Advertisement

ಕೃಷಿ ಗೇಣಿ, ಸಾಲದ ಹಣದಲ್ಲಿ ಪ್ರಾರಂಭಿಸಿದ ಕಡಿಯಾಳಿ ಶಾಲೆಗೆ 147ರ ಸಂಭ್ರಮ

12:37 AM Nov 21, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಉಡುಪಿ: 18ನೇ ಶತಮಾನದಲ್ಲಿ ಸ್ಥಳೀಯರಿಗೆ ಮಂತ್ರಾಭ್ಯಾಸ ಹಾಗೂ ಯಕ್ಷಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಾರಂಭಗೊಂಡ ಕಡಿಯಾಳಿ ಹಿ.ಪ್ರಾ. ಕನ್ನಡ ಮಾಧ್ಯಮ ಶಾಲೆಗೆ 147 ವರ್ಷದ ಸಂಭ್ರಮ.

ನಿಟ್ಟೂರು ನಾರಾಯಣ ಕಾರಂತ ಹಾಗೂ ವಕ್ವಾಡಿ ವಿಠಲಯ್ಯ ಅವರು ನಿಟ್ಟೂರು ಸಮೀಪದಲ್ಲಿ ಐಗಳ ಮಠವನ್ನು ಸ್ಥಾಪಿಸಿದರು. ಸುಮಾರು 5ರಿಂದ 10 ವಿದ್ಯಾರ್ಥಿಗಳಿಗೆ ಮಂತ್ರ ಪಾಠ ಹಾಗೂ ಯಕ್ಷಗಾನ ಶಿಕ್ಷಣವನ್ನು ಹೇಳಿಕೊಡುತ್ತಿದ್ದರು. 1872 ಈ ಐಗಳ ಮಠ ಶಾಲೆಯಾಗಿ ಮಾರ್ಪಾಡುಗೊಂಡು ಪಾಡಿಗಾರಕ್ಕೆ ಸ್ಥಳಾಂತರಿಸಿದ್ದರು. ಬಳಿಕ ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ವಿಠಲಯ್ಯ ವಹಿಸಿಕೊಂಡರು. 1890ರಲ್ಲಿ ಬ್ರಿಟಿಷ್‌ ಸರಕಾರ ಶಾಲೆಗೆ ಅನುಮೋದನೆ ನೀಡಿದ್ದು, ಅನಂತರ ಸಾರ್ವಜನಿಕ ಶಿಕ್ಷಣ ಪದ್ಧತಿ ಆಳವಡಿಕೊಳ್ಳಲಾಯಿತು. ಅನಂತರ ದಿನದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದಂತೆ 1941ರಲ್ಲಿ ಶಾಲೆಯನ್ನು ಕಡಿಯಾಳಿಗೆ ಸ್ಥಳಾಂತರಿಸಿರುವುದರ ಜತೆಗೆ ಕಡಿಯಾಳಿ ಹಿ.ಪ್ರಾ.ಶಾಲೆಯಾಗಿ ಮರುನಾಮಕರಣ ಮಾಡಲಾಯಿತು.

