Advertisement

ಟೊಳ್ಳುಗಟ್ಟಿ ಈಗ ಮೂಕವಿಸ್ಮಿತ

04:36 AM Mar 29, 2019 | mahesh |

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನಾಟಕ ಆಧಾರಿತ ಚಿತ್ರಗಳು ತೆರೆ ಮೇಲೆ ರಾರಾಜಿಸಿವೆ. ಆ ಸಾಲಿಗೆ “ಮೂಕವಿಸ್ಮಿತ’ ಕೂಡ ಸೇರಿದೆ. ಇದು ಟಿ.ಪಿ.ಕೈಲಾಸಂ ಅವರ “ಟೊಳ್ಳು ಗಟ್ಟಿ’ ನಾಟಕ ಆಧರಿಸಿ ಮಾಡಿದ ಚಿತ್ರವಿದು. ಚಿತ್ರದ ಶೀರ್ಷಿಕೆಗೆ “ಟೊಳ್ಳು ನಿರೀಕ್ಷೆ ಗಟ್ಟಿ ಸಿನಿಮಾ’ ಎಂಬ ಅಡಿಬರಹವಿದೆ. ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿರೋದು ಯುವ ನಿರ್ದೇಶಕ ಗುರುದತ್ತ ಶ್ರೀಕಾಂತ್‌. ಇದು ಅವರ ಮೊದಲ ನಿರ್ದೇಶನದ ಚಿತ್ರ. ಇಪ್ಪತ್ತರ ದಶಕದಲ್ಲಿ ನಡೆಯುವ ಕಥೆಯನ್ನು ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಸಿಕೊಂಡು ಮಾಡಿದ ಚಿತ್ರವಿದು. ಇತ್ತೀಚೆಗೆ ಚಿತ್ರದ ಟ್ರೇಲರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಲಹರಿ ವೇಲು, ಸಾಹಿತಿ ಡಾ.ದೊಡ್ಡರಂಗೇಗೌಡ ಆಡಿಯೋಗೆ ಸಾಕ್ಷಿಯಾದರು.

Advertisement

ನಿರ್ದೇಶಕ ಗುರುದತ್ತ “ಮೂಕವಿಸ್ಮಿತ’ ಬಗ್ಗೆ ಹೇಳಿದ್ದಿಷ್ಟು. “ಸುಮಾರು 97 ವರ್ಷಗಳ ಹಿಂದಿನ ನಾಟಕವಿದು ಒಂದು ಖುಷಿಯ ವಿಷಯವೆಂದರೆ, ಇಷ್ಟು ವರ್ಷಗಳ ಕಾಲ ಯಾರೂ ಈ ನಾಟಕವನ್ನು ಚಿತ್ರ ಮಾಡಿರಲಿಲ್ಲ. ಅದೊಂದು ಅದ್ಭುತ ನಾಟಕ ಎನಿಸಿದ್ದರಿಂದ ಅದನ್ನು ಚಿತ್ರಕ್ಕೆ ಅಳವಡಿಸಿ ಮಾಡಿದ್ದೇನೆ. ಒಳ್ಳೆಯ ಚಿತ್ರ ಮಾಡಿದ ತೃಪ್ತಿ ನನಗಿದೆ. ಸುಮಾರು ಎರಡುವರೆ ವರ್ಷಗಳ ಪ್ರಯತ್ನವಿದು. ಇಲ್ಲಿ ಬದುಕಿನ ಭಾವನೆಗಳ ಜೊತೆಗೆ ಮನರಂಜನೆಯೂ ಇದೆ. ನಾನು ಕಳೆದ ಐದು ವರ್ಷಗಳಿಂದಲೂ ರಂಗಭೂಮಿಯ “ದೃಶ್ಯ’ ತಂಡದಲ್ಲಿದ್ದವನು. ಆಗ ಒಂದಷ್ಟು ಅನುಭವ ಪಡೆದಿದ್ದೆ. ಕೈಲಾಸಂ ಅವರ ಈ ನಾಟಕದಲ್ಲಿ ಮಜವಾದ ಅಂಶಗಳಿವೆ. 1920 ರ ಕಥೆಗೆ ಈ ಜನರೇಷನ್‌ಕಥೆ ಸೇರಿಸಿ ಮಾಡಿದ ಚಿತ್ರವಿದು. ಆ ಕಾಲದ ಕಥೆ ಈಗಿನ ಕಾಲಕ್ಕೆ ಹೇಗೆ ಸರಿಹೊಂದುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಒಟ್ಟೊಟ್ಟಿಗೆ ಮೂರು ಆಯಾಮದಲ್ಲಿ ಕಥೆ ಸಾಗಲಿದೆ. ಒಳ್ಳೆಯದು ಮತ್ತು ಕೆಟ್ಟದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ಕಂಡುಕೊಳ್ಳುತ್ತಾನೆ ಎಂಬುದು ಸಾರಾಂಶ. ಒಬ್ಬ ನಿರ್ದೇಶಕನ ಪರಿಶ್ರಮ, ಒಬ್ಬ ಫೋಟೋಗ್ರಾಫ‌ರ್‌ನ ಹುಡುಕಾಟ, ಒಬ್ಬ ಹುಚ್ಚನ ನಿಜವಾದ ಮನಸ್ಥಿತಿ ಹೀಗೆ ಹಲವು ಸಂಗತಿಗಳು ಒಂದೇ ಕಥೆಯಲ್ಲಿ ಹೇಗೆ ಸೃಷ್ಟಿಯಾಗುತ್ತವೆ ಎಂಬದನ್ನಿಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ಗುರುದತ್ತ.

