Advertisement

ಕಲಿಯುಗದ ಕಟ್ಟಕಡೆಯ ಕಾಲಜ್ಞಾನಿ ಕೈವಾರ ತಾತಯ್ಯ

05:56 PM Jul 14, 2022 | Team Udayavani |

ಚಿಂತಾಮಣಿ: ಕೈವಾರ ತಾತಯ್ಯನವರು ಯೋಗದೃಷ್ಟಿಯಿಂದ ಕಲಿಯುಗದಲ್ಲಿ ಕಟ್ಟಕಡೆಯ ಕಾಲಜ್ಞಾನವನ್ನು ನೀಡಿದ್ದಾರೆ. ಈ ಕಾಲಜ್ಞಾನದ ಅರಿವನ್ನು ಪಡೆದುಕೊಂಡು ಜಾಗೃತರಾಗಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್‌.ಜಯರಾಮ್‌ ಹೇಳಿದರು.

Advertisement

ಕೈವಾರದ ಶ್ರೀಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ನಡೆದ ಗುರುಪೂಜಾ ಸಮಾರಂಭದಲ್ಲಿ ಮಾತನಾಡಿ, ಕೈವಾರ ತಾತಯ್ಯನವರು ಪರತತ್ವ ಸಾಧನೆಯನ್ನು ಮಾಡಿರುವ ಸದ್ಗುರು. ಭಕ್ತಿ, ಕರ್ಮ, ಯೋಗವನ್ನು ಸೇರಿಸಿ ಕೈವಾರ ತಾತಯ್ಯನವರು ಬೋಧನೆ ಮಾಡಿದ್ದಾರೆ. ಬಾಹ್ಯ ಸಾಧನೆಗಳಿಗಿಂತಲೂ ಅಂತರಂಗದ ಸಾಧನೆ ಶ್ರೇಷ್ಠವಾದದ್ದು. ಮಾನವರಲ್ಲಿ ಭೇದವನ್ನು ಮಾಡದೆ, ಮುಕ್ತಿಯ ಪಥದೆಡೆಗೆ ಸಾಗುವ ಸಾಧನೆಯನ್ನು ತಾತಯ್ಯನವರು ಬೋಧಿಸಿದ್ದಾರೆ.

ಅಹಂಕಾರವನ್ನು ಬಿಟ್ಟ ಭಕ್ತನಿಗೆ ಮಾತ್ರ ಪರಮ ಪದವಿ ದೊರೆಯುತ್ತದೆ. ಗುರುಗಳಲ್ಲಿ ಅನನ್ಯ ಭಕ್ತಿಯಿಂದ ಶರಣಾಗತಿಯಾದರೆ, ನಮ್ಮ ಮುಂದಿನ ಬದುಕನ್ನು ಅವರೇ ರೂಪಿಸುತ್ತಾರೆ. ಮಾನವ ಜನ್ಮವನ್ನು ವ್ಯರ್ಥಮಾಡಿಕೊಳ್ಳದೆ, ಸದುಪಯೋಗ ಮಾಡಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಬೇಕು. ನಮ್ಮಲ್ಲಿರುವ ಅವಿದ್ಯೆಗಳನ್ನು ತೆಗೆದುಹಾಕುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದು ತಿಳಿಸಿದರು.

ತಾತಯ್ಯನವರಿಗೆ ಅಭಿಷೇಕ: ಗುರುಪೂಜೆ ಪ್ರಯುಕ್ತ ಗಾಯನವನ್ನು ವಿದ್ವಾಂಸರು ನಡೆಸಿದರು. ಯೋಗಿ ನಾರೇಯಣ ಯತೀಂದ್ರ ತಾತಯ್ಯನವರಿಗೆ ಅಭಿಷೇಕ, ರಾಜೋಪಚಾರ, ಅಷ್ಟಾವಧಾನ ಸೇವೆ ನಡೆಯಿತು. ಬೆಳಗಿನಿಂದಲೇ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ದೇವಾಲಯದಲ್ಲಿ ಪೂಜಾ ಕೈಕಂರ್ಯಗಳನ್ನು ನಡೆಸಲಾಯಿತು. ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕ ಮಾಡಲಾಯಿತು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಏಳನೀರು ಮತ್ತು ಹರಿಶಿನ ಮತ್ತು ಕುಂಕುಮ, ವಿಭೂತಿ, ಶ್ರೀಗಂಧ ಮುಂತಾದ ಮಂಗಳ ದ್ರವ್ಯಗಳಿಂದ ಅಭಿಷೇಕ ಸಮರ್ಪಿಸಲಾಯಿತು. ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಸಹಸ್ರಾರು ಭಕ್ತರು ಗುರುಪೂಜೆಯಲ್ಲಿ ಭಾಗವಹಿಸಿದ್ದರು.