ಸಾಲದಿಂದ ಶಾಲೆ ನಿರ್ವಹಣೆ
ಶಾಲೆ ಸಂಸ್ಥಾಪಕರಾದ ವಕ್ವಾಡಿ ವಿಠಲಯ್ಯ ಅವರು ಕೃಷಿಕ ಕುಟುಂಬ. ಶಾಲೆ ಕಟ್ಟಡ ನಿರ್ಮಾಣ ಹಾಗೂ ಶಿಕ್ಷಕರಿಗೆ ವೇತನ ನೀಡಲು ಅವರಲ್ಲಿ ಸಾಕಷ್ಟು ಹಣವಿರಲಿಲ್ಲ. ಸಾಲ ಮಾಡಿ ಶಾಲೆಯ ಕಟ್ಟಡ ನಿರ್ಮಿಸಿದರು. ಮಠದ ಭೂಮಿಯಲ್ಲಿ ಗೇಣಿ ಮಾಡಿ ಅದರಲ್ಲಿ ಬರುವ ಸಂಪೂರ್ಣ ಹಣವನ್ನು ಶಾಲೆ ಅಭಿವೃದ್ಧಿ ಹಾಗೂ ಶಿಕ್ಷಕರಿಗೆ ವೇತನ ನಿಡುತ್ತಿದ್ದರು. ಆ ಕಾಲದಲ್ಲಿ ಅವರ ಕುಟುಂಬದ ಸದಸ್ಯರು ಶಾಲೆಯಲ್ಲಿ ವೇತನವಿಲ್ಲದೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶಾಲೆಯ ಮೊದಲ ಮುಖ್ಯೋಪಾಧ್ಯಾಯರಾಗಿ ವಕ್ವಾಡಿ ನಾರ್ಣಪ್ಪಯ್ಯ ಅವರು ಸೇವೆ ಸಲ್ಲಿಸಿದ್ದಾರೆ.

ಅಕ್ಷರದ ಬೆಳಕು
ಹಬ್ಬಿಸಿದ ಶಾಲೆ
ಸಂತೆಕಟ್ಟೆ, ಊಪ್ಪೂರು, ಕಡಿಯಾಳಿ, ಮಣಿಪಾಲ, ಗುಂಡಿಬೈಲು, ಕಲ್ಸಂಕ, ಇಂದ್ರಾಳಿ, ಪೆರ್ಡೂರು, ಹಿರಿಯಡಕ ಸುತ್ತಮುತ್ತಲಿನ ಪ್ರದೇಶದ ಶೇ. 90ರಷ್ಟು ಜನರು ಈ ಶಾಲೆಯ ಹಳೆ ವಿದ್ಯಾರ್ಥಿಗಳೇ ಆಗಿದ್ದಾರೆ. 1940ರ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 2,000 ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಸುಮಾರು 25 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಶಾಲೆಯಲ್ಲಿ 180 ಮಕ್ಕಳಿದ್ದು, ಇಬ್ಬರು ಅನುದಾನಿತ ಹಾಗೂ ಐವರು ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸೋದೆ ಮಠ ಶಾಲೆಯ ಜವಾಬ್ದಾರಿ ವಹಿಸಿಕೊಂಡಿದೆ.

Advertisement

ಅನೇಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ ಅದಮಾರು ಮಠದ ಶ್ರೀ ವಿಬುಧೇಶತೀರ್ಥ ಸ್ವಾಮೀಜಿ ಈ ಶಾಲೆಯಲ್ಲಿ ಎರಡು ಮೂರು ವರ್ಷ ಓದಿದ್ದರು, ಮಾಜಿ ಸಚಿವ ವಿ.ಎಸ್‌. ಆಚಾರ್ಯ, ಎಂಜಿಎಂ ಕಾಲೇಜನ್ನು ಬೆಳೆಸಿದ ಪ್ರೊ| ಕುಶಿ ಹರಿದಾಸ ಭಟ್‌, ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೇರಿದ ಕೆ.ಕೆ. ಪೈ ಈ ಶಾಲೆಯ ಹಳೆ ವಿದ್ಯಾರ್ಥಿಗಳು.

ಕಡಿಯಾಳಿ ಶಾಲೆ ಮೌಲ್ಯಯುತ ಶಿಕ್ಷಣದ ಶಿಕ್ಷಣದ ಜತೆಗೆ ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಇಲ್ಲಿನ ಶಿಕ್ಷಕರು ಅತ್ಯಂತ ಪ್ರಾಮಾಣಿಕತೆಯಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
-ರಾಘವೇಂದ್ರ ಕಿಣಿ,
ಹಳೆ ವಿದ್ಯಾರ್ಥಿ.

ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದೆ. ಇಂದಿಗೂ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಕಳುಹಿಸುತ್ತಿದ್ದಾರೆ.
-ವಿ.ಜಿ. ಬೈಕಾಡಿ,
ಕಡಿಯಾಳಿ ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯ.

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next