Advertisement

ಸಾರ್ವಜನಿಕ ರುದ್ರಭೂಮಿ ಅವ್ಯವಸ್ಥೆ ಆಗರ

05:28 AM Jan 26, 2019 | |

ಕಡಬ: ಕಡಬವು ತಾಲೂಕು ಕೇಂದ್ರವಾಗಿ ಗುರುತಿಸಿಕೊಂಡಿದ್ದರೂ ಇಲ್ಲಿನ ಸಾರ್ವಜನಿಕ ರುದ್ರಭೂಮಿ ಮಾತ್ರ ಮೂಲ ಸೌಕರ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಶವಸಂಸ್ಕಾರಕ್ಕಾಗಿ ಆಧುನಿಕ ವ್ಯವಸ್ಥೆಯ ಸುಸಜ್ಜಿತ ರುದ್ರಭೂಮಿ ಬೇಕು ಎನ್ನುವ ಗ್ರಾಮಸ್ಥರ ಬೇಡಿಕೆ ಈಡೇರಿಲ್ಲ.

Advertisement

ಕಾದಿರಿಸಿದ ಭೂಮಿ ಇದೆ
ರುದ್ರಭೂಮಿಗಾಗಿ ಗ್ರಾ.ಪಂ. ವ್ಯಾಪ್ತಿಯ ಕಲ್ಲಂತಡ್ಕದಲ್ಲಿ ಕಡಬ-ಪಂಜ ರಸ್ತೆಯ ಪಕ್ಕದಲ್ಲಿ ಸ.ನಂ. 306/1ಎ1 ರಲ್ಲಿ 1.03 ಎಕ್ರೆ ಭೂಮಿ ಕಾದಿರಿಸಲಾಗಿದೆ. ಇದರಲ್ಲಿ ಸಾಧಾರಣ ಮಟ್ಟದ ಚಿತಾಗಾರ ಇದೆ. ಆದರೆ, ಸಮರ್ಪಕ ವ್ಯವಸ್ಥೆಗಳಿಲ್ಲ. ಇರುವ ಕಟ್ಟಡ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ. ಚಿತಾಗಾರದ ಛಾವಣಿಯ ತಗಡು ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಸೂಕ್ತ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ. ಕಾದಿರಿಸಿರುವ ಜಮೀನಿಗೆ ಆವರಣ ಗೋಡೆ ನಿರ್ಮಿಸಿ ಅತಿಕ್ರಮಣ ತಡೆಗೆ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಪ್ರಸ್ತಾವನೆಯಲ್ಲೇ ಬಾಕಿ
ಸರಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರುದ್ರಭೂಮಿ ಹಾಗೂ ಆಧುನಿಕ ವಿದ್ಯುತ್‌ ಚಿತಾಗಾರ ಒದಗಿಸುವ ಬಗ್ಗೆ 2011-12ನೇ ಸಾಲಿನಲ್ಲಿ 60 ಕೋಟಿ ರೂ. ಅನುದಾನವನ್ನು ಮೀಸಲಿರಿಸಿತ್ತು.

ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಯಿಂದ ಕಡಬ ವಿಶೇಷ ತಹ ಶೀಲ್ದಾರ್‌ ಕಚೇರಿಗೆ ಬಂದ ಮಾಹಿತಿ ಯನ್ನು ಅನುಸರಿಸಿ ಕಡಬ ಗ್ರಾ.ಪಂ. ಆಡಳಿತವು ಜಿ.ಪಂ. ಎಂಜಿನಿಯರ್‌ ಮೂಲಕ 26.08 ಲಕ್ಷ ರೂ.ಗಳ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿದೆ. ಅಂದಾಜುಪಟ್ಟಿಯಲ್ಲಿ ರುದ್ರಭೂಮಿಯ ಆವರಣದೊಳಗೆ ವಾಚ್‌ಮನ್‌ ಶೆಡ್‌, ಪ್ರಾರ್ಥನ ಮಂದಿರ, ವಿದ್ಯುತ್‌ ಚಿತಾಗಾರ, ಶೌಚಾಲಯ ಇತ್ಯಾದಿಗೆ 20.58 ಲಕ್ಷ ರೂ., ರಸ್ತೆ ಕಾಂಕ್ರೀಟ್ ಕಾಮಗಾರಿಗೆ 3.5 ಲಕ್ಷ ರೂ. ಹಾಗೂ ಕೊಳವೆ ಬಾವಿಗೆ 2 ಲಕ್ಷ ರೂ.ಗಳನ್ನು ವಿಂಗಡಿಸಲಾಗಿತ್ತು. ಆದರೆ ಇದೆಲ್ಲ ಆಗಿ ಹಲವು ವರ್ಷಗಳೇ ಸಂದಿದ್ದರೂ, ವಿದ್ಯುತ್‌ ಚಿತಾಗಾರದ ಕನಸು ನನಸಾಗಿಲ್ಲ. ಸದ್ಯಕ್ಕೆ ವಿದ್ಯುತ್‌ ಚಿತಾಗಾರ ಇಲ್ಲದೇ ಇದ್ದರೂ, ಇರುವ ಶ್ಮಶಾನಕ್ಕೆ ಸೂಕ್ತ ಸೌಲಭ್ಯಗಳನ್ನಾದರೂ ನೀಡುವ ವ್ಯವಸ್ಥೆ ಆಗಬೇಕಿದೆ.

