Advertisement

ಗಮನ ಸೆಳೆದ ಕಾಸರಗೋಡಿನ ಕೈಪಂಗಳರವರ ನೂತನ ತಂತ್ರಜ್ಞಾನ –ಸೋಲಾರ್‌ ಲೆಡ್‌ಲೈಟ್‌

07:42 PM May 03, 2019 | Team Udayavani |

ಬದಿಯಡ್ಕ: ಯಾವುದೇ ಒಂದು ವಿಷಯದ ಬಗ್ಗೆ ಅತಿಯಾದ ಆಸಕ್ತಿ ಇದ್ದಾಗ ಮಾತ್ರ ಯಾವನೇ ಒಬ್ಬ ವ್ಯಕ್ತಿ ಆ ವಿಷಯದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಸಾಧ್ಯಾ ಸಾಧ್ಯತೆಗಳನ್ನು ಪರಿಗಣಿಸಿ ಆ ಕ್ಷೇತ್ರದಲ್ಲಿ ವಿಭಿನ್ನವಾಗಿ ಏನನ್ನಾದರೂ ಸಾಧಿಸಲು ಸಾಧ್ಯ. ಅದರಲ್ಲೂ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಂಪೂರ್ಣವಾಗಿ ಅರ್ಪಿಸಿಕೊಂಡು ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸತತ ಪ್ರಯತ್ನದ ಮೂಲಕ ಸಂಶೋಧನೆ ಮಾಡಿ ಯಶಸ್ವಿಯಾದ ಕೆಲವೇ ಕೆಲವರಲ್ಲಿ ರಾಜಗೋಪಾಲ ಕೈಪಂಗಳ ಅವರೂ ಒಬ್ಬರು. ಛಲದಿಂದ ಕೈಗೆತ್ತಿಕೊಂಡ ಕಾರ್ಯವನ್ನು ನಿರ್ವಹಿಸಿ ದೇಶದ ರೈತರಿಗೆ ನೆಮ್ಮದಿಯ ದಾರಿಯನ್ನು ತೋರಿದ್ದಾರೆ.


ಕೃಷಿಯನ್ನು ಪ್ರಾಣಿ ಹಾಗೂ ಪಕ್ಷಿಗಳ ಹಾವಳಿಯಿಂದ ರಕ್ಷಣೆ ಮಾಡುವುದು ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಲ್ಲೊಂದು. ಕೆಲವು ಅಂಕಿ ಅಂಶಗಳ ಪ್ರಕಾರ ಸುಮಾರು 45 % ಉತ್ಪನ್ನಗಳು ಕಾಡು ಪ್ರಾಣಿಗಳಿಂದ ನಾಶವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ನೆಟ್ಟಣಿಗೆ ನಿವಾಸಿ ರಾಜಗೋಪಾಲ ಭಟ್‌ ಕೈಪಂಗಳ ಎಂಬವರು ಆವಿಷ್ಕರಿಸಿದ ಸೋಲಾರ್‌ ಲೆಡ್‌ಲೈಟ್‌ ತಂತ್ರಜ್ಞಾನ ದೇಶದ ಗಮನ ಸೆಳೆದಿದೆ. ಇತ್ತಿಚೇಗೆ ಲಕ್ನೋದಲ್ಲಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಫಸಲ್‌ ಭೀಮ ಯೋಜನೆಯ (ಪಿ.ಎಂ.ಎಫ್‌.ಬಿ.ವೈ.) ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ತಮ್ಮ ಆವಿಷ್ಕಾರದ ಬಗ್ಗೆ ಪ್ರಬಂಧ ಮಂಡಿಸುವ ಮೂಲಕ ರಾಜಗೋಪಾಲ ಕೈಪಂಗಳ ದೇಶದ ಗಮನ ಸೆಳೆದಿದ್ದಾರೆ. ಸಮಾಲೋಚನೆಯಲ್ಲಿ ಯೋಜನೆಗೆ ಸಂಬಂಧಿಸಿದ ಹಲವಾರು ರಾಜ್ಯಗಳ ಕೃಷಿ ವಿಜ್ಞಾನಿಗಳು, ತಂತ್ರಜ್ಞರು, ಬ್ಯಾಂಕ್‌ ಅಧಿಕಾರಿಗಳು, ವಿಮಾ ಹಾಗೂ ಕೇಂದ್ರ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಕೃಷಿಕರು ಪಾಲ್ಗೊಂಡಿದ್ದರು. ಸಾಮಾನ್ಯವಾಗಿ ತೋಟ, ಗದ್ದೆಗಳಿಗೆ ಕಾಡು ಪ್ರಾಣಿಗಳ ಉಪಟಳ ಎಲ್ಲೆಡೆಯೂ ಇದೆ. ಅದರಲ್ಲೂ ಮುಳ್ಳುಹಂದಿ, ಕಾಡು ಹಂದಿ, ಕಾಡು ಕೋಣ, ಜಿಂಕೆ, ಮಂಗ, ಕಾಡಾನೆ ಇತ್ಯಾದಿ ಪ್ರಾಣಿಗಳು, ನವಿಲು, ಬಾವಲಿ ಮೊದಲಾದವು ಕೃಷಿ ತೋಟಕ್ಕೆ ಲಗ್ಗೆಯಿಕ್ಕಿ ವ್ಯಾಪಕ ಹಾನಿ ಉಂಟುಮಾಡುತ್ತವೆ. ಹೆಚ್ಚಿನ ವೇಳೆ ಹೊಟ್ಟೆ ನೀಗಿಸುವುದರ ಜೊತೆಗೆ ಮೋಜಿಗಾಗಿ ಪ್ರಾಣಿಗಳು ಬೆಳೆ ಹಾಳುಗೆಡುವುದು ಕಂಡು ಬರುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜಗೋಪಾಲ ಕೈಪಂಗಳ ಅವರು ಕಂಡು ಹಿಡಿದ ಸೋಲಾರ್‌ ಲೆಡ್‌ಲೆ„ಟ್‌ ಉಪಕರಣವು ರಾತ್ರೆ ತೋಟಕ್ಕೆ ಲಗ್ಗೆ ಇಡುವ ಯಾವುದೇ ಕಾಡು ಪ್ರಾಣಿಗಳನ್ನು ತಡೆದು ಕೃಷಿಯನ್ನು ಸುರಕ್ಷಿತವಾಗಿಡಲು ಸಹಕಾರಿ. ಲಕ್ನೋದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಕೈಪಂಗಳ ಅವರ ಉಪಕರಣದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