ಕೈವಾರ ತಾತಯ್ಯನವರು ರಚಿಸಿರುವ “ಶ್ರೀರಾಮ ಭವತಾರಕ ಮಂತ್ರ ತಾರಾವಳಿ” ಎಂಬ ಗ್ರಂಥದ ಕನ್ನಡ ಮತ್ತು ಆಂಗ್ಲ ಭಾಷೆಯ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು.

Advertisement

ಸಂಗೀತ ಸಮರ್ಪಣೆ: ಸಂಗೀತ ಕಛೇರಿಗಳಲ್ಲಿ ಆನೂರು ಅನಂತಕೃಷ್ಣಶರ್ಮ ನೇತೃತ್ವದಲ್ಲಿ ತಾಳವಾದ್ಯ ಕಛೇರಿ, ಮಂಜುಳ ಜಗದೀಶ್‌, ಇ.ರಾಮಕೃಷ್ಣಾಚಾರ್‌, ಕೆ.ಎಸ್‌.ನಾಗಭೂಷಣಯ್ಯ, ಪದ್ಮ ಚಿಂತಾಮಣಿ, ಚಿಂತಲಪಲ್ಲಿ ಕಿಶೋರ್‌ ಕುಮಾರ್‌ ಹಾಗೂ ಸೋಮಶೇಖರ್‌, ವಿಜಯವಾಡದ ಹರಿತಾ ಸಹೋದರಿಯರು, ಮಾಯಾಬಾಲಚಂದ್ರ, ಅಶ್ವಿ‌ನಿ ಮೋಹನ್‌, ಹೊಸೂರು ವೇಣು ತಂಡದವರು ಸಂಗೀತ ಸಮರ್ಪಣೆ ಮಾಡಿದರು.

ವಿಶೇಷ ಕಾರ್ಯಕ್ರಮವಾಗಿ ವಾಸವಿ ಸಹೋದರಿಯರು, ಮರಕತವಲ್ಲಿ, ಅಂಜಲಿ ಶ್ರೀರಾಮ್‌, ಚೈತನ್ಯ ಸಹೋದರರಿಂದ ಗಾಯನ, ದೀಲಿಪ್‌ ಮತ್ತು ಇಳಾ ಸಂಗೀತಾರವರಿಂದ ಪಿಟೀಲು ವಾದನ, ಚೇತನಾ ಸುಂದರೇಶ್‌ ಹಾಗೂ ಸಾಯಿತೇಜಸ್ವಿನಿ ತಂಡದವರಿಂದ ಭರತನಾಟ್ಯ, ತತ್ತನೂರು ಸಹೋದರರಿಂದ ನಾದಸ್ವರ ಕಾರ್ಯಕ್ರಮಗಳು ನಡೆಯಿತು.

ಹಿರಿಯ ಚಿಂತಕ, ಮಲ್ಲಾರ ಪತ್ರಿಕೆ ಸಂಪಾದಕ ಡಾ.ಬಾಬು ಕೃಷ್ಣಮೂರ್ತಿ, ಡಾ.ಜೋಸುಲ ಸದಾನಂದಶಾಸ್ತ್ರೀ, ಲೇಖಕಿ ಅಂಬಿಕಾ ಅನಂತ್‌ ಅವರನ್ನು ಸನ್ಮಾನಿಸಲಾಯಿತು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್‌, ಕೈವಾರ ಟ್ರಸ್ಟ್‌ ಉಪಾಧ್ಯಕ್ಷ ಜೆ.ವಿಭಾ ಕರರೆಡ್ಡಿ, ಖಜಾಂಚಿ ಆರ್‌.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಬಾಗೇಪಲ್ಲಿ ನರಸಿಂಹಪ್ಪ, ಬಿ.ಎಸ್‌. ಶ್ರೀನಿವಾಸ್‌, ಡಾ.ಎಂ.ವಿ.ಶ್ರೀನಿವಾಸ್‌, ಗಣೇಶ್‌ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next