Advertisement

ಪಾನಮತ್ತ ಸೈನಿಕರಿಂದ ಪೊಲೀಸರ ಮೇಲೆ ಹಲ್ಲೆ : ನಾಲ್ವರ ಬಂಧನ

09:53 AM Oct 01, 2018 | |

ಕಡಬ: ಇಬ್ಬರು ಪಾನಮತ್ತ ಸೈನಿಕರು ಹಾಗೂ ಇನ್ನಿತರರ ತಂಡ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸ್‌ ವಾಹನಕ್ಕೆ ಹಾನಿಗೈದ ಘಟನೆ ರವಿವಾರ ರಾತ್ರಿ ಮರ್ದಾಳದಲ್ಲಿ ನಡೆದಿದೆ. ಕಡಬ ಆರಕ್ಷಕ ಠಾಣಾ ಉಪ ನಿರೀಕ್ಷಕ ಪ್ರಕಾಶ್‌ ದೇವಾಡಿಗ ಹಾಗೂ ಪೊಲೀಸ್‌ ಸಿಬಂದಿ ಶ್ರೀಶೈಲ, ಶಿವಪ್ರಸಾದ್‌, ಪುಟ್ಟಸ್ವಾಮಿ, ಗೃಹರಕ್ಷಕ
ದಳದ ಸಿಬಂದಿ ಯೋಗೀಶ್‌ ಅವರ ಮೇಲೆ ರಜೆಯಲ್ಲಿ ಊರಿಗೆ ಬಂದಿರುವ ನೂಜಿಬಾಳ್ತಿಲ ಗ್ರಾಮದ ನಿವಾಸಿಗಳಾದ ವೃತ್ತಿಯಲ್ಲಿ ಸೈನಿಕರಾಗಿರುವ ರತ್ನಾಕರ, ಹರೀಶ್‌ ಮತ್ತು ಅವರ ಸ್ನೇಹಿತರಾದ ದಿನೇಶ್‌, ಪ್ರಶಾಂತ್‌ ಮತ್ತಿತ ರರು ಪಾನಮತ್ತರಾಗಿ ಹಲ್ಲೆ ನಡೆಸಿದ್ದಾರೆ. 

Advertisement

ಪೊಲೀಸ್‌ ವಾಹನಕ್ಕೆ ಹಾನಿ
ಹಲ್ಲೆಯ ವೇಳೆ ಪೊಲೀಸ್‌ ವಾಹನಕ್ಕೂ ಹಾನಿಯಾಗಿದ್ದು, ಗಾಜು ಪುಡಿಯಾಗಿದೆ. ಮದ್ಯ ಸೇವನೆಯನ್ನು ಪರೀಕ್ಷಿಸುವ ಸಾಧನವನ್ನು ಕೂಡ ಆರೋಪಿಗಳು ಪುಡಿಗೈದಿದ್ದಾರೆ. ಪೊಲೀಸ್‌ ವಾಹನಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಸಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಪೊಲೀಸರು ತಿಳಿಸಿದ್ದಾರೆ. ಗಾಯಾಳು ಪೊಲೀಸರು ಕಡಬ ಸಮುದಾಯ ಆಸ್ಪತ್ರೆಗ ದಾಖಲಾಗಿದ್ದಾರೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಭೇಟಿ ನೀಡಿ ಪೋಲೀಸರ ಯೋಗಕ್ಷೇಮ ವಿಚಾರಿಸಿದರು.

ನಮ್ಮನ್ನು ತಡೆಯಲು ನೀವಾರು?
ಮರ್ದಾಳದ ಚಾಕೊಟೆಕೆರೆಯಲ್ಲಿ ಪೊಲೀಸರು ರಾತ್ರಿ 8.30ರ ಸುಮಾರಿಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಘಟನೆ ನಡೆದಿದೆ. ಮದ್ಯ ಸೇವಿಸಿ ಬೈಕಿನಲ್ಲಿ ಹೆಲ್ಮೆಟ್‌ ಧರಿಸದೆ ಬಂದ ಸೈನಿಕರಾದ ಹರೀಶ್‌ ಹಾಗೂ ರತ್ನಾಕರ ಅವರನ್ನು ಪೊಲೀಸರು ತಡೆದು ನಿಲ್ಲಿಸಿದಾಗ ಅಕ್ರೋಶಗೊಂಡ ಅವರು ನಾವು ಸೈನಿಕರು ನಮ್ಮನ್ನು ತಡೆಯಲು ನೀವು ಯಾರು ಎಂದು ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಪೊಲೀಸರ ಮೇಲೆರಗಿ ಹಲ್ಲೆ ನಡೆಸಿದರು. ಪೊಲೀಸರು ಪ್ರತಿರೋಧ ಒಡ್ಡಿದಾಗ ಆರೋಪಿಗಳು ಮತ್ತು ಅವರ ಸ್ನೇಹಿತರಾದ ದಿನೇಶ್‌, ಪ್ರಶಾಂತ್‌ ಹಾಗೂ ಇತರರು ಸೇರಿಕೊಂಡು ಪೊಲೀಸ್‌ ಸಿಬಂದಿ ಮೇಲೆ ಎರಗಿಬಿದ್ದು ಹಲ್ಲೆ ನಡೆಸಿದ್ದಾರೆ. ಗಾಯಾಳು ಪೊಲೀಸರ ಪೈಕಿ ಶ್ರೀಶೈಲ ಅವರ ತಲೆಗೆ ಗಾಯವಾಗಿದ್ದರೆ ಪುಟ್ಟಸ್ವಾಮಿ ಅವರ ಒಂದು ಹಲ್ಲು ಮುರಿದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಆರೋಪಿಗಳನ್ನು ಬಂಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next