Advertisement

ಎಲ್ಲ ಕಡೆಯಿಂದಲೂ ಬೇಡಿಕೆ
ರಾಜಗೋಪಾಲ ಭಟ್‌ ಕೈಪಂಗಳ ಅವರ ಸೋಲಾರ್‌ ಲೆಡ್‌ಲೆ„ಟ್‌ ಉಪಕರಣದ ಯಶಸ್ಸಿನಿಂದ ಎಲ್ಲ ಕಡೆಯಿಂದಲೂ ಬೇಡಿಕೆ ಹುಡುಕಿಕೊಂಡು ಬಂದಿದೆ. ಈಗಾಗಲೇ ಇಂಥ ಸಾವಿರಕ್ಕಿಂತಲೂ ಅಧಿಕ ಉಪಕರಣ ತಯಾರಿಸಲಾಗಿದೆ. ತಿರುವನಂತಪುರದ ಆಯಿಲ್‌ ಪಾವ್‌ ಸಂಶೋಧನಾ ಕೇಂದ್ರ ಕೈಪಂಗಳ ಆವರ ಸೋಲಾರ್‌ ಉಪಕರಣ ಖರೀದಿಸಿದೆ. ವಿಟ್ಲ ಸಿಪಿಸಿಆರ್‌ಐ ಕೂಡ ಈ ಉಪಕರಣ ಖರೀದಿಸಿದೆ. ರಾಜ್ಯದ ವಿವಿಧ ಕೃಷಿ ವಿವಿಗಳು, ಅರಣ್ಯ ಇಲಾಖೆ, ಬƒಹತ್‌ ಪ್ರಮಾಣದ ಕೃಷಿ ಸಂಸ್ಥೆಗಳು, ರೆಸಾರ್ಟ್‌ಗಳು ಕೈಪಂಗಳ ಅವರ ಸೋಲಾರ್‌ ಉಪಕರಣ ಖರೀದಿಸಲು ಮುಂದೆ ಬಂದಿದೆ.