ಸಂದೀಪ್‌ ಮಲಾನಿ ಇಲ್ಲಿ ಹಿರಿಯಣ್ಣ ಎಂಬ ಪಾತ್ರ ಮಾಡಿದ್ದಾರಂತೆ. ತುಂಬಾ ಕಷ್ಟದ ಪಾತ್ರವಾಗಿದ್ದರೂ, ನಿರ್ದೇಶಕರು ನೀಟ್‌ ಆಗಿ ಹೇಳಿಕೊಟ್ಟಿದ್ದನ್ನು ಮಾಡಿದ್ದಾರಂತೆ ಮಲಾನಿ. ಸಾಕಷ್ಟು ವರ್ಕ್‌ಶಾಪ್‌ ಬಳಿಕ ಸ್ಪಷ್ಟ ಕನ್ನಡ ಭಾಷೆ ಬಳಸಿ ಮಾಡಿದ ಚಿತ್ರವಿದು. 54 ನೇ ವಯಸ್ಸಲ್ಲೂ ಒಂದು ಮಗುವಿಗೆ ತಂದೆಯಾಗುವಂತಹ ಪಾತ್ರ ತುಂಬಾ ಚಾಲೆಂಜಿಂಗ್‌ ಆಗಿತ್ತು’ ಅಂದರು ಮಲಾನಿ.

ನಾಯಕಿ ಶುಭರಕ್ಷ, ಇದುವರೆಗೆ ಗ್ಲಾಮರಸ್‌ ಪಾತ್ರಕ್ಕೆ ಸೀಮಿತವಾಗಿದ್ದರಂತೆ. ಆದರೆ, ಇಲ್ಲಿ ವಿಶೇಷವಾದ ಪಾತ್ರ ಸಿಕ್ಕಿದ್ದು, ಪಕ್ಕಾ ಟ್ರೆಡಿಷನಲ್‌ ಹುಡುಗಿ ಪಾತ್ರವಂತೆ. ಅದರಲ್ಲೂ 1920 ಕಾಲಘಟ್ಟದ ಮಹಿಳೆಯಾಗಿ ಕಾಣಿಸಿಕೊಂಡಿದ್ದೇನೆ ಎಂಬುದು ಅವರ ಮಾತು. ವಾಣಿಶ್ರೀ ಭಟ್‌ ಅವರಿಗೆ ಇದು ಮೊದಲ ಚಿತ್ರ. ಇಲ್ಲಿ ನಾಯಕಿಯಾಗಿರುವ ಅವರಿಗೆ, ಸಿನಿಮಾ ಆಸಕ್ತಿ ಇರಲಿಲ್ಲವಂತೆ. ಕೊನೆಗೆ ಟಿ.ಪಿ.ಕೈಲಾಸಂ ಅವರ ನಾಟಕ ಆಧರಿತ ಸಿನಿಮಾ ಅಂತ ಗೊತ್ತಾದಾಗ, ಒಪ್ಪಿಕೊಂಡು ಮಾಡಿದ್ದೇನೆ. ಇಲ್ಲಿ ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ ಎಂಬುದು ಅವರ ಮಾತು.

ಚಂದ್ರಕೀರ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರಿಗೆ ಇಲ್ಲಿ ಒಳ್ಳೆಯ ಮಗನ ಪಾತ್ರ ಸಿಕ್ಕಿದೆಯಂತೆ. ಸಾಗರ ಇತರೆಡೆ ಚಿತ್ರೀಕರಣದ ಅನುಭವ ಚೆನ್ನಾಗಿತ್ತು ಎಂಬ ವಿವರ ಕೊಟ್ಟರು ಚಂದ್ರಕೀರ್ತಿ.

Advertisement

ಕಾರ್ತಿಕ್‌ ಅವರಿಗೆ ಸಿನಿಮಾ ಮಾಡುವ ಕನಸು ಈ ಮೂಲಕ ಈಡೇರಿದೆಯಂತೆ. “ನನ್ನ ಮೇಲೆ ನಂಬಿಕೆ ಇಟ್ಟು ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಆ ನಂಬಿಕೆ ಉಳಿಸಿಕೊಂಡ ತೃಪ್ತಿ ಇದೆ’ ಎಂಬುದು ಅವರ ಮಾತು. ಉಳಿದಂತೆ ಪುಷ್ಪ ರಾಘವೇಂದ್ರ, ರಾಜೇಶ್‌, ಡಾ.ಕೃಪಾ ಇತರರು ಮಾತನಾಡಿದರು. ಸಂಗೀತ ನಿರ್ದೇಶಕ ಡಾ.ಚಿನ್ಮಯ ಎಂ.ರಾವ್‌ ಇಲ್ಲಿ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ವಿಜಯ್‌ರಾಜ್‌ ಹಿನ್ನೆಲೆ ಸಂಗೀತವಿದೆ. ಸಿದ್ದು ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next