸಲಿ. ಅಂತವರ ವಿವರ ಹಾಗೂ ಗುರುತು ಗೌಪ್ಯವಾಗಿ ಇಡಲಾಗುವುದು” ಎಂದು ಸಚಿವರು ಸ್ಪಷ್ಟಪಡಿಸಿದರು.

ಜೂಜಾಟಕ್ಕೆ ಕಡಿವಾಣ

ಜಿಲ್ಲೆಯಲ್ಲಿ ನಡೆಯುತ್ತಿದ್ದ ಜೂಜು ಸೇರಿದಂತೆ ಹಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ‌ ಬಂದ ಮೇಲೆ ಶೇ 50 ರಷ್ಟು‌ ಕಡಿವಾಣ ಬಿದ್ದಿದೆ. ಸಮಾಜದಲ್ಲಿ ಎಲ್ಲವೂ ಒಮ್ಮೆಲೆ ಸುಧಾರಣೆ ಕಷ್ಟಸಾಧ್ಯ, ಆದರೂ ಇಂತಹ ಚಟುವಟಿಕೆಗಳನ್ನು ಬಂದ್ ಮಾಡಲು ನಮ್ಮ ಪ್ರಾಮಾಣಿಕ ಪ್ರಯತ್ನ ನಡೆದಿರುತ್ತದೆ ಎಂದು ಸಚಿವರು ಹೇಳಿದರು.

ರಾಜ್ಯಪಾಲರ ಅಧಿಕಾರ ದುರ್ಬಳಕೆ

ಸಿದ್ದಾರ್ಥ ಟ್ರಸ್ಟ್ ಗೆ ಭೂಮಿ ಮಂಜೂರು ಪ್ರಕ್ರಿಯೆ ಎಲ್ಲವೂ ಕಾನೂನು ಬದ್ಧವಾಗಿ‌ ನಡೆದಿದೆ. ಈ ಬಗ್ಗೆ ಮೊದಮೊದಲು ಜೋರಾಗಿ ಆರೋಪ ಮಾಡಿದ್ದ ವಿರೋದ ಪಕ್ಷದ ನಾಯಕರು ಹಾಗೂ‌ ಬಿಜೆಪಿ ಅಧ್ಯಕ್ಷರು ಈಗ ಮೌನವಾಗಿದ್ದರೆ. ಶಿಕ್ಷಣ ಸಂಸ್ಥೆ ನಡೆಸಲು ಅನಮತಿ ಪಡೆದುಕೊಂಡು ಈಗ ಬಿರಿಯಾನಿ ಹೊಟೇಲ್ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ಕೂಡಲೇ ಕ್ರಮ ಜರುಗಿಸುವ ರಾಜ್ಯಪಾಲರು ಈಗ ಏಕೆ ಕ್ರಮ ಜರುಗಿಸಿಲ್ಲ. ಹಾಗೆಯೇ ಕುಮಾರಸ್ವಾಮಿ ವಿರುದ್ದದ ದೂರಿನ ಬಗ್ಗೆಯೂ ಕ್ರಮವಿಲ್ಲ ಯಾಕೆ? ಎಲ್ಲಿ ಬಿಜೆಪಿ ಪಕ್ಷ ಬಲಹೀನವಾಗಿದೆಯೋ ಅಲ್ಲಲ್ಲಿ ರಾಜ್ಯಪಾಲರ ಅಧಿಕಾರವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಜಂಟಿ‌ ಸಮೀಕ್ಷೆ

ಜಿಲ್ಲೆಯಲ್ಲಿ ಇತ್ತೀಚಿಗೆ ‌ಬಿದ್ದ ಮಳೆಯಿಂದಾಗಿ ಹೆಸರು, ‌ತೊಗರಿ, ಉದ್ದು ಬೆಳೆ ಹಾಳಾಗಿದ್ದು, ಕಂದಾಯ ಹಾಗೂ ಕೃಷಿ‌ ಇಲಾಖೆಯಿಂದ‌ ಜಂಟಿ ಸರ್ವೆಗೆ ಸೂಚಿಸಲಾಗಿದೆ.‌ ಈಗಾಗಲೇ 15,000 ರೈತರು ದೂರು ಸಲ್ಲಿಸಿದ್ದು ಸಮೀಕ್ಷೆ ವರದಿ ಬಂದ ನಂತರ ಬೆಳೆ ಹಾಳಾದ ಸಂಪೂರ್ಣ ವಿವರ ದೊರಕಲಿದೆ ಎಂದರು.

ರಸ್ತೆ ಗುಂಡಿ ಮುಚ್ಚಲು ಅನುದಾನ ಬಿಡುಗಡೆ

ಮಳೆಯಿಂದ ಜಿಲ್ಲೆಯ ರಸ್ತೆಗಳು ಹಾಳಾಗಿದ್ದು ಗುಂಡಿ ಮುಚ್ಚಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸದ್ಯ ಮಳೆ‌ ಬೀಳುತ್ತಿರುವುದರಿಂದ ಕೆಲಸ‌ ನಡೆಯುತ್ತಿಲ್ಲ. ‌ಸ್ವಲ್ಪ ಮಳೆ ಬಿಡುವಾದ ನಂತರ ಗುಂಡಿ ಮುಚ್ಚುವ ಕೆಲಸ ನಡೆಯಲಿದೆ. ಭೀಮಾ ಬ್ರಿಜ್ ಹಾಗೂ ದಂಡೋತಿ ಬ್ರಿಜ್ ಮೇಲಿನ ರಸ್ತೆ ರಿಪೇರಿಗಾಗಿ ಕೆಆರ್ ಐಡಿ ಎಲ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next