7 ವರ್ಷಗಳಿಂದ ಬಳಕೆಯಾಗಿಲ್ಲ ಅನುದಾನ
ರುದ್ರಭೂಮಿ ನಿರ್ಮಾಣಕ್ಕೆ 26.08 ಲಕ್ಷ ರೂ.ಗಳ ಅಂದಾಜುಪಟ್ಟಿಯನ್ನು ಸರಕಾರಕ್ಕೆ ಕಳುಹಿಸಿದ್ದರೂ ಬಿಡುಗಡೆ ಯಾಗಿದ್ದು 4 ಲಕ್ಷ ರೂ. ಮಾತ್ರ. ಅದೂ ಬಳಕೆಯಾಗದೆ 7 ವರ್ಷಗಳಿಂದ ತಹ ಶೀಲ್ದಾರರ ಖಾತೆಯಲ್ಲಿಯೇ ಉಳಿದಿದೆ.

Advertisement

ಅನುದಾನಕ್ಕೆ ಮನವಿ
ವಿದ್ಯುತ್‌ ಚಿತಾಗಾರಕ್ಕಾಗಿ 26.08 ಲಕ್ಷ ರೂ.ಗಳ ಅಂದಾಜುಪಟ್ಟಿ ಸಲ್ಲಿಸಲಾಗಿದೆ. ಸರಕಾರವು 4 ಲಕ್ಷ ರೂ. ಮಂಜೂರು ಮಾಡಿದೆ. ಇದರಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸುವುದು ಅಸಾಧ್ಯ. ಹೆಚ್ಚಿನ ಅನುದಾನಕ್ಕಾಗಿ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
-ಚೆನ್ನಪ್ಪ ಗೌಡ ಕಜೆಮೂಲೆ,
ಪಿಡಿಒ, ಕಡಬ ಗ್ರಾ.ಪಂ.

ಅಂದಾಜು ಪಟ್ಟಿ
ಮಂಜೂರಾದ 4 ಲಕ್ಷ ರೂ. ಬಳಕೆಯಾಗದೆ ಉಳಿದಿದೆ. ಈ ಅನುದಾನ ಬಳಸಿ ರುದ್ರಭೂಮಿಗೆ ಹೊಸದಾದ ಚಿತಾಗಾರ ಅಳವಡಿಸಿ ಮೂಲ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಲಭ್ಯ ಅನುದಾನ ಬಳಸುವ ನಿಟ್ಟಿನಲ್ಲಿ ಅಂದಾಜುಪಟ್ಟಿ ತಯಾರಿಸಿದೆ. ಪಂಚಾಯತ್‌ ಅನುದಾನದಲ್ಲಿ ರಸ್ತೆ ನಿರ್ಮಿಸಿ, ರುದ್ರಭೂಮಿಯ ಜಾಗಕ್ಕೆ ತಂತಿ ಬೇಲಿ ನಿರ್ಮಿಸಲಾಗುವುದು.
-ಪಿ.ಪಿ. ವರ್ಗೀಸ್‌,
ಜಿ.ಪಂ. ಸದಸ್ಯರು, ಕಡಬ

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next