Advertisement

ಕೃಷಿ-ಅಬಕಾರಿ ಇಲಾಖೆ ಕರ್ಮಕಾಂಡ

12:07 PM Aug 30, 2019 | Naveen |

ಕಡೂರು: ಕೃಷಿ ಇಲಾಖೆಯಿಂದ ರೈತಾಪಿ ವರ್ಗಕ್ಕೆ ಸವಲತ್ತಿನಲ್ಲಿ ವಂಚನೆ, ಅಬಕಾರಿ ಇಲಾಖೆ ಬೇಜವಾಬ್ದಾರಿಯಿಂದ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಮದ್ಯ ಮಾರಾಟ ದಂಧೆ ಸೇರಿದಂತೆ ಹಲವು ವಿಷಯಗಳ ಮೇಲೆ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬೆಳಕು ಚೆಲ್ಲಿದರು.

Advertisement

ತಾಪಂ ಅಧ್ಯಕ್ಷೆ ಎನ್‌.ಭಾರತಮ್ಮ ಅವರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮೊದಲು ಕೃಷಿ ಇಲಾಖೆ ಕಾರ್ಯ ಚಟುವಟಿಕೆ ಬಗ್ಗೆ ಸದಸ್ಯರಾದ ಆನಂದ ನಾಯ್ಕ, ದೇವರಾಜ ನಾಯ್ಕ, ಅಕ್ಷಯ್‌ಕುಮಾರ್‌ ವ್ಯಾಪಕ ಚರ್ಚೆ ನಡೆಸಿದರು. ಅಲ್ಲದೇ, ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಸವಲತ್ತುಗಳ ಖೋತಾ ಕುರಿತಂತೆ ಗಂಭೀರ ಆರೋಪ ಮಾಡಿದರು.

ರೈತರಿಗೆ ಟಾರ್ಪಾಲ್ ಅನ್ನು ಸಬ್ಸಿಡಿ ದರದಲ್ಲಿ ನೀಡುವ ಯೋಜನೆಯಲ್ಲಿ ಯಾವುದೇ ನಿಯಮಾವಳಿ ಪಾಲಿಸಿಲ್ಲ. ಕಳಪೆ ಗುಣಮಟ್ಟದ ಟಾರ್ಪಾಲ್ ನೀಡಲಾಗಿದೆ. ಪ್ರಸಕ್ತ ಸಾಲಿನ ಟಾರ್ಪಾಲ್ ಕೃಷಿ ಇಲಾಖೆಯ ಗೋದಾಮಿನಲ್ಲಿ ಧೂಳು ಹಿಡಿತ್ತಿವೆ. ಕಳೆದ ಸಾಲಿನಲ್ಲಿ 30 ಟಾರ್ಪಾಲ್ಗಳನ್ನು ಜಿಪಂ ಸದಸ್ಯರೊಬ್ಬರಿಗೆ ವಿತರಿಸಿರುವ ಪ್ರಕರಣ ನಡೆದಿದೆ ಎಂಬ ಟೀಕೆ ಸಭೆಯಲ್ಲಿ ವ್ಯಕ್ತವಾಯಿತು.

ತಾಪಂ ಸದಸ್ಯರ ಮಾತಿಗೆ ಕೃಷಿ ಇಲಾಖೆಯಲ್ಲಿ ಕವಡೆ ಕಾಸಿನ ಬೆಲೆಯಿಲ್ಲ. ಅರ್ಹ ಫಲಾನುಭವಿ ರೈತರ ಪಟ್ಟಿಯನ್ನು ಕೃಷಿ ಇಲಾಖೆ ಅಧಿಕಾರಿಗಳಿಗೆ ನೀಡಿದರೆ ಅದಕ್ಕೂ ಮಾನ್ಯತೆಯಿಲ್ಲ. ಬೇಕಾಬಿಟ್ಟಿ ಟಾರ್ಪಾಲ್ ವಿತರಿಸುವುದಾದರೆ ಸದಸ್ಯರಾಗಿ ನಾವೇಕೆ ಇರಬೇಕು ಎಂದು ಪ್ರಶ್ನಿಸಿದರು.

ಕೃಷಿ ಹೊಂಡ ಯೋಜನೆಯಲ್ಲೂ ಭ್ರಷ್ಟಾಚಾರ ನಡೆದಿದೆ. 3 ರಿಂದ 5 ಸಾವಿರ ರೂ.ವರೆಗೆ ಯೋಜನೆ ಮಂಜೂರಾತಿಗಾಗಿ ಅಧಿಕಾರಿಗಳು ರೈತರ ಬಳಿ ಲಂಚ ಪಡೆದಿರುವ ಪ್ರಕರಣಗಳಿವೆ. ಕಾರ್ಯಾದೇಶ ಮತ್ತು ಜಿಪಿಎಸ್‌ ನೀಡದೇ ಕೇವಲ ಮಧ್ಯವರ್ತಿಗಳ ಮೂಲಕ ಕೃಷಿ ಹೊಂಡ ಯೋಜನೆಯನ್ನು ಬೇಕಾಬಿಟ್ಟಿ ನೀಡಲಾಗಿದೆ. ಇಲಾಖೆಯ ಮುಂಭಾಗಿಲಿನಲ್ಲಿ ಮೊದಲು ಮಧ್ಯವರ್ತಿಗಳ ಪಟ್ಟಿ ಪ್ರಕಟಿಸಲಿ ಎಂದು ಆಗ್ರಹಿಸಿದರು.