ಯಾರಿವರು?
ಸುಮಾರು ಎರಡು ದಶಕಗಳ ಕಾಲ ಕೊಲ್ಲಿ ರಾಷ್ಟ್ರಗಳಲ್ಲಿ ರಿಟೆ„ಲ್‌ ಮಾರುಕಟ್ಟೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವದೊಂದಿಗೆ ಮೂರು ವರ್ಷಗಳ ಹಿಂದೆ ಹುಟ್ಟೂರಿಗೆ ವಾಪಾಸಾಗಿ ಕೃಷಿಯನ್ನೇ ಕಾಯಕವಾಗಿಸಿದವರು. ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಇವರು ಕೈಪಂಗಳ ಮೂಲಕ ಪುತ್ತೂರು ತಲುಪುವ ರಸ್ತೆಗಾಗಿ ಅಗತ್ಯದ ಭೂಮಿಯನ್ನು ಇತರ ರೈತರೊಂದಿಗೆ ದಾನಮಾಡಿದವರು. ಕಾಡುಪ್ರಾಣಿಗಳ ಉಪಟಳದ ಕುರಿತಾದ ಹಲವಾರು ಬಾನುಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಏನಿದು ಸೋಲಾರ್‌ ಲೆಡ್‌ ಲೈಟ್‌ ?
ಸಂಪೂರ್ಣ ಸೋಲಾರ್‌ ಶಕ್ತಿಯಿಂದ ಪ್ರವರ್ತಿಸುವ ಪ್ರಾಣಿ ನಿಯಂತ್ರಕ ಈ ವ್ಯವಸ್ಥೆ 20 ಮೀಟರ್‌ಗಳಿಗೆ ಒಂದರಂತೆ 26 ಸೆಂಟಿಮೀಟರ್‌ ಎತ್ತರದಲ್ಲಿ ಅಳವಡಿಸಲಾಗುತ್ತದೆ. ಈ ಉಪಕರಣ ರಾತ್ರಿಯಾಗುತ್ತಿದ್ದಂತೆ ಸರ್ಚ್‌ಲೆ„ಟ್‌ನಂತೆ ಕೆಂಬಣ್ಣದ ಬೆಳಕು ಬೀರುವ ಮೂಲಕ ಪ್ರಾಣಿಗಳಿಗೆ ಭಯ ಹುಟ್ಟಿಸುತ್ತದೆ. ಹಾಗೂ ಇದರಿಂದ ಭಯಗೊಂಡ ಪ್ರಾಣಿಗಳು ಆಹಾರಕ್ಕಾಗಿ ಬೇರೆಡೆಗೆ ಪಲಾಯನ ಹೋಗುತ್ತವೆ. ಕಾಡು ಪ್ರಾಣಿಗಳ ಕಣ್ಣಿನ ಎತ್ತರವನ್ನು ಅವಲಂಬಿಸಿ ಈ ಉಪಕರಣವನ್ನು ಇರಿಸಬೇಕಾಗಿದ್ದು ತಮ್ಮ ಸಲಹೆಯಂತೆ ಇರಿಸಿದಲ್ಲಿ ಅವುಗಳ ಉಪಟಳವನ್ನು ತಡೆಯಬಹುದೆಂದು ಸಂಶೋಧಕರು ವ್ಯಕ್ತ ಪಡಿಸಿದರು. ಸೋಲಾರ್‌ ಶಕ್ತಿಯಿಂದ ಕೆಲಸ ಮಾಡುವ ಈ ಉಪಕರಣವು ಅಲ್ಪ ಬಿಸಿಲಿನ ಮಳೆಗಾಲದಲ್ಲೂ ಕಾರ್ಯವೆಸಗುವ ಕ್ಷಮತೆ ಹೊಂದಿದ್ದು , ರೈತನಿಗಾಗಲೀ, ಬೆಳೆಗಳಿಗಾಗಲಿ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ . ಎಕರೆಯೊಂದಕ್ಕೆ 15 ರಷ್ಟು ಸೋಲಾರ್‌ ಲೆ„ಟ್‌ ಬೇಕಾಗಬಹುದು ಎನ್ನುತ್ತಾರೆ ಕೈಪಂಗಳ.

Advertisement

ಈ ಸಂಶೋಧನೆಯು ಪೇಟೆಂಟ್‌ ಹೊಂದಿದ್ದು ಇದಕ್ಕೆ wildkrac ಎಂದು ಹೆಸರಿಡಲಾಗಿದ್ದು . ದೇಶದ ಪ್ರಥಮ ರಾಸಾಯನಿಕ ಮುಕ್ತ ಬೆಳೆ ಸಂರಕ್ಷಕ ಉಪಕರಣ ಇದಾಗಿದ್ದು , ರಾತ್ರೆ ಬರುವ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಣೆ ಮಾಡಬಹುದು.
– ರಾಜಗೋಪಾಲ ಭಟ್‌ ಕೈಪಂಗಳ , ಪ್ರಗತಿಪರ ಕೃಷಿಕ

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next