Advertisement

ರಸಗೊಬ್ಬರ, ಯೂರಿಯಾ, ಬಿತ್ತನೆ ಬೀಜ ಮುಂತಾದ ಸವಲತ್ತು ನೀಡುವಲ್ಲೂ ರೈತರಿಗೆ ಅನ್ಯಾಯ ಆಗುತ್ತಿದೆ. ಯಾವುದೇ ಪಟ್ಟಿ ಸಿದ್ಧಪಡಿಸದೇ ಮನಸ್ಸಿಗೆಬಂದತೆ ರೈತರಿಗೆ ಸಬ್ಸಿಡಿ ದರದಲ್ಲಿ ಸವಲತ್ತು ನೀಡಲಾಗುತ್ತಿದೆ. ಗೊಬ್ಬರವಂತೂ ಹಳೇ ಸ್ಟಾಕ್‌ಆಗಿದ್ದು, ಅದರಿಂದ ಯಾವುದೇ ಪ್ರಯೋಜನ ಕಾಣದೆ ರೈತರು ತಮ್ಮ ಬೆಳೆ ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಈ ವೇಳೆ ಮಾಹಿತಿ ನೀಡಲು ಎದ್ದು ನಿಂತ ಅಬಕಾರಿ ಅಧಿಕಾರಿ ಮೇಲೆ ಸದಸ್ಯ ದಾಸಯ್ಯನಗುತ್ತಿ ಚಂದ್ರಪ್ಪ ಹರಿಹಾಯ್ದರು. ಅಲ್ಲದೇ, ಯಾವುದೇ ಮದ್ಯ ಮಾರಾಟ ಅಂಗಡಿಯಲ್ಲಿ ದರ ಪಟ್ಟಿಯಿಲ್ಲ. ಬಹುತೇಕ ಗ್ರಾಮಗಳಲ್ಲಿ ಅಕ್ರಮವಾಗಿ ಚಿಲ್ಲರೆ ಅಂಗಡಿ ಮತ್ತು ಮನೆಯೊಳಗೆ ಮದ್ಯ ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಇಲಾಖೆ ಕಣ್ಣುಮುಚ್ಚಿಕೊಂಡು ಕುಳಿತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಬೋಗಪ್ಪ, ದೇವರಾಜ ನಾಯ್ಕ ಧ್ವನಿಗೂಡಿಸಿದರು.

ಸದಸ್ಯ ಆನಂದ ನಾಯ್ಕ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಮದ್ಯ ಮಾರಾಟ ಅಂಗಡಿ ಮತ್ತು ಬಾರ್‌ಗಳನ್ನು ನೀಡಬೇಕು. ಅಬಕಾರಿ ಇಲಾಖೆ ಕಾರ್ಯವೈಖರಿ ಬಹುದೊಡ್ಡ ಪ್ರಶ್ನೆಯಾಗಿದೆ ಎಂದು ಟೀಕಿಸಿದರು.

ಸದಸ್ಯೆ ಸವಿತಾ ಕಲ್ಲೇಶಪ್ಪ ಮಾತನಾಡಿ, ಸಿಂಗಟಗೆರೆ ನಾಡ ಕಚೇರಿಯಲ್ಲಿ ಆಧಾರ್‌ ಕಾರ್ಡ್‌ ಹೊಸದಾಗಿ ಮತ್ತು ತಿದ್ದುಪಡಿ ಮಾಡಲು 200 ರೂ.ಗೂ ಹೆಚ್ಚು ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಸದಸ್ಯ ಆನಂದ್‌ ನಾಯ್ಕ ಮಾತನಾಡಿ, ಸಖರಾಯಪಟ್ಟಣ ಹೋಬಳಿ ಎರಡು ಜಿಪಂ ಕ್ಷೇತ್ರಗಳನ್ನು ಒಳಗೊಂಡಿದೆ. ಇಡೀ ಕ್ಷೇತ್ರಕ್ಕೆ ಕೇವಲ ಒಬ್ಬರೇ ಕಂಪ್ಯೂಟರ್‌ ಆಪರೇಟರ್‌ ಇದ್ದಾರೆ. ಇದರಿಂದ ಆಧಾರ್‌ಕಾರ್ಡ್‌ ಪಡೆಯಲು ವಿಳಂಬವಾಗುತ್ತಿದೆ. ಜತೆಗೆ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದೆ ಎಂದು ಆರೋಪಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ್‌ ಜೆ.ಉಮೇಶ್‌, ತಾಪಂ ಇಒ ಡಾ| ದೇವರಾಜ ನಾಯ್ಕ, ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಶಶಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಬಸವರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next